Shivarajkumar | ಶಿವಮೊಗ್ಗ ಚುನಾವಣಾ ಅಖಾಡದಲ್ಲಿ ವಿಲನ್ ಆಗದ ಟಗರು |ಯೋ...ಶಿವಣ್ಣ...!
Tagaru is not a villain in Shivamogga election arena |Shivarajkumar
SHIVAMOGGA | MALENADUTODAY NEWS | Apr 23, 2024
ನಟ ಶಿವರಾಜಕುಮಾರ್, ಎಲ್ಲರಿಂದಲೂ ಶಿವಣ್ಣ ಅಂತಾನೇ ಕರೆಸಿಕೊಳ್ಳುವ ದೊಡ್ಮನೆಯ ದೊಡ್ಮನ ಶಿವಮೊಗ್ಗದ ಅಳಿಯ. ಸದ್ಯ ಹೈವೋಲ್ಟೇಜ್ ಕ್ಷೇತ್ರದಲ್ಲಿ ತಮ್ಮ ಪತ್ನಿ ಗೀತಾರಿಗಾಗಿ ಹಳ್ಳಿ ಹಳ್ಳಿ ಅಲೆಯುತ್ತಿದ್ದಾರೆ. ಸಿಂಪಲ್ ಡ್ರೆಸ್ನಲ್ಲಿ ಕಾಣಿಸಿಕೊಳ್ತಿರುವ ಶಿವಣ್ಣರನ್ನ ನೋಡಲೆಂದೆ ಜನಸಾಗರವೇ ಸೇರುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಇವರೊಂದು ಕ್ರೌಡ್ ಪುಲ್ಲರ್ ಅನ್ನುವುದರಲ್ಲಿ ಸಂಶಯವೇ ಇಲ್ಲ. ಆದಾಗ್ಯು ಶಿವಣ್ಣ ರಾಜಕಾರಣದ ಒಳಗೆ ಬಂದು ಅದರ ಅಂಟು ತಮಗಂಟದ ಹಾಗೆ ನಡೆದುಕೊಳ್ಳುತ್ತಿರುವ ರೀತಿ ಮಾತ್ರ ವಿಶಿಷ್ಟವಾದುದು..
ಯೋ ಬರ್ಕಯಾ,, ಶಿವಮೊಗ್ಗ ನಂದು
ಶಿವರಾಜಕುಮಾರ್ ರವರಿಗೆ ತಮ್ಮ ಪತ್ನಿಗೆ ಕಾಂಗ್ರೆಸ್ನಿಂದ ಈ ಸಲ ಟಿಕೆಟ್ ಸಿಗುವುದು ಗೊತ್ತಿತ್ತು. ಅದರ ಪೂರ್ವ ಚಟುವಟಿಕೆಗಳಲ್ಲಿ ಹಾಗೂ ನಡೆದ ಮಾತುಕತೆಗಳಲ್ಲಿ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರು. ಆ ಸಂದರ್ಭ ಯೆಸ್, ಆಲ್ರೈಟ್ ಅಂದಿದ್ದರೇ ಅವರೇ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭಿಸಬಹುದಿತ್ತು.
ಆದರೆ ಬಹಿರಂಗ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರು ಓಪನ್ ಆಫರ್ ಕೊಟ್ಟರೂ ಸಹ, ತಮ್ಮ ತಂದೆಯ ಮಾತಿನಂತೆ ಶಿವಣ್ಣ ರಾಜಕಾರಣ ನನಗೆ ಬೇಡ ಎಂದಿದ್ದರು. ಜನರ ಅಭಿಮಾನದ ಮುಂದೆ ರಾಜಕಾರಣವನ್ನು ನಿರಾಕರಿಸಿದ್ದ ಅವರು ಕೇವಲ ತಮ್ಮ ಪತ್ನಿಗಾಗಿ ಪವರ್ ಸೆಂಟರ್ ಶಿವಮೊಗ್ಗದಲ್ಲಿ ನಿಂತು ಯೋ ಬರ್ಕಯಾ ಶಿವಮೊಗ್ಗ ನಂದು ಅಂತಾ ಜೋಗಿ ಸ್ಟೈಲ್ನಲ್ಲಿ ಹೇಳುತ್ತಿದ್ದಾರೆ.
100 ಪರ್ಸೆಂಟ್ ಶಿವಣ್ಣ
ಬಿಸಿಲ ಝಳ, ವಯಸ್ಸಿನ ಆಯಾಸ, ಆರೋಗ್ಯದ ಗಡಿಯನ್ನು ಮೀರಿ ಶಿವಣ್ಣ ಕೂಲ್ ಕೂಲ್ ಆಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಅಭಿಮಾನಿಗಳು ಕೊಟ್ಟ ಮಜ್ಜಿಗೆಯನ್ನೋ, ಶರಬತ್ತನ್ನೋ ಕುಡಿದು ಎಲ್ಲರನ್ನೂ ಮಾತನಾಡಿಸುತ್ತಾ ಚುನಾವಣೆಯನ್ನ ತಮ್ಮನೆಯ ಸಿರಿಯ ಹಬ್ಬದಂತೆ ಅನುಭವಿಸುತ್ತಿದ್ದಾರೆ. ಬದಲಾವಣೆ ಬೇಕು, ಯಾವುದೇ ಕೆಲಸ ಮಾಡಬೇಕು ಅಂದರೂ 100 ಪರ್ಸೆಂಟ್ ತೊಡಗಿಸಿಕೊಳ್ಳಬೇಕು ಎನ್ನುವ ಶಿವಣ್ಣ ಗೀತಾರಿಗಾಗಿ ತಮ್ಮಷ್ಟು ಸಮಯವನ್ನು ವಿನಿಯೋಗಿಸ್ತಿದ್ದಾರೆ.
ಮೂಕನಾಗಿರಬೇಕು
ರಾಜಕಾರಣಕ್ಕೆ ಟೀಕೆಗಳು ಗ್ಯಾರಂಟಿ ಗಿಫ್ಟ್. ಚುನಾವಣೆ ಹೊತ್ತಿನಲ್ಲಿ ಈ ಟೀಕೆಗಳು ಪೀಕ್ನಲ್ಲಿರುತ್ತವೆ. ಇದರಿಂದ ಶಿವರಾಜಕುಮಾರ್ ಕೂಡ ಹೊರತಾಗಿಲ್ಲ. ಅವರ ವಿರುದ್ಧ ಚುನಾವಣಾ ಆಯೋಗ ದೂರು ದಾಖಲಾಯ್ತು. ಅವರಿಂದ ದೊಡ್ಡವರ ಕುಟುಂಬದ ಮರ್ಯಾದೆ ಹಾಳಾಯ್ತು ಎಂಬಿತ್ಯಾದಿ ಮಾತುಗಳು ಕೇಳಿಬಂದವು. ಆದರೆ ಈ ಟೀಕೆಗಳಿಗೆ ಶಿವಣ್ಣರ ಉತ್ತರ ಮೂಕನಾಗಿರಬೇಕು…ಈ ಜಗದೊಳು ಎಂಬುದಷ್ಟೆ..
ಅಡ್ಮಿಟ್, ಡಿಸ್ಚಾರ್ಜ್, ಕ್ಯಾಂಪೇನ್ ಕಮಿಟ್ಮೆಂಟ್
ರಾಜಕಾರಣದ ವ್ಯಂಗ್ಯಕ್ಕೆ ಸಿಲುಕದ ಶಿವರಾಜ್ ಕುಮಾರ್ ರನ್ನ ಎಲೆಕ್ಷನ್ ಆರಂಭದಲ್ಲಿಯೇ ಅನಾರೋಗ್ಯ ಕಾಡಿತು. ಆಸ್ಪತ್ರೆಗೆ ಅಡ್ಮಿಟ್ ಆದ ಅವರನ್ನ ಮತ್ತೆ ಗೆಲ್ಲಿಸಿದ್ದು ಅವರಲ್ಲಿನ ಮನೋಸ್ಥೈರ್ಯ. ಎರಡೆ ದಿನದಲ್ಲಿ ಡಿಸ್ಚಾರ್ಜ್ ಶಿವಣ್ಣ ರೆಸ್ಟ್ ತಗೊಳದೇ ಶಿವಮೊಗ್ಗಕ್ಕೆ ಬಂದರು. ಯೋ.. ನಾ ಚೆನ್ನಾಗಿದ್ದೀನಿ,, ನೀನೆಂಗಿದ್ಯಯ್ಯ ಅಂತಾ ಮಾದ್ಯಮ ಮಂದಿಯನ್ನ ತಮ್ಮ ಮುಗ್ದ ಭಾಷೆಯಲ್ಲಿಯೇ ಮಾತನಾಡಿಸ್ತಿದ್ದ ಶಿವರಾಜಕುಮಾರ್ರಲ್ಲಿ ಕಂಡಿದ್ದು ಅವರಲ್ಲಿದ್ದ ಕಮಿಟ್ಮೆಂಟ್.
ಎಲ್ಲರೊಳು ಒಂದಾಗಿ
ಕುತೂಹಲ ಮೂಡಿಸುವುದು ಏನಂದರೆ, ಇಲ್ಲಿವರೆಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸ್ತಿರುವ ಶಿವಣ್ಣ ಪಕ್ಷವನ್ನ ಆಧರಿಸಿ ಮಾತನಾಡಿಲ್ಲ. ಯಾವ ವ್ಯಕ್ತಿಯನ್ನು ದೂರಿಲ್ಲ, ಯಾರನ್ನೂ ಖಂಡಿಸಿಲ್ಲ. ತಮ್ಮ ಪತ್ನಿಗಾಗಿ ವೋಟು ಕೇಳಿದ್ದಾರೆ ಬಿಟ್ಟರೇ ರಾಷ್ಟ್ರೀಯ ಪಕ್ಷದ ಭಾಗವಾಗಿಯು ಸಹಿತ ಅಪ್ಪಟ ರಾಜಕಾರಣಿಯ ಯಾವೊಂದು ಮಾತುಗಳನ್ನ ಅಪ್ಪಿತಪ್ಪಿಯು ಆಡಿಲ್ಲ.
ಒಂದು ಕಡೆ ಶಿವಮೊಗ್ಗನ ಅಳಿಯನಾಗಿ, ಇನ್ನೊಂದು ಕಡೆ ದೊಡ್ಡಮನೆಯ ಮಗನಾಗಿ ರಾಜಕಾರಣಕ್ಕೂ ಹಾಗೂ ಜನರ ಅಭಿಮಾನಕ್ಕೂ ದಕ್ಕೆ ತರದ ಹಾಗೆ ನಡೆದುಕೊಳ್ಳುತ್ತಿರುವ ಶಿವಣ್ಣರ ಏನರ್ಜಿ ಮಾತ್ರ ಅಲ್ಟಿಮೆಟ್.
ಗೀತಾ ಐ ಲವ್ ಯು
ವೈಯಕ್ತಿಕವಾಗಿ ರಾಜಕಾರಣಕ್ಕೆ ನೋ ಎಂದಿರುವ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾರ ಕಾರಣಕ್ಕೆ ಖುದ್ದು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಸಾರೆಕೊಪ್ಪ ಬಂಗಾರಪ್ಪರವರ ಮಗಳು, ರಾಜಕಾರಣ ರಕ್ತಗತ, ಸಹೋದರನ ಸಹಕಾರವಿದೆ, ಸ್ವತಃ ಗೀತಾ ಶಿವರಾಜಕುಮಾರ್ರವರಿಗೆ ರಾಜಕೀಯದಲ್ಲಿ ಸಾಧಿಸುವ ಮಹತ್ವಾಕಾಂಕ್ಷೆಯಿದೆ. ಹೀಗಾಗಿ ವೈಯಕ್ತಿಕ ನಿಲುವಿನಾಚೆಗೆ ಪ್ರೀತಿಯ ಕಾರಣಕ್ಕೆ ಶಿವಣ್ಣ ಪತ್ನಿಯ ಜೊತೆಗೆ ನಿಂತಿದ್ದಾರೆ. ಕೈಹಿಡಿದು ಮುನ್ನೆಡೆಸುತ್ತಿದ್ದಾರೆ. ಎಷ್ಟರಮಟ್ಟಿಗೆ ಅಂದರೆ ಪ್ರತಿ ಪ್ರಚಾರದಲ್ಲಿಯು ಪತ್ನಿ ಗೀತಾರ ಸಣ್ಣಪುಟ್ಟ ವಿಷಯಗಳನ್ನ ಗಮನಿಸುವ ಶಿವಣ್ಣ ಜನರಿಗೂ ತಮ್ಮ ಒಲವಿನ ಸಂಸಾರದ ಗುಟ್ಟು ಬಿಟ್ಟುಕೊಡುತ್ತಿದ್ದಾರೆ.
ಬೇರೆಕಡೆಗಳಲ್ಲಿ ಅಭಿಮಾನಿಗಳಿಗೆ ಶಿವಣ್ಣರನ್ನ Shivarajkumar ನೋಡುವುದು ಕಷ್ಟವಾಗಬಹುದು ಆದರೆ ಶಿವಮೊಗ್ಗದ ಜನರಿಗೆ ಶಿವಣ್ಣ ಸಲೀಸು, ಕಾರಣ ಚುನಾವಣೆ. ಮನೆ ಬಾಗಿಲಿಗೆ ಬರುತ್ತಿರುವ ಕರುನಾಡ ಚಕ್ರವರ್ತಿಯನ್ನ ಸ್ವಾಗತಿಸ್ತಿರುವ ಹಳ್ಳಿಮನೆಯವರು ಅಣ್ಣಾ ಒಂದು ಸೆಲ್ಫಿ ಎಂದು ಮುಗಿಬೀಳ್ತಿದ್ದರೇ ತವರಿಗೆ ಬಾ ತಂಗಿ ಸ್ಟೈಲ್ನಲ್ಲಿ ಶಿವಣ್ಣ ಲುಕ್ & ಸ್ಮೈಲ್ ಕೊಡ್ತಿದ್ದಾರೆ.
ಒಂದೆ ಮಾತಲ್ಲಿ ಹೇಳಬೇಕೆಂದರೆ ಶಿವಮೊಗ್ಗದಲ್ಲಿ ಶಿವಣ್ಣ ತಮಗೊಪ್ಪಿದ ಪಾತ್ರವನ್ನಷ್ಟೆ ನಿಭಾಯಿಸುತ್ತಿದ್ದಾರೆ ಅದರಾಚೆಗಿನ ಪಾಲಿಟಿಕ್ಸ್ನಲ್ಲಿ ಅವರಿಲ್ಲ..