special action force ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಮುಂಜಾಗ್ರತಾ ಕ್ರಮಗಳನ್ನು ಬಲಪಡಿಸುವ ಉದ್ದೇಶದಿಂದ ನಿನ್ನೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ವಿಶೇಷ ಕಾರ್ಯಪಡೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವು ನಗರದಲ್ಲಿ ರೂಟ್ ಮಾರ್ಚ್ ನಡೆಸಿತು.
ಈ ರೂಟ್ ಮಾರ್ಚ್ ಅನ್ನು ಶಿವಮೊಗ್ಗ ನಗರದ ಎ ಎ ವೃತ್ತದಿಂದ ಪ್ರಾರಂಭಿಸಲಾಯಿತು. ಅಲ್ಲಿಂದ ಎಂಕೆಕೆ ರಸ್ತೆ, ಸಿದ್ದಯ್ಯ ವೃತ್ತ, ಬಿ ಬಿ ರಸ್ತೆ, ಸೀಗೇಹಟ್ಟಿ, ಬೈಪಾಸ್, ನ್ಯೂ ಮಂಡ್ಲಿ, ಇಮಾಮ್ ಬಡಾ, ಇಲಿಯಾಸ್ ನಗರ, ಆರ್ ಎಂ ಎಲ್ ನಗರ, ಟೆಂಪೋ ಸ್ಟ್ಯಾಂಡ್, ಮತ್ತು ಓ ಟಿ ರಸ್ತೆಗಳ ಮುಖಾಂತರ ಸಾಗಿ, ಮರಳಿ ಎ ಎ ವೃತ್ತಕ್ಕೆ ಬಂದು ಮುಕ್ತಾಯಗೊಳಿಸಲಾಯಿತು.
special action force ಏನಿದು ವಿಶೇಷ ಕಾರ್ಯಪಡೆ
ರಾಜ್ಯದಲ್ಲಿ ಕೋಮು ಹಿಂಸಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ವಿಶೇಷ ಕಾರ್ಯಪಡೆಯನ್ನು (SAF) ಅಸ್ತಿತ್ವಕ್ಕೆ ತರಲಾಗಿದೆ.

ಇದರ ಕೇಂದ್ರ ಕಚೇರಿ ಮಂಗಳೂರಿನಲ್ಲಿ ಇದ್ದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೊಲೆಗಳು ಸೇರಿದಂತೆ ಪದೇ ಪದೇ ಸಂಭವಿಸುತ್ತಿರುವ ಹಿಂಸಾಚಾರದ ಘಟನೆಗಳು, ಈ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಲು ಪ್ರಮುಖ ಕಾರಣವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ SAF ಅನ್ನು ರಚನೆ ಮಾಡಿದ್ದು, ಇದು ಕೋಮು ಭಾಷಣ, ಕೋಮು ಸಂಘರ್ಷ ಸೃಷ್ಟಿಸುವವರನ್ನು ಹತ್ತಿಕ್ಕುವ ದಿಸೆಯಲ್ಲಿ ಕೆಲಸ ಮಾಡಲಿದೆ.
ಈ ಪಡೆ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದ್ದು,ಈ ರೂಟ್ ಮಾರ್ಚ್ನಲ್ಲಿ ವಿಶೇಷ ಕಾರ್ಯಪಡೆ ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
