JP EXCLUSIVE : ಪುಷ್ಪಾ ಸಿನಿಮಾ ಸ್ಟೈಲ್ನಲ್ಲಿ ನಡೆಯುತ್ತೆ ಕಾಡು ಕೋಣದ ಸಿಂಡಿಕೇಟ್
jp exclusive : pushpa movie style wild buffalo syndicate
JP EXCLUSIVE : ಪುಷ್ಪಾ ಸಿನಿಮಾದ ರಕ್ತಚಂದನ ಸ್ಮಗ್ಲಿಂಗ್ ಸ್ಟೈಲ್ನಲ್ಲಿ ಮಲೆನಾಡ ಜಿಲ್ಲೆಗಳಲ್ಲಿ ನಡೆಯುತ್ತಿದೆ ಕಾಡು ಮಾಂಸ ಮಾರಾಟ! ಕಾಡಿನ ಬೇಟೆಗಾಗಿ ಹುಟ್ಟಿಕೊಂಡಿದೆ ಮಹಾ ಸಿಂಡಿಕೇಟ್! ಎಲ್ಲಿಗೆ ಹೋಗುತ್ತಿದೆ ನೂರಾರು ಕೋಟಿಯ ಬೇಟೆ? ಹೊಸ ವೀರಪ್ಪನ್ಗಳ ಕಾಟಕ್ಕೆ ನಾಶವಾಗ್ತಿವೆ ಕಾಡುಪ್ರಾಣಿಗಳು! ಹೇಗೆ ನಡೆಯುತ್ತೆ ಗೊತ್ತಾ ಆಟ ಪಾರ್ಟ್-1
ಶೇಷಾಚಲಂ ಕಾಡಿನಲ್ಲಿ ರಕ್ತಚಂದನ ದಂಧೆಗೆ ಸಿಂಡಿಕೇಟ್ ವ್ಯವಸ್ಥೆಯಿದ್ದಂತೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಡುಪ್ರಾಣಿಗಳ ಮಾಂಸದಂಧೆಗೆ ಇದೆ ಸಿಂಡಿಕೇಟ್ ವ್ಯವಸ್ಥೆ...
200 ರಿಂದ 300 ಮಂದಿಯೊಳಗಿರುವ ಈ ಸಿಂಡಿಕೇಟ್, ಇಡೀ ಪಶ್ಚಿಮಘಟ್ಟ ಪ್ರದೇಶದಲ್ಲಿರುವ ವನ್ಯಜೀವಿಗಳ ಮಾರಣ ಹೋಮಕ್ಕೆ ತೊಡೆತಟ್ಟಿ ನಿಂತಂತಿದೆ.
ರಾತ್ರೋರಾತ್ರಿ ವನ್ಯಪ್ರಾಣಿ ಕೊಂದು, ಮಾಂಸವನ್ನು ವ್ಯವಸ್ಥಿತವಾಗಿ ನಗರ ಪ್ರದೇಶಗಳಿಗೆ ಸರಬರಾಜು ಮಾಡುತ್ತಿರುವ ಜಾಲದ ಸುಳಿವು ಮಲೆನಾಡು ಟುಡೆಗೆ ಲಭ್ಯವಾಗಿದೆ. ಇದು ನಿಮ್ಮ ಜೆಪಿ ಬಿಗ್ ಎಕ್ಸ್ ಕ್ಲೂಸಿವ್
ರಾಜ್ಯದ ಪಶ್ವಿಮಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಿದೆ. ಹುಲಿ ಚಿರತೆ ಆನೆ ಸೇರಿದಂತೆ ಸಸ್ಯಹಾರಿ ಪ್ರಾಣಿಗಳು ಅವ್ಯಾಹತವಾಗಿದೆ.
ಅಭಯಾರಣ್ಯಗಳ ಸಂಖ್ಯೆ ಹೆಚ್ಚಳ ಮಾಡಿ ಬೇಟೆಗೆ ನಿಷೇಧ ಹೇರಿ, ವನ್ಯಜೀವಿ ವಲಯದಲ್ಲಿ ಬಿಗಿ ಕಾನೂನಿನ ಕ್ರಮ ಕೈಗೊಂಡಿರುವುದರಿಂದ ಸ್ಥಳೀಯರು ಕಾಡು ಪ್ರಾಣಿಗಳ ಸಹವಾಸಕ್ಕೂ ಹೋಗೋದಿಲ್ಲ.
ಅಲ್ಲೋ ಇಲ್ಲೋ ಎಂಬಂತೆ ಸ್ಥಳೀಯರು ಸಿಕ್ಕಿಹಾಕಿಕೊಂಡ ಪ್ರಕರಣಗಳು ದಾಖಲಾಗುತ್ತಿದೆ ಬಿಟ್ಟರೆ, ಉಳಿದಂತೆ ಪ್ರಕರಣಗಳು ಕಾಡಿನಷ್ಟೆ ಮೌನ.
ಮಲೆನಾಡ ಪ್ರಾಣಿ ಬೇಟೆಗೆ ಇದೆ ‘ಕಂಪನಿ’
ಆದರೆ ಮಲೆನಾಡಿನ ಈ ವನ್ಯಜೀವಿಗಳನ್ನು ಬೇಟೆಯಾಡಿ, ಅವುಗಳನ್ನು ವ್ಯವಸ್ಥಿತವಾಗಿ ಸಾಗಿಸಿ, ರೆಡಿಫುಡ್ ಮಾದರಿಯಲ್ಲಿ ಮಾರಾಟ ಮಾಡುವ ಅಕ್ರಮ ಕೂಟವೊಂದು ಐದು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ.
ಯೆಸ್ ರೀಡರ್ಸ್,, ಇಲ್ಲಿಯವರೆಗೂ ಇಂತಹದ್ದೊಂದು ವ್ಯವಸ್ಥಿತ ಕಂಪನಿ ಮಾದರಿಯ ವ್ಯವಸ್ಥೆಯೊಂದು ಕೆಲಸ ಮಾಡುತ್ತಿದೆ ಎಂಬದು ಅದರ ಆಶ್ರಯದಲ್ಲಿ ಇರುವವರಿಗೆ ಬಿಟ್ಟರೇ ಬೇರೆಯವರಿಗೆ ಗೊತ್ತಿಲ್ಲ. ಅರಣ್ಯ ತಜ್ಞರನ್ನು ಹೊರತುಪಡಿಸಿದರೇ, ಅರಣ್ಯ ಇಲಾಖೆಯಲ್ಲೂ ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.
ಇಂತಹದ್ದೊಂದು ಜಾಲದ ಬಗ್ಗೆ ಒಂದಿಷ್ಟು ಸುಳಿವು ಸಿಕ್ಕಿದ್ದು, ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಇದು ನನ್ನ ಸುದ್ದಿ ಬೇಟೆ..ಇದರಲ್ಲಿ ಕಾಣದ ಕೈಗಳ ಆಪತ್ತಿದೆ. ಆದಾಗ್ಯು ಮಲೆನಾಡಿನ ಪ್ರತಿಧ್ವನಿ ಮಲೆನಾಡಿಗರಿಗೆ ತಿಳಿಸುವುದು ನನ್ನ ಕರ್ತವ್ಯ. ಮುಂದಿನದ್ದು ಸುದ್ದಿಯ ವಿಚಾರ..
ಆನೆ, ಹುಲಿ, ಚಿರತೆಗಳ ಅಂಗಾಂಗಕ್ಕಿಂತಲೂ ಹೈಫೈ ದಂಧೆ ಕಾಡಿನ ಮಾಂಸ ವ್ಯಾಪಾರ
ಹಿಂದೆ ವೀರಪ್ಪನ್ ಕಾಡಿನ ಪ್ರಾಣಿಗಳ ಕೊಂಬು, ದಂತ, ಚರ್ಮವನ್ನು ಮಾರಿ, ಕೋಟಿಗಟ್ಟಲೇ ಸಂಪಾದಿಸಿದ್ದ. ಆದರೆ ಇವತ್ತಿನ ಅತ್ಯಾದುನಿಕ ದಂಧೆಯಲ್ಲಿ ಕಾಡಿನ ಪ್ರಾಣಿಗಳ ಅಂಗಾಂಗಕ್ಕಿಂತಲೂ, ಅವುಗಳ ಮಾಂಶಕ್ಕೆ ಡಿಮ್ಯಾಂಡ್ ಜಾಸ್ತಿಯಿದೆ. ಅದೇ ವಾರ್ಷಿಕ ನೂರು ಕೋಟಿಗೂ ಅಧಿಕ ಆದಾಯ ತರುವ ಮೂಲವಾಗ್ತಿದೆ.
ಪರಿಣಾಮ, ಕಾಡಿನಲ್ಲಿ ಜಿಂಕೆ, ಕಡವೆ, ಕಾಡುಕೋಣ, ಕಾಡುಕುರಿ, ಸೇರಿದಂತೆ ಮಾನವ ಆಹಾರವನ್ನಾಗಿ ಸೇವಿಸುವ ಕಾಡು ಪ್ರಾಣಿಗಳ ಜೀವಕ್ಕೆ ಸಂಚಕಾರ ಬಂದಿದೆ.
ಹುಲಿ ಚಿರತೆ ಆನೆ ಚರ್ಮ ದಂತ ವ್ಯವಹಾರಕ್ಕಿಂತಲೂ, ವನ್ಯಪ್ರಾಣಿ ಮಾಂಸ ಮಾರಾಟ ಮಾಡೋ ದಂಧೆಯಿಂದ ಹೆಟ್ಟಿನ ಲಾಭ ಸಿಗುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಶಿವಮೊಗ್ಗ,ಚಿಕ್ಕಮಗಳೂರು ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳ ಗಡಿಭಾಗದ ಕಾಡಿನ ಪ್ರದೇಶಗಳಲ್ಲಿ ಈ ಮಾಂಸ ಮಾರಾಟದ ದೊಡ್ಡ ಸಿಂಡಿಕೇಟ್ ತಲೆಯೆತ್ತಿದೆ.
ಅದರ ಮೂಲ ಎಲ್ಲಿಯದು, ತಲೆಯೆಲ್ಲಿದೆ, ಬುಡವೆಲ್ಲಿದೆ ಇತ್ಯಾದಿ.. ಇತ್ಯಾದಿ ಅಂಶಗಳು ನಿಗೂಢ ವಿಸ್ಮಯದಂತಿದೆ.
ಹಾಗಿದ್ದರೂ, ಒಂದು ಕಾಡು ಪ್ರಾಣಿಯನ್ನು ಕಾಡಿನಲ್ಲಿ ಸದ್ದೇ ಇಲ್ಲದಂತೆ ಬೇಟೆಯಾಡಿ, ಅದರ ಉಗುರು ಕೂಡ ಬಿಡದಂತೆ ಸಾಗಿಸಿ, ವ್ಯವಸ್ಥಿತವಾಗಿ ಮಾರುವ ಕಳ್ಳ ಜಾಲವೊಂದು ಸಿಂಡಿಕೇಟ್ ಮಾಡಿಕೊಂಡು ಕೆಲಸ ಮಾಡುತ್ತಿದೆ.
ಹೇಗೆ ನಡೆಯುತ್ತೆ ಗೊತ್ತಾ ಕಾಡಿನ ಬೇಟೆ ?
ಅರಣ್ಯ ಇಲಾಖೆ ಎಲ್ಲೆಲ್ಲಿ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ ಎಂದು ಕೆಲವು ಪ್ರದೇಶಗಳನ್ನು ಗುರುತು ಮಾಡಿಟ್ಟುಕೊಂಡಿರುತ್ತದೆ. ಆ ಪ್ರದೇಶಗಳಲ್ಲಿ ವಾಚರ್ಗಳು ಬೀಟ್ ಮಾಡುತ್ತಿರುತ್ತಾರೆ. ಮತ್ತು ಕಳ್ಳರ ಬಗ್ಗೆ ಎಚ್ಚರವಹಿಸುತ್ತಿರುತ್ತಾರೆ.
ಆದರೆ ಅರಣ್ಯ ಇಲಾಖೆಗೆ ಗೊತ್ತಿರುವುದಕ್ಕಿಂತ ಮೂರು ಪಟ್ಟು ಹೆಚ್ಚು ಪ್ರಾಣಿಗಳು ಸೈಟ್ ಆಗುವ ಜಾಗವನ್ನು ಬೇಟೆಯ ಜಾಲ ಕಂಡುಕೊಂಡಿದೆ. ಸುಮಾರು 100 ಇಂತಹ ಪಾಯಿಂಟ್ಗಳನ್ನ ಕಳ್ಳರು ತಮ್ಮ ಡೈರಿಯಲ್ಲಿ ಗುರುತು ಮಾಡಿಟ್ಟುಕೊಂಡಿದ್ದಾರೆ.
ಸೇಫ್ ಹಾಗೂ ಅರಣ್ಯ ಇಲಾಖೆಯ ಕಣ್ತಪ್ಪಿಸುವ ಕ್ರಮಗಳು ಹೇಗೆ ಎಂಬುದು ಖಾತರಿ ಪಡಿಸಿಕೊಂಡು ಕಾಡಿನ ಬೇಟೆ ಆರಂಭವಾಗುತ್ತದೆ.
ವನ್ಯಜೀವಿಗಳನ್ನು ಅಭಯಾರಣ್ಯ ಪ್ರದೇಶಗಳಲ್ಲಿ ಬೇಟೆಯಾಡುವುದು ಸಾಮಾನ್ಯರಿಗೆ ಅಪರಾಧದ ಕೆಲಸ. ಆದರೆ ವೃತ್ತಿಪರ ಬೇಟೆಗಾರರೇ ಕಾಡಿನಲ್ಲಿ ರಾತ್ರಿಹೊತ್ತು ಹೊಂಚು ಹಾಕಿ ಬೇಟೆ ಮಾಡುತ್ತಾರೆ.
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಕಾಡಿನ ಪ್ರದೇಶದಲ್ಲಿ ಯಾವ ಲೊಕೇಷನ್ ನಲ್ಲಿ ಜಿಂಕೆ, ಕಡವೆ, ಹಾಗು ಕಾಡುಕೋಣಗಳು ಹೆಚ್ಚಿನ ಸಂಖ್ಯೆಯಲ್ಲಿ ಸೈಟ್ ಆಗುತ್ತವೆ ಎಂಬ ಮಾಹಿತಿ ಮೊದಲು ನಿಕ್ಕಿಯಾಗುತ್ತದೆ.
ಸ್ಥಳೀಯ ನಂಬಿಕಸ್ತ ಟೀಂ ಲೀಡರ್
ಪಶ್ಚಿಮಘಟ್ಟ ಪ್ರದೇಶದಲ್ಲಿ ಹೇಳಿದಷ್ಟು ಸುಲಭವಲ್ಲ ಕಾಡಿಗೆ ಎಂಟ್ರಿ ಕೊಡೋದು! ಯಾಮಾರಿದ್ರೆ ಹೋದ ಜೀವ ಕೂಡ ಬೇಟೆಯಾಗಿಬಿಡುತ್ತದೆ.
ಹಾಗಾಗಿ ಲೋಕಲ್ ಒಬ್ಬ ವ್ಯಕ್ತಿಯನ್ನು ಲೀಡಿಂಗ್ ಟೀಂನಲ್ಲಿ ಇರಿಸಿಕೊಳ್ಳುವ ಬೇಟೆ ತಂಡ ಮುಂದಿನ ದಾರಿಯನ್ನು ಸುಲಭ ಮಾಡಿಕೊಳ್ಳುತ್ತದೆ.
ಆದರೆ ಆ ಲೋಕಲ್ ವ್ಯಕ್ತಿ ಬೇಟೆಯಾಡುವುದಿಲ್ಲ. ಆತನದ್ದು ಏನಿದ್ದರು ಲೀಡ್ ಮಾಡುವುದು ಹಾಗೂ ಮಾಹಿತಿ ನೀಡುವುದು ಮಾಡುತ್ತಾನಷ್ಟೆ.
ಹಾಗಾದರೆ ಬೇಟೆಯಾಡುವುದು ಯಾರು?
ಹೊರಗಿನವರು..! ಹೌದು, ಮಲೆನಾಡ ಕಾಡುಗಳಿಗೆ ಕಡು ರಾತ್ರಿಗಳಲ್ಲಿ ಎಂಟ್ರಿಕೊಟ್ಟು ವೃತ್ತಿಪರ ಬೇಟೆಗಾರರು ಪ್ರಾಣಿಗಳಿಗೆ ಗುಂಡು ಹೊಡೆಯುತ್ತಿದ್ದಾರೆ.
ಅಂದರೆ ಈ ವ್ಯವಸ್ಥಿತ ಸಿಂಡಿಕೇಟ್ನಲ್ಲಿ ಉಡುಪಿಯ ಅಮಾವಾಸ್ಯೆಬೈಲ್ ಪಾಯಿಂಟ್ನಲ್ಲಿ ಜಿಂಕೆ ಹೆಚ್ಚು ಸೈಟ್ ಆಗಿದೆ ಅಂದಾಗ, ಅಲ್ಲಿ ಬೇಟೆಗೆ ಭಟ್ಕಳ ಭಾಗದ ಭೇಟೆಗಾರ ಬರಬಹುದು, ಮಂಗಳೂರು ಕಾಡಿನ ಪ್ರದೇಶಕ್ಕೆ ಶಿವಮೊಗ್ಗ ಮೂಲದ ವ್ಯಕ್ತಿ ಹೋಗಬಹುದು.
ಬೇಟೆಗಾರರು ಹೋಗುವ ಕಾಡು, ಜಾಡು ಎಲ್ಲ ಮಾಹಿತಿಗಳನ್ನು ಮೊದಲೇ ನೀಡಲಾಗಿರುತ್ತೆ. ಬೇಟೆಯಾಡುವ ಪ್ರದೇಶದಲ್ಲಿ ತಮ್ಮ ಸಿಂಡಿಕೇಟ್ ಜಾಲದ ನಂಬಿಕಸ್ಥ ಸ್ಥಳೀಯ ವ್ಯಕ್ತಿಯೊಬ್ಬ ಹೊರಗಿನ ಬೇಟೆಗಾರರನ್ನು ಲೀಡ್ ಮಾಡ್ತಾನೆ.
ಬೇಟೆ ಜಾಗದ ಹತ್ತಿರವೇ ಬೇಟೆ ಸಾಮಾಗ್ರಿಗಳನ್ನು ಇರಿಸಲಾಗಿರುತ್ತೆ.
ವನ್ಯಪ್ರಾಣಿಗಳು ಸೈಟ್ ಆಗುವ ಕಾಡಿನ ನಿಗದಿತ ಪಾಯಿಂಟ್ ಗಳ ಸನಿಹವೇ ಬೇಟೆಗೆ ಬಳಸುವ ಸಾಮಾಗ್ರಿಗಳನ್ನು ಮೊದಲೇ ಇರಿಸಲಾಗಿರುತ್ತೆ.
ಅತ್ಯಾಧುನಿಕ ಸೈಲೆನ್ಸರ್ ಬಂದೂಕು,, ಬ್ಯಾಟರಿ, ಮಾಂಸ ಕಡಿಯಲು ಬೇಕಾದ ಚಾಕು..ಹಗ್ಗ ಎಲ್ಲಾ ಟೂಲ್ ಗಳನ್ನು ಮೊದಲೇ ಪಾಯಿಂಟ್ ಸನಿಹದಲ್ಲಿ ಇರಿಸಲಾಗಿರುತ್ತೆ.
ಸ್ಥಳೀಯ ಇನ್ಫಾರ್ಮರ್ ನೀಡಿದ ಮಾಹಿತಿಯಂತೆ ಆ ಪ್ರದೇಶದಲ್ಲಿ ಜಿಂಕೆ,ಕಡವೆ, ಇಲ್ಲ ಕಾಡುಕೋಣ, ಕಾಡು ಕುರಿ ಯಾವುದಾದ್ರೂ ಸೈ..ಸೈಲೆನ್ಸರ್ ಬಳಸಿ ಶೂಟ್ ಮಾಡ್ತಾರೆ...ಬೇಟೆಯ ಸದ್ದೇ ಕಾಡಿನಲ್ಲಿ ಕೇಳೋದಿಲ್ಲ.
ಫ್ರೆಂಡ್ಸ್,, ಇದು ಕಾಡು ಮಾಂಸದ ವ್ಯಾಪಾರದ ಟ್ರೈಲರ್ ಅಷ್ಟೆ, ಮಲೆನಾಡಿನ ದಟ್ಟ ಹಸಿರನ ನಡುವೆ ನಡೆಯುವ ಬೇಟೆಯ ಕರಾಳ ಮುಖದ ಇನ್ನೊಂದು ಎಪಿಸೋಡ್ ಕೆಲವೇ ಹೊತ್ತಿನಲ್ಲಿ ನಿಮ್ಮ ಮುಂದೆ ಇಡುತ್ತೇವೆ...