̄ಎರಡು ಸಲ ನಾಮಪತ್ರ ಸಲ್ಲಿಸಿದ ಬಿ ವೈ ರಾಘವೇಂದ್ರ | ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಜೋಶ್ | ಮುಸ್ಲಿಮರಿಂದ ಹಾರ, ಸನ್ಮಾನ| ಹೇಗಿತ್ತು ಜನರ ಮೂಡ್? |
B Y Raghavendra files nomination twice | BJP, JD(S) workers celebrate | Muslims honoured with garlands | What was the mood of the people? |
Shivamogga Apr 18, 2024 B Y Raghavendra files nomination ಲೋಕಸಭಾ ಚುನಾವಣೆ 2024 ರ ಅಖಾಡದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಆಯ್ಕೆ ಬಯಸಿ ಹಾಲಿ ಸಂಸದ ಬಿವೈ ರಾಘವೇಂದ್ರ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ಇನ್ನೊಂದೆಡೆ ಈ ಸಂಬಂಧ ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್ನಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ಮೆರವಣಿಗೆ ಮೈತ್ರಿ ಪಕ್ಷಗಳ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಸುಡುವ ಬಿಸಿಲಿನ ನಡುವೆಯು ಕಾರ್ಯಕರ್ತರ ಜೋಶ್ ಹೈ ಆಗಿದೆ.
ಬಿಜೆಪಿ ಜೆಡಿಎಸ್ ಸಮ್ಮಿಲನ
ಇನ್ನೂ ಬಿಜೆಪಿ ಕಾರ್ಯಕರ್ತರು ಹಿಂದಿಗಿಂತಲೂ ಹೆಚ್ಚು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸಹ ದೊಡ್ಡಸಂಖ್ಯೆಯಲ್ಲಿ ರಾಘವೇಂದ್ರರವರ ನಾಮಿನೇಷನ್ ಪೂರ್ವ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಹಾದಿಯುದ್ದಕ್ಕೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಭಾವುಟಗಳು ರಾರಾಜಿಸಿದವು. ಪಟಾಕಿ ಸಿಡಿಸಿದ ಕಾರ್ಯಕರ್ತರು ಜೆಸಿಬಿ ಮೂಲಕ ಬೃಹತ್ ಹಾರಗಳನ್ನ ಮೆರವಣಿಗೆಯ ವಾಹನಕ್ಕೆ ಹಾಕಿದರು.
ಪುತ್ತಿಲ ಪರಿವಾರ ಹಾಜರ್
ಬಿ.ವೈ ರಾಘವೇಂದ್ರರವರ ನಾಮಪತ್ರ ಸಲ್ಲಿಕೆಗೆ ಕುಮಾರ್ ಬಂಗಾರಪ್ಪ, ಮಾಳವಿಕಾ ಅವಿನಾಶ್, ಭಾರತೀ ಶೆಟ್ಟಿ , ಅರುಣ್ ಪುತ್ತಿಲ, ಮುನಿಸ್ವಾಮಿ ಸೇರಿದಂತೆ ಹಲವು ಮುಖಂಡರು ಮೆರವಣಿಗೆಯ ವಾಹವನ್ನು ಏರಿದ್ದಾರೆ. ಈ ಪೈಕಿ ಅರುಣ್ ಕುಮಾರ್ ಪುತ್ತಿಲರವರ ಹಾಜರಾತಿ ಮತ್ತು ಕುಮಾರ್ ಬಂಗಾರಪ್ಪರವರ ಉಪಸ್ಥಿತಿ ವಿಶೇಷವಾಗಿ ಗಮನ ಸೆಳೆದಿದೆ.
ಮೂವರು ಮಾಜಿ ಸಿಎಂಗಳ ಸಾಥ್
ಸಂಸದ ಬಿವೈ ರಾಘವೇಂದ್ರವರ ನಾಮಪತ್ರ ಸಲ್ಲಿಕೆಗೆ ಮೂವರು ಮಾಜಿ ಸಿಎಂಗಳು ಸಾಥ್ ನೀಡಿದ್ದಾರೆ ಜೆಡಿಎಸ್ನಿಂದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹಾಜರಾಗಿದ್ದಾರೆ. ಮಗನ ನಾಮಪತ್ರ ಸಲ್ಲಿಕೆಗಾಗಿ ತಂದೆ ಬಿಎಸ್ ಯಡಿಯೂರಪ್ಪ ಕಮಲದ ಚಿಹ್ನೆಯನ್ನು ಹಿಡಿದು ಮೆರವಣಿಗೆ ವಾಹನವೇರಿದ್ದಾರೆ. ದಾರಿಯುದ್ದಕ್ಕೂ ಬಿಜೆಪಿ ಚಿಹ್ನೆಯನ್ನು ಪ್ರದರ್ಶಿಸುತ್ತಿರುವ ಬಿಎಸ್ವೈ ಕಾರ್ಯಕರ್ತರ ಘೋಷಣೆಗಳಿಗೆ ದನಿಗೂಡಿಸಿದ್ದು ವಿಶೇಷವಾಗಿತ್ತು.
2 ನಾಮಪತ್ರ ಸಲ್ಲಿಸಿದ ಬಿವೈ ರಾಘವೇಂದ್ರ
ವಿಶೇಷ ಎಂದರೆ ಮೆರವಣಿಗೆಯ ನಡುವೆ ಹಾಲಿ ಸಂಸದ ಬಿವೈ ರಾಘವೇಂದ್ರ ಎರಡು ಬಾರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೊದಲು ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯ್ಕ್ , ಬಿಜೆಪಿ ಹಿರಿಯ ಮುಖಂಡರಾದ ಭಾನು ಪ್ರಕಾಶ್ ಹಾಗು ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪ ಮತ್ತು ತಮ್ಮ ಪತ್ನಿಯ ಜೊತೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆಯವರಿಗೆ ಸಂಸದ ರಾಘವೇಂದ್ರರವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ರು.
ಇದಾದ ಕೆಲವೇ ಹೊತ್ತಿನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಅಶೋಕ್ ನಾಯ್ಕ್, ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರ ಮತ್ತು ಬಿಜೆಪಿ ಮುಖಂಡ ರುದ್ರೇಗೌಡರ ಸಮ್ಮುಖದಲ್ಲಿ ಡಿಸಿ ಗುರುದತ್ತ ಹೆಗೆಡೆಯವರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ರು.
ಮುಸ್ಲಿಮ್ ನಾಯಕರಿಂದ ಹಾರ ಸನ್ಮಾನ
ಇನ್ನೊಂದೆಡೆ ಸಂಸದ ರಾಘವೇಂದ್ರರವರ ಮೆರವಣಿಗೆಯ ವಾಹನ ಗಾಂಧಿ ಬಜಾರ್ನ ತುದಿಗೆ ಬರುವ ಹೊತ್ತಿಗೆ ಅಲ್ಲಿಯೇ ಜೆಸಿಬಿ ಬಕೆಟ್ನಲ್ಲಿ ತಯಾರಾಗಿ ನಿಂತಿದ್ದ ಮುಸ್ಲಿಮ್ ನಾಯಕರುಗಳು ಬಿಡಿ ಹೂವುಗಳನ್ನ ವಾಹನದ ಮೇಲೆ ಹಾಕಿ ಘೋಷಣೆ ಕೂಗಿದರು. ಬಕೆಟ್ನ್ನ ಮೇಲಕ್ಕೆ ಲಿಫ್ಟ್ ಮಾಡಿಕೊಂಡಿದ್ದ ನಾಯಕರು ಹಾಗೂ ಕಾರ್ಯಕರ್ತರು ಸೇವಂತಿ ಹೂವುಗಳನ್ನ ವಾಹನದ ಮೇಲೆ ಹಾಕಿ ಖುಷಿಪಟ್ಟು ಬೆಂಬಲ ವ್ಯಕ್ತಪಡಿಸಿದರು. ಪ್ರತಿಯಾಗಿ ಬಿಎಸ್ವೈ ಮತ್ತು ಹೆಚ್ ಡಿ ಕುಮಾರಸ್ವಾಮಿ ಮುಸ್ಲಿಮ್ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ರು.
ಹೇಗಿದೆ ಜನರ ಮೂಡ್
ಒಟ್ಟಾರೆ, ಅದ್ದೂರಿಯಾಗಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಜನರು ಕುತೂಹಲದ ದೃಷ್ಟಿಯಿಂದಲೂ ಸಹ ಪಾಲ್ಗೊಂಡಿದ್ದರು. ಜನರ ಸಂದಣಿಯನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿಯುತ್ತಿದ್ದ ಕಾರ್ಯಕರ್ತರು ಪಟಾಕಿ ಸಿಡಿಸುವಾಗೆಲ್ಲಾ ಜೋರು ಘೋಷಣೆಗಳನ್ನ ಕೂಗುತ್ತಿದ್ದರು. ಇನ್ನೂ ಜನ ಸೇರುವ ನಿರೀಕ್ಷೆಯಲ್ಲಿದ್ದ ಸಣ್ಣ ವ್ಯಾಪಾರಸ್ಥರು ಮೆರವಣಿಗೆ ಸಾಗುವ ಹಾದಿ ಬದಲಿಯಲ್ಲಿ ಐಸ್ಕ್ರೀಂ ಅಂಗಡಿ, ಜ್ಯೂಸ್ ಅಂಗಡಿ, ಕಬ್ಬಿನಹಾಲು, ಕೂಲ್ಡ್ರಿಂಕ್ಸ್ , ಶಾಲಿನ ವ್ಯಾಪಾರ ನಡೆಸ್ತಿರುವುದು ಕಂಡುಬಂದಿತ್ತು.
ಇವೆಲ್ಲದರ ನಡುವೆ ಬಿಸಿಲ ಝಳ ಕಾರ್ಯಕರ್ತರನ್ನ ಕಾಡುತ್ತಿದೆ. ಬಿಸಿಲು ಏರುವ ಮೊದಲೇ ನಾಮಿನೇಷನ್ ಮೆರವಣಿಗೆಯನ್ನ ಮುಗಿಸುವ ಯೋಜನೆಯನ್ನ ಬಿಜೆಪಿ ಹಮ್ಮಿಕೊಂಡಿತ್ತು. ಆದಾಗ್ಯು ಅಂದುಕೊಂಡಂತೆ ಮೆರವಣಿಗೆ ಸಮಯಕ್ಕೆ ಅನುಗುಣವಾಗಿ ಸಾಗಲಿಲ್ಲ. ಹೀಗಾಗಿ ಬಿಸಿಲ ಬಿಸಿ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಜೋರಾಗಿಯೇ ತಟ್ಟುತ್ತಿದೆ. ತಂದಿದ್ದ ಕೇಸರಿ ಶಾಲುಗಳನ್ನ ಬೆಂಬಲಿಗರು ತಲಮೇಲೆ ಹಾಕಿಕೊಂಡು ಹೋಗುತ್ತಿದ್ದರು. ಕಲಾವಾದ್ಯ ಮೇಳದವರಿಗಂತೂ ಸೆಖೆ ಅಕ್ಷರಶಃ ಸುಡುತಿತ್ತು. ಕೇರಳದ ಚಂಡೆವಾದ್ಯ ತಂಡಗಳ ಸದಸ್ಯರು ಕಾಲಿನಡಿಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನ ಹಾಕಿಕೊಂಡು ಚಂಡೆ, ತಾಳ ಬಡಿಯುತ್ತಿದ್ದರು. ಒಟ್ಟಾರೆ, ಕಾರ್ಯಕರ್ತರ ಜೋಶ್ನಲ್ಲಿ ಬಿವೈ ರಾಘವೇಂದ್ರರವರ ನಾಮಿನೇಷನ್ ಮೆರವಣಿಗೆ ನಡೆಯುತ್ತಿದೆ.
ಮೆರವಣಿಗೆ ರಾಮಣ್ಣ ಶೆಟ್ಟಿ ಪಾರ್ಕ್ನಿಂದ , ಗಾಂಧಿ ಬಜಾರ್ ಮೂಲಕ ಶಿವಪ್ಪನಾಯಕ ಸರ್ಕಲ್, ಅಮೀರ್ ಅಹಮದ್ ಸರ್ಕಲ್ , ನೆಹರೂ ರೋಡ್ ಮೂಲಕ ಸೀನಪ್ಪ ಶೆಟ್ಟಿ (ಗೋಪಿ ವೃತ್ತ) ವೃತ್ತಕ್ಕೆ ಬಂದು ತಲುಪಲಿದೆ. ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಇನ್ನೂ ಪರೀಕ್ಷೆ ಹಿನ್ನೆಲೆಯಲ್ಲಿ ಸಭೆಯನ್ನ ತುಸು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.