ಶಾಲೆ ವಾಹನದ ಟೈಯರ್​ಗೆ ಸಿಲುಕಿ ಚಾಲಕ ಸಾವು! ಭದ್ರಾವತಿಯಲ್ಲಿ ನಡೆದ ಘಟನೆ!

Driver dies after being hit by tyre of school vehicle What happened in Bhadravathi!

ಶಾಲೆ ವಾಹನದ ಟೈಯರ್​ಗೆ ಸಿಲುಕಿ ಚಾಲಕ ಸಾವು! ಭದ್ರಾವತಿಯಲ್ಲಿ ನಡೆದ ಘಟನೆ!

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS 

ಭದ್ರಾವತಿ  ತಾಲ್ಲೂಕಿನ ಕೂಡ್ಲಿಗೆರೆ ಬಳಿಯಲ್ಲಿ ಶಾಲಾ ವಾಹನಕ್ಕೆ ವ್ಯಕ್ತಿಯೊಬ್ಬರು ಸಿಲುಕಿ ಸಾವನ್ನಪ್ಪಿದ್ದಾರೆ. 37 ವರ್ಷ ವಿಶ್ವನಾಥ್ ಕೊಟ್ರಪ್ಪ ಮೃತ ದುರ್ದೈವಿ

ಘಟನೆ ನಡೆದಿದ್ದೇಗೆ?

ಹಾವೇರಿ ಜಿಲ್ಲೆಯ ಬೆಳವಗಿ ಗ್ರಾಮದ ನಿವಾಸಿ ಕೂಡ್ಲಿಗೆರೆಯಲ್ಲಿ ದಾವಣಗೆರೆಗೆ ಹೋಗಲು ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ  ಶಾಲಾ ವಾಹನದ ಹಿಂದಿನ ಟೈರ್​ಗೆ ಸಿಲುಕಿ ವಿಶ್ವನಾಥ್​ ಮೃತಪಟ್ಟಿದ್ದಾರೆ. ಘಟನೆ ಹೇಗಾಯ್ತು ಎಂಬುದರ ಬಗ್ಗೆ ಇನ್ನಷ್ಟೆ ಸ್ಪಷ್ಟಮಾಹಿತಿ ಲಭ್ಯವಾಗಬೇಕಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 


ಶಿವಮೊಗ್ಗದಲ್ಲಿಯೇ ಸ್ಥಳೀಯರಿಗೆ ಸಿಗುತ್ತಿಲ್ಲ ಕೆಲಸ! ಮಹತ್ವದ ಸೂಚನೆ ಕೊಟ್ಟ ಜಿಲ್ಲಾಧಿಕಾರಿ ಡಾ.ಆರ್​. ಸೆಲ್ಬಮಣಿ

ಶಿವಮೊಗ್ಗ : ಜಿಲ್ಲೆಯಲ್ಲಿನ ವಿದ್ಯಾವಂತ ಯುವಕರು ಶ್ರಮದಾಯಕ ಕೆಲಸಗಳಿಂದ ವಿಮುಖರಾಗಿ ಸರಳ, ಸುಲಭದ ಕೆಲಸಗಳಿಗೆ ಆಸಕ್ತಿ ತೋರುತ್ತಿರುವುದು ಹಾಗೂ ಅಲ್ಪಾವಧಿಯಲ್ಲಿ ಕೆಲಸ ಮುಗಿಸುವ ಧಾವಂತದಲ್ಲಿರುವುದು ಆತಂಕಕಾರಿ ವಿಷಯ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.

ನಿನ್ನೆ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ,  ಸರ್ಕಾರವು ವಿವಿಧ ಇಲಾಖೆಗಳ ಮೂಲಕ ನಿರುದ್ಯೋಗಿ ಯುವಕರಿಗೆ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ತರಬೇತಿ ಪಡೆದವರು ತಮ್ಮ ಆಸಕ್ತಿಯ ಯಾವುದೇ ಉದ್ಯೋಗದಲ್ಲಿ ತೊಡಗಿಸಿಕೊಂಡು ಭವಿಷ್ಯದ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ಮುಂದಾಗಬೇಕೆಂದರು

ಕಟ್ಟಡ ನಿರ್ಮಾಣ, ಮರಗೆಲಸ, ಬಣ್ಣ ಹಚ್ಚುವ, ಕೆಲವು ಕೈಗಾರಿಕೆಗಳು, ಕೌಶಲ್ಯಾಧಾರಿತ ಸೇವೆಗಳು ಮುಂತಾದವುಗಳಲ್ಲಿ ಸ್ಥಳೀಯ ಕಾರ್ಮಿಕರು ಸಕ್ರಿಯವಾಗಿ ತೊಡಗಿಸಿಕೊಳ್ಳದಿರುವುದರಿಂದ ಹೊರರಾಜ್ಯಗಳ ನಿರುದ್ಯೋಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬಂದು ಹಗಲಿರುಳು ಕಾರ್ಯನಿರತರಾಗುತ್ತಿದ್ದಾರೆ. ಅಲ್ಲದೇ ಕಡಿಮೆ ವೇತನಕ್ಕೆ ಹೆಚ್ಚಿನ ಅವಧಿಯ ನೈಪುಣ್ಯದ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಲಭ್ಯವಾಗದಿರುವ ಆತಂಕವಿದೆ ಎಂದ ಅವರು, ಸ್ಥಳೀಯ ಯುವಕರ ನಿರೀಕ್ಷೆಗೆ ತಕ್ಕಂತೆ ಕೌಶಲ್ಯಾಧಾರಿತ ತರಬೇತಿಗಳನ್ನು ಆಯೋಜಿಸಿ, ತರಬೇತಿ ನೀಡಿದ ನಂತರ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.



2000ಇಸ್ವಿಯ ನಂತರ ಜನಿಸಿದ ಪೀಳಿಗೆಯವರು ಕೌಶಲ್ಯಾಧಾರಿತ ಮಾತ್ರವಲ್ಲ ತಮ್ಮದೇ ಹೊಲದಲ್ಲಿ ಕೆಲಸ ನಿರ್ವಹಿಸಲು ಉತ್ಸುಕರಾಗದೇ ವಿಲಾಸದ ಜೀವನ ನಡೆಸಲು ಹಪಹಪಿಸುತ್ತಿರುವ ರೀತಿ ಉತ್ತಮ ಬೆಳವಣಿಗೆಯಲ್ಲ. ಇತ್ತೀಚಿನ ಯುವಪೀಳಿಗೆಯವರು ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳದಿರುವಲ್ಲಿ ಇರಬಹುದಾದ ಪ್ರಮುಖ ಕಾರಣಗಳೇನು? ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಇರುವ ಸಾಧ್ಯತೆಗಳ ಬಗ್ಗೆ ತುರ್ತು ಸಮೀಕ್ಷೆ ನಡೆಸಿ, ಪರ್ಯಾಯ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.



ಸ್ಥಳೀಯರ ನಿರುದ್ಯೋಗ ಸಮಸ್ಯೆಗೆ ವಲಸೆ ಕಾರ್ಮಿಕರು ಒಂದೆಡೆಯಾದರೆ, ಅತ್ಯಾಧುನಿಕ ಯಂತ್ರಗಳ ಬಳಕೆಯೂ ಕಾರಣವಾಗಿರಬಹುದು ಎಂದ ಅವರು, ವಿವಿಧ ಕೌಶಲ್ಯ ತರಬೇತಿ ಪಡೆದು ಸ್ವಯಂ ಉದ್ಯೋಗಾವಕಾಶಕ್ಕಾಗಿ ಬ್ಯಾಂಕುಗಳಿಗೆ ಸಾಲಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಫಲಾನುಭವಿಗಳಿಗೆ ಹೆಚ್ಚಿನ ಅಲೆದಾಡಿಸದೇ ಸೌಲಭ್ಯ ದೊರಕಿಸಿಕೊಡಬೇಕು. ಸಾಲ ನೀಡುವಲ್ಲಿ ಅಭ್ಯರ್ಥಿಗಳು ನೀಡುವ ದಾಖಲೆಗಳಲ್ಲಿ ಸಡಿಲಿಕೆ ಇರಲಿ. ಈ ಬಗ್ಗೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕರು ಗಮನಹರಿಸಬೇಕೆಂದವರು ನುಡಿದರು.

ಅವಕಾಶವಿದ್ದಲ್ಲಿ ಗ್ರಾಮೀಣ ಮಹಿಳೆಯರು, ಕೃಷಿಕರು, ಹೈನೋದ್ಯಮಿಗಳು ಜೇನುಕೃಷಿಯನ್ನು ಮಾಡುವಂತೆ ಪ್ರೇರೇಪಿಸಿ. ಜೇನುಪೆಟ್ಟಿಗೆಯನ್ನು ಸ್ವಸಹಾಯ ಗುಂಪುಗಳ ಮಹಿಳೆಯರೆ ಕಡಿಮೆ ವೆಚ್ಚದಲ್ಲಿ ತಯಾರಿಸಿ, ಮಾರುಕಟ್ಟೆಯಲ್ಲಿ ಸರಳವಾಗಿ ದೊರಕುವಂತೆ ತರಬೇತಿ ನೀಡಿ. ಇದರಿಂದಾಗಿ ತೋಟಗಾರಿಕೆ ಬೆಳೆಯಲ್ಲಿ ಹೆಚ್ಚಿನ ಇಳುವರಿ ಹಾಗೂ ಲಾಭವನ್ನು ಕಾಣಬಹುದಾಗಿದೆ ಎಂದರು.

ಸ್ಥಳೀಯ ಸಂಸ್ಥೆಗಳೂ ಕೂಡ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸುವ ತರಬೇತಿಗಳು ಯುವಕ ಕೇಂದ್ರೀತವಾಗಿದ್ದು, ಉದ್ಯೋಗಾವಕಾಶ ಒದಗಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಉದ್ಯೋಗಾವಕಾಶಗಳನ್ನು ಕಲ್ಪಿಸುವ ಹೊಸಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ಯತ್ನಸುವಂತೆ ಅವರು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಮೂಕಪ್ಪ ಕರಭೀಮಣ್ಣನವರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.