ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯಾರು!? ಆಕಾಂಕ್ಷಿಗಳಲ್ಲಿಯೇ ತಳಮಳ? ಆಯನೂರು ಮಂಜುನಾಥ್ ಸ್ಲೋಗನ್ ಸಂಚಲನ ಮೂಡಿಸ್ತಿರೋದೇಕೆ?
Who is the BJP candidate for Shivamogga city? Anxiety among the aspirants? Why is Ayanur Manjunath's slogan creating a stir?
ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಬಂದೆ ಬಿಡ್ತು ಎನ್ನುವ ಹಾಗೇ ರಾಜಕೀಯ ಪಕ್ಷಗಳು ಅಖಾಡದಲ್ಲಿ ಪ್ರಚಾರ ನಡೆಸ್ತಿವೆ. ಈ ನಡುವೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ನಿಕ್ಕಿಯಾಗುತ್ತಿಲ್ಲ! ಮಾಜಿ ಸಚಿವ ಈಶ್ವರಪ್ಪನವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು. ನಮ್ಮ ಪಕ್ಷದಲ್ಲಿ ಶ್ರೀಕೃಷ್ಣನನ್ನು ಮೀರಿಸುವಂತಹ ತಂತ್ರಗಾರಿಕೆ ನಡೆಯುತ್ತದೆ! ನನಗಿಂತ ಪ್ರಭಾವಿಗಳು ಹಾಗೂ ಕೆಲಸ ಮಾಡುವವರು ಸಿಗಬಹುದು. ಸರ್ವೆ ಪ್ರಕಾರ ಟಿಕೆಟ್ ನೀಡಬಹುದು ಎಂದಿದ್ದರು, ಈಶ್ವರಪ್ಪನವರ ಈ ಮಾತುಗಳು ಸ್ಪಷ್ಟವಾಗಿದ್ದರೂ, ಆ ಮಾತುಗಳ ಹಿಂದೆ, ಅವರಿಗೂ ಟಿಕೆಟ್ ಮಿಸ್ ಆಗುವ ಸಾಧ್ಯತೆಯಿದೆಯೇ ಎಂಬ ಅನುಮಾನವೂ ಮೂಡಿತ್ತು. ಕಮಲ ಪಾಳಯದಲ್ಲಿ ಇಣುಕಿ ನೋಡಿದಾಗ ಈ ಸಾದ್ಯತೆಗಳು ಇಲ್ಲವೆನ್ನುವ ಹಾಗಿಲ್ಲ. ಕಾರಣ ಸಾಲು..ಸಾಲು ಆಕಾಂಕ್ಷಿಗಳು!
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅವರ ಪುತ್ರ ಕೆ.ಇ. ಕಾಂತೇಶ್, ಬಿಜೆಪಿ ಮುಖಂಡ ಜ್ಯೋತಿಪ್ರಕಾಶ್, ಎಸ್. ದತ್ತಾತ್ರಿ, ಎಸ್ ರುದ್ರೇಗೌಡರು ಹಾಗೂ ಡಾ.ಧನಂಜಯ್ ಸರ್ಜಿ ಮತ್ತು ಆಯನೂರು ಮಂಜುನಾಥ್ ಹಾಗೂ ಭಾನುಪ್ರಕಾಶ್ರವರ ಪುತ್ರ ಹರೀಕೃಷ್ಣರವರ ಹೆಸರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಖ್ಯವಾಗಿ ಕೇಳಿಬರುತ್ತಿದೆ. ಜೊತೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರರವರ ಆಸಕ್ತಿಯು ಶಿವಮೊಗ್ಗ ನಗರ ಕ್ಷೇತ್ರದಲ್ಲಿದೆ. ಅವಕಾಶ ಸಿಕ್ಕರೆ, ಶಿವಮೊಗ್ಗ ಸಿಟಿಯಲ್ಲಿ ಕೈಗೊಂಡ ಅಭಿವೃದ್ಧಿ ಹಾಗೂ ದೆಹಲಿಯಿಂದ ಜಾರಿಗೊಳಿಸಿದ ಕೆಲಸ ಕಾರ್ಯಗಳನ್ನು ಮುಂದಿಟ್ಟು ವೋಟು ಪಡೆಯುವ ಇರಾದೆ ಅವರಲ್ಲಿದೆ ಎನ್ನಲಾಗುತ್ತಿದೆ.
ಸಮೀಕ್ಷೆಯ ಭೇಗುದಿ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಈಗಾಗಲೇ ಕೇಂದ್ರದ ನಾಯಕರು ಸಮೀಕ್ಷೆ ನಡೆಸಿದ್ದು, ಈ ಸರ್ವೆ ರಿಪೋರ್ಟ್ ಕಾರ್ಡ್ನಡಿ ಟಿಕೆಟ್ ನೀಡಲಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ಧಾರೆ. ಅದರಂತೆ ಸಿಕ್ಕ ಮಾಹಿತಿಗಳ ಪ್ರಕಾರ, ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿರುವ ಆಕಾಂಕ್ಷಿಗಳಿಗೆ, ಗೆಲುವಿನ ಸರ್ವೆ ರಿಪೋರ್ಟ್ನ ಜೊತೆ ತಮ್ಮವರೇ ಸೋಲಿಸುವ ತಳಮಳವೂ ಕಾಡುತ್ತಿದೆ ಎನ್ನಲಾಗುತ್ತಿದೆ. ಅವರು ನಿಂತರೇ ಇವರು, ಇವರು ನಿಂತರೆ ಅವರು ಸೋಲಿಸುವ ಪ್ರಯತ್ನಗಳು ಆಕಾಂಕ್ಷಿಗಳ ಆಂತರಿಕ ವಲಯದಲ್ಲಿಯೇ ನಡೆಯುತ್ತಿದಯಂತೆ. ಆದಾಗ್ಯು ಅಮಿತ್ ಶಾ ರ ರಿಪೋರ್ಟ್ ಕಾರ್ಡ್ನಲ್ಲಿ ಯಾರು ಪಾಸಾಗುತ್ತಾರೋ ಅವರಿಗೆ ಟಿಕೆಟ್ ಪಕ್ಕಾ ಆಗುವುದರಲ್ಲಿ ಆಕಾಂಕ್ಷಿಗಳಿಗೂ ಸಂಶಯವಿಲ್ಲ!
ಆಯನೂರು ಮಂಜುನಾಥ್ ಸ್ಲೋಗನ್!
ಇದೆಲ್ಲದರ ನಡುವೆ ಬಿಜೆಪಿಯಲ್ಲಿಯೇ ಕುತೂಹಲ ಮೂಡಿಸ್ತಿರೋದು ಆಯನೂರು ಮಂಜುನಾಥ್ರವರ ಸ್ಲೋಗನ್. ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಯನೂರು ಮಂಜುನಾಥ್ ಅವರ ಪರವಾದ ಪೋಸ್ಟರ್ ಗಳು ಷೇರ್ ಆಗುತ್ತಿವೆ. ಅದರಲ್ಲಿ 'ನಗರದಲ್ಲಿ ವಹಿವಾಟುಗಳು ಶಾಂತಿ ನೆಮ್ಮದಿಗಾಗಿ ಕೈಗಾರಿಕೆ, ವ್ಯಾಪಾರ, ನಿರ್ಭಯವಾಗಿ ನಡೆದು ಬಡವರ ಬದುಕು ಹಸನಾಗಿಸಲು ಆಯನೂರು ಮಂಜುನಾಥ್ ಅವರಿಗೆ ಅವಕಾಶ ಸಿಗಲಿ' ಎಂದು ಬರೆಯಲಾಗಿದೆ. ಸದ್ಯ ಈ ಪೋಸ್ಟರ್ ಗಳು ವೈರಲ್ ಆಗುತ್ತಿವೆ. ಕಾರ್ಮಿಕ ನಾಯಕರೆ೦ದು ಗುರುತಿಸಿಕೊಂಡಿರುವ ಆಯನೂರು ಮಂಜುನಾಥ್ರವರು, ತಮ್ಮದೆ ತಂತ್ರಗಾರಿಕೆಯಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಅವರ ಅಭಿಮಾನಿ ಬಳಗದಲ್ಲಿ ಪೋಸ್ಟರ್ಗಳು ವೈರಲ್ ಆಗುತ್ತಿದೆ ಜೊತೆಯಲ್ಲಿ ಬಿಜೆಪಿಯಲ್ಲಿ ಸಂಚಲನ ಮೂಡಿಸ್ತಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com