ಆನೆ ಸಾಕಲು ಸಹ ಸರ್ಕಾರಕ್ಕೆ ಬಡತನವೇ? ಸಂಖ್ಯೆ ಕಡಿಮೆ ಮಾಡುವ ನಿರ್ಧಾರದ ಹಿಂದಿನ ಕಾರಣವೇನು ಗೊತ್ತಾ? ಗಜಪಡೆಯಿಂದಲೂ ದುಡಿಮೆ ನಿರೀಕ್ಷಿಸಿತೆ ಇಲಾಖೆ! JP Exclusive
The state government has decided to reduce the number of elephants in the custody of the state's forest department.
MALAENADUTODAY.COM| JPEXCLUSIVE
ಕಳೆದ ಒಂದು ವರ್ಷದಿಂದ ಸಾಕಾನೆಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಆನೆ ಬಿಡಾರಗಳಲ್ಲಿ ಮುದ್ದಾಗಿ ಸಾಕುವ ಆನೆಗಳನ್ನು ಬೇರೆ ರಾಜ್ಯದವರು ಬಂದು ಚೆನ್ನಾಗಿದೆ ಎಂದು ಲಾರಿಗೇರಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲಿ ಅವುಗಳು ಹೇಗೆ ಬದುಕುತ್ತಿವೆ. ಅಲ್ಲಿನ ತೀರಾ ಚಳಿಯ ವಾತಾವರಣಕ್ಕೆ ಅವುಗಳು ಒಗ್ಗಿಕೊಳ್ಳುತ್ತಿವೆಯಾ? ಅವುಗಳ ಆರೋಗ್ಯ ಸ್ಥಿತಿಯೇನು? ಯಾವೊಂದು ಮಾಹಿತಿ ಲಭ್ಯವಿಲ್ಲ. ಇದರ ನಡುವೆ ಮತ್ತಷ್ಟು ಮಗದಷ್ಟು ಆನೆಗಳ ವರ್ಗಾವಣೆಗೆ ಬೇಡಿಕೆ ಬಂದಿದ್ದು, ಅದಕ್ಕೆ ತಕ್ಕಂತೆ ರಾಜ್ಯಸರ್ಕಾರವೇ ಕುಣಿಯುತ್ತಿದೆ. ಅಲ್ಲದೆ ಈ ವರ್ಗಾವಣೆಗಾಗಿ ಆನೆಗಳನ್ನು ಸಾಕುವುದೇ ಕಷ್ಟ. ಅದರಿಂದ ಉತ್ಪಾದಕ ಕೆಲಸವಾಗುತ್ತಿಲ್ಲ ಎಂಬ ಕಾರಣವನ್ನು ಅರಣ್ಯ ಇಲಾಖೆ ನೀಡುತ್ತಿದೆ. ಇದನ್ನ ಗಮನಿಸಿದರೇ, ಆನೆಗಳನ್ನು ಸಾಕುವುದು ಲಾಭದಾಯಕ ದುಡಿಮೆಗಾಗಿಯೇ ಎಂಬ ಪ್ರಶ್ನೆ ಎದುರಾಗುತ್ತಿದೆ. ಹಾಗಿದ್ದಲ್ಲಿ ಸರ್ಕಸ್ ಕಂಪನಿಯವರಿಗೂ ರಾಜ್ಯ ಸರ್ಕಾರಕ್ಕೂ ವ್ಯತ್ಯಾಸವಿಲ್ಲದಂತಾಗುತ್ತದೆಯಲ್ಲವೆ ಎಂಬುದೇ ಪ್ರಶ್ನೆ. ಸರ್ಕಸ್ ಕಂಪನಿಯಿಂದ ಆನೆಯೊಂದನ್ನ ಬಿಡಿಸಿಕೊಂಡು ಬಿಡಾರದಲ್ಲಿ ಇರಿಸಿ, ಅಲ್ಲಿ ಉತ್ಪಾದಕ ಕೆಲಸ ಮಾಡುವುದಾದರೆ, ಅದರಿಂದ ಸಂತ್ರಸ್ತ ಆನೆಗೆ ಆಗುವ ಪ್ರಯೋಜನ ಏನು ಎಂಬುದು ವನ್ಯಜೀವಿ ತಜ್ಞರ ಪ್ರಶ್ನೆ
ಈ ಮಧ್ಯೆ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಆನೆಗಳ ವಿಚಾರದಲ್ಲಿ ಎಂತಹ ನಿಲುವು ಹೊಂದಿದೆ ಎಂಬುದಕ್ಕೆ ಸರ್ಕಾರದ ಆ್ಯಯವ್ಯಯದ ಪೂರ್ವಭಾವಿ ಸಭೆಯಲ್ಲಿ ಸರ್ಕಾರ ಸೂಚಿಸಿದ ನಿರ್ಧಾರಗಳು ಸಾಕ್ಷಿ ಹೇಳುತ್ತಿವೆ. ಬಡ್ಜೆಟ್ನ ಪೂರ್ವಭಾವಿ ಸಭೆಯಲ್ಲಿ ಸರ್ಕಾರಕ್ಕೆ ಆನೆ ಹಾಗೂ ಬಿಡಾರಗಳನ್ನು ಸಾಕುವುದಕ್ಕೂ ಬಡತನ ಎದುರಾದಂತಿದೆ. ಹಾಗಾಗಿ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಮಾನ್ಯ ಅರಣ್ಯ ಸಚಿವರು ಬೇರೆ ರಾಜ್ಯಗಳ ಅವಶ್ಯಕತೆಗೆ ತಕ್ಕಂತೆ ಹಂಚಿಕೆ ಮಾಡಿ ಇನ್ನೂ ಹೆಚ್ಚಿನ ಸಂಖ್ಯೆಯ ಆನೆಗಳು ಉಳಿದಲ್ಲಿ ಆನೆಗಳನ್ನು ಸಾಕುವ ಎಲ್ಲ ವ್ಯವಸ್ಥೆಗಳು ಇರುವ ಆನೆಗಳ ಪುನರ್ವಸತಿ ಘಟಕಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಅವರ ಬೇಡಿಕೆಗೆ ಅನುಗುಣವಾಗಿ ಆನೆಗಳನ್ನು ಪೂರೈಸಲು ಹಾಗೂ ರಾಜ್ಯದ ಅವಶ್ಯಕತೆಗೆ ತಕ್ಕಂತೆ ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
‘
ಸಾಕಾನೆಗಳ ಉಪಯೋಗ ದಿನೇ ದಿನೇ ಕಡಿಮೆ ಆಗುತ್ತಿರುವುದರಿಂದ ಈ ಆನೆಗಳನ್ನು ಉತ್ಪಾದಕ ಕೆಲಸಗಳಿಲ್ಲದೇ ನಿರ್ವಹಣೆ ಮಾಡುವಂಥ ಸ್ಥಿತಿ ತಲೆದೋರಿದೆ ಎಂದು ಸರ್ಕಾರವೇ ಹೇಳುತ್ತಿದೆ. ಸರ್ಕಾರವೇ ಈ ರೀತಿ ಹೇಳುತ್ತಿರುವಾಗ, ಆನೆಗಳನ್ನು ನೋಡಲು ಮುಗಿಬೀಳುವ ಕ್ಯಾಂಪ್ಗಳಲ್ಲಿ ಸಂಗ್ರಹವಾಗುವ ಪ್ರವಾಸೋದ್ಯಮದ ಹಣ ಲಾಭ ಖಜಾನೆ ಸೇರುತ್ತಿಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಮೇಲಾಗಿ ಆನೆಗಳ ಆಹಾರದ ಖರ್ಚು ವರ್ಷ ವರ್ಷವೂ ಹೆಚ್ಚುತ್ತಿದೆ ಎಂದು ಇಲಾಖೆ ಹಾಗೂ ಸರ್ಕಾರ ವ್ಯಥೆ ಪಟ್ಟು ಬಡತನ ತೋರುತ್ತಿರುವುದು ವಿಪರ್ಯಾಸವೆ ಸರಿ
ಸದ್ಯ ಪ್ರಸ್ತುತ ಅರಣ್ಯ ಇಲಾಖೆಯ ವಶದಲ್ಲಿ 100 ಕ್ಕಿಂತ ಹೆಚ್ಚು ಆನೆಗಳು ಇವೆ. ಅವುಗಳನ್ನ ಸಾಕಾಗಾಗುತ್ತಿಲ್ಲ ಎಂಬ ಕಾರಣ ನೀಡಿ ಬೇರೆ ಬೇರೆ ರಾಜ್ಯಗಳಿಗೆ ವರ್ಗಾವಣೆಗೆ ಇಲಾಖೆ ಷರಾ ಬರೆದಿದೆ. ಇದಕ್ಕಾಗಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅವುಗಳೆಂದರೆ,
- 1) ಹಾಲಿ ಇರುವ ಮಾವುತ, ಕಾವಾಡಿಗಳ ಸಂಖ್ಯೆ ಮತ್ತು ಅವರು ನಿಭಾಯಿಸಬಹುದಾದ ಆನೆಗಳ ಸಂಖ್ಯೆಯನ್ನು ಗುರುತಿಸುವುದು ಮಾವುತ ಮತ್ತು ಕಾವಾಡಿಗಳಿಗೆ ನಿರ್ದಿಷ್ಟ ಆನೆಗಳನ್ನು ನಿಭಾಯಿಸಲು ಹಂಚಿಕೆ ಮಾಡುವುದು,
- 2) ಹೀಗೆ ಗುರುತಿಸಿ ಹಂಚಿಕೆ ಮಾಡುವಾಗ ನಾಡ ಹಬ್ಬ ದಸರಾ ಹಾಗೂ ಇಲಾಖೆಯ ಕಾರ್ಯಾಚರಣೆಗೆ ಬೇಕಾಗುವ ತರಬೇತಿ ಹೊಂದಿರುವ ಆನೆಗಳನ್ನು ರಾಜ್ಯದ ಹಾಗೂ ಇಲಾಖೆಯ ಅವಶ್ಯಕತೆಗೆ ತಕ್ಕಂತೆ ಉಳಿಸಿಕೊಳ್ಳುವ ಅಂಶವನ್ನು ಗಮನದಲ್ಲಿಟ್ಟುಕೊಳ್ಳುವುದು,
- 3) ಸರ್ಕಸ್ ಆನೆಗಳನ್ನು ಇಲಾಖಾ ಅನೆಗಳೊಂದಿಗೆ ಸೇರಿಸದಿರಲು ನಿರ್ಧರಿಸಿರುವುದರಿಂದ ಅವುಗಳನ್ನು ಪ್ರತ್ಯೇಕವಾಗಿ ದೊಡ್ಡಹರವೆ ಶಿಬಿರದಲ್ಲಿ ಇರಿಸಲಾಗಿದೆ, ಈ ಆನೆಗಳನ್ನು ಬೇರೆ ರಾಜ್ಯಗಳ ಉಪಯೋಗಕ್ಕೆ ಅಥವಾ ಬೇರೆಡೆಗೆ ಪ್ರನರ್ವಸತಿಗಾಗಿ ಆದ್ಯತೆಯ ಮೇರೆಗೆ ಪರಿಗಣಿಸುವುದು,
- 4) ಪ್ರತಿ ಚಿಕ್ಕ ಆನೆ ಶಿಬಿರದಲ್ಲಿ ಎರಡು ಹೆಣ್ಣು ಆನೆಗಳನ್ನು ಹಾಗೂ ಮೂರು ಗಂಡಾನೆಗಳನ್ನು ನಿರ್ವಹಿಸಲು ಆನೆಗಳನ್ನು ಪುನಃ ಹಂಚಿಕೆ ಮಾಡಲು ಕ್ರಮಕೈಗೊಳ್ಳುವುದು,
- 5) ಪ್ರತಿ ದೊಡ್ಡ ಶಿಬಿರದಲ್ಲಿ 3 ರಿಂದ 5 ಹೆಣ್ಣು ಆನೆಗಳನ್ನು ಉಳಿದಂತೆ ಗಂಡಾನೆಗಳನ್ನು ಹಂಚಿಕೆ ಮಾಡಿ ಒಟ್ಟು ಸಂಖ್ಯೆ 12 ಕ್ಕೆ ಮೀರದಂತೆ ಕ್ರಮ ವಹಿಸುವುದು,
- 6) ಹೀಗೆ ಹಂಚಿಕೆ ಮಾಡಿದ ಮೇಲೆ ಉಳಿಯುವ ಆನೆಗಳನ್ನು ಗುರುತಿಸಿ ಬೇರೆ ರಾಜ್ಯಗಳ ಅರಣ್ಯ ಇಲಾಖೆಗಳ ಬಳಕೆಗೆ ಹಾಗೂ ಆನೆಗಳ ಪುನರ್ವಸತಿ ಸೌಲಭ್ಯಗಳನ್ನು ಹೊಂದಿದ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಗುರುತಿಟ್ಟುಕೊಳ್ಳುವುದು,
- 7) ಮೇಲೆ ತಿಳಿಸಿದಂತೆ ಬೇರೆ ರಾಜ್ಯಗಳಿಂದ ಅಥವಾ ಪುನರ್ವಸತಿ ಸೌಲಭ್ಯವುಳ್ಳ, ಸಂಸ್ಥೆಗಳಿಂದ ಬೇಡಿಕೆ ಬಂದಾಗ ಅವುಗಳ ಹಂಚಿಕೆಗಾಗಿ ಸೂಕ್ತ ಪ್ರಸ್ತಾವಗಳನ್ನು ಸರ್ಕಾರದ ಅನುಮೋದನೆಗಾಗಿ ಕೂಡಲೇ ಸಲ್ಲಿಸಲು ಕ್ರಮಕೈಗೊಳ್ಳುವುದು, ಈ ಸಲುವಾಗಿ ಈ ಕೆಳಕಂಡ ನಮೂನೆಯಲ್ಲಿ ಮಾಹಿತಿಯನ್ನು, ಪ್ರತಿ ಆನೆಗೆ ಸಂಬಂಧಿಸಿದಂತೆ ಸಲ್ಲಿಸುವುದು,
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com