ಭದ್ರಾ ಡ್ಯಾಂ ತುಂಬಿಲ್ಲವಾದರೂ ನದಿಗೆ ಹರಿಯುತ್ತಿದೆ ಭರಪೂರ ನೀರು? | ಕೈ ಕೊಟ್ಟ ರಿವರ್ ಗೇಟ್| ಯಡವಟ್ಟಿಗೆ ಯಾರು ಜವಾಬ್ದಾರಿ?
Bhadra Reservoir water mismanagement
SHIVAMOGGA | MALENADUTODAY NEWS | Jul 5, 2024 ಮಲೆನಾಡು ಟುಡೆ
ಭದ್ರಾ ಜಲಾಶಯದಲ್ಲಿ ದೊಡ್ಡದೊಂದು ಯಡವಟ್ಟು ನಡೆದಿದ್ಯಾ? ಆ ಯಡವಟ್ಟಿನಿಂದಾಗಿ ಡ್ಯಾಂಗೆ ಹರಿಯುತ್ತಿರುವ ಒಳಹರಿವಿನಷ್ಟೆ ಪ್ರಮಾಣದ ನೀರು ಸಂಗ್ರಹವಾಗದೇ ನದಿಗೆ ಹರಿಯುತ್ತಿದೆಯಾ? ಹೀಗೊಂದು ಅನುಮಾನ ಇವತ್ತು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಮಲೆನಾಡು ಟುಡೆಗೆ ಈ ಬಗ್ಗೆ ಮಾಹಿತಿ ನೀಡಿರುವ ಮೂಲಗಳು ಡ್ಯಾಂಗೆ ಸಂಬಂಧಿಸಿದಂತೆ ರಿಪೇರಿಯನ್ನ ಅಧಿಕಾರಿಗಳು ಮಳೆಗಾಲದಲ್ಲಿ ಕೈಗೊಂಡಿದ್ದಾರೆ. ಜಲಾಶಯದಿಂದ ನದಿಗೆ ನೀರು ಬಿಡುವ ಎರಡು ಗೇಟ್ಗಳಿವೆ. ಈ ಗೇಟ್ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದನ್ನ ಈಗ ಪರಿಶೀಲನೆ ಮಾಡಿದ್ದಾರೆ. ಡ್ಯಾಂ ರಿವರ್ ಗೇಟ್ನ್ನ ಎತ್ತಿಕೊಂಡು ಗೇಟಿನ ರಿಪೇರಿ ಕೈಗೊಳ್ಳಲಾಗಿದೆ. ಆದರೆ ರಿಪೇರಿ ಮುಗಿದ ಮೇಲೆ ಒಂದು ಡ್ಯಾಂ ರಿವರ್ ಗೇಟ್ ಇಳಿಯುತ್ತಿಲ್ಲ. ಇದರಿಂದ ಡ್ಯಾಂಗೆ ಬರುತ್ತಿರುವ ನೀರು ಸರಾಗವಾಗಿ ಹೊರಕ್ಕೆ ಹೋಗುತ್ತಿದೆ ಎನ್ನಲಾಗಿದೆ. ಬರೋಬ್ಬರಿ ನಾಲ್ಕೈದು ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಯುತ್ತಿದೆ. ಅಲ್ಲದೆ ಡ್ಯಾಂನಲ್ಲಿ ನೀರು ಸಂಗ್ರಹ ಹೆಚ್ಚುತ್ತಿಲ್ಲ. ನದಿಯಲ್ಲಿ ಸರಾಗವಾಗಿ ಹರಿಯುತ್ತಿರುವ ನೀರನ್ನ ಗಮನಿಸಿರುವ ರೈತರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಪ್ರತಿಭಟನೆಯ ಎಚ್ಚರಿಕೆಯನ್ನ ನೀಡಿದ್ದಾರೆ.
ಸಾಮಾನ್ಯವಾಗಿ ಭದ್ರಾ ಜಲಾಶಯದಲ್ಲಿ ನೀರು ಸಂಗ್ರಹವಾಗುವುದು ನಿಧಾನ. ದೊಡ್ಡ ಡ್ಯಾಂನಿಂದ ಬೇಸಿಗೆಯಲ್ಲಿ ರೈತರಿಗೆ ವೇಳಾಪಟ್ಟಿ ನಿಗದಿಪಡಿಸಿ ನೀರು ಹರಿಸಲಾಗುತ್ತದೆ. ಮಳೆಗಾಲದಲ್ಲಿ ಡ್ಯಾಂನಲ್ಲಿ ಸಂಗ್ರಹವಾಗುವ ನೀರು ಅಧಿಕಾರಿಗಳ ಯಡವಟ್ಟಿನಿಂದ ಹೊರಕ್ಕೆ ಹೋದರೆ ಜಲಾಶಯದಲ್ಲಿ ನೀರು ಹೇಗೆ ಬೇಸಿಗೆ ಉಳಿಯುತ್ತದೆ ಎಂಬುದು ರೈತರ ಪ್ರಶ್ನೆ. ಅಲ್ಲದೆ ಬೇಸಿಗೆಯಲ್ಲಿ ಕೈಗೊಳ್ಳಬೇಕಾದ ರಿಪೇರಿ ಕೆಲಸವನ್ನು ಮಳೆಗಾಲದ ಹೊತ್ತಿಗೆ ಕೈಗೊಂಡಿದ್ದಾದರೂ ಎಕೆ ಎನ್ನುತ್ತಾರೆ ಕೃಷಿಕರೊಬ್ಬರು
ಇನ್ನೂ ಜಲಾಶಯದ ಅಧಿಕಾರಿಗಳ ಯಡವಟ್ಟಿನಿಂದ ರೈತರಿಗೆ ದೊಡ್ಡ ಸಮಸ್ಯೆ ಯಾಗುತ್ತಿದ್ದು ವಿವಿಧ ಹಳ್ಳಿಗಳಿಂದ ರೈತರು ಜಲಾಶಯದತ್ತ ಬರುತ್ತಿದ್ದಾರೆ. ಇನ್ನೂ ಕಾಡಾ ಅಧ್ಯಕ್ಷರು ಸಹ ಇವತ್ತು ಡ್ಯಾಂಗೆ ಭೇಟಿಕೊಡುತ್ತಾರೆ ಎನ್ನುವ ಮಾಹಿತಿ ಇದೆ. ಇನ್ನೂ ಮೂಲಗಳ ಪ್ರಕಾರ, ಭದ್ರಾ ಡ್ಯಾಂ ನಿರ್ವಹಣೆಯ ದೊಡ್ಡ ಭ್ರಷ್ಟಾಚಾರದ ಅನುಮಾನವೂ ಅಧಿಕಾರಿಗಳ ಯಡವಟ್ಟಿನಿಂದ ಹೊರಕ್ಕೆ ಬರುವ ಸಾದ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆ ರಿವರ್ ಗೇಟ್ ಕೆಲಸ ಮಾಡುತ್ತಿಲ್ಲ ಎಂಬುದರ ಬಗ್ಗೆ ಹಲವು ಕಡೆಗೆ ದೂರು ನೀಡಲಾಗಿತ್ತು. ಆನಂತರ ಅನುಧಾನ ಬಿಡುಗಡೆಯಾಗಿ ರಿಪೇರಿ ಕಾರ್ಯ ನಡೆದಿದೆ ಎಂದು ಹೇಳಲಾಗಿದೆಯಾದರೂ , ಕೇವಲ ಪೇಪರ್ನಲ್ಲಷ್ಟೆ ರಿಪೇರಿ ನಡೆದಿದೆ ಎಂಬುದು ಸ್ಥಳೀಯರ ಆರೋಪ. ಇನ್ನೂ ಇದೇ ಕಾರಣಕ್ಕೆ ಇದೀಗ ಗೇಟ್ ಕೈಕೊಟ್ಟಿದ್ದು, ಮೇಲಕ್ಕೆತ್ತಿದ ಗೇಟ್ನ್ನ ಇಳಿಸಲಾಗದೇ ಭರಪೂರ ನೀರು ಹರಿದು ಹೋಗುತ್ತಿದೆ.
ಇನ್ನೂ ಈ ಬಗ್ಗೆ ಮಲೆನಾಡು ಟುಡೆ ಭದ್ರಾ ಜಲಾಶಯದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನ ಸಂಪರ್ಕಿಸುವ ಪ್ರಯತ್ನವನ್ನು ಮಾಡಿದೆ. ಆದರೆ ಇದುವರೆಗೂ ಸಂಪರ್ಕ ಸಾಧ್ಯವಾಗಿಲ್ಲ.
Farmers near the Bhadra Reservoir are protesting due to concerns about water mismanagement.