ತರ್ಲೆ ಬ್ಯಾಚ್ ಎಂದೇ ಗುರುತಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ 27 ವರ್ಷಗಳ ನಂತರ ಗುರುಗಳು ಅದ್ದೂರಿಯಾಗಿ ಸನ್ಮಾನಿಸಿದ್ದು ಯಾಕೆ ಗೊತ್ತಾ ? ಜೆಪಿ ಬರೆಯುತ್ತಾರೆ.
sahyadri science college old student story
ಇದು ಗುರು ಶಿಷ್ಯರ ಸಂಬಂಧಕ್ಕೆ ಕೈಗನ್ನಡಿಯಂತಿರುವ ನೈಜ ಕಥೆ. ನಿಜಕ್ಕೂ ಚರಿತ್ರೆ ಸೃಷ್ಟಿಸಿದ ಇತಿಹಾಸ ಎಂದರೆ ತಪ್ಪಾಗಲಾರದು. ಗುರು ಶಿಷ್ಯರ ಸಂಬಂಧಗಳೇ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಅದಕ್ಕೆ ಭಾವಪೂರ್ಣ ಅರ್ಥ ಕಲ್ಪಿಸಿದ್ದಾರೆ 1993 ಬ್ಯಾಚ್ ನ ಗುರು ಶಿಷ್ಯರು. ಹೌದು ಶಿವಮೊಗ್ಗ ಹೊರ ವಲಯದ ಸೋಷಿಯಲ್ ಆರ್ಬರ್ ನಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ 1993-1996 ಬ್ಯಾಚ್ ನ ಗುರು ಶಿಷ್ಯರ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಅಚ್ಚರಿಗೂ ಕೂಡ ಕಾರಣವಾಗಿತ್ತು.
ಸಾಮಾನ್ಯವಾಗಿ ಶಿಷ್ಯ ವೃಂದ ಗುರುಗಳಿಗೆ ಗುರುವಂದನೆ ಕಾರ್ಯಕ್ರಮ ಮಾಡುವುದನ್ನು ನೋಡಿದ್ದೇವೆ. ಇಲ್ಲಿ ಗುರುಗಳೇ ಶಿಷ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಮಾಗಮದ ಕಾರ್ಯಕ್ರಮದಲ್ಲಿ ಶಿಷ್ಯರನ್ನು ಸ್ವಾಗತಿಸಲು ಅದ್ಯಾಪಕ ವೃಂದವೇ ಬಾಗಿಲ ಬಳಿ ನಿಂತಿತ್ತು. ಗುರುಗಳನ್ನು ಕಂಡೊಡನೆ ಪಾದಕ್ಕೆ ನಮಸ್ಕರಿಸಿ ಆತ್ಮೀಯ ಅಪ್ಪುಗೆಯೊಂದಿಗೆ ಶಿಷ್ಯರು ಕಾರ್ಯಕ್ರಮದ ವೇದಿಕೆಯತ್ತ ದೌಡಾಯಿಸುತ್ತಿದ್ರು. ವಿದ್ಯಾರ್ಥಿನಿಯರು ಬಣ್ಣ ಬಣ್ಣದ ಉಡುಗೆ ತೊಟ್ಟು ಕುಟುಂಬ ಸಮೇತರಾಗಿ ಆಗಮಿಸಿದ್ರು. ಎಲ್ಲರ ಮೊಗದಲ್ಲೂ ಖುಷಿ ಮೇಳೈಸುತ್ತಿತ್ತು..ನಿವೃತ್ತಿ ಬದುಕಿಗೆ ಜಾರಿಲ ಹಲವು ವರ್ಷಗಳೇ ಕಳೆದ ಗುರುಗಳು ಯುವಕರಂತಾಗಿದ್ದರು. ಅದ್ಯಾಪಕಿಯರು ಹಸಿರು ಸೀರೆಯುಟ್ಟು ಎಲ್ಲರನ್ನು ನಿಬ್ಬೆರಗಾಗಿಸಿದರು...ಅರೇ ..ವಿದ್ಯಾರ್ಥಿಗಳಿಗೆ ಗುರುಗಳು ಅಭಿನಂದನೆ ಸಲ್ಲಿಸಲು ಕಾರಣವೇನು ಎಂಬ ಅಚ್ಚರಿ ಕುತುಹಲಕ್ಕೆ. ಗುರುಶಿಷ್ಯರ ಸಂಬಂಧಗಳೇ ತೆರೆ ಎಳೆದಿದ್ದವು.
ಹೌದು 2023 ಫೆಬ್ರವರಿ ನಾಲ್ಕರಂದು ಇದೇ 1993 -06 ಬ್ಯಾಚ್ ನ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ತುಂತುರು ಪಾರಂ ಸ್ ನಲ್ಲಿ ಐತಿಹಾಸಿಕ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. 27 ವರ್ಷಗಳ ನಂತರ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದು ಸೂರಿನಡಿ ಸೇರಿ ಗುರುಗಳಿಗೆ ಪಾದಪೂಜೆ ಮಾಡಿ ಅದ್ದೂರಿ ಕಾರ್ಯಕ್ರಮ ನೆರವೇರಿಸಿದ್ದರು. ಆಗ ಅದ್ಯಾಪಕರಿಗೆ ಈ ತರಲೇ ಹುಡುಗರಿಗೆ ಅದೆಂತಾ ಒಳ್ಳೆಯ ಬುದ್ದಿ ಬಂತು ಎಂದು ಒಮ್ಮೆ ಯೋಚಿಸಿದ್ದು ಉಂಟು. ಆ ಸಂದರ್ಭದಲ್ಲಿ ಬಾವುಕರಾಗಿದ್ದು ಉಂಟು.
ಈ ಬ್ಯಾಚ್ ಹೋದರೆ ಸಾಕಪ್ಪ ಅಂದವರೇ ಹೆಚ್ಚು. ಅದರಲ್ಲೂ ಪ್ರತಿಭಾವಂತ ವಿದ್ಯಾರ್ಥಿನಿಯರು ಈ ತರಲೇ ಹುಡುಗರಿಗೆ ಹಿಡಿಶಾಪವನ್ನೇ ಹಾಕಿದ್ರು. ಕ್ಷಮಾಪಣಾ ಪತ್ರಗಳನ್ನು ಬರೆದುಕೊಟ್ಟ ವಿದ್ಯಾರ್ಥಿಗಳು ಮತ್ತೆ ಮಾಡುತ್ತಿದ್ದ ಕೆಲಸಗಳೇ ತಲೆಹರಟೆಯದ್ದಾಗಿರುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಪದವಿ ಮುಗಿಸಿದ್ದೇ ದೊಡ್ಡ ಸಾಹಸ..ಆ ವಿದ್ಯಾರ್ಥಿನಿಯರೆಲ್ಲಾ ಈಗ ಸರ್ಕಾರಿ ಉದ್ಯೋಗದಲ್ಲಿದ್ದಾರೆ ತಲೆಹರಟೆ ಮಾಡಿ ಅಂತುಇಂತು ಹರಸಾಹಸ ಪಟ್ಟ ಹುಡುಗರು ಪದವಿ ನಂತರ ಏನಾದ್ರು ಎಂಬ ಕುತುಹಲ ಎಲ್ಲರಲ್ಲಿತ್ತು.
ಈ ಬ್ಯಾಚ್ ನ ವಿದ್ಯಾರ್ಥಿಗಳು ಲೈಫ್ ನಲ್ಲಿ ಸೆಟಲ್ ಆದ್ರಾ..ಬದುಕು ಕಟ್ಟಿಕೊಂಡ್ರಾ ಎಂಬ ಕುತುಹಲಕ್ಕೆ ವೇದಿಕೆಯಾಗಿದ್ದು 2023 ರ ಫೆಬ್ರವರಿ 4 ರಂದು ನಡೆದ ಗುರುವಂದನಾ ಕಾರ್ಯಕ್ರಮವಾಗಿತ್ತು. ಆ ದಿನ ಗಾಜನೂರಿನ ತುಂತುರು ಫಾರಂ ಹೌಸ್ ನ ಪಾರ್ಕಿಂಗ್ ಕಿಕ್ಕಿರಿತ್ತು. ನೂರಾರು ಕಾರುಗಳು ಪಾರ್ಕಿಂಗ್ ನಲ್ಲಿ ಜಮಾಯಿಸಿದ್ವು. .ಈ ಕಾರುಗಳೇ ತರಲೆ ವಿದ್ಯಾರ್ಥಿಗಳ ಜೀವನದ ಸಾರ್ಥಕತೆಗೆ ನಾಂದಿ ಹಾಡಿದ್ದವು.
ಅಂದು ಕಾಲೇಜು ತೊರೆದ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ತುಂಬಾ ಕಷ್ಟಪಟ್ಟರೂ ಅಂತಿಮವಾಗಿ ಎಲ್ಲರೂ ನೆಮ್ಮದಿಯ ಜೀವನ ಕಂಡುಕೊಂಡಿದ್ದರು. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿನಿಯರು ಅದ್ಯಾಪಕರ ಕೀಟಲೆ ಮಾಡುತ್ತಿದ್ದ ವಿದ್ಯಾರ್ಥಿಗಳು 27 ವರ್ಷಗಳ ನಂತರ ಒಂದೆಡೆ ಸೇರಬೇಕೆಂದು ತೀರ್ಮಾನಿಸಿದ್ರು. ಕಾಲೇಜು ದಿನಗಳಲ್ಲಿ ಅದ್ಯಾಪಕರಿಗೆ ನಾವು ಒಳ್ಳೆಯವರಾಗಿರಲಿಲ್ಲ. ಈಗ ಸಾರ್ಥಕ ಬದುಕನ್ನು ಜೀವಿಸುತ್ತಿರುವ ಸಂದರ್ಭದಲ್ಲಿಯಾದ್ರು ಅವರ ಪಾದಪೂಜೆ ಮಾಡೋಣ ಎಂದು ನಿರ್ಧರಿಸಿದ ತರಲೆ ಬ್ಯಾಚ್ ನ ವಿದ್ಯಾರ್ಥಿಗಳು 27 ವರ್ಷಗಳ ನಂತರ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡರು.
ದೇಶ ವಿದೇಶದಲ್ಲಿದ್ದ ವಿದ್ಯಾರ್ಥಿಗಳ ಸಂಪರ್ಕ ಸಾಧಿಸಿದ್ರು. ಆ ಸಂಪರ್ಕದಲ್ಲಿ ತರಲೆ ಬ್ಯಾಚ್ ನ ವಿದ್ಯಾರ್ಥಿಗಳಲ್ಲಿ ಯಾರು ಏನೆಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ವಿಚಾರಿಸಿದ ವಿದ್ಯಾರ್ಥಿನಿಯರಿಗೂ ಅಚ್ಚರಿ ಕಾದಿತ್ತು. ಅವರೆಲ್ಲಾ ಉತ್ತಮ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿದಾಗ ಆ ವಿದ್ಯಾರ್ಥಿನಿಯರೆಲ್ಲಾ ಖುಷಿ ಪಟ್ಟು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ರು. ಎಲ್ಲಾ ವಿದ್ಯಾರ್ಥಿಗಳು ನಿವೃತ್ತಿ ಬದುಕು ಸಾಗಿಸುತ್ತಿದ್ದ ಅದ್ಯಾಪಕರನ್ನು ಸಂಪರ್ಕಿಸಿ, ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದಾಗಿ ತಿಳಿಸಿದ್ರು.
1993 ಬ್ಯಾಚ್ ನ ವಿದ್ಯಾರ್ಥಿಗಳು ಬದುಕು ಹಸನಾಗಿರುವ ವಿಷಯ ತಿಳಿದು ಅದ್ಯಾಪಕ ವೃಂದ ಸಂತಸ ಪಟ್ಟಿತು. ಅಂದಿನ ಪ್ರಾಂಶುಪಾಲರಾದ ಎ.ಎಸ್ ಚಂದ್ರಶೇಖರ್ ರವರಿಗೆ ಗುರುವಂದನಾ ಕಾರ್ಯಕ್ರಮದ ಮೊದಲ ಆಮಂತ್ರಣ ಪತ್ರಿಕೆ ನೀಡಿದ್ರು. ನಂತರ ಎಲ್ಲಾ ಗುರುಗಳ ಮನೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಆಮಂತ್ರಣ ಪತ್ರಿಕೆ ನೀಡಿದ್ರು.
ಫೆಬ್ರವರಿ ನಾಲ್ಕರಂದು .ತುಂತುರು ಪಾರಂ ಹೌಸ್ ನಲ್ಲಿ ಭಾವಪೂರ್ಣ.ಗುರುವಂದನಾ ಕಾರ್ಯಕ್ರಮ ನೆರವೇರಿತು. ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗುರುಗಳ ಪಾದಪೂಜೆ ಮಾಡಿ ಕಂಬನಿ ಮಿಡಿದರು ಶಿಷ್ಯರ ಆತಿಥ್ಯದಿಂದ ಅದ್ಯಾಪಕರುಗಳು ಭಾವ ಕಡಲಲ್ಲಿ ತೇಲಿ ಹೋದರು. ಕಾಲೇಜು ದಿನಗಳಲ್ಲಿ ಕೆಟ್ಟ ವಿದ್ಯಾರ್ಥಿಗಳಂತಿದ್ದವರು, ಇಂದು ಸಮಾಜದಲ್ಲಿ ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ಗೊತ್ತಾದಾಗ ಬಾವಪರವಶರಾದ್ರು. ಅದೇ ವೇದಿಕೆಯಲ್ಲಿ ಪ್ರಾಂಶುಪಾಲರಾದ ಎ.ಎಸ್ ಚಂದ್ರಶೇಖರ್ ಶಿಷ್ಯ ವೃಂದಕ್ಕೆ ನಾವು ಕೂಡ ಒಂದು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದ್ರು.
ಅದರಂತೆ ಜನವರಿ 7 ನೇ ತಾರೀಖು ಶಿವಮೊಗ್ಗ ಹೊರವಲದ ,ಸೋಷಿಯಲ್ ಹಾರ್ಬರ್ ನಲ್ಲಿ ಗುರು ಶಿಷ್ಯರ ಸಮಾಗಮ 1993-96 ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಶಿಷ್ಯರು ಮಾಡಿದ ಕಾರ್ಯಕ್ರಮಕ್ಕೆ ಕಮ್ಮಿ ಇಲ್ಲವೆಂಬಂತೆ ಅದ್ಯಾಪಕರುಗಳೆಲ್ಲಾ ಸೇರಿ ಯುವಕರಂತೆ ಕಾರ್ಯಕ್ರಮ ಯಶಸ್ವಿಗೆ ಟೊಂಕ ಕಟ್ಟಿ ನಿಂತ್ರು. ಕಾರ್ಯಕ್ರಮಕ್ಕೆ ಎಲ್ಲಾ ವಿದ್ಯಾರ್ಥಿಗಳು ಬರುವಂತೆ ಆಮಂತ್ರಣ ನೀಡಿದ್ರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊಫೆಸರ್ ಎಎಸ್ ಚಂದ್ರಶೇಖರ್ 1993 ಬ್ಯಾಚ್ ಗುರು ಶಿಷ್ಯರ ಸಂಗಮ ಹೆಸರಿನಲ್ಲಿ ಟ್ರಸ್ಟ್ ರಚಿಸುವ ಇಚ್ಚೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದ್ರು. ಫ್ರೊಫೆಸರ್ ಗಾಯತ್ರಿ ದೇವಿ ಸಜ್ಜನ್ ರವರು ಕಾಲೇಜು ದಿನಗಳ ಸನೆ ನೆನಪನ್ನು ಮೆಲಕು ಹಾಕಿದ್ರು, ಫ್ರೊಫೇಸರ್ ವಿಶ್ವನಾಥಯ್ಯ ಗುರು ಶಿಷ್ಯರ ಭಾಂದವ್ಯ ಕಂಡು ಸಂತೋಷ ಪಟ್ಟರು. ಫ್ರೊಫೇಸರ್ ವಾಗ್ದೇವಿ ಹಾಗು ಫ್ರೊಫೇಸರ್ ಜಯದೇವಪ್ಪನವರಪ ಹಾಸ್ಯ ಶಿಷ್ಯರನ್ನು ನಗೆಗಡಲಲ್ಲಿ ತೇಲಿಸಿತು. ಅದ್ಯಾಪಕರುಗಳು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವೇದಿಕೆಗೆ ಕರೆದು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗು ಪ್ರಾಧ್ಯಾಪಕರುಗಳು ಹಳೆ ನೆನಪುಗಳನ್ನು ಮೆಲಕು ಹಾಕಿದರು. ಗುರು ಶಿಷ್ಯರ ಮನರಂಜನಾ ಕಾರ್ಯಕ್ರಮಕ್ಕೆ ಎಲ್ಲರೂ ಫಿದಾ ಆಗಿದ್ರು. ಸವಿ ನೆನಪಿಗಾಗಿ ಗ್ರೂಪ್ ಫೋಟ್ ಕ್ಲಿಕ್ಕಿಸಿಕೊಂಡರು. ಗುರು ಶಿಷ್ಯಯರ ಸಮಾಗಮ ಕಾರ್ಯಕ್ರಮ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಈ ಸಮಾರಂಭ ಸ್ನೇಹ ಸಂಬಂಧಗಳಿಗೆ ಬೆಸುಗೆಯಾಗಿತ್ತು.