BREAKING NEWS | ಸಹಕಾರ ಕ್ಷೇತ್ರಕ್ಕೆ ಎಂ.ಶ್ರೀಕಾಂತ್ | ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ
M. Srikanth Shivamogga submitted his nomination for the post of DCC Bank Director
SHIVAMOGGA | MALENADUTODAY NEWS | Jun 13, 2024 ಮಲೆನಾಡು ಟುಡೆ
ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿದ್ದ ಎಂ ಶ್ರೀಕಾಂತ್ ರವರ ಮುಂದಿನ ನಡೆ ಏನು ಎಂಬುದು ಶಿವಮೊಗ್ಗ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ, ಸದ್ಯ ಎಂ ಶ್ರೀಕಾಂತ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಬಯಸಿರುವ ಅವರು ಶಿವಮೊಗ್ಗ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘಗಳು ಕ್ಷೇತ್ರ ಒಂದರಿಂದ ಸ್ಪರ್ಧೆ ಬಯಸಿದ್ದಾರೆ ಎಂದು ಮಲೆನಾಡು ಟುಡೆಗೆ ಎಕ್ಸ್ಕ್ಲ್ಯೂಸಿವ್ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ನಿರ್ದೇಶಕರ ಆಯ್ಕೆಗೆ ಇದೇ ಜೂನ್ 28ರಂದು ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಮತದಾನ ನಡೆಯಲಿದೆ. ಈ ಸಂಬಂಧ ಜೂ.12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಜೂನ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂನ್ 21ರಂದು ನಾಮಪತ್ರ ಪರಿಶೀಲನೆ ಹಾಗೂ ಜೂನ್ 22ರಂದು ನಾಮಪತ್ರ ಹಿಂಪಡೆಯಲು ಕಡೆದಿನ. ಜೂನ್ 28ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಕಟ್ಟಡದಲ್ಲಿ ಮತದಾನ ನಡೆಯಲಿದೆ. ಅಂದೆಯೇ ಫಲಿತಾಂಶವೂ ಹೊರಕ್ಕೆ ಬರಲಿದೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ಗೆ ವಿವಿಧ ಕ್ಷೇತ್ರಗಳಿಂದ ಒಟ್ಟು 13 ನಿರ್ದೇಶಕರ ಆಯ್ಕೆ ನಡೆಯಲಿದೆ. ಪ್ರತಿ ತಾಲ್ಲೂಕಿಗೆ ಒಬ್ಬರಂತೆ ವಿವಿಧ ಸಹಕಾರ ಸಂಘಗಳಿಂದ ಪ್ರತಿನಿಧಿಗಳು ಆಯ್ಕೆಯಾಗಲಿದ್ದಾರೆ. ಈ ಪೈಕಿ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ, ಸಂಸ್ಕರಣ ಸಂಘಗಳಿಂದ ಇಬ್ಬರು, ಪಟ್ಟಣ ಸಹಕಾರ ಸಂಘ ಮತ್ತು ವ್ಯವಸಾಯೇತರ ಸಹಕಾರ ಸಂಘದ ವತಿಯಿಂದ ಇಬ್ಬರು ಮತ್ತು ಇತರ ಸಹಕಾರ ಸಂಘಗಳಿಂದ ಇಬ್ಬರು ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.