ದೊಡ್ಡಸುದ್ದಿ | ಮಲೆನಾಡಲ್ಲಿ ಮತ್ತೆ ನಕ್ಸಲ್ ಸಂಚಾರ ನಿಜವೇ| ಎಸ್ಪಿ ಹೇಳಿದ್ದೇನು| ಕೇರಳದಿಂದ ಬಂತಾ ವಿಕ್ರಂಗೌಡ ಟೀಂ
Big news | Naxal movement in the hills again is true? | What did SP say? Vikrangowda team entry from Kerala
SHIVAMOGGA | MALENADUTODAY NEWS | Apr 22, 2024
ಮಲೆನಾಡಿನಲ್ಲಿ ಮತ್ತೆ ಸದ್ದು ಮಾಡುತ್ತಿದೆಯಾ ನಕ್ಸಲ್ ಹೆಜ್ಜೆ ಗುರುತುಗಳು ಕೇರಳದಿಂದ ಮಲೆನಾಡಿನತ್ತ ನಕ್ಸಲರು ಬರಲು ಕಾರಣವೇನು..ಜೆಪಿ ಬರೆಯುತ್ತಾರೆ.
ಮಲೆನಾಡಿನಲ್ಲಿ ನಕ್ಸಲ್?
ದಶಕದಿಂದ ನಕ್ಸಲರ ಸದ್ದಿಲ್ಲದೆ ಮೌನವಾಗಿದ್ದ ಮಲೆನಾಡಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷವಾಗಿದ್ದಾರೆ ಎಂಬ ಸುದ್ದಿಯೊಂದು ಪೊಲೀಸರ ನಿದ್ದೆಗೆಡಿಸಿದೆ. ಕಳೆದ ಒಂದುವರೆ ತಿಂಗಳಿನಿಂದ ಸುಬ್ರಹ್ಮಣ್ಯ ಪೆರು ಗ್ರಾಮ ಸೇರಿದಂತೆ ಆ ಭಾಗಗಳಲ್ಲಿ ನಕ್ಸಲರು ಓಡಾಡುತ್ತಿರುವ ಖಚಿತ ಮಾಹಿತಿ ಪೊಲೀಸರ ಮೂಗಿಗೆ ಬಡಿದಿತ್ತು.
ವಿಕ್ರಂ ಗೌಡ & ಟೀಂ
ವಿಕ್ರಂ ಗೌಡ & ಟೀಂ ಮಲೆನಾಡಿನಲ್ಲಿ ಮತ್ತೆ ಆಕ್ಟಿವ್ ಆಗಿದೆ ಎನ್ನಲಾಗಿದೆ. ಇತ್ತ ಎಎನ್ಎಫ್ ಧರ್ಮಸ್ಥಳ ಸುಬ್ರಹ್ಮಣ್ಯ ಬೆಳ್ತಂಗಡಿ ಭಾಗಗಳಲ್ಲಿ ಕೂಂಬಿಂಗ್ ತೀವ್ರಗೊಳಿಸಿದೆ. ನಕ್ಸಲರು ಬರುವ ಸುಳಿವು ಆಧರಿಸಿ ಆಂಬುಷ್ ನಡೆಸಲಾಗ್ತಿದೆ. ಅಲ್ಲದೆ ಸುಬ್ರಹ್ಮಣ್ಯ ಭಾಗದಲ್ಲಿ ಕಾಣಿಸಿಕೊಂಡಿದ್ದ ನಕ್ಸಲರು ಕುದುರೆ ಮುಖದತ್ತ ಮುಖ ಮಾಡುತ್ತಾರೆ ಇಲ್ಲವೇ ವಾಪಸ್ಸು ಕೇರಳದತ್ತ ಹೋಗುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಕೊಲ್ಲೂರು ಸಮೀಪದ ಮುದೂರು ಬೆಳ್ಕಲ್ ಜಡ್ಕಲ್ ಉದಯ ನಗರ ಗ್ರಾಮದ ಕೆಲವು ಮನೆಗಳಿಗೆ ನಕ್ಸಲರು ಭೇಟಿ ನೀಡಿದ್ರು ಎಂಬ ಸುದ್ದಿ ಹೆಚ್ಚು ಸದ್ದು ಮಾಡಿತು.
ಗ್ರಾಮಕ್ಕೆ ಭೇಟಿ ನೀಡಿದ ಉಡುಪಿ ಎಸ್ಪಿ ಹಾಗು ANF ಟೀಂ ನಕ್ಸಲರು ಭೇಟಿ ನೀಡಿರುವುದನ್ನು ಧೃಡಿಕರಿಸಿದರು.ಇದರ ಬೆನ್ನಲ್ಲೆ ಮೊನ್ನೆ ಶಿವಮೊಗ್ಗ ಜಿಲ್ಲೆಯ ತುಮರಿ ಗಡಿಭಾಗದ ಮುರೊಳ್ಳಿ ಮರಾಠಿ ಭಾಗದಲ್ಲಿ ಎಂಟು ಮಂದಿಯಿದ್ದ ತಂಡ ಗ್ರಾಮದ ಸ್ಥಳೀಯರೊಬ್ಬರಿಗೆ ಹಣ ಕೇಳಿದ್ರು. ಅವರೆಲ್ಲಾ ಅಯ್ಯಪ್ಪ ಮಾಲಧಾರಿಗಳಿಂತಿದ್ರು ಎಂಬ ಸುದ್ದಿಗಳು ಹರಡಿದವು.
ಶಂಕಣ್ಣ ಶಾನುಬೋಗ್ ಬಳಿ ಓಡಾಟ?
ಶಂಕಿತ ನಕ್ಸಲರ ತಂಡ ಸಾಗರ ತಾಲ್ಲೂಕು ಶಂಕಣ್ಣ-ಶಾನುಬೋಗ್ ಗ್ರಾಮಪಂಚಾಯಿತಿ ಮುರಳ್ಳಿ ಮರಾಠೆ ಬಳಿಯಲ್ಲಿ ದಾರಿಹೋಕನೊಬ್ಬನನ್ನ ಭೇಟಿಯಾಗಿದ್ದಾರೆ. ಸಮವಸ್ತ್ರದಲ್ಲಿದ್ದ ತಂಡ ದಾರಿಹೋಕನನ್ನ ಅಡ್ಡಗಟ್ಟಿ ಹಣ ನೀಡುವಂತೆ ಕೇಳಿದೆ. ಇದಕ್ಕೆ ಹಣ ಇಲ್ಲ ಎಂದು ಅವರು ಉತ್ತರಿಸಿದ್ದಾರೆ. ಹಾಗಾಗಿ ಯಾರಿಗೂ ಏನೂ ಹೇಳಬೇಡ ಎಂದು ಹೇಳಿ ನಕ್ಸಲರ ತಂಡ ಅಲ್ಲಿಂದ ಮುಂದಕ್ಕೆ ಹೋಗಿದೆ ಎಂಬ ಮಾಹಿತಿ ಎಲ್ಲೆಡೆ ಹರಿಡಿತ್ತು. ವ್ಯಕ್ತಿಯೊಬ್ಬರು ಹೇಳಿದ ಈ ಸಂಗತಿ ಪೊಲೀಸ್ ಇಲಾಖೆಯಲ್ಲಿ ಮಿಂಚಿನ ಸಂಚಾರ ನಡೆಸಿತ್ತು. ಸ್ಥಳಕ್ಕೆ ತೆರಳಿದ್ದ ತನಿಖಾ ಇಲಾಖೆ ಹಾಗೂ ಅದರ ಅಂಗಸಂಸ್ಥೆಯ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದವು
ಘಟನೆ ನಿರಾಕರಿಸಿದ್ದ ಎಸ್ಪಿ ಮಿಥುನ್ ಕುಮಾರ್
ಈ ಬಗ್ಗೆ ಮಲೆನಾಡು ಟುಡೆ ಎಸ್ಪಿ ಮಿಥುನ್ ಕುಮಾರ್ ರನ್ನು ಸಂಪರ್ಕಿಸಿದಾಗ ನಕ್ಸಲರ ಭೇಟಿ ಮಾಹಿತಿ ಸುಳ್ಳುಸುದ್ದಿ ಅವರ ಮಾಹಿತಿಯ ಬಗ್ಗೆ ಪೂರಕ ಸಾಕ್ಷ್ಯಗಳು ಇಲ್ಲ.ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಸ್ಥಳೀಯರಲ್ಲಿ ಕೆಲವರು ಹೇಳುವ ಪ್ರಕಾರ ಬೇಟೆಗಾರರ ತಂಡ ಬಂದಿತ್ತು ಎಂದು ಹೇಳುತ್ತಿದ್ದಾರೆ. ಅಂತಿಮವಾಗಿ ಮರಾಠಿ ಗ್ರಾಮಕ್ಕೆ ನಕ್ಸಲರು ಬಂದಿಲ್ಲ ಎಂಬುದು ಪೊಲೀಸರಿಂದ ಖಾತರಿಯಾಯಿತು. ಆದಾಗ್ಯು ಮಲೆನಾಡಿಗೆ ಅಂಟಿಕೊಂಡ ಗಡಿಯಾಚೆಗಿನ ಪ್ರದೇಶಗಳಲ್ಲಿ ನಕ್ಸಲರು ಮತ್ತೆ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿರುವುದಂತು ಸುಳ್ಳಲ್ಲ.
ಕೇರಳದಿಂದ ಮಲೆನಾಡಿನತ್ತ ನಕ್ಸಲರು ವಾಪಸ್ಸಾಗಿದ್ದಾರಾ?
ಕೇರಳ ತಮಿಳುನಾಡು ಮತ್ತು ಕರ್ನಾಟಕ ಗಡಿ ಭಾಗಗಳಲ್ಲಿ ಹೆಚ್ಚು ಕ್ರೀಯಾಶೀಲರಾಗಿದ್ದ ನಕ್ಸಲರು ಇದೀಗ ಮತ್ತೆ ರಾಜ್ಯದ ಟ್ರೈ ಜಂಕ್ಷನ್ ನಲ್ಲಿ ಆಕ್ಟೀವ್ ಆಗುತ್ತಿದ್ದಾರಾ ಎಂಬ ಅನುಮಾನವೊಂದು ದಟ್ಟವಾಗಿದೆ. ಇದಕ್ಕೆ ಹಲವು ಕಾರಣಗಳು ಸಹ ಇಲ್ಲಿ ವಿಷಯನುಸಾರ ತೆರೆದುಕೊಂಡಿದೆ.
ಕೇರಳಿದ್ದ ನಕ್ಸಲರನ್ನ ಅಲ್ಲಿನ ಥಂಡರ್ ಬೋಲ್ಟ್ ಟೀಂ ಬೇಟೆಯಾಡಲು ಆರಂಭಿಸಿತು. ಅದಕ್ಕೆ ಸಿಕ್ಕ ಯಶಸ್ಸು ನಕ್ಸಲರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ. ಕೇರಳ ಪೊಲೀಸರು ಭೇಟೆಯಾಡಲು ಪ್ರಾರಂಭಿಸಿದ ಬೆನ್ನಲೆ ನಕ್ಸಲರು ದಟ್ಟ ಕಾಡು ಸೇರಿ ಅಲ್ಲಿಯೇ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಹೇಳಿಕೇಳಿ ಕೇರಳ ಕಾಡಿನಲ್ಲಿ ಕಾಡಾನೆಗಳ ಸಂಖ್ಯೆ ಗಣನೀಯ. ರಾತ್ರಿ ಹೊತ್ತು ಅವುಗಳಿಂದ ರಕ್ಷಣೆ ಪಡೆಯುವುದು ನಕ್ಸಲರಿಗೆ ಸವಾಲಿನ ಕೆಲಸವಾಗಿತ್ತು.
ಇದಕ್ಕೆ ಸಾಕ್ಷಿ ಎಂಬಂತೆ, ಕಾಡಾನೆ ದಾಳಿಗೆ ನಕ್ಸಲ್ ಜೆ.ಜೆ ಕೃಷ್ಣ ಬಲಿಯಾಗಿದ್ದಾನೆ ಎನ್ನಲಾಗಿದ್ದು, ಬಾಡಿ ಸಿಗದ ಕಾರಣಕ್ಕೆ ಪೊಲೀಸರು ಅಧಿಕೃತಗೊಳಿಸಿಲ್ಲ.ಆದರೆ ನಕ್ಸಲರು ಕೃಷ್ಣ ಮನೆಯವರಿಗೆ ಸಾವನ್ನ ಖಾತರಿ ಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮತ್ತೊಂದೆಡೆ ಅಂಗಡಿ ಸುರೇಶ್ ಆನೆ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ. ಆ ಬಳಿಕ ಆತನನ್ನು ಊರಿನ ಸಮೀಪ ತಂಡವೊಂದು ಬಿಟ್ಟು ಹೋಗಿತ್ತು. ಆತನ ಬಗ್ಗೆ ವಿಚಾರಿಸಿದ ಕೇರಳ ಪೊಲೀಸರ ಟೀಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿತ್ತು. ತದನಂತರ ಸುರೇಶ್ ಶರಣಾಗಿದ್ದ. ಕೇರಳ ತಮಿಳುನಾಡು ಗಡಿಭಾಗದ ಕಾಡಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆನೆಗಳು ಇರುವುದರಿಂದ ನಕ್ಸಲರಿಗೆ ಇವುಗಳು ಎಲ್ಲಂದರಲ್ಲಿ ಸೈಟ್ ಆಗುತ್ತಿದೆ. ಇದು ಒಂದುಕಡೆಯಾದರೆ, ಕಾಡಿನ ರೋಗಗಳಿಗೆ ತುತ್ತಾಗುವುದು ನಕ್ಸಲರಿಗೆ ಕಂಟಕವಾಯ್ತು. ಹೀಗಾಗಿ ಕೇರಳ ನಕ್ಸಲರಿಗೆ ಕಷ್ಟಕಷ್ಟ ಎಂಬಂತಾಗಿತ್ತು. ಆ ಕಾರಣಕ್ಕೆ ಕೇರಳ, ತಮಿಳುನಾಡು ಕರ್ನಾಟಕದ ಗಡಿಗಳ ಮೂಲಕ ನಕ್ಸಲ್ ಟೀಂ ರಾಜ್ಯಕ್ಕೆ ಎಂಟ್ರಿಯಾಯ್ತಾ ಎಂಬ ಅನುಮಾನ ಮೂಡಿದೆ.
ವಿಕ್ರಂಗೌಡ
ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಹೊಸಗದ್ದೆ ಪ್ರಭಾ ಬಂಧನ ನಂತರ ಸಂಘಟನೆಯನ್ನು ವಿಕ್ರಂ ಗೌಡ ಮುನ್ನೆಡೆಸುತ್ತಿದ್ದಾನಾ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿರುವಾಗಲೇ ವಿಕ್ರಂ ಗೌಡ ಸುಬ್ರಹ್ಮಣ್ಯ ಪರಿಸರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಿದ್ದೆಗೆಡಿಸಿದ್ದ. ಕೇರಳ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾಳೆ ಎನ್ನಲಾದ ಮುಂಡಗಾರು ಲತಾ ಕೂಡ ಮಲೆನಾಡಿನತ್ತ ಹೆಜ್ಜೆ ಹಾಕಿದ್ದಾಳೆ ಎನ್ನಲಾಗಿದೆ. ಯಾವ ಮಲೆನಾಡನ್ನು ತೊರೆದು ಕೇರಳ ಭಾಗಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಮಲೆನಾಡಿನ ಯುವಕ ಯುವತಿಯರು ಗನ್ನು ಹೆಗಲಿಗೇರಿಸಿಕೊಂಡು ಹೊರಟರೋ...ಅವರೆಲ್ಲಾ ಮತ್ತೆ ಮಲೆನಾಡನ್ನೇ ಮತ್ತೆ ಆಶ್ರಯಿಸುತ್ತಿದ್ದಾರೆ.
ನಕ್ಸಲ್ ಶರಣಾಗತಿ ಪ್ಯಾಕೇಜ್
ಸರ್ಕಾರ ನಕ್ಸಲರ ಶರಣಾಗತಿಗೆ ಸಮಿತಿಯನ್ನು ಕೂಡ ರಚನೆ ಮಾಡಿದೆ. ಇವರೆಲ್ಲಾ ಸರ್ಕಾರದ ಶರಣಾಗತಿ ಪ್ಯಾಕೇಜ್ನ ಅಡಿಯಲ್ಲಿ ಶರಣಾಗುವಂತೆ ಕಾಣುತ್ತಿಲ್ಲ. ಮಲೆನಾಡಿನ ಕಾಡಿನ ಜಾಡಿನ ಸಂಪೂರ್ಣ ಮಾಹಿತಿ ಹೊಂದಿರುವ ನಕ್ಸಲರು ಅನಾಯಾಸವಾಗಿ ಕಾಡಿನ ಪರಿಸರದಲ್ಲಿ ಓಡಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೆ ಹಲವು ಆಯ್ದ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಡೀಪ್ ಕೂಂಬಿಂಗ್ ನಡೆಸ್ತಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಬೇರೆಯದ್ದೆ ತಿರುವು ಪಡೆದುಕೊಳ್ಳಬಹುದು.
ಇದನ್ನು ಸಹ ಓದಿ : ಎನ್ಕೌಂಟರ್ನಲ್ಲಿ ಸತ್ತವರು ಜೀವಂತವಾಗಿ ಸಿಕ್ತಿದ್ದಾರೆ! ಇಲ್ಲಿದೆ ರೋಚಕ ಕಹಾನಿ! JP ಬರೆಯುತ್ತಾರೆ