KARNATAKA NEWS/ ONLINE / Malenadu today/ Jun 12, 2023 SHIVAMOGGA NEWS
ಶಿವಮೊಗ್ಗ/ ಮಲೆನಾಡಿನ ಮೊದಲ ಅಣೆಕಟ್ಟು ಎಂಬ ಹೆಗ್ಗಳಿಕೆಯ ಹಿರೇಭಾಸ್ಕರ ಅಣೆಕಟ್ಟು ಶರಾವತಿ ಹಿನ್ನೀರಿನಲ್ಲಿ ಮತ್ತೆ ಕಾಣಲು ಸಿಕ್ಕಿದೆ. ಆದರೆ ಅರಣ್ಯ ಇಲಾಖೆ ಮಡೆನೂರು ಡ್ಯಾಂ ವೀಕ್ಷಣೆಗೆ ಕೊಕ್ಕೆ ಹಾಕಿದ್ದು, ಜನರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಹೆಚ್ಚೆಂದರೆ ಇನ್ನೊಂದು ನಾಲ್ಕೈದು ದಿನಗಳ ಕಾಲ ಕಾಣ ಸಿಗಬಹುದಾದ ಡ್ಯಾಂ ನೋಡಲು ಶರಾವತಿ ಸಂತ್ರಸ್ತರು ಸೇರಿದಂತೆ ನೂರಾರು ಜನರು ಬರುತ್ತಿದ್ದಾರೆ.
ಅರಣ್ಯ ಕಾಯಿದೆಯಡಿಯಲ್ಲಿ ನಿರ್ಬಂಧ
ಆದರೆ, ಅರಣ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ಶರಾವತಿ ಕಣಿವೆ ಅಭಯಾರಣ್ಯ ವ್ಯಾಪ್ತಿಯ ಮಡೆನೂರು ಭೇಟಿಯನ್ನು ನಿಷೇಧಿಸಲಾಗಿದೆ. ಹಾಗೊಂದು ವೇಳೆ ಪ್ರವೇಶ ಮಾಡಿದರೆ, ವನ್ಯಜೀವಿ ಸಂರಕ್ಷಣಾ ಕಾಯಿದೆ-1972 ರ ಅಡಿಯಲ್ಲಿ ಸೆಕ್ಷೆನ್ 27 ಅನ್ವಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಶರಾವತಿಯ ನೆನಪುಗಳು
ಮಡೆನೂರು ಡ್ಯಾಂ, ಶರಾವತಿ ಸಂತ್ರಸ್ತರ ಹಿಂದಿನ ನೆನಪುಗಳ ಒಟ್ಟು ರಾಶಿಯಾಗಿದೆ. ಮೊದಲ ಸಲ ಮುಳುಗಡೆ ಎಂಬುದನ್ನ ಈ ಡ್ಯಾಂನಿಂದಲೇ ಕಂಡಿದ್ದ ಜನರು, ಬತ್ತಿದ ಶರಾವತಿಯಲ್ಲಿ ತಮ್ಮ ಹಳೆಯ ನೆಲೆಯನ್ನು ಮಕ್ಕಳಿಗೆ ಮೊಮ್ಮಕ್ಕಳಿಗೆ ತೋರಿಸುತ್ತಿದ್ದಾರೆ. ತಾವು ಹುಟ್ಟಿದ ಸ್ಥಳದಲ್ಲಿ ಇನ್ನೂ ಸಹ ಇರುವ ಕುರುಹುಗಳನ್ನ ನೋಡಿ ಭಾವುಕರಾಗುತ್ತಿದ್ದಾರೆ.
ಮುಳುಗಿದ ಬದುಕು, ಮರೆಯಾದ ದೈವ
ಅಷ್ಟೆಅಲ್ಲದೆ ಮುಳುಗಿದ ಬದುಕಿನೊಂದಿಗೆ ಶರಾವತಿಯ ತಳ ಸೇರಿದ್ದ ದೈವ ಕಲ್ಲುಗಳನ್ನು ಮುಟ್ಟಿ ನಮಸ್ಕರಿಸಿ ಸಂತ್ರಸ್ತರು ಪೂಜಿಸುತ್ತಿದ್ದಾರೆ. ಇದರ ಜೊತೆ ಜೊತೆಗೆ ನೂರಾರು ಮಂದಿ ಮಡೆನೂರು ಜಲಾಶಯವನ್ನು ನೋಡಿ ಬರಲು ಎರಡು ಕಡೆಗಳಲ್ಲಿ ಬರುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಂಬಾರಗೊಡ್ಲು ಬಳಿಯಲ್ಲಿ ಯಾವೊಂದು ವಾಹನಗಳು ಬರದಂತೆ ಟ್ರಂಚ್ ಹೊಡೆದಿದೆ.
ಹಿಂದಿರದ ನಿರ್ಬಂಧ ಈಗೇಕೆ?
ಈ ಹಿಂದೆಯು ಮಡೆನೂರು ಡ್ಯಾಂ ಮತ್ತೆ ನೀರಿನಿಂದ ಹೊರಬಂದು ಕಾಣ ಸಿಕ್ಕಾಗಿ ಸಾವಿರಾರು ಪ್ರವಾಸಿಗರು ಬಂದು ಜಲಾಶಯವನ್ನು ನೋಡಿಕೊಂಡು ಹೋಗಿದ್ದಾರೆ. ಆದರೆ, ಆಗ ನಿರ್ಬಂಧ ವಿಧಿಸಿರಲಿಲ್ಲ. ಇದೀಗ ಬೇಕಂತಲೇ ನಿರ್ಬಂಧ ಹೇರಲಾಗುತ್ತಿದೆ ಎಂಬುದು ಸ್ಥಳಿಯರ ಆರೋಪ. ಅಧಿಕಾರಿಗಳ ಮೂಗಿನ ನೇರಕ್ಕೆ ತೀರ್ಮಾನ ಕೈಗೊಂಡು ನಿರ್ಬಂಧ ಎಂದು ಬೋರ್ಡ್ ಹಾಕಿದರೇ ಹೇಗೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಅರಣ್ಯ ನಾಶದ ಆರೋಪ
ಇನ್ನೊಂದೆಡೆ ಅರಣ್ಯ ಇಲಾಖೆ, ಸಹಜ ಪರಿಸರಕ್ಕೆ ಪ್ರವಾಸಿಗರ ಆಗಮನದಿಂದ ತೊಂದರೆಯಾಗುತ್ತಿದ್ದು, ಮರಗಳನ್ನ ಕಡಿಯಲಾಗುತ್ತಿದೆ ಎಂಬ ಆರೋಪವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಅಲ್ಲದೆ ಕೆಲವರು ಮಡೆನೂರು ಡ್ಯಾಂನ ಕಲ್ಲುಗಳನ್ನ ಸಾಗಿಸುವ ಪ್ರಯತ್ನಕ್ಕೂ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ನಿರ್ಬಂಧ ಹೇರಲಾಗುತ್ತಿದೆ ಎಂಬುದು ಇಲಾಖೆಯ ಮೂಲಗಳ ಮಾಹಿತಿ. ಈ ಮಧ್ಯೆ ಕೆಲವು ಅಧಿಕಾರಿಗಳು ಮಾತ್ರ ತಮ್ಮ ಪ್ರಭಾವಗಳನ್ನ ಬಳಸಿಕೊಂಡು ಮಡೆನೂರು ಡ್ಯಾಂನಲ್ಲಿ ಪ್ರವಾಸ ಮಾಡಬಹುದು. ಆ ಸೌಕರ್ಯ ಜನರಿಗೆ ಏಕೆ ಇಲ್ಲ ಎಂಬುದು ಸಹಜವಾಗಿಯೇ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.
