ಕುಸಿದ ಧರೆ, ಹೆದ್ದಾರಿ ಬಂದ್, ಇಳಿಜಾರಿಗಿಳಿದ ಬಸ್, ರಸ್ತೆಗೆ ಬಿದ್ದ ಕಂಬ| ಮಂದರ್ತಿ ಮೇಳದ ಕಲಾವಿದನ ಮನೆ ಕುಸಿತ
Details of rain damage in Shivamogga district
SHIVAMOGGA | MALENADUTODAY NEWS | Jul 4, 2024 ಮಲೆನಾಡು ಟುಡೆ
ಶಿವಮೊಗ್ಗದಲ್ಲಿ ಮಳೆ ಆರ್ಭಟಕ್ಕೆ ಸೇತುವೆ ಕೊಚ್ಚಿಹೋಗಿದೆ. ವಿದ್ಯುತ್ ಕಂಬಗಳು ರೋಡಿಗೆ ಉರುಳಿದೆ. ಮನೆ ಕುಸಿದಿದೆ. ಅಲ್ಲದೆ ಹೆದ್ದಾರಿಯಲ್ಲಿ ಧರೆ ಕುಸಿಯಲು ಆರಂಭಿಸಿದೆ. ನಿನ್ನೆ ದಿನದ ಸುರಿದ ಮಳೆಯಿಂದಾಗಿ ಕಳೆದ24 ಗಂಟೆಯಲ್ಲಿ ಆದ ಮಳೆಹಾನಿಯ ಘಟನೆಗಳನ್ನು ವಿವರಿಸುವುದಾದರೆ, ಶಿವಮೊಗ್ಗದಲ್ಲಿ ಸುರಿದ ಮಳೆಯಿಂದಾಗಿ, ಸಾಗರ ತಾಲ್ಲೂಕು ಬ್ಯಾಕೋಡು ಸಮೀಪದ ಇಳಿಮಕ್ಕಿಯಲ್ಲಿ ಗೂಡುಮಕ್ಕಿ ಹೊಳೆಗೆ ನಿರ್ಮಿಸಿದ ತಾತ್ಕಾಲಿಕ ಸೇತುವೆಯು ಮಳೆಗೆ ಕೊಚ್ಚಿ ಹೋಗಿದೆ. ಹೀಗಾಗಿ ಈ ಭಾಗದ ಸಂಪರ್ಕ ಕಡಿಗೊಂಡಿದೆ.
ಹೊಸನಗರದಲ್ಲಿ ಕುಸಿದ ಗುಡ್ಡ
ಇನ್ನೂ ಹೊಸನಗರದಲ್ಲಿ ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಹೆದ್ದಾರಿ ಸಂಚಾರವೇ ಸ್ಥಗಿತಗೊಂಡಿತ್ತು. ಹೊಸನಗರ ತಾಲೂಕು ನಗರ ಬಳಿ ಸಮಗೋಡಿನಲ್ಲಿ ಈ ಘಟನೆ ನಡೆದಿತ್ತು. ಆ ಬಳಿಕ ಸ್ಥಳೀಯರ ಜೊತೆಗೆ ಜೆಸಿಬಿ ಮೂಲಕ ಹೆದ್ದಾರಿ ಮೇಲೆ ಬಿದ್ದ ಮಣ್ಣನ್ನ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯ್ತು
ಇನ್ನೊಂದೆಡೆ ಮಾರಿಗುಡ್ಡದಲ್ಲಿ ಟಿಟಿ ವಾಹನವೊಂದರ ಮೇಲೆ ಮರ ಬಿದ್ದು ವಾಹನಕ್ಕೆ ಹಾನಿಯಾಗಿದೆ. ಅದೃಷ್ಟಕ್ಕೆ ಯಾರಿಗೂ ಏನೂ ಆಗಿಲ್ಲ. ನಿಟ್ಟೂರು ಸಮೀಪದ ಮಡೋಡಿ ತಿರುವಿನಲ್ಲಿ ಬೆಂಗಳೂರಿನಿಂದ ಸಿಗಂದೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ರಸ್ತೆ ಪಕ್ಕದ ಕಂದಕಕ್ಕೆ ಜಾರಿದ ಬಗ್ಗೆ ವರದಿಯಾಗಿದೆ. ಇನ್ನೂ ಭಾರೀಮಳೆಯಿಂದಾಗಿ ಹೊಸನಗರ ಭಾಗದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಹ ಸಿಗದಂತಾಗಿದೆ.
ರಸ್ತೆಗುರುಳಿದ ವಿದ್ಯುತ ಕಂಬಗಳು
ಇನ್ನೂ ಇತ್ತ ಸಾಗರ ತಾಲ್ಲೂಕು ಹೊಳೆಬಾಗಿಲು ಸಮೀಪ ಮಳೆಗಾಳಿಗೆ ರಸ್ತೆ ಮೇಲೆಯೆ ಹಲವು ವಿದ್ಯುತ್ ಕಂಬಗಳು ಉರುಳಿವೆ.
ಹೊಳೆಬಾಗಿಲು, ಕಳಸವಳ್ಳಿ, ತುಮರಿ ರಸ್ತೆಯಲ್ಲಿ ಘಟನೆ ನಡೆದಿದ್ದು ಮೆಸ್ಕಾಂ ವಿದ್ಯುತ್ ಕಂಬಗಳ ರಿಪೇರಿಗೆ ಮುಂದಾಗಿದೆ.
ಯಕ್ಷಗಾನ ಕಲಾವಿದನ ಮನೆ ಕುಸಿತ
ಇನ್ನೂ ತೀರ್ಥಹಳ್ಳಿ ತಾಲ್ಲೂಕು ಆಗುಂಬೆಯಲ್ಲಿ ಯಕ್ಷಗಾನ ಕಲಾವಿದರೊಬ್ಬರ ಮನೆ ಕುಸಿತಗೊಂಡಿದೆ. ಹೊನ್ನೆತಾಳು ಗ್ರಾಮದ ನಂದನ್ ಶೆಟ್ಟಿ ಎಂಬುವರ ಮನೆ ಬಿದ್ದಿದ್ದು ನೆಲೆ ಇಲ್ಲದಂತಾಗಿದೆ. ಮಂದರ್ತಿ ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿರುವ ನಂದನ ಶೆಟ್ಟಿಯವರ ಮನೆ ಇದಾಗಿದ್ದು, ಅದೃಷ್ಟಕ್ಕೆ ಮನೆ ಕುಸಿಯುವ ಸಂದರ್ಭದಲ್ಲಿ ಅದರಲ್ಲಿ ಮನೆಯವರು ಇರಲಿಲ್ಲ ಎಂದು ತಿಳಿದುಬಂದಿದೆ.