ಮಧು ವಿರುದ್ಧ ಕೆರಳಿದ ಕುಮಾರ್ ಬಂಗಾರಪ್ಪ | ಶಿವಮೊಗ್ಗದಲ್ಲಿ ಶಿರಸಿ ಶಾಸಕರ ಆಡಳಿತ | ಚೆಕ್ ಬೌನ್ಸ್ & ಬಬ್ರುವಾಹನ
Kumar Bangarappa is furious with Madhu. Madhu Bangarappa, Soraba Taluk, S Bangarappa, Geetha Shivraj Kumar, Bhima Naik, Shirasi MLA, Checkbounce, JDS, Shimoga Lok Sabha Constituency
SHIVAMOGGA | MALENADUTODAY NEWS | Apr 28, 2024
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಇದೇ ಮೊದಲ ಸಹ ಅವರ ಸಹೋದರ ಕುಮಾರ್ ಬಂಗಾರಪ್ಪ ಮಾತನಾಡಿದ್ದಾರೆ. ನಿನ್ನೆ ಸೊರಬದಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ಗೀತಾ ಶಿವರಾಜಕುಮಾರ್ ಪರವಾಗಿ ಮಧು ಬಂಗಾರಪ್ಪ ವಿರೋಧಿಗಳನ್ನು ಬಗ್ಗು ಬಡಿಯುತ್ತೇನೆಂದು ಬಬ್ರುವಾಹನನಂತೆ ಅಬ್ಬರಿಸುತ್ತಿದ್ದಾರೆ. ಆದರೆ ಅವರ ದುರಂಹಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದಿದ್ದಾರೆ.
ಚುನಾವಣೆ ಟೆಂಟ್
ಎಲೆಕ್ಷನ್ ಗಾಗಿ ಶಿವಮೊಗ್ಗದಲ್ಲಿ ಟೆಂಟ್ ಹಾಕಿದ್ದಾರೆ. ಚುನಾವಣೆ ಮುಗಿದ ಬಳಿಕ ಟೆಂಟ್ ಖಾಲಿಮಾಡಿಕೊಂಡು ಬೆಂಗಳೂರಿಗೆ ಹೋಗುತ್ತಾರೆ, ಭದ್ರಾವತಿ ವಿಎಸ್ಐಲ್ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಗಂಧ–ಗಾಳಿ ಗೀತಾ ಶಿವರಾಜಕುಮಾರ್ರವರಿಗೆ ಗೊತ್ತಿಲ್ಲ. ಅವರು ಹೇಗೆ ಕೇಂದ್ರದ ಯೋಜನೆಗಳನ್ನ ಅನುಷ್ಠಾನಗೊಳಿಸಬಲ್ಲರು. ಗೀತಾ ಶಿವರಾಜ್ ಕುಮಾರ್, ನಟ ಶಿವರಾಜಕುಮಾರ್ ಹಾಗೂ ಮಧು ಬಂಗಾರಪ್ಪ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಹೋಗುತ್ತಿದ್ದಾರೆ. ಫಲಿತಾಂಶದ ನಂತರ ಎಲ್ಲರೂ ಪಲಾಯನ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಸಾಲ ಹೇಗೆ ತೀರಿತು
ಕಳೆದ ಒಂದು ವರ್ಷದಲ್ಲಿ ನಯಾಪೈಸೆ ಅನುದಾನ ಮಧು ಬಂಗಾರಪ್ಪ ತಂದಿಲ್ಲ. ಮೇಲಾಗಿ ಚುನಾವಣೆ ಸಂದರ್ಭದಲ್ಲಿ ಚೆಕ್ಬೌನ್ಸ್ ಕೇಸ್ನಲ್ಲಿ ಬೇಲ್ ತಗೆದುಕೊಂಡು ಓಡಾಡುತ್ತಿದ್ದರು. ಇದೀಗ ಈಗ ಅವರು ಸಾಲ ತೀರಿಸಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ ಕುಮಾರ್ ಬಂಗಾರಪ್ಪ ಜಿಲ್ಲೆ ಹಾಗೂ ತಾಲ್ಲೂಕಿನ ಅಧಿಕಾರಿಗಳಿಂದ ವಸೂಲಿ ಮಾಡಿದ ಹಣದಿಂದ ಅವರು ಸಾಲ ಮುಕ್ತಗೊಂಡಿದ್ದಾರೆಂದು ದೂರಿದ್ದಾರೆ.
ಶಿರಸಿ ಶಾಸಕರ ಆಡಳಿತ
ಜಿಲ್ಲೆಯ ಆಡಳಿತ ಶಿರಸಿ ಶಾಸಕರ ಅಣತಿಯಂತೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ ಕುಮಾರ್ , ದ್ವೇಷದ ರಾಜಕಾರಣಕ್ಕೆ ಮುಂದಾದ ಮಧು ಬಂಗಾರಪ್ಪ ಸಹೋದರಿಯರನ್ನು ಎತ್ತಿಕಟ್ಟಿದ್ದಾರೆ. ಕೊನೆಯ ದಿನಗಳಲ್ಲಿ ತನ್ನ ಸ್ವಾರ್ಥಕ್ಕಾಗಿ ತಂದೆ ಬಂಗಾರಪ್ಪ ಅವರನ್ನು ಜೆಡಿಎಸ್ಗೆ ಕರೆತಂದು ರಾಜಕೀಯವಾಗಿ ಸಂಪೂರ್ಣ ಮುಳುಗಿಸಿದರು. ಕೈ ಮುಷ್ಠಿ ಕಟ್ಟಿದರೆ ಹೆಬ್ಬೆಟ್ಟು ಹೊರಗುಳಿಯುತ್ತದೆ. ಮುಷ್ಠಿಗೆ ಭೂಷಣ ಹೆಬ್ಬೆರಳೇ. ನಾಲ್ಕು ಬೆರಳು ಒಟ್ಟಾಗಿದ್ದರೂ ಕ್ಷೇತ್ರದಲ್ಲಿ ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ’ ಎನ್ನುವ ಮೂಲಕ ತಮ್ಮ ರಾಜಕೀಯ ನಡೆಯನ್ನು ಸಮರ್ಥಿಸಿಕೊಂಡರು.