SHIVAMOGGA | Jan 14, 2024 | Thirthahalli Theppotsava 2024 ಮಲೆನಾಡಿಗರ ಹೆಮ್ಮೆಯ ಪ್ರತೀಕ ತೀರ್ಥಹಳ್ಳಿ ತೆಪ್ಪೋತ್ಸವ . ಮಲೆನಾಡು ಶಿವಮೊಗ್ಗದ ಜಾತ್ರೆಗಳ ರಾಜನಂತೆ ಕಂಗೊಳಿಸುವ ತೀರ್ಥಹಳ್ಳಿ ರಾಮೇಶ್ವರ ದೇವರ ಜಾತ್ರೆಗೆ ಚಾಲನೆ ಸಿಕ್ಕರೇ ಸಾಕು ಮಲೆನಾಡಿಗರು ವಿಶೇಷವಾಗಿ ಸಜ್ಜುಗೊಳ್ಳುತ್ತಾರೆ.. ಎಳ್ಳಾಮಾವಾಸ್ಯೆ ಜಾತ್ರೆಗೆ ಹೋಗಲ್ಲನಾ ಅಂತಾ ವಿಚಾರಿಸುತ್ತಲೇ ತೀರ್ಥಹಳ್ಳಿ ಬಸ್ ಹತ್ತುವ ಒಂದು ಖುಷಿಯೇ ಬೇರೆಯದ್ದೇ ರೀತಿಯದ್ದು..
ತೀರ್ಥಹಳ್ಳಿ ತೆಪ್ಪೋತ್ಸವ
ಇನ್ನೂ ತೀರ್ಥಹಳ್ಳಿ ತೆಪ್ಪೋತ್ಸವಕ್ಕಾಗಿ ತೀರ್ಥಹಳ್ಳಿ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತೆ .ಲವಲವಿಕೆಯಿಂದ ಜಾತ್ರೆಗೆ ಬರುವ ಯುವಪೀಳಿಗೆಯಿಂದ ಹಿಡಿದು,ವಯೋವೃದ್ಧರವರೆಗೆ ಅದು ಚೈತನ್ಯದ ಚಿಲುಮೆಯಾಗಿದೆ..
ತುಂಗಾನದಿ
ಜಾತ್ರೆಯ ಕೊನೆ ದಿನ ತುಂಗಾ ನದಿ ಸೌಂದರ್ಯ ಭರಿತವಾಗಿ ಕಂಗೊಳಿಸುತ್ತದೆ. ದಿಗಂತದಲ್ಲಿ ಮೋಡಗಳ ಚಿತ್ತಾರ ನೋಡಿ ತುಂಗೆ ಕೂಡ ನಾಚಿ ನೀರಾಗುತ್ತಾಳೆ.. ಇಂತಹ ವಿಶೇಷವನ್ನ ಹೊಂದಿರೋ ತೀರ್ಥಹಳ್ಳಿ ತೆಪ್ಪೋತ್ಸವ ವಿಶೇಷಗಳನ್ನ ಫೋಟೋಗಳಲ್ಲಿ ನೋಡಿ ಕಣ್ತುಂಬಿಕೊಳ್ಳಿ
ಅಯೋದ್ಯೆ ಶ್ರೀರಾಮಮಂದಿರ ಈ ಬಾರಿಯ ಹೈಲೈಟ್ಸ್
ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆ ಮಲೆನಾಡಿನ ಹೆಮ್ಮೆಯ ಪ್ರತೀಕ..,
ಇಡೀ ತೀರ್ಥಹಳ್ಳಿ ಪಟ್ಟಣವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುತ್ತೆ. ಹಳ್ಳಿಯಿಂದ ಪಟ್ಟಣ ಸೇರಿದವರೆಲ್ಲಾ ಜಾತ್ರಾ ಸಂದರ್ಭದಲ್ಲಿ ಅದೆಲ್ಲಿದ್ದರೂ,ಜಾತ್ರೆಯಂದು ತವರು ಸೇರುತ್ತಾರೆ
ಕುಟುಂಬದ ಸದಸ್ಯರೊಂದಿಗೆ ಜಾತ್ರೆಯನ್ನು ಕಣ್ತುಂಬಿಕೊಳ್ಳುತ್ತಾರೆ.ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆಯ ಸೊಬಗನ್ನು ಸವಿಯಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಜಾತ್ರೆಯ ಕೊನೆಯ ದಿನದ ತೆಪ್ಪೋತ್ಸವ ಹಾಗು ಪಟಾಕಿ ಸಿಡಿಮದ್ದುಗಳ ಸಿಡಿತ ನೋಡಲೆಂದೇ ತುಂಗಾ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ.
ಸೌಂದರ್ಯದ ಸಿರಿ ತೀರ್ಥಹಳ್ಳಿ
ಮಲೆನಾಡಿನ ಸಹ್ಯಾದ್ರಿ ಪರ್ವತ ಶ್ರೇಣಿಯ ತೀರ್ಥಹಳ್ಳಿ ಪ್ರಕೃತಿ ಸೊಬಗಿನ ಮುಕುಟುಮಣಿಯ ರಮಣೀಯ ಸ್ಥಳ.ಹಸಿರು ಹೊದಿಕೆಯ ಗುಡ್ಡಗಾಡಿನ ತಪ್ಪಲಿನ ತಾಣವಾಗಿದ್ದು,ಪ್ರವಾಸಿ ಕೇಂದ್ರವಾಗಿ ಎಲ್ಲರನ್ನು ಆಕರ್ಷಿಸುತ್ತಿದೆ.
ವಿಶ್ವವಿಖ್ಯಾತ ಪ್ರವಾಸಿ ತಾಣ ಆಗುಂಬೆ
ತೀರ್ಥಹಳ್ಳಿ ಭಾಗದ ಪ್ರಕೃತಿ ಸೊಬಗನ್ನು ಸವಿಯಲು,ಇತ್ತಿಚ್ಚಿನ ವರ್ಷಗಳಲ್ಲಿ ಹೆಚ್ಚಾಗಿ ಪ್ರವಾಸಿಗರು ದೇಶ ವಿದೇಶಗಳಿಂದ ಆಗಮಿಸುತ್ತಿದ್ದಾರೆ. ಸೌಂದರ್ಯವನ್ನು ಒಡಲಲ್ಲಿ ತುಂಬಿಕೊಂಡು ಪ್ರಾಕೃತಿಕ ಶ್ರೀಮಂತಿಕೆಯನ್ನು ಮೆರೆಯುತ್ತಿದೆ ತೀರ್ಥಹಳ್ಳಿ.
ತೀರ್ಥಹಳ್ಳಿ ಪ್ರವಾಸಿ ತಾಣಗಳು
ವಿಶ್ವವಿಖ್ಯಾತ ಪ್ರವಾಸಿ ತಾಣ ಆಗುಂಬೆ,ಪರುಶುರಾಮ ಕ್ಷೇತ್ರ ಎಂದು ಖ್ಯಾತಿ ಹೊಂದಿರುವ ಅಂಬುತೀರ್ಥ,ಬನವಾಸಿ ನಾಡೆಂದು ಖ್ಯಾತಿಗೊಂಡ ಕವಲೇದುರ್ಗ,ಭೀಮನ ಗದಾತೀರ್ಥ,ಜೈನರ ದಕ್ಷಿಣ ಕಾಶಿ-ಹುಂಚಾ,ಮಹಿಷಿ ಕ್ಷೇತ್ರ,ಕುಂದಾದ್ರಿ ಬೆಟ್ಟ,ಸಿಬ್ಬಲುಗುಡ್ಡೆ,ರಾಷ್ಟ್ರಕವಿ ಕುವೆಂಪು ಹುಟ್ಟಿದ ಕುಪ್ಪಳಿ,ಒಂದೇ ಎರಡೇ….., ಸಾಹಿತ್ಯಿಕ,ಸಾಂಸ್ಕೃತಿಕ,ರಾಜಕೀಯ,ಐತಿಹಾಸಿಕ, ಧಾರ್ಮಿಕವಾಗಿ ತೀರ್ಥಹಳ್ಳಿ ಅತ್ಯಂತ ಶ್ರೀಮಂತವಾಗಿದೆ.ಈ ಹಿರಿಮೆಯ ಸಾಲಿನಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆಯುವ ಎಳ್ಳಮವಾಸ್ಯೆ ಜಾತ್ರೆ ಕೂಡ ತನ್ನ ಛಾಪನ್ನು ಮೂಡಿಸಿದ್ದು, ರಾಜ್ಯವ್ಯಾಪಿ ಪ್ರಸಿದ್ಧಿ ಪಡೆದಿದೆ.
ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆ
ನಾಡ ಜಾತ್ರೆ ಎಂದು ಪ್ರಸಿದ್ಧಿಗೊಂಡಿರುವ ತುಂಗಾ ತೀರದ ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆ ಮಲೆನಾಡಿನಲ್ಲಿ ಸುಗ್ಗಿ ಕಾಲದ ನಡುವೆ ಹಿಗ್ಗು ತರುವುದಕ್ಕಾಗಿ ನಡೆಯುತ್ತದೆ ಡಿಸಂಬರ್ 22 ರಿಂದ ಆರಂಭಗೊಳ್ಳುವ ಜಾತ್ರೆ ಪುರಾಣ ಪ್ರಸಿದ್ಧ ಹಿನ್ನಲೆಯಿಂದ ನಾಡಿನ ಮನೆಮಾತಿನ ಜಾತ್ರೆಯಾಗಿದೆ
ಪರಶುರಾಮ ಕ್ಷೇತ್ರ
ಮಾತೃ ಹತ್ಯೆ ಪಾಪ ಪರಿಹಾರ ದೋಷದಿಂದ,ಮುಕ್ತಿ ಕಂಡ ಸಂತಸದಲ್ಲಿ ಪರಶುರಾಮನಿಂದ ತೀರ್ಥಹಳ್ಳಿ ತುಂಗಾ ನದಿ ತೀರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀರಾಮೇಶ್ವರ ದೇವಸ್ಥಾನ,ಮಲೆನಾಡಿನ ಭಾಗದ ಜನರಿಗೆ ಆರಾಧ್ಯ ದೈವ.
ಎಳ್ಳಮವಾಸ್ಯೆ ದಿನದಂದು ಸಾವಿರಾರು ಭಕ್ತರು ತುಂಗಾ ನದಿ ಪರಶುರಾಮ ಕೊಂಡದಲ್ಲಿ ಪಾಪ ಪರಿಹಾರ ದೋಷದಿಂದ ಮುಕ್ತರಾಗುವ ಬಯಕೆಯಲ್ಲಿ ಭಕ್ತರು ಬೆಳಗಿನ ಜಾವ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಾರೆ.ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದು ಭಕ್ತ ಸಮೂಹದಿಂದ ಆರಾಧಿಸಲ್ಪಡುವ ಶ್ರೀರಾಮೇಶ್ವರ ದೇವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಆಶಿರ್ವಾದ ಪಡೆದುಕೊಳ್ಳುತ್ತಾರೆ.
ಪೌರಾಣಿಕ ಮಹತ್ವ
ತಂದೆ ಆಜ್ಞೆಯಂತೆ ಪರಶುರಾಮ ತನ್ನ ತಾಯಿ ಶಿರ ಕಡಿದಾಗ ಕೊಡಲಿಗೆ ತಾಗಿದ ರಕ್ತದ ಕಲೆ ತೊಳೆಯಲು ತಂದೆ ಅನುಮತಿ ಮೇರೆಗೆ ಪುಣ್ಯ ಕ್ಷೇತ್ರಕ್ಕೆ ಸಂಚಾರ ಹೊರಡುತ್ತಾನೆ.ಯಾವ ಸ್ಥಳದಲ್ಲೂ ಕೊಡಲಿ ತೊಳೆದರೂ ಅಂಟಿದ ರಕ್ತದ ಕಲೆಯ ಎಳ್ಳಷ್ಟು ಭಾಗ ಕೊಡಲಿಯಲ್ಲಿ ಹಾಗೆ ಉಳಿದುಕೊಂಡಿರುತ್ತೆ
ಇದರಿಂದ ವಿಚಲಿತನಾದ ಪರಶುರಾಮ ತೀರ್ಥಹಳ್ಳಿ ತುಂಗಾ ನದಿ ತೀರದಲ್ಲಿ ಜ್ಞಾನ ನಿರತನಾಗಿದ್ದಾಗ,ಕೈಯಲ್ಲಿದ್ದ ಕೊಡಲಿ ಬಂಡೆ ಮೇಲೆ ಜಾರಿ ಬಿದ್ದಾಗ ಬಂಡೆ ಒಡೆದು ಚಿಮ್ಮಿದ ನೀರು ಕೊಡಲಿಗೆ ಅಂಟಿದ ಎಳ್ಳಷ್ಟು ರಕ್ತವನ್ನು ಅಳಿಸಿ ಹಾಕಿತು.ಇದರಿಂದ ಸಂತಸಗೊಂಡ ಪರಶುರಾಮ ನದಿ ತೀರದ ದಡದಲ್ಲಿ ಲಿಂಗ ಪ್ರತಿಷ್ಟಾಪಿಸಿದರೆಂಬ ಪುರಾಣ ಪ್ರತೀತಿ ಇದೆ.
ಮಾರ್ಗಶಿರ ಬಹುಳ ಅಮವಾಸ್ಯೆ ದಿನ
ಅಲ್ಲದೆ ಅಂದು ಮಾರ್ಗಶಿರ ಬಹುಳ ಅಮವಾಸ್ಯೆ ದಿನವಾದರಿಂದ ಇಂದಿಗೂ ಆ ದಿನವನ್ನು ಭಕ್ತರು ಎಳ್ಳಮವಾಸ್ಯೆ ದಿನವೆಂದು ಆಚರಿಸುತ್ತಾರೆ. ಪರಶುರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ಲಿಂಗಕ್ಕೆ ಕವಲೆದುರ್ಗ ರಾಜರ ಆಳ್ವಿಕೆ ಕಾಲದಲ್ಲಿ ಕಾಯಕಲ್ಪ ಕಲ್ಪಿಸಿ ಶ್ರೀರಾಮೇಶ್ವರ ದೇವಸ್ಥಾನ ನಿರ್ಮಿಸಲಾಯಿತೆಂಬ ಉಲ್ಲೇಖವಿದೆ.
ಶ್ರೀರಾಮಮಂಟಪ
ವನವಾಸ ಕಾಲದಲ್ಲಿ ಶ್ರೀ ರಾಮ ಕೂಡ ಈ ಸ್ಥಳಕ್ಕೆ ಬಂದಿದ್ದನೆಂಬ ಪುರಾಣ ಮಾತಿದೆ.ತುಂಗಾ ನದಿಯಲ್ಲಿ ಆಕರ್ಷಕ ಶ್ರೀರಾಮ ಮಂಟಪ,ಪರಶುರಾಮ ಕೊಂಡ ಇದೆ. ಮೈಸೂರು ರಾಜರ ಕಾಲದಲ್ಲಿ ನಿರ್ಮಿಸಿದ ಕುರುವಳ್ಳಿ ಕಮಾನು ಸೇತುವೆ ಭಕ್ತರನ್ನು ಹೆಚ್ಚು ಆಕರ್ಷಿಸಿದೆ.
ರಾಷ್ಟ್ರಕವಿ ಕುವೆಂಪು
ಶ್ರೀರಾಮೇಶ್ವದ ದೇವಸ್ಥಾನಕ್ಕೆ ಇತ್ತಿಚ್ಚಿನ ದಿನಗಳಲ್ಲಿ ಭಕ್ತ ಸಮುದಾಯ ಹೆಚ್ಚಾಗುತ್ತಿದೆ.ರಾಷ್ಟ್ರ ಕವಿ ಕುವೆಂಪು ಅವರ ಬೊಮ್ಮನಹಳ್ಳಿ ಕಿಂದರಜೋಗಿ ಸೃಷ್ಟಿಗೆ ಪೂರಕವಾದ ಬೊಮ್ಮರಸಯ್ಯನ ಅಗ್ರಹಾರ,ಜೋಗಿ ಕುದ್ರಿಗುಡ್ಡ,ಕಲ್ಲುಸಂಕ ನದಿ ಅಕ್ಕಪಕ್ಕ ಇದೆ, ಕುವೆಂಪು ಅವರಿಗೆ ಬೊಮ್ಮರಸಯ್ಯನ ಅಗ್ರಹಾರವೇ, ಬೊಮ್ಮನಹಳ್ಳಿಯಾಗಿ, ಕಿಂದರಜೋಗಿ ಕರೆದೊಯ್ದ ಗುಹೆಯೇ ಜೋಗಿ ಕುದ್ರಿಗುಡ್ಡವಾಗಿ ಮಾರ್ಪಟ್ಟಿದೆ ಎಂಬುದು ಹಲವರ ನಂಬಿಕೆ. ಹಲವಾರು ನಂಬಿಕೆ ಆಚರಣೆ ಮೂಲಕ ಅಂದಿನ ಸೊಗಡನ್ನು ಉಳಿಸಿಕೊಂಡಿರುವ ಎಳ್ಳಮವಾಸ್ಯೆ ಜಾತ್ರೆ ಸ್ಥಳೀಯ ಜನರಿಗೆ ವ್ಯವಹಾರಿಕ ಕಾಲ ಆಗಿದೆ. ಮದುವೆ, ಕೈಗಡ ಸಾಲ ತೀರಿಸಲು ಎಳ್ಳಮವಾಸ್ಯೆ ಗಡಿಕಾಲವಾಗಿದೆ.
ಚಿತ್ತಾರದ ತೆಪ್ಪೋತ್ಸವ
ಎಳ್ಳಮವಾಸ್ಯೆ ಜಾತ್ರೆಯ ಕೊನೆ ದಿನದಂದು ನಡೆಯುವ ತೆಪ್ಪೋತ್ಸವ ಜಾತ್ರೆಯ ಆಕರ್ಷಣೆಯ ಕೇಂದ್ರಬಿಂದು.ತುಂಗಾ ನದಿಯಲ್ಲಿ ತೇಲಿ ಬರುವ ಬಣ್ಣ ಬಣ್ಣದ ದೋಣಿದೀಪ,ವಿದ್ಯುತ್ ದೀಪಲಂಕಾರ,ಸಿಡಿಮದ್ದಿನ ಬಾಣ,ಬಿರುಸುಗಳ ಚಿತ್ತಾರ,ಆಕಾಶಗಂಗೆ ತೆಪ್ಪೋತ್ಸವದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸುತ್ತಾರೆ.ಶ್ರೀ ರಾಮೇಶ್ವರ ದೇವರನ್ನು ಆಲಂಕೃತ ತೆಪ್ಪದಲ್ಲಿ ತೇಲಿಸಿ ಸಂಭ್ರಮಿಸುವ ತೆಪ್ಪೋತ್ಸವ ಕಾರ್ಯಕ್ರಮ ತುಂಗೆಯ ಸೌಂದರ್ಯಕ್ಕೆ ಮೆರಗು ನೀಡುತ್ತದೆ.
ಈ ಸಂದರ್ಭದಲ್ಲಿ ಆಗಸದಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತದೆ.ತುಂಗಾ ತೀರದಿಂದ ಆಗಸಕ್ಕೆ ಚಿಮ್ಮುವ ಪಟಾಕಿ ಸಿಡಿಮದ್ದುಗಳು ಬಾನಂಗಳದಲ್ಲಿ ಚೆಲುವಿನ ಚಿತ್ತಾರವನ್ನು ಮೂಡಿಸುತ್ತವೆ.ಕಾರ್ಗತ್ತಲೆಯ ಆಗಸದಲ್ಲಿ ಹೂ ಬೆಳಕನ್ನು ಹೊರಸೂಸುವ ಪಟಾಕಿಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಬಣ್ಣ ಬಣ್ಣದ ಹೂ ಬೆಳಕನ್ನು ಹೊರಹಾಕುವ ಸಿಡಿಮದ್ದುಗಳು, ವಿದ್ಯುತ್ ದೀಪಾಲಂಕಾರ.ತುಂಗಾನದಿಯು ಈ ಸಂದರ್ಭದಲ್ಲಿ ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ. ಈ ಬಾರಿ ಅಯೋದ್ಯೆ ಶ್ರೀರಾಮ ಮಂದಿರದ ವಿದ್ಯುದೀಪಾಲಂಕಾರ ಎಲ್ಲರ ಆಕರ್ಷಣೆಯಾಗಿತ್ತು.
ರಾಮೇಶ್ವರ ದೇವಸ್ಥಾನದ ಸಮಿತಿಯವರು ಪ್ರತಿ ವರ್ಷ ಆಯೋಜಿಸುವ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಮದ್ದೆ ಪ್ರಮುಖ ಆಕರ್ಷಣೆ .ಹೀಗಾಗಿ ಸಮಿತಿಯವರು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಪಟಾಕಿ ಸಿಡಿಮದ್ದಿನ ವ್ಯವಸ್ಥೆ ಮಾಡಿರುತ್ತಾರೆ.ಅಲ್ಲದೆ ತುಂಗಾ ತೀರದಿಂದ ಬಹುದೂರದಲ್ಲಿ ಪಟಾಕಿ ಸಿಡಿಸುವ ವ್ಯವಸ್ಥೆ ಮಾಡಲಾಗಿರುತ್ತದೆ.
ಎಳ್ಳಮವಾಸ್ಯೆ ಜಾತ್ರೆಯಂದು ಅದರ ವೈಭವವನ್ನು ಸಿನಿಮಾ ದಾರಾವಾಹಿಗಳಲ್ಲಿ ನೈಜವಾಗಿ ಚಿತ್ರೀಕರಿಸಲು ಕೂಡ ಸಿದ್ದತೆ ನಡೆಯುವುದು ಕೂಡ ವಿಶೇಷತೆಗಳಲ್ಲೊಂದು.
