PSI ಜಗದೀಶ್ ಕೊಲೆ ಕೇಸ್ | ಭದ್ರಾವತಿಯ ತಂದೆ & ಮಗನಿಗೆ ಕೋರ್ಟ್ ಶಿಕ್ಷೆ! ರಾಜ್ಯಕ್ಕೆ ಶಾಕಿಂಗ್ ನ್ಯೂಸ್ ಆಗಿದ್ದ ಪ್ರಕರಣದಲ್ಲಿ ನಡೆದಿದ್ದೇನು?
PSI Jagadish murder case | Court sentences Bhadravathi's father and son What happened in the case which was shocking news for the state?
Shivamogga Apr 9, 2024 ಆ ದಿನ ಅಂದರೆ 2015 ಅಕ್ಟೋಬರ್ 16 ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಸಬ್ಇನ್ಸ್ಪಕ್ಟರ್ ಜಗದೀಶ್ ರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಂದಿನ ಪ್ರಕರಣದ ಸಂಬಂಧ ಇದೀಗ ಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಇಬ್ಬರನ್ನ ಅಪರಾಧಿ ಎಂದಿರುವ ಕೋರ್ಟ್ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಆರೋಪಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯವನು.
ಪ್ರಕರಣವೇನು? | ಕಳ್ಳರನ್ನ ಹಿಡಿಯುವ ವೇಳೆ ಅವರನ್ನ ಕಳ್ಳರೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಇಡೀ ಪ್ರಕರಣ ರಾಜ್ಯ ಪೊಲೀಸ್ ಇಲಾಖೆಯ ಮಾನಸಿಕ ಸೈರ್ಯವನ್ನ ಕುಗ್ಗಿಸಿತ್ತು.ಎಷ್ಟರ ಮಟ್ಟಿಗೆ ಅಂದರೆ ಸ್ಟೇಷನ್ಗಳಲ್ಲಿ ಕ್ರೈಂ ಕೇಸ್ ತೆಗೆದುಕೊಳ್ಳುವುದಕ್ಕೂ ಇಲಾಖೆಯ ಅಧಿಕಾರಿಗಳಿಗೆ ಮನಸ್ಸಿರಲಿಲ್ಲ. ಪೊಲೀಸ್ ಅಧಿಕಾರಿಯನ್ನ ಕೊಲೆ ಮಾಡಿದ ಆರೋಪಿಯನ್ನ ಹಿಡಿದು ಕಟ್ಟು ಹಾಕುವ ತನಕ ಬೇರೆ ಕೇಸ್ಗಳ ಬಗ್ಗೆ ನೋ ಸದ್ಯಕ್ಕೆ ಯಾವ ತನಿಖೆ ಇಲ್ಲ ಎನ್ನುತ್ತಿದ್ದರು.. ಹೀಗೆ ಇಡೀ ಡಿಪಾರ್ಟ್ಮೆಂಟ್ ಆರೋಪಿಗಳ ಹಿಂದೆ ಬಿದ್ದಿತ್ತು. ಆ ವೇಳೆ ಸಿಕ್ಕ ಮೊದಲ ಕ್ಲೂ ಪಿಎಸ್ಐ ಜಗದೀಶ್ರವರನ್ನ ಕೊಂದಿದ್ದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆಯ ಮಧು ಅಲಿಯಾಸ್ ಗೊಣ್ಣೆ ಮಧು ಎಂಬ ವಿಚಾರ..
ಯಾವಾಗ ಇಂತಹದ್ದೊಂದು ಮಾಹಿತಿ ಸಿಕ್ತೋ ಪೊಲೀಸರು ಅನಾಮತ್ತಾಗಿ ಗೊಣ್ಣೆ ಮಧುವಿನ ಕುಟುಂಬದವರನ್ನ ಲಿಫ್ಟ್ ಮಾಡಲು ಆರಂಭಿಸಿತ್ತು. ಯಾಕೆಂದರೆ ಮಧುವಿನ ಅಮ್ಮ, ಅಪ್ಪ, ಹೀಗೆ ಹಲವರು ಮನೆಗಳ್ಳರಾಗಿದ್ದರು. ಹೊಳೆಹೊನ್ನೂರು, ಭದ್ರಾವತಿ ಹಾಗೂ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಕಳ್ಳತನ ಮಾಡ್ತಿದ್ದ ಮಧು ಮತ್ತವನ ಕುಟುಂಬ ನೆಲಮಂಗಲಕ್ಕೆ ಹೋಗಿ ನೆಲಸಿತ್ತು. ಅಪ್ಪ ಸತ್ತ ಮೇಲೆ ಮಧು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ. ಅವತ್ತು ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಧುವನ್ನ ಹಿಡಿಯಲು ಹೋಗಿದ್ದಾಗ, ಮಧು ಜೊತೆಗಿದ್ದ ಭದ್ರಾವತಿಯ ಹರೀಶ್ ಬಾಬು ಪಿಎಸ್ಐರನ್ನ ಚರಂಡಿಗೆ ಬೀಳಿಸುತ್ತಾರೆ. ತಕ್ಷಣವೇ ಅವರ ಮೇಲೆ ಬಿದ್ದ ಮಧು ಸರ್ವಿಸ್ ರಿವಾಲ್ವರ್ ಕಸಿದುಕೊಳ್ಳುತ್ತಾನೆ. ಅಷ್ಟೊತ್ತಿಗೆ ಅಲ್ಲಿ ಇನ್ನೊಬ್ಬ ಪಿಸಿ ಬಂದು ತಮ್ಮ ಅಧಿಕಾರಿಯ ರಕ್ಷಣೆ ನಿಲ್ಲುತ್ತಾರೆ. ಆದರೆ ಮಧು ಮತ್ತು ಹರೀಶ್ ಬಾಬು ಡ್ರ್ಯಾಗರ್ನಿಂದ ಚುಚ್ಚಿ ಚುಚ್ಚಿ ಪಿಎಸ್ಐರನ್ನ ಕೊಂದು ಪಿಸಿಗೆ ಬೆದರಿಕೆ ಹಾಕಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ವಿಚಿತ್ರ ಅಂದರೆ ಹರೀಶ ಬಾಬು ಅಲಿಯಾಸ್ ಕೃಷ್ಣಪ್ಪ ಮಧುನ ತಂದೆಯಾಗಿದ್ದ
ಎಸ್ಐ ರೊಬ್ಬರನ್ನ ಕೊಂದು ತಾವು ಉಳಿದುಕೊಳ್ಳಬಹುದು ಎಂಬ ಊಹೆಯಲ್ಲಿಯು ಮಧು , ಹರೀಶ್ ಇರಲಿಲ್ಲ. ಆದರೂ ಅಪರಾಧಿಗಳು ಓಡುತ್ತಲೇ ಇದ್ದರು. ಅವರನ್ನ ಹಿಂಬಾಲಿಸಿದ ತಂಡ ಕೊನೆಗೆ ನಾಗಪುರ ರೈಲ್ವೆ ಸ್ಟೇಷನ್ನಲ್ಲಿ ಇಬ್ಬರನ್ನ ಅರೆಸ್ಟ್ ಮಾಡಿ ಕರೆತರುತ್ತದೆ. ಆನಂತರ ಕೋರ್ಟ್ ಗೆ 443 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ತನಿಖಾ ತಂಡ ಮಧು ವಿರುದ್ಧ 12 ಕೇಸ್ಗಳಿರುವ ಮಾಹಿತಿ ಕೋರ್ಟ್ಗೆ ನೀಡುತ್ತದೆ.
ಇಡೀ ರಾಜ್ಯವೆ ಬೆಚ್ಚಿ ಬೀಳಿಸಿದ್ದ 301/2015 ಕಲಂ 333, 397, 212, 201, 75, 307, 302, 34 ಐಪಿಸಿ ಕೇಸ್ನಲ್ಲಿ ಆರೋಪಿಗಳಾದ ಎ. ಮಧು @ ಗೊಣ್ಣೆ ಮಧು, ಎ2 ಹರೀಶ್ ಬಾಬು @ ಹರೀಶ್ @ ಕೃಷ್ಣಪ್ಪ, ಎ3 ರಘು, ಎ4 ತಿಮ್ಮಕ್ಕ, ಎ5 ಯಲಾಲ ಹನುಮಂತರಾವ್, ಎಂಬ 5 ಜನ ಆರೋಪಿಗಳಾಗಿದ್ದರು.
ಇವರ ಮೇಲಿನ ಚಾರ್ಜ್ಶೀಟ್ನ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಎ. ಮಧು @ ಗೊಣ್ಣೆ ಮಧು ಎಂಬಾತನಿಗೆ 7 ವರ್ಷಗಳ ಸಜೆ ಮತ್ತು 1 ಲಕ್ಷ ರೂ.ಗಳ ದಂಡ ಮತ್ತು ಎ2 ಹರೀಶ್ ಬಾಬು @ ಹರೀಶ್ @ ಕೃಷ್ಣಪ್ಪ ರವರಿಗೆ ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ರೂ.ಗಳ ದಂಡ ವಿಧಿಸಿದೆ. ಉಳಿದ ಮೂವರು ಆರೋಪಿಗಳನ್ನ ಖುಲಾಸೆಗೊಳಿಸಿದೆ. ಇನ್ನೂ ಸಮವಸ್ತ್ರದಾರಿ ಪೊಲೀಸ್ ಅಧಿಕಾರಿಯನ್ನ ಕೊಲೆ ಮಾಡಿದ ಮೋಸ್ಟ್ ವಾಟೆಂಡ್ ಕ್ರಿಮಿನಲ್ಗೆ ಕೊಟ್ಟ ಶಿಕ್ಷೆ ಪ್ರಮಾಣ ಕಡಿಮೆಯಾಯ್ತು ಎಂದು ಪಿಎಸ್ಐ ಜಗದೀಶ್ರ ತಂದೆ ರಾಜ್ಯ ಮಟ್ಟದ ಮಾಧ್ಯಮವೊಂದಕ್ಕೆ ಹೇಳಿದ್ದು ಈ ಸಂಬಂಧ ಹೈಕೋರ್ಟ್ಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.