ಕಳ್ಳತನ ಕೇಸ್​ ಬೆನ್ನಲ್ಲೆ ಚಂದ್ರಗುತ್ತಿಗೆ ಎಸ್​ಪಿ ಭೇಟಿ! 12 ಸೂಚನೆ ನೀಡಿದ ಮಿಥುನ್ ಕುಮಾರ್!

SP Mithun Kumar visits Chandragutti Renukamba templeಚಂದ್ರಗುತ್ತಿ ರೇಣುಕಾಂಬಾ ದೇವಾಲಯಕ್ಕೆ ಎಸ್​ಪಿ ಮಿಥುನ್ ಕುಮಾರ್ ಭೇಟಿ

ಕಳ್ಳತನ ಕೇಸ್​ ಬೆನ್ನಲ್ಲೆ ಚಂದ್ರಗುತ್ತಿಗೆ ಎಸ್​ಪಿ ಭೇಟಿ! 12 ಸೂಚನೆ ನೀಡಿದ ಮಿಥುನ್ ಕುಮಾರ್!

KARNATAKA NEWS/ ONLINE / Malenadu today/ Aug 19, 2023 SHIVAMOGGA NEWS   

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿರುವ  ಪುರಾಣ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಶೀಘ್ರದಲ್ಲಿಯೇ ಸಿಸಿ ಕ್ಯಾಮರಾ ಅಳವಡಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ. 

ಈ ಸಂಬಂಧ ನಿನ್ನೆ ಶುಕ್ರವಾರ  ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ಸಭಾ ಭವನದಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಎಸ್​ ಪಿ ಮಿಥುನ್ ಕುಮಾರ್, ಚಂದ್ರಗುತ್ತಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ವಿಶೇಷ ದಿನಗಳಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ದೇವಸ್ಥಾನ ಸಮಿತಿ ಹಾಗೂ ಸ್ಥಳೀಯ ಗ್ರಾಪಂಗೆ ಸೂಚನೆ ನೀಡಲಾಗಿದೆ. ಟ್ರಾಫಿಕ್ ಸಮಸ್ಯೆ ಆಗದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೂಲಕ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು ಎಂದರು.

ಸೊರಬ ಠಾಣೆಯ ಸಿಬ್ಬಂದಿ ಚಂದ್ರಗುತ್ತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸಂಬಂಧಿಸಿದಂತೆ 30 ಆಯಕಟ್ಟಿನ ಸ್ಥಳಗಳನ್ನು ಗುರುತಿಸಿದ್ದಾರೆ. ರಾತ್ರಿ ವೇಳೆಯಲ್ಲಿಯೂ ಸ್ಪಷ್ಟವಾಗಿ ಚಿತ್ರೀಕರಣವಾಗುವಂತೆ 40 ಸಿಸಿ ಕ್ಯಾಮರಾ ಅಳವಡಿಸುವ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಈ ಬಗ್ಗೆ ಕ್ರಮ ವಹಿಸಲಾಗುವುದು 

ಎಸ್​ಪಿ ನೀಡಿರುವ ಸೂಚನೆಗಳು ಇಲ್ಲಿವೆ

1) ಚಂದ್ರಗುತ್ತಿ ದೇವಸ್ಥಾನದಲ್ಲಿ ಉಂಟಾಗುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರ ಸಹಯೋಗದೊಂದಿಗೆ ಪ್ರತ್ಯೇಖ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತದೆ.

2) ಕೆಲವು ದಿನಗಳ ಹಿಂದೆ ದೇವಸ್ಥಾನದಲ್ಲಿ ಜರುಗಿದ ಘಟನೆಗೆ ಸಂಬಂಧಿಸಿದಂತೆ, ನಮ್ಮ ಅಧಿಕಾರಿಗಳು ಕೂಡಲೇ  ಕಾರ್ಯ  ಪ್ರೌವೃತ್ತರಾಗಿ ಕೃತ್ಯವೆಸಗಿದ ಕಿಡಿಗೇಡಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ  ನೀಡಿ  ಶಿವಮೊಗ್ಗ ಜಿಲ್ಲಾ ಪೊಲೀಸ್ ಗೆ ಹೆಮ್ಮೆ ತರುವಂತಹ ಕೆಲಸ ಮಾಡಿರುತ್ತಾರೆ. 

3) ಕಾನೂನು ಎಲ್ಲರಿಗೂ ಒಂದೇ, ಯಾವುದೇ ಜಾತಿ, ಧರ್ಮ ಮತ್ತು ಸ್ಥಾನಮಾನವನ್ನು  ಲೆಕ್ಕಿಸದೇ  ಅಪರಾದ ಕೃತ್ಯವೆಸಗುವ ಅಥವ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವ  ವ್ಯಕ್ತಿಗಳ ವಿರುದ್ಧ ಕಾನೂನು ಚೌಕಟ್ಟಿನ ಒಳಗೆ ಕಟ್ಟುನಿಟ್ಟಿನ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. 

4) ಯಾವುದೇ ಅಪರಾದ ಕೃತ್ಯಗಳು ಜರುಗಿದಾಗ ಶೀಘ್ರವಾಗಿ ಅಪರಾಧಿಗಳನ್ನು ಪತ್ತೆ ಹಚ್ಚಿ, ಅವರನ್ನು  ಬಂಧಿಸುವ ಜೊತೆಗೆ, ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಮತ್ತು  ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಾಕ್ಷಿ ಸಂಗ್ರಹಣೆ ಮಾಡಿ, ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ತನಿಖೆ*  ಕೈಗೊಂಡು, ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗುತ್ತದೆ. 

5) ಚಂದ್ರಗುತ್ತಿಯಲ್ಲಿ ಹೆಚ್ಚಿನ ಜನಸಂದಣಿ ಇದ್ದು, ಜೇಬುಗಳ್ಳತನ, ಸರಗಳ್ಳತನದಂತಹ ಅಪರಾಧಿಕ ಕೃತ್ಯಗಳು ಜರುಗುವುದನ್ನು ತಡೆಗಟ್ಟಲು ಮತ್ತು ಶೀಘ್ರವಾಗಿ ಪತ್ತೆ ಹಚ್ಚಲು ಸಹಕಾರಿಯಾಗಲು ದೇವಸ್ಥಾನದ ಸುತ್ತಮುತ್ತ ಮತ್ತು ಆಯಕಟ್ಟಿನ ಜಾಗಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ದೇವಸ್ಥಾನ ಕಮಿಟಿ ಮತ್ತು ಜಿಲ್ಲಾಧಿಕಾರಿಗಳ ಸಹಯೋಗದೊಂದಿಗೆ ಕ್ರಮ ಕೈಗೊಳ್ಳಲಾಗುತ್ತದೆ.   

6) ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಲು ನೆರವಾಗುವಂತೆ ಈಗಾಗಲೇ ಚಂದ್ರಗುತ್ತಿಯಲ್ಲಿ ಇರುವ ಪೊಲೀಸ್ ಉಪ ಠಾಣೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೋಂ ಗಾರ್ಡ್ ಅಥವಾ ಪೊಲೀಸ್  ಸಿಬ್ಬಂಧಿಗಳನ್ನು ನೇಮಕ  ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. 

7) ಮಂಗಳವಾರ ಮತ್ತು ಶುಕ್ರವಾರ, ಹುಣ್ಣಿಮೆ, ಹಬ್ಬ ಹರಿದಿನ, ಜಾತ್ರೆ ಹಾಗೂ ಹೆಚ್ಚಿನ ಜನಸಂದಣಿ ಉಂಟಾಗುವ ವಿಶೇಷ ದಿನಗಳಂದು, ಸಂಚಾರ ದಟ್ಟಣೆ ಮತ್ತು ಸಾರ್ವಜನಿಕ ನೂಕು ನುಗ್ಗಲು ತಡೆಗಟ್ಟಲು ಸಹಕಾರಿಯಾಗಲು ಸದರಿ ದಿನಗಳಂದು ಮಹಿಳಾ ಪೊಲೀಸ್ ಸಿಬ್ಬಂಧಿಗಳು ಸೇರಿದಂತೆ, ಹೋಂ ಗಾರ್ಡ್ ಮತು  ಪೊಲೀಸ್ ಸಿಬ್ಬಂಧಿಗಳನ್ನು ನಿಯೋಜಿಸಲಾಗುತ್ತದೆ.  

8) ಚಂದ್ರಗುತ್ತಿ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಯನ್ನು ತೆರೆಯುವಂತೆ ಸಾರ್ವಜನಿಕರು ಕೋರಿದ್ದು, ಈ ಬಗ್ಗೆ ಇಲಾಖಾ ಮಾನದಂಡಗಳ ಆಧಾರದ ಮೇಲೆ ಪರಿಶಿಲಿಸಲಾಗುವುದು ಎಂದು ತಿಳಿಸಿದರು. 

9) ಹೊರಗಿನಿಂದ ಬರುವ ಜನಗಳು ಯಾತ್ರಿ ನಿವಾಸ, ಲಾಡ್ಜ್, ಹೋಟೆಲ್ ಗಳಲ್ಲಿ  ತಂಗುವಾಗ ಕಡ್ಡಾಯವಾಗಿ ಅವರುಗಳ ಗುರುತಿನ ಚೀಟಿಯ ಐಡಿ ಕಾರ್ಡ್ ಗಳನ್ನು ಪಡೆದುಕೊಳ್ಳಲು ಲಾಡ್ಜ್ ಮತ್ತು ಹೋಟೆಲ್ ಮಾಲೀಕರು /  ವ್ಯವಸ್ಥಾಪಕರುಗಳಿಗೆ ಸೂಚಿಸಲಾಗುತ್ತದೆ. 

10) ಪ್ರತೀ ಗ್ರಾಮಗಳಲ್ಲಿ ಸ್ಥಳೀಯ ಯುವಕರನ್ನು ಒಳಗೊಂಡ ಯುವಪಡೆಯನ್ನು ಈಗಾಗಲೇ ರಚಿಸಲಾಗಿದ್ದು, ಪ್ರತೀ ಗ್ರಾಮಗಳಿಗೆ ಪೊಲೀಸ್ ಇಲಾಖಾ ವತಿಯಿಂದ ಬೀಟ್ ಸಿಬ್ಬಂಧಿಳನ್ನು ನೇಮಕ ಮಾಡಲಾಗಿರುತ್ತದೆ. ಬೀಟ್ ಸಿಬ್ಬಂಧಿಗಳು ಗಸ್ತಿಗೆ ಬಂದಾಗ, ಅವರೊಂದಿಗೆ ನೀವು ಸಹಾ ಗಸ್ತು ಮಾಡುವುದು. 

11) ಯುವ ಪಡೆಯ ಸದಸ್ಯರು ನಿಮ್ಮ ಗ್ರಾಮದಲ್ಲಿ ಜರುಗುವ ಘಟನೆಗಳು, ಅಕ್ರಮ ಚಟುವಟಿಕೆಗಳು, ಅನುಮಾನಾಸ್ಪದ ವ್ಯಕ್ತಿಗಳು, ಸಾರ್ವಜನಿಕ ಉಪಟಳ ನೀಡುವವರು, ಗ್ರಾಮಕ್ಕೆ ಬರುವ ಹೊಸಬರ ಬಗ್ಗೆ ಬೀಟ್ ಸಿಬ್ಬಂಧಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಮಾಹಿತಿ ನೀಡುವುದು, ಒಂದುವೇಳೆ ಇನ್ನೂ ಹೆಚ್ಚಿನ ಸಹಾಯ ಬೇಕಿದ್ದಲ್ಲಿ ಪೊಲೀಸ್ ಇಲಾಖಾ ಮೇಲಾಧಿಕಾರಿಗಳನ್ನು ಸಂಪರ್ಕಿಸ ಬಹುದಾಗಿರುತ್ತದೆ.  

12) ಸಮಾಜದಲ್ಲಿ ಎಲ್ಲರೂ ಕೂಡ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ.  ಆದರೆ ಕೆಲವರು ಮಾತ್ರ ಈ ರೀತಿಯ ಪ್ರೌವೃತ್ತಿ ಉಳ್ಳವರಾಗಿರುತ್ತಾರೆ. ಇಂತಹವರಿಂದ ಸಮಾಜವನ್ನು ರಕ್ಷಿಸಲು ಮತ್ತು ಸಮಾಜದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆಯು ನಿರಂತರವಾಗಿ ಶ್ರಮಿಸುತ್ತದೆ ಎಂದು ತಿಳಿಸಿದರು. 

ಈ ವೇಳೆ  ಶಿಕಾರಿಪುರ ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಿಪಿಐ ಎಲ್.ರಾಜಶೇಖರ್, ಪಿಎಸ್‌ಐ ಎಚ್.ಎನ್.ನಾಗರಾಜ್, ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಸನ್ನ ಶೇಟ್, ಕಾರ್ಯನಿರ್ವಹಣಾಧಿಕಾರಿ ವಿ.ಎಲ್.ಶಿವಪ್ರಸಾದ್, ಶ್ರೀ ರೇಣುಕಾಂಬಾ ದಸರಾ ಉತ್ಸವ ಸಮಿತಿ ಅಧ್ಯಕ್ಷ ಡಾ. ಆರ್.ಶ್ರೀಧರ್ ಹುಲ್ತಿಕೊಪ್ಪ, ಗ್ರಾಪಂ ಸದಸ್ಯ ಎಂ.ಪಿ.ರತ್ನಾಕರ, ತಾಪಂ ಮಾಜಿ ಸದಸ್ಯ ಎನ್.ಜಿ.ನಾಗರಾಜ್, ರಘು ಸ್ವಾಧಿ ಇತರರಿದ್ದರು.

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು