ಮೇಲುಕೋಟೆಯಲ್ಲಿ ನಡೆದ ಖಾಸಗಿ ಶಾಲೆಯ ಅತಿಥಿ ಶಿಕ್ಷಕಿಯ ಕೊಲೆ ಪ್ರಕರಣದಲ್ಲಿ ಮಹತ್ವದ ಸುಳಿವು
Melukote private school guest teacher murder case, crucial clue
Jan 23, 2024 | ಮಂಡ್ಯ ಜಿಲ್ಲೆಯಲ್ಲಿ ನಡೆದ ಅತಿಥಿ ಶಿಕ್ಷಕಿ ಕೊಲೆಯ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಈ ಮಧ್ಯೆ ಯುವಕನೊಬ್ಬನ ಮೇಲೆ ಅನುಮಾನ ಬಂದಿದೆ. ಪ್ರಕರಣ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದೆ. ರೀಲ್ಸ್ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಯುವತಿ ಮದುವೆಯಾಗಿ ಒಂಬತ್ತು ವರ್ಷವಾಗಿದೆ. ಏಳು ವರ್ಷದ ಮಗ ಸಹ ಇದ್ದಾನೆ. ಸುಂದರವಾಗಿದ್ದ ಸಂಸಾರ, ವೃತ್ತಿ ಬದುಕು ಹಾಗೂ ಖಾಸಗಿ ಜೀವನದಿಂದ ಹೊರಕ್ಕೆ ಹೆಜ್ಜೆ ಇಡದ ಯುವತಿ ಸಾವನ್ನಪ್ಪಿರುವುದು ಹೇಗೆ ಎಂಬುದು ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ನಡೆದಿದ್ದು ಏನು?
ಕಳೆದ ಜನವರಿ 20 ರಂದು ಶಾಲೆಯಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಯುವತಿ ದೀಪಿಕಾ ಆ ಬಳಿಕ ನಾಪತ್ತೆಯಾಗಿದ್ದಾಳೆ. ಈ ಸಂಬಂಧ ಪೊಲೀಸರಿಗೆ ಕುಟುಂಬಸ್ಥರು ದೂರು ಕೊಟ್ಟಿದ್ದರು. ದೂರಿನ ಬಗ್ಗೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಇದೆ. ಇದರ ನಡುವೆ ಇವತ್ತು ಮೇಲುಕೋಟೆ ಯೋಗ ನರಸಿಂಹ ಸ್ವಾಮಿ ದೇವಾಲಯದ ಬಳಿಯಲ್ಲಿ ಹೂತಿಟ್ಟಿರುವ ರೀತಿಯಲ್ಲಿ ಯುವತಿ ಶವ ಪತ್ತೆಯಾಗಿದೆ.
ಇನ್ನೂ ಈ ವಿಷಯ ಹೊರಬರುತ್ತಲೇ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಆರೋಪಿಗಳನ್ನ ಹಿಡಿಯಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದರ ನಡುವೆ ಮಾಧ್ಯಮಗಳ ಹೊತೆಗೆ ಮಾತನಾಡಿದ ಕುಟುಂಬಸ್ಥರು, ಪೊಲೀಸರು ಕೊಂಡೊಯ್ಯುತ್ತಿದ್ದ ಬೈಕ್ನ್ನ ಗುರುತಿಸಿದ ಬಳಿಕ ಯುವತಿಯ ಶವ ಪತ್ತೆಯಾಗಿದೆ. ಪೊಲೀಸರ ಬದಲಾಗಿ ಬೈಕ್ ಸಿಕ್ಕ ಸ್ಥಳದಲ್ಲಿಯೇ ಹುಡುಕಾಟ ನಡೆಸಿದಾಗ ಅಲ್ಲಿಯೇ ಹೂತಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಇನ್ನೂ ಈ ವಿಚಾರಕ್ಕೂ ಮೊದಲು ಪೊಲೀಸರಿಗೆ ಮೇಲುಕೋಟೆಗೆ ಬಂದಿದ್ದ ಪ್ರವಾಸಿಗರು ಬೆಟ್ಟದ ತಪ್ಪಲಿನಲ್ಲಿ ಯುವತಿ-ಯುವಕ ಜಗಳವಾಡುತ್ತಿರುವ ದೃಶ್ಯವೊಂದನ್ನ ಸೆರೆಹಿಡಿದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ವಿಡಿಯೋ ಇದೀಗ ಪ್ರಕರಣದ ಪ್ರಮುಖ ಸುಳಿವಾಗಿ ಮಾರ್ಪಟ್ಟಿದೆ.
ಯುವತಿಯನ್ನ ಅಕ್ಕ ಎಂದು ಕರೆಯುತ್ತಿದ್ದ ಊರಿನ ಪರಿಚಯಸ್ಥ ಯುವಕನೊಬ್ಬನ ಹುಟ್ಟುಹಬ್ಬ ಯುವತಿ ಮಿಸ್ಸಿಂಗ್ ಆದ ದಿನವೇ ಇತ್ತು. ಅದೇ ನೆಪದಲ್ಲಿ ಆಕೆಯನ್ನು ತನ್ನ ಬಳಿ ಕರೆಸಿಕೊಂಡ ಯುವಕ ಆಕೆಯನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಯುವಕ ತನ್ನ ಮನೆಯವರ ಬಳಿ ಹೇಳಿ, ದೀಪೀಕಾ ನಾಪತ್ತೆಯಾದ ಮರುದಿನ ಕಾಣೆಯಾಗಿದ್ದಾನೆ.
ಸದ್ಯ ಪ್ರಕರಣ ಸಂಬಂಧ ಪೊಲೀಸರು ಕೇಸ್ ದಾಖಲಿಸಿದ್ದು ಹಿರಿಯ ಅಧಿಕಾರಿಗಳು ಸಹ ಕೇಸ್ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲವಾದರೂ ಆರೋಪಿಯ ಪತ್ತೆಯಾದ ಬಳಿಕ ಎಲ್ಲವೂ ತಿಳಿದುಬರುವ ಸಾಧ್ಯತೆ ಇದೆ.