ಎಲ್ಲಾ ತೋಟಕ್ಕೆ ನೀರು ಹಾಯಿಸಿದರೇ ಈ ರೈತ ತೋಟದಿಂದ ಬತ್ತಿದ ನದಿಗೆ ನೀರು ಹಾಯಿಸುತ್ತಿದ್ದಾರೆ! ಕಾರಣವೇನು ಗೊತ್ತಾ?
This farmer is watering the dried-up river from the farm! Do you know the reason?
shivamogga Mar 23, 2024 farmer is watering the dried-up river ಮಲೆನಾಡು ಶಿವಮೊಗ್ಗದಲ್ಲಿಯು ಬರದ ಛಾಯೇ ಆವರಿಸಿದೆ. ಮಲ್ನಾಡ್ನ ನದಿಗಳು ಅವಧಿಗೂ ಮೊದಲೇ ಬತ್ತಿ ಹೊಳೆಯ ಕಲ್ಲುಗಳು ಕಾಣುವಂತಾಗಿದೆ. ಇದ ನಡುವೆ ನದಿಯಲ್ಲಿರುವ ಅಲ್ಪಸ್ವಲ್ಪ ನೀರನ್ನು ತೋಟಕ್ಕೆ ಹಾಯಿಸಲಾಗುತ್ತಿದೆ. ಅಕ್ರಮವಾಗಿಯೇ ನೀರನ್ನ ಹಾಯಿಸುತ್ತಿದ್ದರೂ ಏನೂ ಸಹ ಮಾಡಲಾಗುತ್ತಿಲ್ಲ.
ಆದರೆ ನದಿ ನೀರನ್ನ ತೋಟಕ್ಕೆ ಹಾಯಿಸಿಕೊಳ್ಳುವವರ ನಡುವೆ ಇಲ್ಲೊಬ್ಬ ರೈತ ನದಿಯಲ್ಲಿ ನೀರಿಲ್ಲವೆಂದು ತಮ್ಮ ತೋಟದಲ್ಲಿನ ಬೋರ್ವೆಲ್ ಮೂಲಕ ನದಿಗೆ ನೀರು ಹರಿಸುತ್ತಿದ್ದಾನೆ. ಇದಕ್ಕೆ ಕಾರಣ ಪಕ್ಷಿ ಪ್ರಾಣಿ ಸಂಕುಲಕ್ಕೆ ನೀರಿನ ಆಸರೆ ದೊರೆಯಲಿ ಎನ್ನುವುದು.
ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ಸೂಡೂರು ಗ್ರಾಮದಲ್ಲಿ ರೈತರೊಬ್ಬರು ತಮ್ಮ ತೋಟದಿಂದ ಕುಮದ್ವತಿ ನದಿಗೆ ನೀರು ಹಾಯಿಸುತ್ತಿದ್ದಾರೆ. ತಮ್ಮ ಬೋರ್ವೆಲ್ನಿಂದ ಪ್ರತಿನಿತ್ಯ ನೀರು ಹರಿಸುತ್ತಿದ್ದಾರೆ. ಇದಕ್ಕಾಗಿ ಪಂಪ್ಸೆಟ್ ಬಳಸುತ್ತಿರುವ ಅವರು ನದಿವರೆಗೂ ಪೈಪ್ಗಳನ್ನು ಜೋಡಿಸಿದ್ದಾರೆ. ಅಲ್ಲದೆ ನೀರು ಪೋಲಾಗದಂತೆ ನದಿಗೆ ಅಂಚುಗಳನ್ನ ಕಟ್ಟಲಾಗಿದೆ. ಹೀಗಾಗಿ ಕರೆಯ ರೀತಿಯಲ್ಲಿ ನದಿಯಲ್ಲಿ ಸ್ವಲ್ಪ ನೀರು ನಿಲ್ಲುತ್ತಿದೆ. ಈ ನೀರನ್ನ ಪ್ರಾಣಿಗಳು, ಪಕ್ಷಿಗಳು ಬಳಸಿಕೊಳ್ಳುತ್ತಿವೆ.
ಈ ಭಾಗದಲ್ಲಿ ಪಾಪಣ್ಣ ಎಂದು ಗುರುತಿಸಿಕೊಳ್ಳುವ ಮಂಜುನಾಥ್ ಭಟ್ ರವರು ಬೇಸಿಗೆಯಲ್ಲಿಯು ಕುಮಧ್ವತಿಯಲ್ಲಿ ನೀರು ನಿಲ್ಲುತ್ತಿತ್ತು. ಆದರೆ ಈ ಬೇಸಿಗೆಯಲ್ಲಿ ನೀರು ಹತ್ತ ಖಾಲಿಯಾಗಿದೆ. ಮನುಷ್ಯರು ಹೇಗೋ ಸಂಬಾಳಿಸುತ್ತಾರೆ. ಆದರೆ ಪ್ರಾಣಿ ಪಕ್ಷಿಗಳು ನೀರಿಲ್ಲದೇ ಹೇಗೆ ಬದುಕುತ್ತವೆ. ಅವುಗಳ ನೀರಿನಾಸರೆ ನದಿಯೇ ಖಾಲಿಯಾದರೆ, ಅವುಗಳ ಪರಿಸ್ಥಿತಿ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಅಲ್ಲದೆ ಇದೇ ಕಾರಣಕ್ಕೆ ನದಿಗೆ ಬೋರ್ವೆಲ್ ಮೂಲಕ ಸ್ವಲ್ಪ ನೀರನ್ನ ಬಿಡುತ್ತಿರುವುದಾಗಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಶೇಷ ಅಂದರೆ ಈ ಬಗ್ಗೆ ಮಂಜುನಾಥ್ ರವರ ಮಾತುಗಳು ಇನ್ನಷ್ಟು ಕುತೂಹಲ ಮೂಡಿಸುತ್ತದೆ. ಅವರಿಗೆ ನದಿಗೆ ಏಕಾಗಿ ನೀರು ಬಿಡುತ್ತಿದ್ದೀರಿ ಎಂದರೇ ಇದರಲ್ಲಿ ಸ್ವಾರ್ಥವೂ ಆಯ್ತು ಮೂಖ ಪ್ರಾಣಿಗಳಿಗೆ ನೀರು ಆಯ್ತು ಎಂದೇ ಹೇಳುತ್ತಾರೆ. ಅರೇ ನದಿಗೆ ನೀರು ಬಿಡುವುದರಲ್ಲಿ ಸ್ವಾರ್ಥ ಏನಿದ್ದೀತು ಎಂದು ಕೇಳಿದರೆ, ಅವರು ಕೊಡುವ ಉತ್ತರ ಕುತೂಹಲಕಾರಿಯಾಗಿದೆ.
ನೋಡಿ ಪ್ರಾಣಿ ಪಕ್ಷಿಗಳು ನೀರಿಲ್ಲದಿರೇ ಎಲ್ಲಿಗೆ ಹೋಗಬೇಕು. ಅವು ಇಲ್ಲದಿದ್ದರೇ ನಾವು ಇಲ್ಲ. ಪರಾಗಸ್ಪರ್ಶವಾಗಲು ಹಕ್ಕಿಗಳು ಬೇಕು, ನಾನಾ ರೀತಿಯ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಅವುಗಳಿಂದ ಆಗುವ ಪರಾಗ ಸ್ಪರ್ಶದಿಂದ ನನಗೊಂದು ನಾಲ್ಕು ಮೆಣಸಿನ ಕಾಯಿ ಜಾಸ್ತಿ ಬರುತ್ತದೆ. ಅಡಿಕೆ ಇಳುವರಿ ಜಾಸ್ತಿಯಾಗುತ್ತೆ ಇದೇ ನನ್ನ ಸ್ವಾರ್ಥ ಎನ್ನುತ್ತಾರೆ.
ಸೂಡೂರು ಜೋಯಿಸರು ಪಾಪಣ್ಣ ಭಟ್ಟರು ಹೇಳುವಾಗೆ ಹೊಳೆಯಲ್ಲಿ ನೀರು ಹರಿಯುತ್ತಿದ್ದರೇ ಎಂತದ್ದೂ ಸಮಸ್ಯೆಯಿಲ್ಲ. ತೋಟ, ಕಾಡು, ಬೆಟ್ಟ ಹಸಿರಾಗಿ ಇರುತ್ತದೆ. ಆದರೆ ಇತ್ತೀಚಿಗೆ ಮಳೆ ಕಡಿಮೆಯಾಗಿದೆ. ಹೀಗಾಗಿ ಹೊಳೆಯಲ್ಲಿ ನೀರು ಹರಿಯುತ್ತಿಲ್ಲ. ಹಾಗಾಗಿ ಹೊಳೆಯಲ್ಲಿರುವ ಗುಂಡಿಯಲ್ಲಿ ಐದು ಅಡಿ ನೀರು ಉಳಿಯುವಂತೆ ನೋಡಿಕೊಳ್ಳುತ್ತಿದ್ದೇನೆ.
ಹೀಗೆ ನೀರು ಉಳಿಸಿದರೇ ಮಳೆಗಾಲದವರೆಗೂ ಅಂತರ್ಜಲ ಹಾಗೆ ಉಳಿಯುತ್ತದೆ. ಅಲ್ಲದೇ ಗಿಡಮರಗಳು ಹಸಿರಾಗಿ ಉಳಿಯುತ್ತವೆ. ಹಾಗಾಗಿ ಸ್ವಾರ್ಥವೂ ಆಯ್ತು, ಸ್ವಾಮಿ ಕಾರ್ಯವೂ ಆಯ್ತು ಅಂತಾ ಆರು ಗಂಟೆ ನೀಡುವ ವಿದ್ಯುತ್ ನಲ್ಲಿ ಮೂರು ಗಂಟೆ ತೋಟಕ್ಕೆ ಮೂರು ಗಂಟೆ ನದಿಗೆ ನೀರು ಬಿಡುತ್ತಿದ್ದೇನೆ. ಕೆಲವು ವರ್ಷಗಳಿಂದ ಹೀಗೆ ನಡೆದುಕೊಂಡು ಬಂದಿದೆ ಎನ್ನುತ್ತಾರೆ.
ಒಟ್ಟಾರೆ ಬಿರುಬೇಸಿಗೆಯಲ್ಲಿ ತಮ್ಮ ತೋಟಕ್ಕೆ ನೀರಾದರೇ ಸಾಕು ಎಂಬಂತಹ ಕಟು ಸನ್ನಿವೇಶದಲ್ಲಿಯು ಪಾಪಣ್ಣರವರು ನದಿಗೆ ನೀರು ಬಿಟ್ಟು ನಿಸರ್ಗ ಜೀವಿಗಳಿಗೆ ಆಸರೆಯಾಗಿದ್ದಾರೆ. ಅವರ ಉದ್ದೇಶ ಹಾಗೂ ಅವರ ಕೆಲಸ ಎರಡು ಸಹ ಶ್ಲಾಘನೀಯವಾದದ್ದು