ಶಿವಮೊಗ್ಗ ಟ್ರಾಫಿಕ್ ಸಿಗ್ನಲ್ಗಳಲ್ಲಿ ಕೈ ಚಾಚುವ ಭಿಕ್ಷುಕರ ಲೋಕದಲ್ಲಿ ಏನು ನಡೆಯುತ್ತಿದೆ ಗೊತ್ತಾ! JP ಬರೆಯುತ್ತಾರೆ
What's going on in the world of beggars who stretch out their hands at Shivamogga traffic signals! Is the department doing good?
Shivamogga | Feb 2, 2024 | ಶಿವಮೊಗ್ಗ ನಗರದ ಟ್ರಾಫಿಕ್ ಸಿಗ್ನಲ್ ಸರ್ಕಲ್ ಗಳಲ್ಲಿ ಹೆಚ್ಚಾದ ವಯೋವೃದ್ಧ ಭಿಕ್ಷುಕರ ಸಂಖ್ಯೆ..ಸಂಬಂಧಿಸಿದ ಇಲಾಖೆ ಮೌನ ತಾಳಿರುವುದೇಕೆ?
ಭಿಕ್ಷಾಟನೆ ಕಾನೂನಿನ ಪ್ರಕಾರ ಅಪರಾದ. ಭಿಕ್ಷಾಟನೆ ಮಾಡುತ್ತಿರುವುದು ಕಂಡುಬಂದರೆ ತಕ್ಷಣ ತಿಳಿಸಿ ಎಂದು ಟೋಲ್ ಪ್ರೀಂ ನಂಬರ್ ಗಳು ನಗರದ ಆಟೋಗಳಲ್ಲಿ ರಾರಾಜಿಸುತ್ತಿವೆ. ಆದರೆ ಇದು ನೆಪ ಮಾತ್ರಕ್ಕೆ ಎಂಬಂತಾಗಿದೆ. ಈ ಟೋಲ್ ನಂಬರ್ ಗೆ ಫೋನ್ ಮಾಡಿ ಇಂತಹ ಸರ್ಕಲ್ ಗಳಲ್ಲಿ ಭಕ್ಷುಕರು ಇದ್ದಾರೆ ಎಂದರೆ ಅದಕ್ಕೆ ತುಂಬಾ ಕೆಟ್ಟ ರೆಸ್ಪಾನ್ಸ್ ಸಿಗುತ್ತದೆ.
ಮಲೆನಾಡು ಟುಡೆ ವರದಿ
ಮಲೆನಾಡು ಟುಡೆ ಕೂಡ ಈ ಟೋಲ್ ನಂಬರ್ಗೆ ಫೋನ್ ಮಾಡಿದಾಗ ಕೂಡ ಇದೇ ಅನುಭವವಾಗಿದೆ. ನಗರದ ಶಿವಮೂರ್ತಿ ಮಹಾವೀರ ವೃತ್ತಗಳಲ್ಲಿ ಮಯೋವೃದ್ಧ ಹೆಂಗಸರು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಇವರನ್ನು ನೋಡಿದರೆ ಕಲ್ಲು ಮನಸ್ಸುಗಳು ಕರಗುತ್ತವೆ. ಇವರನ್ನು ಕಂಡಾಗ ಭಿಕ್ಷೆ ಕೊಡಬೇಕು ಎಂಬ ಮನಸ್ಸು ಬರುತ್ತೇ ವಿನಃ ತಿರಸ್ಕಾರ ಮನೋಭಾವ ಮೂಡುವುದಿಲ್ಲ.
ಆದರೆ ಭಿಕ್ಷಾಟನೆಯನ್ನು ಪ್ರೋತ್ಸಾಹಿಸುವುದು ಸರಿಯಲ್ಲ. ಅಸಹಾಯಕನೊಬ್ಬನಿಗೆ ಹಣಕೊಡುವ ಬದಲು ಆತನ ಅಸಹಾಯಕತೆಯನ್ನು ಆತ ಮೀರಬಲ್ಲ ದಾರಿ ತೋರಿಸುವುದು ಉತ್ತಮ. ಆದರೆ ಶಿವಮೊಗ್ಗ ಸಿಟಿ ಟ್ರಾಫಿಕ್ ಸಿಗ್ನಲ್ ಗಲ್ಲಿ ಕಂಡುಬರುವ ಅಸಹಾಯಕ ಕೈಗಳು ಆ ಕ್ಷಣದ ನೆರವನ್ನು ಹಣದ ರೂಪದಲ್ಲಿ ಬೇಡುತ್ತಿವೆ.
ಶಿವಮೊಗ್ಗ ಸಿಟಿ ಟ್ರಾಫಿಕ್ ಸಿಗ್ನಲ್
ಸಿಗ್ನಲ್ಗಳಲ್ಲಿ ಬೀಳುವ ರೆಡ್ ಸಿಗ್ನಲ್ಗಳು ಬಿಕ್ಷುಕರ ವರಮಾನದ ಅವಧಿ. ರೆಡ್ ಸಿಗ್ನಲ್ ಬೀಳುವವರೆಗೂ ಬ್ಯಾರಿಕೇಡ್ ಬಳಿಯಲ್ಲಿ , ಡಿವೈಡರ್ ಬಳಿಯಲ್ಲಿ ನಿಂತುಕೊಳ್ಳುವ ಮಹಿಳೆಯರು, ವೃದ್ಧೆಯರು, ಕೆಂಪು ದೀಪ ಆನ್ ಆಗುತ್ತಲೇ, ವಾಹನ ಸವಾರರ ಬಳಿ ಅಯ್ಯಾ… ಎನ್ನಲು ಆರಂಭಿಸುತ್ತಾರೆ. ಕನಿಕರದ ಮನಸ್ಸುಗಳು ದಾನ ಮಾಡುತ್ತವೆ. ಯಾವುದೋ ಟೆನ್ಶನ್ನ ಹೊರೆ ಹೊತ್ತವರು ಬೈದೂಡುತ್ತಾರೆ. ಕೆಲವೇ ಸೆಕೆಂಡ್ಗಳ ಸರ್ಕಲ್ ಅತಿಥಿಗಳ ಬಳಿಯಲ್ಲಿ ಬೇಡಿ ಪಡೆವ ವಿಧಿಯ ಗ್ರಾಹಕರನ್ನ ಕೇಳುವವರು ಯಾರಿಲ್ಲ. ಕೆಂಪು ಹಳದಿಯಾಗಿ ಹಸಿರು ದೀಪ ಹೊತ್ತುವ ಹೊತ್ತಿಗೆ, ಯಾವುದೋ ವಾಹನ ಇವರಿಗೆ ಡಿಕ್ಕಿಯಾದರೆ ಹೊಣೆಯಾರು? ಗೊತ್ತಿಲ್ಲ. ಅನಾಥ ಶವಗಳಿಗೆ ಪೊಲೀಸರೇ ದಿಕ್ಕಷ್ಟೆ!
ರೆಡ್ ಸಿಗ್ನಲ್
ವಿಶೇಷ ಅಂದರೆ ಶಿವಮೊಗ್ಗದ ಎಲ್ಲಾ ಸರ್ಕಲ್ಗಳಲ್ಲಿಯು ಭಿಕ್ಷೆ ಬೇಡುವವರಿಲ್ಲ. ಆಯ್ದ ಸರ್ಕಲ್ಗಳಲ್ಲಿ ಮಾತ್ರ ಬಿಕ್ಷುಕರ ಸಂಖ್ಯೆ ನಿಕ್ಕಿಯಾಗಿರುತ್ತದೆ. ಅದರಲ್ಲೂ ಮಹಾವೀರ ವೃತ್ತದಲ್ಲಿ ಈ ಸಂಖ್ಯೆ ತುಸು ಜಾಸ್ತಿಯಿದೆ. ಇಲ್ಲಿ ನಡೆಯಲು ಆಗದೆ ಬ್ಯಾರಿಕೇಡ್ ಗೆ ಒತ್ತಿಕೊಂಡು ನಿಲ್ಲುವ ವಯೋವೃದ್ಧೆಯನ್ನು ನೋಡಿದಾಗ ಕಣ್ಣಾಲೆಗಳೇ ಒದ್ದೆಯಾಗುತ್ತವೆ. ಇವರೆಲ್ಲಾ ಎಲ್ಲಿಂದ ಬಂದರು ? ಇವರಿಗೆ ಕುಟುಂಬ ವ್ಯವಸ್ಥೆ ಇಲ್ಲವೇ ? ಎಂದು ಅವಲೋಕಿಸಿದಾಗ ಕಾಡುವ ಪ್ರಶ್ನೆಗಳಿಗೆ ತಾರ್ಕಿಕ ಉತ್ತರವೊಂದು ಸಿಕ್ಕಿತ್ತು.
ಡ್ರಾಫ್ ಆ್ಯಂಡ್ ಪಿಕಪ್
ವಯೋವೃದ್ಧರನ್ನು ಬೆಳಿಗ್ಗೆ ಆಟೋ ಇಲ್ಲವೇ ಬೈಕ್ ನಲ್ಲಿ ಕೆಲವರು ತಂದು ಬಿಟ್ಟು ಹೋಗುತ್ತಾರೆ. ಡ್ರಾಪ್ ಮಾಡುವವರು ಕುಟುಂಬಸ್ಥರೆ..? ಅಥವಾ ಮಕ್ಕಳು ಮೊಮ್ಮಕ್ಕಳೇ..? ಆತವಾ ಇವೆಲ್ಲದರ ಹಿಂದೊಂದು ತಂಡವಿದ್ಯಾ? ಗೊತ್ತಿಲ್ಲ. ಶಿವಮೊಗ್ಗ ಸಿಟಿಯಲ್ಲಿ ಕಂಡು ಕಾಣದಂತೆ ನಡೆವ ಇವೆಲ್ಲದವನ್ನು ವಿಚಾರಿಸುವ ಗೋಜು ತೆಗೆದುಕೊಳ್ಳುವವರಿಲ್ಲ. ಕೆಲ ಹಿರಿ ಜೀವಗಳಿಗೆ ಮನೆಯಲ್ಲಿನ ಊಟಕ್ಕಾಗಿ ಹೀಗೆ ಸರ್ಕಲ್ಗಳಲ್ಲಿ ಕೈವೊಡ್ಡಿ ನಾಲ್ಕು ಕಾಸು ಸಂಗ್ರಹಿಸುವುದು ಅನಿವಾರ್ಯ. ಮತ್ತೆ ಕೆಲವರು ದೇವರು ಸೃಷ್ಟಿಸಿದ ಅನಿವಾರ್ಯ ಕರ್ಮಕ್ಕಾಗಿ ಕೈ ಚಾಚಿ ಅಯ್ಯ..ಅಮ್ಮ ಎನ್ನುತ್ತಿರುತ್ತಾರೆ. ಅದರಲ್ಲಿಯು ಮೂಗಿನ ಸಿಂಬಳವನ್ನು ಒರೆಸದೆ ಪುಟ್ಟ ಹಸುಗೂಸುಗಳನ್ನ ಬಿಸಿಲಿಗೊಡ್ಡಿ ಭಿಕ್ಷೆ ಬೇಡುವ ದೃಶ್ಯಗಳು ಶಿವಮೊಗ್ಗದಲ್ಲಿ ಸಿಗುತ್ತವೆ.
10 ರೂಪಾಯಿಗೊಂದು ಪೆನ್
ಇನ್ನೂ ಊದ್ದುದ ಪೆನ್ನುಗಳನ್ನ ಹಿಡಿದು ಸರ್ಕಲ್ಗಳಲ್ಲಿ ಭಿಕ್ಷೆ ಬೇಡುವ ಆರವತ್ತು ದಾಟಿದವರು ಆಲ್ಕೋಳ, ವಿನೋಬನಗರ, ಗೋಪಾಳ ಗೇಟ್, ಅಪರೂಪಕ್ಕೆ ಎಂಬಂತೆ ಸರ್ಕಿಟ್ ಹೌಸ್ ಸರ್ಕಲ್ಗಳಲ್ಲಿ ಕಾಣಸಿಗುತ್ತಾರೆ. ಹತ್ತು ರೂಪಾಯಿ ಆ ಊದ್ದದ ಪೆನ್ನ್ನ ತೆಗೆದುಕೊಳ್ಳುವವರು ಕಡಿಮೆಯೇ. ಆದರೆ ಭಿಕ್ಷೆ ಕೇಳಲು ಅದೊಂದು ನೆಪವಾಗಿರುತ್ತದಷ್ಟೆ. ಭಿಕ್ಷಾಟನೆ ಕಷ್ಟಗಳು ತಂದಿಟ್ಟ ಪರಿಸ್ಥಿತಿಯಾದರೆ ಅಯ್ಯೋ ಎನ್ನಬಹುದು ಆದರೆ ಯಾರದ್ದೋ ಬಲವಂತದ ದುಡಿಮೆಯಾದರೆ ಎಂಬುದೇ ಸದ್ಯ ಶಿವಮೊಗ್ಗ ಸಿಟಿಯಲ್ಲಿ ಕಾಣಸಿಗುತ್ತಿರುವ ದೃಶ್ಯಗಳಲ್ಲಿರುವ ಅನುಮಾನ. ಆದರೆ ಭಿಕ್ಷಾಟನೆಯನ್ನು ತಡೆಗಟ್ಟಬೇಕಾದ ಜವಬ್ದಾರಿ ಇರುವ ಇಲಾಖೆ ಕೈಕಟ್ಟಿ ಕುಳಿತಿದೆ.
ಒಳಿತು ಮಾಡಲಿ ಇಲಾಖೆ
ಭಿಕ್ಷಕರಿಗೂ ಬದುಕುವ ಹಕ್ಕನ್ನು ಸರ್ಕಾರ ನಿಯಮಾನುಸಾರ ನೀಡಿರುವಾಗ, ಸಮಾಜ ಕಲ್ಯಾಣ ಇಲಾಖೆ ಏಕೆ ಮೌನ ತಾಳಿದೆಯೋ ಗೊತ್ತಿಲ್ಲ.? ಇನ್ನಾದರೂ ನಗರದ ಪ್ರಮುಖ ವೃತ್ತಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ವಯೋವೃದ್ಧರಿಗೆ ಉತ್ತಮವಾಗಿ ಬದುಕುವ ಅವಕಾಶವನ್ನು ಜಿಲ್ಲಾಡಳಿತ ಮಾಡಿಕೊಡಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ..