Chikkamagaluru | Jan 31, 2024 | ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ನಿನ್ನೆ ಮಂಗಳವಾರ ಸಕ್ರೆಬೈಲ್ ಆನೆ ಬಿಡಾರಕ್ಕೆ ಭೇಟಿಕೊಟ್ಟಿದ್ರು.
ಅಲ್ಲಿ ಹಲವು ಹೊತ್ತು ಕಳೆದ ಅವರು ಅಲ್ಲಿನ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಆನೆಗಳಿಗೆ ಬೆಲ್ಲ, ಬಾಳೆಹಣ್ಣು ತಿನ್ನಿಸಿ, ತುಂಗಾ ನದಿಯಲ್ಲಿ ದೋಣಿವಿಹಾರ ನಡೆಸಿದರು.
ಬಿಡಾರದಲ್ಲಿ ಕಾರ್ಯನಿರ್ವಹಿಸುವ ಮಾವುತರು, ಕಾವಾಡಿಗಳು ಮತ್ತು ಅರಣ್ಯ ಸಿಬ್ಬಂದಿಯೊಂದಿಗೆ ಮಾತನಾಡಿದ ಸಚಿವರು, ಅಲ್ಲಿ ಆಗಬೇಕಿರುವ ಕೆಲಸಗಳು ಮತ್ತು ಪ್ರವಾಸಿಗರ ಅನುಕೂಲಕ್ಕೆ ಒದಗಿಸ ಬಹುದಾದ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.
ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ್, ವಲಯ ಅರಣ್ಯಾಧಿಕಾರಿ ವಿನಯ್ ಸ್ಥಳೀಯವಾಗಿ ಆಗಬೇಕಿರುವ ಸೌಲಭ್ಯಗಳು ಹಾಗೂ ಪ್ರವಾಸಿಗರಿಗೆ ಇಲಾಖೆಯಿಂದ ಒದಗಿಸಿರುವ ಮೂಲ ಸೌಕರ್ಯಗಳ ಬಗ್ಗೆ ವಿವರಿಸಿದರು.
ದೋಣಿ ವಿಹಾರ ನಡೆಸಿದ ಸಚಿವ ಇತ್ತೀಚಿನ ವರ್ಷಗಳಲ್ಲಿ ಸಕ್ರೆಬೈಲ್ ಆನೆ ಬಿಡಾರ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಅತ್ಯಂತ ಸಮೀಪ ಇರುವ ಈ ಪ್ರವಾಸಿ ತಾಣ ಸುಂದರವಾಗಿದೆ. ಇನ್ನಷ್ಟು ಸೌಲಭ್ಯ ನೀಡುವ ಅಗತ್ಯವಿದ್ದು, ಸಂಬಂಧಿತ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.