MALENADUTODAY.COM | SHIVAMOGGA NEWS |SAGARA TALUK
ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರ ಮಾರಿಕಾಂಬೆ ದೇವಿಯ ಜಾತ್ರೆ ವಿದ್ಯುಕ್ತವಾಗಿ ಆರಂಭಗೊಂಡಿದೆ. ಗ್ರಾಮದೇವತೆಯ ಜಾತ್ರೆಯು ಒಂದೊಂದು ಊರಿನಲ್ಲಿ ಆಯಾ ಊರಿನ ವಾಡಿಕೆ ಪದ್ದತಿಗಳಂತೆಯೇ ನಡೆದುಕೊಂಡು ಬರುತ್ತಿದೆ. ಸಾಗರ ಮಾರಿಕಾಂಬೆಯ ವಿಷಯದಲ್ಲಿಯು ಅದರದ್ದೇ ಆದ ವಿಶೇಷ ಪದ್ದತಿಗಳಿವೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿರುವ ಮಾರಿಕಾಂಬಾ ದೇವಸ್ಥಾನ ಹಿಂದೆ ಪುಟ್ಟ ಗುಡಿಯಾಗಿತ್ತು. ಕೆಳದಿ ಅರಸರ ಆಳ್ವಿಕೆಯಲ್ಲಿ ದೇವಾಲಯ ನಿರ್ಮಾಣವಾಯ್ತು ಎನ್ನಲಾಗುತ್ತದೆ. ಸೈನಿಕರ ರಕ್ಷಣೆಗಾಗಿ ದಂಡಿನ ಮಾರಿ ಗದ್ದುಗೆಯನ್ನು ಸ್ಥಾಪಿಸಿದ್ದರು ಎಂದು ಹೇಳುತ್ತಾರೆ. ಇನ್ನೂ ಆ ಕಾಲದಿಂದಲೂ ಪೂಜಿಸಿಕೊಂಡು ಬರುತ್ತಿರುವ ಮಾರಮ್ಮನ ಜಾತ್ರೆಯಲ್ಲಿ ಪ್ರತಿಯೊಂದು ಶಿಷ್ಟಾಚಾರ ಹಾಗೂ ಪದ್ಧತಿ ತಪ್ಪದಂಥೆ ನಡೆಯುತ್ತದೆ. ಹಾಗೆ ಆಚರಿಸುವ ವಿಶೇಷ ಪದ್ದತಿಗಳಲ್ಲಿ ಕೆಲವೊಂದರ ಮಾಹಿತಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಸಾಗರ ಮಾರಿಕಾಂಬಾ ದೇವಿಯ ಆಭರಣಗಳನ್ನು ಪ್ರತಿಸಲ ಜಾತ್ರೆ ಸಂದರ್ಭದಲ್ಲಿ ಸ್ವಚ್ಛಗೊಳಿಸಿ ಅವುಗಳಿಗೆ ಹೊಸ ಹೊಳಪು ನೀಡುವ ಕೆಲಸವನ್ನು ಇಲ್ಲಿನ ರತ್ನಾಕರ್ ಶೇಟ್ ಕುಟುಂಬಸ್ಥರು ಮಾಡಿಕೊಂಡು ಬಂದಿದ್ಧಾರೆ. ಪ್ರತಿ ಸಲದ ಜಾತ್ರೆಯಲ್ಲಿ ಚೂರು ಹೆಚ್ಚುವರಿ ಚಿನ್ನವನ್ನು ಅಮ್ಮನ ಆಭರಣಗಳಿಗೆ ಸೇರಿಸಿ ಅದನ್ನು ದೇವಿಗೆ ಅರ್ಪಿಸುವುದು ಕುಟುಂಬದ ವಿಶೇಷ. ಈ ಸಲ ವಿಶೇಷ ಅಂದರೆ ಅಮ್ಮನಿಗೆ 672 ಗ್ರಾಮ ತೂಕದ ತಾಳಿಬೊಟ್ಟು ಮತ್ತು ಗುಂಡನ್ನು ಈ ಕುಟುಂಬ ಅರ್ಪಿಸಿದೆ. ಮಾರಿಕಾಂಬೆಯೇ ಕನಸಲ್ಲಿ ಬಂದು ಬಂಗಾರದ ಒಡವೆ ಬಗ್ಗೆ ಹೇಳಿದ್ಧಾಗಿ ಕುಟುಂಬಸ್ಥರು ಹೇಳಿಕೊಳ್ಳುತ್ತಾರೆ. ಆದರೆ ಕನಸಲ್ಲಿ ಕಂಡಂತೆ ಇದುವರೆಗೂ ಮಾಡಲಾಗದೇ, ಈ ಸಲ ಯಥಾಶಕ್ತಿ ದೇವಿಯ ಕೃಪೆಯಿಂದ 672 ಗ್ರಾಮ್ ತೂಕದ ತಾಳಿಬೊಟ್ಟು ಮಾಡಲು ಸಾಧ್ಯವಾಯಿತಂತೆ.
ಇನ್ನೂ ಅಣ್ಣಪ್ಪ ಗುಡಿಗಾರ್ ಮನೆತನದವರು ಅಮ್ಮನಿಗೆ ಬಣ್ಣ ಮಾಡುವ ಕೆಲಸ ಮಾಡುತ್ತಾರೆ. ಸದ್ಯ ಅಣ್ಣಪ್ಪ ಗುಡಿಗಾರ್ರವರ ಪುತ್ರ ದೇವಿದಾಸ್ ಗುಡಿಗಾರ್ ಹಾಗೂ ಮೊಮ್ಮಗ ಕಾರ್ತಿಕ್ ಗುಡಿಗಾರ್ ಹಾಗೂ ಅಣ್ಣಪ್ಪ ಗುಡಿಗಾರ್ರವರ ಪುತ್ರಿ ಹೇಮಾವತಿಯವರು ಅಮ್ಮನವರಿಗೆ ಬಣ್ಣ ಮಾಡಿದ್ಧಾರೆ. ಜಾತ್ರೆಗೂ ಒಂದುವರೆ ತಿಂಗಳು ಮೊದಲು ಈ ಕುಟುಂಬಕ್ಕೆ ಆಹ್ವಾನಕೊಟ್ಟು ಕೆಲಸವಹಿಸಲಾಗುತ್ತದೆ. ಅಂತಿಮವಾಗಿ ಜಾತ್ರೆಯ ದಿನ ದೃಷ್ಟಿ ಬೊಟ್ಟು ಇಡುವುದರೊಂದಿಗೆ ಮಾರಿಕಾಂಬೆ ಜಾತ್ರೆ ವಿದ್ಯುಕ್ತವಾಗಿ ಆರಂಭವಾಗುತ್ತದೆ. ಇನ್ನು ಅಮ್ಮನಿಗೆ ಮಾಂಗಲ್ಯ ಧಾರಣೆ ಸಂದರ್ಭದಲ್ಲಿ ಬಾಸಿಂಗ ಕಟ್ಟುವುದು ಸಾಗರದ ನಿವಾಸಿಗಳಾದ ಗುಡಿಗಾರ್ ದೇವಪ್ಪನವರ ಕುಟುಂಬದವರು.

ಗುಡಿಗಾರ್ ಕುಟುಂಬದವರು ಬಣ್ಣ ಬಳಿದ ಬಳಿಕ ಅದರ ಭಾಗಗಳನ್ನು ಜೋಡಿಸುವ ಕೆಲಸವನ್ನು ಸಾಗರದ ಚಾರೋಡಿ ಕೊಂಕಣಿ ಆಚಾರ್ ಸಮಾಜದವರು ಮಾಡುತ್ತಾರೆ. ಜಾತ್ರೆಗೂ ಎರಡು ದಿನ ಮೊದಲು ಮೂರ್ತಿಯನ್ನು ಜೋಡಿಸಿ ಸಿದ್ಧಪಡಿಸುತ್ತಾರೆ. ಹಾಗೆಯೇ ಜಾತ್ರೆ ಮುಗಿದ ಬಳಿಕ ಮಾರಿವನದಿಂದ ಮೂರ್ತಿಯನ್ನು ಪುನಃ ತಂದು ವಿಂಡಗಿಸಿ ದೇವಸ್ಥಾನಕ್ಕೆ ನೀಡುತ್ತಾರೆ.




- ಮೊದಲ ದಿನ ಇವತ್ತು(ಮಂಗಳವಾರ) ತವರು ಮನೆಯಲ್ಲಿ ಪೂಜೆ ನಡೆಯಲಿದೆ. ಫೆ. 8ರಿಂದ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಗಂಡನ ಮನೆ ಆವರಣದಲ್ಲಿ ಕೂರಿಸಲಾಗುತ್ತದೆ. ಫೆ. 15ರವರೆಗೂ ಗಂಡನ ಮನೆ ಆವರಣದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಉಡಿಸೇವೆ, ತುಲಾಭಾರ, ಸೇರಿದಂತೆ ಭಕ್ತರು ಹರಕೆ ಸಲ್ಲಿಸಲು ಜಾತ್ರಾ ಸಮಿತಿ ಪೂರಕ ವ್ಯವಸ್ಥೆ ಮಾಡಿದೆ.
- ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜಾ ಕಾರ್ಯಗಳ ನಂತರ ಫೆ. 15 ರಂದು ರಾತ್ರಿ 10.30ಕ್ಕೆ ರಾಜಬೀದಿ ಉತ್ಸವ ನಡೆಯಲಿದೆ. ಶ್ರೀ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡಲಾಗುತ್ತದೆ. ರಾಜಬೀದಿ ಉತ್ಸವದಲ್ಲಿ ಪ್ರಸಿದ್ಧ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.