shivamogga Mar 13, 2024 ಬಿಎಸ್ ಯಡಿಯೂರಪ್ಪನವರಿಂದ ಹಿಂದೂತ್ವಕ್ಕೆ ದಕ್ಕೆಯಾಗುತ್ತಿದೆಯಾ? ಇವತ್ತಿನ ಕೆಎಸ್ ಈಶ್ವರಪ್ಪನವರ ಮಾತಿನಲ್ಲಿ ಈ ಮಾತು ಪರೋಕ್ಷವಾಗಿ ಬಂದಿದೆ. ಬಸನಗೌಡ ಪಾಟೀಲ ಯತ್ನಾಳ್ರವರಂತಹ ಹಿಂದುತ್ವ ಪ್ರತಿಪ್ರಾಧನೆಯನ್ನ ಮಾಡುತ್ತಿರುವವರಿಗೆ ತೊಂದರೆಕೊಡುತ್ತಿದ್ದಾರೆ. ಹಾಗೂ ಸಂಘ ನಿಷ್ಟರಾಗಿರುವವರನ್ನ , ನಿಷ್ಟಾವಂತರಿಗೆ ತೊಂದರೆಕೊಟ್ಟು ಪಕ್ಕಕ್ಕೆ ಸರಿಸುವಂತಹ ಕೆಲಸವನ್ನು ಮಾನ್ಯ ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂಬ ಭಾವನೆಯು ಬಹಳ ಜನರಿಗೆ ಬಂದಿದೆ ಎಂದು ಕೆ.ಎಸ್.ಈಶ್ವರಪ್ಪನವರು ನೇರವಾಗಿ ಆರೋಪಿಸಿದ್ದಾರೆ.
ಅಲ್ಲದೆ ತಮ್ಮ ನೋವಿನ ಆರೋಪದ ಪರವಾಗಿ ಕೆ.ಎಸ್.ಈಶ್ವರಪ್ಪನವರು ಬಸನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಸದಾನಂದ ಗೌಡರವರ ಹೆಸರುಗಳನ್ನ ಪ್ರಸ್ತಾಪಿಸಿದ್ದಾರೆ. ಅಲ್ಲದೆ ರಾಜ್ಯದ ಕಾರ್ಯಕರ್ತರಿಗೆ ನೋವಾಗಿದೆ ಅವರ ನೋವಿನ ಧ್ವನಿಯಾಗಬೇಕಲ್ವವೇ ನಾನು ಎನ್ನುವ ಮೂಲಕ ತಾವು ಪ್ರಸ್ತಾಪಿಸಿದ ನಾಯಕರ ಅಸಮಾಧಾನದ ಧ್ವನಿಯ ನಾಯಕತ್ವವನ್ನು ಹೊತ್ತುಕೊಳ್ಳುವ ಸೂಚನೆಯನ್ನ ಸಹ ಕೊಟ್ಟಿದ್ದಾರೆ.
ಇತ್ತೀಚೆಗೆ ಸಿಟಿ ರವಿ ಸಹ ಬಹಳಷ್ಟು ನಡೆಯತ್ತಿದೆ. ಎಲ್ಲವನ್ನು ಹೇಳುವ ಸಮಯ ಬರುತ್ತದೆ ಆಗ ಹೇಳುತ್ತೇನೆ ಎಂದಿದ್ದರು. ಅದರ ಮುಂದುವರಿದ ಧ್ವನಿಯಾಗಿ ಕೆಎಸ್ ಈಶ್ವರಪ್ಪನವರು ನೇರವಾಗಿಯೇ ಯಡಿಯೂರಪ್ಪ ಮತ್ತವರ ಕಡೆಯವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮುಖ್ಯವಾಗಿ ಶೋಭಾ ಕರಂದ್ಲಾಜೆ ಹಾಗೂ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್ ಕೊಡಿಸಿದ್ದರ ಬಗ್ಗೆಯೇ ಪ್ರಶ್ನಿಸಿರೋ ಈಶ್ವರಪ್ಪ ಅವರಿಬ್ಬರ ಪರವಾಗಿ ಹಠ ಹಿಡಿದು ಟಿಕೆಟ್ ಕೊಡಿಸಿದ ಬಿಎಸ್ವೈ ತನ್ನ ಮಗನಿಗೂ ಹಠ ಹಿಡಿದು ಟಿಕೆಟ್ ಕೊಡಿಸಬಹುದಿತ್ತಲ್ಲವೇ ಎಂದಿದ್ದಾರೆ.
ಈ ಹಿಂದೆ ಬಿಎಸ್ ಯಡಿಯೂರಪ್ಪ ಈಶ್ವರಪ್ಪನವರೇ ನನ್ನ ಬೆನ್ನಿಗೆ ಚೂರಿ ಹಾಕಿದ್ರಲ್ಲ, ನಾನೇನು ನಿಮಗೆ ಅನ್ಯಾಯ ಮಾಡಿದ್ದೆ ಎಂದು ಕೇಳುತ್ತಲೇ ಕೆಜೆಪಿ ಕಟ್ಟಿದ್ದರು. ಇದೀಗ ಅದೇ ಸನ್ನಿವೇಶ ತದ್ವಿರುದ್ಧವಾಗಿದ್ದು ಒಂದೇ ತಟ್ಟೆಯಲ್ಲಿ ಊಟ ಮಾಡಿದವರು ನಾವಿಬ್ಬರು. ಆದರೆ ಯಡಿಯೂರಪ್ಪನವರು ನನಗೆ ಮೋಸ ಮಾಡಿದ್ದಾರೆ ಅಂತಾ ಈಶ್ವರಪ್ಪ ನೇರವಾಗಿ ಮಾತಿನ ಬಾಣ ಬೀಸಿದ್ದಾರೆ.
ಇದು ಕೆ.ಎಸ್.ಈಶ್ವರಪ್ಪ ಹಾಗೂ ಯಡಿಯೂರಪ್ಪನವರ ನಡುವಿನ ವೈಯಕ್ತಿಕ ಸಮರವಾಗುತ್ತದೆಯೋ ಅಥವಾ ಯಡಿಯೂರಪ್ಪ ಅವರ ಮಕ್ಕಳು ಮತ್ತು ಅವರ ಬೆಂಬಲಿಗರು ಹಾಗೂ ಈಶ್ವರಪ್ಪ ಹಾಗೂ ಟಿಕೆಟ್ ವಂಚಿತರು ಮತ್ತು ನಿಷ್ಟಾವಂತ ನಾಯಕರ ನಡುವಿನ ಬಂಡಾಯವಾಗುತ್ತೋ ಗೊತ್ತಿಲ್ಲ.
ಇನ್ನೂ ಅತ್ತ ಮೈಸೂರಿನಲ್ಲಿ ಟಿಕೆಟ್ ವಂಚಿತರಾದ ಪ್ರತಾಪ್ ಸಿಂಹ ಸಹ ಮೋದಿ ಇಲ್ಲದೇ ನಾನೇನು ಇಲ್ಲ ಎನ್ನುತ್ತಲೇ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಇತ್ತ ಈಶ್ವರಪ್ಪರವರು ನೊಂದವರ ಧ್ವನಿಯಾಗುವ ಮಾತನಾಡಿದ್ರೂ ಸಹ ಪ್ರಧಾನಿ ನರೇಂದ್ರ ಮೋದಿಯೇ ನನ್ನ ನಾಯಕ ಎನ್ನುತ್ತಿದ್ದಾರೆ. ಅಲ್ಲದೆ ಪ್ರಾಣ ಹೋದರೂ ಅವರನ್ನ ಬಿಟ್ಟುಕೊಡುವ ಪ್ರಶ್ನೆ ಇಲ್ಲ ಎನ್ನುತ್ತಿದ್ದಾರೆ. ಜೊತೆಯಲ್ಲಿಯೇ 15 ಕ್ಕೆ ಸಭೆ ಇದೆ ಅಂದು ತಮ್ಮ ತೀರ್ಮಾನ ಹೇಳುತ್ತೇನೆ ಎನ್ನುತ್ತಿದ್ದಾರೆ. ಇದರ ನಡುವೆ ಇದೇ 18 ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಹಾಗಾದರೆ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಕೆ.ಎಸ್.ಈಶ್ವರಪ್ಪನವರು ಹೋಗುತ್ತಾರಾ ಎಂಬುದೇ ಪ್ರಶ್ನೆ
ಒಟ್ಟಾರೆ ಬಂಡಾಯದ ಭಾವುಟ ಹಾರಿಸಿರುವ ಈಶ್ವರಪ್ಪ ತಮ್ಮದು ಆತಂರಿಕ ಬಂಡಾಯ ಎನ್ನುವುದರ ಜೊತೆಜೊತೆಗೆ ಪಕ್ಷದೊಳಗಿನ ಅಸಮಧಾನಿತರನ್ನು ಸಹ ತಮ್ಮೊಂದಿಗೆ ಸೇರಿಸಿಕೊಳ್ಳಲು ಹೊರಟಿದ್ದಾರೆ. ಅವರ ಮುಂದಿನ ತೀರ್ಮಾನವೂ ನಿಕ್ಕಿಯಾಗಿಲ್ಲ. ಆದಾಗ್ಯು ಈಶ್ವರಪ್ಪ ಕೆರಳಿರುವ ಸಂದೇಶ ಎಲ್ಲಿವರೆಗೂ ತಲುಪಿಸಬೇಕು ಅಲ್ಲಿವರೆಗೂ ತಲುಪಿಸುತ್ತಿದ್ದಾರೆ. ಇದು ಕೇಸರಿ ಪಾಳಯಕ್ಕೆ ಕೇವಲ ಟ್ರಬಲ್ ಅಷ್ಟೆ ಅಲ್ಲ, ಕಂಟ್ರೋಲ್ ಮಾಡಲಾಗದ ಡ್ಯಾಮೇಜ್ ಸಹ ಆಗಬಹುದು.


