Ayanur Manjunath : ಪೋಸ್ಟರ್ ವೈರಲ್ ಬೆನ್ನಲ್ಲೆ ಮತದಾರರಿಗೆ ಬಹಿರಂಗ ಪತ್ರ ಬರೆದ ಆಯನೂರು ಮಂಜುನಾಥ್! ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ನೀಡಿದ ಉತ್ತರವೇನು!?
Ayanur Manjunath writes an open letter to voters soon after poster goes viral What is the reply of former minister KS Eshwarappa to the letter of the MLC?
ನಿನ್ನೆಯಷ್ಟೆ ಆಯನೂರು ಮಂಜುನಾಥ್ರವರ ಪರವಾದ ಪೋಸ್ಟರ್ಗಳು ಸಖತ್ ವೈರಲ್ ಆಗಿದ್ದವು. ಅದರ ಬೆನ್ನಲ್ಲೆ ಅವರು ಮತದಾರರಿಗೆ ಬಹಿರಂಗವಾಗಿ ಪತ್ರವೊಂದನ್ನು ಬರೆದಿದ್ದು, ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ಧಾರೆ.
ಪತ್ರದಲ್ಲಿ ಏನಿದೆ!?
ಆ ಪತ್ರದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ತಮ್ಮಿಂದ ಆಯ್ಕೆಯಾದ ನಂತರ ಸದನದಲ್ಲಿ ಪ್ರಾಮಾಣಿಕವಾಗಿ ನಿಮ್ಮನ್ನು ಪ್ರತಿನಿಧಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ ಸರ್ಕಾರಿ ಹಾಗೂ ಖಾಸಗಿ ನೌಕರರ, ಶಿಕ್ಷಕರ, ಉಪನ್ಯಾಸಕರ, ಅನುದಾನಿತ, ಅನುದಾನ ರಹಿತ ಶಿಕ್ಷಕರ ಹಾಗೂ ಶಿಕ್ಷಕೇತರ ನೌಕರರ, ಅತಿಥಿ ಉಪನ್ಯಾಸಕ/ಶಿಕ್ಷಕರ ಸಮಸ್ಯೆಗಳಲ್ಲದೆ, ಪೌರ ಕಾರ್ಮಿಕರು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಿರುದ್ಯೋಗ ಪದವೀಧರರು ಮತ್ತು ಸಂಘಟಿತ ಹಾಗೂ ಅಸಂಘಟಿತ ನೌಕರರು/ಕಾರ್ಮಿಕರು ಇತ್ಯಾದಿ ಸಮೂಹಗಳ ಹಿತರಕ್ಷಣೆಗಾಗಿ ಸದನದಲ್ಲಿ ಗಟ್ಟಿಧ್ವನಿಯಲ್ಲಿ ಪ್ರತಿನಿಧಿಸುವ ಪ್ರಯತ್ನವನ್ನು ಮಾಡಿದ್ದೇನೆ.
ನಿವೃತ್ತ ನೌಕರರ ಮುಸ್ಸಂಜೆ ಬದುಕಿನ ಭದ್ರತೆಗಾಗಿ NPS/OPS ಪೆನ್ಶನ್ಗಾಗಿ ದಿಟ್ಟ ನಿಲುವಿನ ಹೋರಾಟ ಮಾಡಿದ್ದೇನೆ. ನಮ್ಮದೇ ಸರ್ಕಾರವಿದ್ದರೂ ಸಹ ನಿರ್ಭೀತಿಯಿಂದ ನೌಕರ ಹಾಗೂ ಕಾರ್ಮಿಕ ಬಂಧುಗಳ ಪರವಾಗಿ ಹೋರಾಟವನ್ನು ಮಾಡಿರುವುದು ತಮ್ಮೆಲ್ಲರ ಗಮನದಲ್ಲಿದೆ ಎಂದು ನಂಬಿದ್ದೇನೆ. ಆದರೆ, ವಿಧಾನ ಪರಿಷತ್ತಿನಲ್ಲಿ ನಾನು ಮಾಡಿದ ಹೋರಾಟಕ್ಕೆ ತಕ್ಕ ಫಲ ದೊರೆತಿಲ್ಲ ಎನ್ನುವುದನ್ನು ನಾನು ಮನಗಂಡಿದ್ದೇನೆ.ಕಾನೂನು, ರಚನೆಯಾಗುವ ಪ್ರಮುಖ ನಿರ್ಧಾರಗಳು ಆಗಬೇಕಾದ ವಿಧಾನ ಸಭೆಯಲ್ಲಿ ರಾಜ್ಯದ ನೌಕರರು, ಕಾರ್ಮಿಕರು ಹಾಗೂ ಶೋಷಿತರ ಸಮಸ್ಯೆಗಳು ಕುರಿತಂತೆ ಗಂಭೀರ ಚರ್ಚೆಯಾಗದಿರುವ ಕಾರಣಕ್ಕಾಗಿ ವಿಧಾನ ಪರಿಷತ್ತಿನಲ್ಲಿ ನನ್ನ ಪ್ರಯತ್ನಕ್ಕೆ ನಿರೀಕ್ಷೆ ಮಾಡಿದಷ್ಟು ಫಲಿತಾಂಶ ಸಿಗುತ್ತಿಲ್ಲ ಎಂಬುದನ್ನು ತಾವೂ ಸಹ ಒಪ್ಪುತ್ತೀರೆಂದು ಭಾವಿಸಿದ್ದೇನೆ
ವಿಧಾನಸಭೆಯಲ್ಲಿ ಪರಿಣಾಮಕಾರಿ ಪ್ರಯತ್ನವಾಗದೆ, ಕೇವಲ ವಿಧಾನ ಪರಿಷತ್ತಿನಲ್ಲಿ ಯಶಸ್ಸು ಪಡೆಯುವುದು ಕಷ್ಟಸಾಧ್ಯವಾದ ಸಂಗತಿ. ಅದರಿಂದ ಅಧಿಕಾರ ಕೇಂದ್ರವಾದ ವಿಧಾನ ಸಭೆಯಲ್ಲಿ ಈ ಬಾರಿ ತಮ್ಮೆಲ್ಲರ ಧ್ವನಿಯಾಗಬೇಕೆಂದು ಬಯಸಿದ್ದೇನೆ. ಅಲ್ಲೊಂದು ಶಾಸಕರ ತಂಡಕಟ್ಟಿ, ಎಲ್ಲ ಸ್ತರದ ನೌಕರರು ಹಾಗೂ ಕಾರ್ಮಿಕರ ಶೋಷಿತ, ದೀನದಲಿತರ ಧ್ವನಿಯಾಗಿ ಪ್ರತಿಧ್ವನಿಸಬೇಕೆಂದು ಬಯಸಿದ್ದೇನೆ. ಹಾಗಾದಾಗ ಮಾತ್ರ ಈ ಸಮೂಹಕ್ಕೆ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಬಹುದು ಎಂಬುದು ನನ್ನ ಪ್ರಬಲ ಅನಿಸಿಕೆಯಾಗಿದೆ.ಆದ್ದರಿಂದ ಅವಕಾಶ ದೊರೆತಲ್ಲಿ ವಿಧಾನಸಭೆಯನ್ನು ಪ್ರವೇಶಿಸಲು ನಿರ್ಧರಿಸಿದ್ದೇನೆ. ಸದುದ್ದೇಶದ ನನ್ನ ಈ ನಿಲುವಿಗೆ ತಮ್ಮ ಸಹಕಾರ ಬೆಂಬಲ ಆಶೀರ್ವಾದಗಳು ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘
ಆಯನೂರು ಸ್ಪರ್ದೆ ವಿಚಾರಕ್ಕೆ ಕೆ.ಎಸ್.ಈಶ್ವರಪ್ಪನವರ ಪ್ರತಿಕ್ರಿಯೆ ಏನು!?
ಇನ್ನೊಂದೆಡೆ ಈ ಪತ್ರದ ಸಂಬಂಧ ಕೆ.ಎಸ್.ಈಶ್ವರಪ್ಪನವರು ಸಹ ಉತ್ತರಿಸಿದ್ದಾರೆ! ಈ ವಿಚಾರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ಆಯನೂರು ಮಂಜುನಾಥ್ರವರು ಉತ್ತಮ ಸಂಸದೀಯ ಪಟು, ಪಕ್ಷಕ್ಕಾಗಿ ಸಾಕಷ್ಟು ದುಡಿದವರು, ಕಾರ್ಮಿಕ ನಾಯಕರು, ಅವರು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಅಪೇಕ್ಷೆ ಪಡುವುದರಲ್ಲಿ ತಪ್ಪೇನು ಇಲ್ಲ. ಅವರಷ್ಟೆ ಅಲ್ಲ ಬಹಳ ಜನರು ಇದೇ ರೀತಿ ಆಸೆ ವ್ಯಕ್ತಪಡಿಸುತ್ತಿದ್ಧಾರೆ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೋ ಅವರನ್ನ ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದಾರೆ. ಆದರೆ ಆಯನೂರು ಪರವಾಗಿ ವೈರಲ್ ಆಗುತ್ತಿರುವ ಪೋಸ್ಟರ್ನಲ್ಲಿ ಇರುವ ವಿಚಾರಗಳ ಬಗ್ಗೆ ಮಾತ್ರ ಅವರನ್ನೇ ಪ್ರಶ್ನಿಸಿ ಎಂದಿದ್ಧಾರೆ.
ಈಶ್ವರಪ್ಪ V/s ಆಯನೂರು ಮಂಜುನಾಥ್
ಶಿವಮೊಗ್ಗದಲ್ಲಿ ಶಾಂತಿ ನೆಲಸಬೇಕು ಎಂದು, ಈಶ್ವರಪ್ಪನವರೇ ಗಲಾಟೆಗಳಿಗೆ ಕಾರಣ ಎಂದು ಕಾಂಗ್ರೆಸ್ ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದೆ. ಇದರ ನಡುವೆ ಆಯನೂರು ಮಂಜುನಾಥ್ರವರ ಪೋಸ್ಟರ್ಗಳಲ್ಲಿಯು ಶಿವಮೊಗ್ಗದಲ್ಲಿ ಶಾಂತಿ ನೆಲಸಬೇಕು ಎಂಬುದೇ ಹೈಲೆಟ್ ಆಗಿದೆ. ಇದು ಬಿಜೆಪಿಯಲ್ಲಿ ಈಶ್ವರಪ್ಪನವರಿಗೆ ನೇರಾನೇರ ಸವಾಲು ಆಯನೂರು ಮಂಜುನಾಥ್ರ ಬೆಂಬಲಿಗ ಕಡೆಯಿಂದ ಬಂದಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೆ ಶಿವಮೊಗ್ಗದಲ್ಲಿ ಈ ವೈರಲ್ ಪೋಸ್ಟರ್ ಹಾಗೂ ಪತ್ರ ಪ್ರಕಟಣೆಯಿಂದ ಈಶ್ವರಪ್ಪ V/s ಆಯನೂರು ಮಂಜುನಾಥ್ ಎಂಬ ಡಿಸ್ಕಷನ್ ಸಹ ಆರಂಭವಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com