ಎಲೆಕ್ಷನ್ ಮ್ಯಾಚ್ ಮಧ್ಯೆ ನಡೆಯುತ್ತಾ ರೌಡಿ ಕಾಳಗ!? ಶಿವಮೊಗ್ಗದ ಮೋಸ್ಟ್ ಎಕ್ಸ್ಕ್ಲ್ಯೂಸಿವ್ ಮಾಹಿತಿ ಜೆಪಿ ಬರೆಯುತ್ತಾರೆ
Rowdy fight going on in the middle of an election match!? Shimoga's most exclusive information jp writes
Shivamogga Mar 31, 2024 ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ತನ್ನದೆ ಕಾರಣಕ್ಕೆ ರಾಜಕಾರಣದಲ್ಲಿ ಬೆವರು ಹರಿಸುತ್ತಿದೆ. ಇದರ ನಡುವೆ ಪೊಲೀಸ್ ಇಲಾಖೆಗೆ ಚುನಾವಣೆ ಡ್ಯೂಟಿ ಜೊತೆಜೊತೆಗೆ ರೌಡಿ ನೆಟ್ವರ್ಕ್ಗಳನ್ನ ತಹಬದಿಗೆ ತರಬೇಕಾದ ಹೊಣೆಗಾರಿಕೆ ಅನಿವಾರ್ಯ ಕರ್ಮವಾಗಿ ಮಾರ್ಪಾಡಾಗಿದೆ. ಇದಕ್ಕೆ ಕಾರಣ ಶಿವಮೊಗ್ಗ ಲೋಕಸಭಾ ಚುನಾವಣೆಗೂ ಮುನ್ನ ಪಾತಕ ಲೋಕದಲ್ಲಿ ನೆತ್ತರು ಹರಿಯಲಿದೆಯಾ ಎನ್ನುವ ಖಚಿತ ಅನುಮಾನ. ಏಕೆಂದರೆ ದ್ವೇಷ ಪ್ರತಿಕಾರಕ್ಕಾಗಿ ಹೊಂಚು ಹಾಕುತ್ತಿರುವ ರೌಡಿಪಡೆ ಚುನಾವಣೆ ಸಂದರ್ಭವನ್ನೆ ಬಳಸಿಕೊಳ್ಳುವ ಸಾಧ್ಯತೆ ಇದೆ.
ಜೆಪಿ ಬರೆಯುತ್ತಾರೆ
ಸದ್ಯ ಹೋರಾಟದ ಕುದಿ ನೆಲದಲ್ಲಿ ಪಾತಕ ಲೋಕ ಹಗೆಯ ನೆತ್ತರು ಹರಿಸಲು ಸ್ಕೆಚ್ ಹಾಕುತ್ತಿದೆ. ತೆರೆಮರೆಯಲ್ಲಿ ಪ್ರತಿಕಾರಕ್ಕೆ ಮಹೂರ್ತದ ಫಿಕ್ಸಿಂಗ್ ನಡೆಯುತ್ತಿದೆ. ನೇರವಾಗಿ ಹೇಳಬೇಕೆಂದರೆ ಅಂಡರ್ವರ್ಲ್ಡ್ ರಸ್ತೆಗಳಲ್ಲಿ ಲೋಕಸಭೆ ಚುನಾವಣೆಗೂ ಮುನ್ನವೇ ರಕ್ತ ಹರಿದರೂ ಅಚ್ಚರಿಯಿಲ್ಲ ಎನ್ನುತ್ತಿದೆ ಸೋರ್ಸ್…
ವೈಯಕ್ತಿಕ ದ್ವೇಷಕ್ಕಾಗಿ ರೌಡಿ ಕೊಲೆಗಳು ನಡೆದರೆ ಅದು ಸಮಾಜದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಶಿವಮೊಗ್ಗದಲ್ಲಿ ಆಗುವ ಕೊಲೆಗಳಲ್ಲಿ ಬಹುತೇಕ ವೈಯಕ್ತಿಕ ದ್ವೇಷಕ್ಕಾಗಿ ನಡೆದಿದ್ದರೂ ಅದು ವ್ಯವಸ್ಥಿತವಾಗಿ ಮತೀಯ ಬಣ್ಣ ಪಡೆದುಕೊಳ್ಳುತ್ತದೆ. ಕೊಲೆಯ ಸುತ್ತ ಅನ್ಯಕೋಮಿನ ವ್ಯಕ್ತಿಗಳಿದ್ದರೇ ಪ್ರಕರಣ ಕೋಮುಬಣ್ಣ ಪಡೆದುಕೊಳ್ಳುತ್ತದೆ ಎನ್ನುವುದಕ್ಕೆ ಜಿಲ್ಲೆಯಲ್ಲಿ ದೊಡ್ಡ ಇತಿಹಾಸವೇ ಇದೆ.
ಅಂದೊಂದು ನಡೆದಿತ್ತು ಉದಾಹರಣೆ
ಈ ಹಿಂದೆ 2015 ರಲ್ಲಿ ಪಿಎಫ್ಐ ರಾಲಿ ಸಂದರ್ಭದಲ್ಲಿ ವಿಶ್ವನಾಥ್ ಶೆಟ್ಟಿ ಕೊಲೆಯಾಗಿತ್ತು.ಈ ಘಟನೆ ನಂತರ ಮಾರನೇ ದಿನವೇ ನಡೆದ ಮತ್ತೊಂದು ಕೊಲೆ ಕೋಮುಬಣ್ಣ ಪಡೆದುಕೊಂಡಿತ್ತು.. ಕುಟುಂಬದ ಆಸ್ತಿ ವಿಚಾರಕ್ಕೆ ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು ಸಂಬಂಧಿಯನ್ನೇ ಕೊಂದು ಕೋಮುಬಣ್ಣದ ಮಸಿ ಬಳಿದಿದ್ದರು. ಮೊದಲೇ ವಿಶ್ವನಾಥ್ ಶೆಟ್ಟಿ ಕೊಲೆಯಿಂದ ನಲುಗಿದ್ದ ಶಿವಮೊಗ್ಗದಲ್ಲಿ ಮಾರನೇ ದಿನವೇ ನಡೆದಿದ್ದ ವೈಯಕ್ತಿಕ ದ್ವೇಷದ ಕೊಲೆ ಕೋಮು ಬಣ್ಣ ಪಡೆದಾಗ ಶಿವಮೊಗ್ಗದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿತ್ತು.
ಮಾರ್ಕೆಟ್ ಲೋಕಿ
ಅಂತಹುದ್ದೇ ಘಟನೆಗಳು ಮತ್ತೆ ಜರಗುದಂತೆ ವಾಚ್ & ಗಾರ್ಡ್ ಮಾಡಬೇಕಾದ ಸನ್ನಿವೇಶ ಪೊಲೀಸರದ್ದಾಗಿದೆ. ಏಕೆಂದರೆ ಸದ್ಯ ಶಿವಮೊಗ್ಗದಲ್ಲಿ ಹಳೆ ದ್ವೇಷದ ರೌಡಿ ಚಟುವಟಿಕೆಗಳು ಆಕ್ಟೀವ್ ಆಗಿದೆ. ಮಾರ್ಕೇಟ್ ಗಿರಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದ ಮಾರ್ಕೇಟ್ ಲೋಕಿ ಹಾಗು ಈತನ ಬಲಗೈ ಬಂಟ ಸೈನಾದ ಲಕ್ಷ್ಮಣ ಜೈಲಿನಿಂದ ಹೊರಬಂದಿದ್ದಾರೆ.ಇವರಿಬ್ಬರ ಬಿಡುಗಡೆ ರೌಡಿ ಪಾಳೆಯದಲ್ಲಿ ಬೇರೆಯದ್ದೆ ಸಂದೇಶ ರವಾನೆ ಮಾಡಿದೆ.
ತನ್ನ ಸಹೋದರ ಮಾರ್ಕೇಟ್ ಗೋವಿಂದನನ್ನು ಕೊಲ್ಲಿಸಿದ್ದು ಖರಾಬ್ ಶಿವು ಎಂದು ಗೊತ್ತಿರುವ ಮಾರ್ಕೇಟ್ ಲೋಕಿ, ಮೌನಕ್ಕೆ ಶರಣಾಗುವಂತೆ ಕಾಣುತ್ತಿಲ್ಲ. ಖರಾಬ್ ಶಿವು ನನ್ನು ಎತ್ತುತ್ತೇನೆ ಎಂದು ಜೈಲಲ್ಲಿರುವಾಗಲೇ ಸದ್ದು ಮಾಡಿದ್ದ ಲೋಕಿ..ಈಗ ಸದ್ಯ ಬೇಟೆಯ ಜಾಡಿನಲ್ಲಿದ್ದಾನೆ. ಇವರಿಬ್ಬರನ್ನು ರಾಜಿಮಾಡಿಸುವ ಕೆಲಸ ಪೊಲೀಸ್ ವಲಯದಿಂದ ನಡೆದಿತ್ತಾದರೂ, ಲೋಕಿ ಅದಕ್ಕೆ ಸೊಪ್ಪು ಹಾಕಿಲ್ಲ ಎನ್ನುವುದು ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದೆ ಲೋಕಿ ತನ್ನ ಅಣ್ಣನ ಕೊಲೆ ಮಾಡಿದ ಶತ್ರುಗಳೊಂದಿಗೆ ರಾಜಿ ಮಾಡಿಕೊಂಡು ಹಣ ಪಡೆದಿದ್ದರೂ, ಅವರನ್ನು ಕೊಲೆ ಮಾಡಿದ್ದ. ತನ್ನ ಅಣ್ಣ ತುಳಸಿರಾಂ ಕೊಲೆಗೆ ಪ್ರತಿಕಾರವಾಗಿ ಮೋಟಿ ವೆಂಕಟೇಶ್ ಹಾಗು ಮಾರ್ಕೇಟ್ ಗಿರಿಯನ್ನು ಮುಗಿಸಿದ್ದ. ಈಗವನ ಕಣ್ಣು ಶತ್ರುವಾಗಿರುವ ಖರಾಬ್ ಶಿವು ಮೇಲೆ ಬಿದ್ದಿದೆ. ಹೀಗಾಗಿ ಲೋಕಿ ಮತ್ತು ಶಿವು ಇಬ್ಬರು ರೆಡ್ ಐ ನಲ್ಲಿದ್ದಾರೆ. ಇಲ್ಲಿ ಯಾರು ಯಾರನ್ನು ಬಿಡುವ ಪ್ರಶ್ನೆ ಇಲ್ಲ ಎನ್ನುತ್ತಿದೆ ಪಾತಕ ಲೋಕ.
ಕಾಡಾ ಕಾರ್ತಿ
ಇನ್ನೂ ತನ್ನ ಅಣ್ಣ ತುಳಸಿ ರಾಂ ನನ್ನು 2012 ರಲ್ಲಿ ಮೆಂಟಲ್ ಸೀನ ಅಂಡ್ ಗ್ಯಾಂಗ್ ಕೊಲೆ ಮಾಡಿದಾಗ...ಲೋಕಿಗೆ ನೆರಳಾಗಿ ನಿಂತವನೇ ಬಂಕ್ ಬಾಲು.ಮೆಂಟಲ್ ಸೀನಾ ಕೊಲೆಗೆ ಸ್ಕೆಚ್ ರೂಪಿಸಿದ್ದು ಹಾಗು ಆತನಿಗೆ ಹುಡುಗ್ರು ಪೂರೈಸಿದ್ದು ಇದೇ ಬಂಕ್ ಬಾಲು..ಅದೇ ರೀತಿ ಮೋಟಿ ವೆಂಕಟೇಶ್ ನ ಕೊಲೆ ಪ್ರಕರಣದಲ್ಲೂ ಬಂಕ್ ಬಾಲು ಪ್ರಮುಖ ಆರೋಪಿ.ಒಂದು ರೀತಿಯಲ್ಲಿ ತುಳಸಿಂ ರಾಂ ನ ಹತ್ಯೆಗೆ ಪ್ರತಿಕಾರಕ್ಕಾಗಿ ಹೊಂಚುಹಾಕ್ತಿದ್ದ ಲೋಕಿಗೆ ಎಲ್ಲಾ ರೀತಿಯಲ್ಲೂ ರೌಡಿಸಂ ಪಠ್ಯವನ್ನು ಹೇಳಿಕೊಟ್ಟಿದ್ದೇ ಬಂಕ್ ಬಾಲು.
ಟಾರ್ಗೆಟ್ ಯಾರು?
ಆದರೆ ಆನಂತರದಲ್ಲಿ ಬಂಕ್ ಬಾಲು ಕೊಲೆಯಾದ. ಸೀಗೆಹಟ್ಟಿಯ ಅಂಬು ಅಲಿಯಾಸ್ ಅನಿಲ್,ದರ್ಶನ್,ಪ್ರವೀಣ್,ತಮಿಳ್ ರಮೇಶ್ ಪ್ರಕರಣದ ಆರೋಪಿಗಳಾಗಿದ್ದರು. ಈ ಪೈಕಿ ರಮೇಶ್ ಹೊರತು ಪಡಿಸಿ ಉಳಿದವರು ಜೈಲಿನಿಂದ ರಿಲೀಸ್ ಆಗಿದ್ದಾರೆ. ಇನ್ನೂ ಬಂಕ್ ಬಾಲುನನ್ನ ಕೊಲೆಗೆ ಹೆಬ್ಬೆಟ್ಟು ಮಂಜ ಹಂದಿ ಅಣ್ಣಿಯ ಮೂಲಕ ಬಾಲು ಕೊಲೆಗೆ ರೂಟ್ ಕ್ಲಿಯರ್ ಮಾಡಿಸಿದ್ದ ಎನ್ನಲಾಗುತ್ತದೆ. ಅದೇ ಕಾರಣಕ್ಕೆ ಬಂಕ್ ಬಾಲು ಕೊಲೆಗೆ ಪ್ರತಿಕಾರವಾಗಿ ಆತನ ಸಹಚರರಾದ ಕಾಡಾ ಕಾರ್ತಿ ಅಂಡ್ ಟೀಂ ಮೊದಲು ಸ್ಕೆಚ್ ಹಾಕಿ ಕೊಲೆ ಮಾಡಿದ್ದು ಹಂದಿ ಅಣ್ಣಿಯನ್ನ. ತದನಂತರ ತನ್ನ ನಾಲ್ಕು ಸಹಚರರನ್ನು ಕಳೆದುಕೊಂಡ ಹೆಬ್ಬೆಟ್ಟು ಮಂಜ ಹಂದಿ ಅಣ್ಣಿ ಕೊಲೆಗೆ ಪ್ರತಿಕಾರವಾಗಿ ಕಾಡಾ ಕಾರ್ತಿಯ ತಂಡದಲ್ಲಿ ಓರ್ವನನ್ನು ಕೊಲೆ ಮಾಡಿಸಿದ್ದ ಎನ್ನುತ್ತದೆ ಪೊಲೀಸ್ ಫೈಲ್.
ಹೆಬ್ಬೆಟ್ಟು ಮಂಜ
ಈ ಹಿನ್ನೆಲೆಯಲ್ಲಿ ಒಂದೆಡೆ ಹೆಬ್ಬೆಟ್ಟು ಮಂಜನ ಸಹಚರರ ಟೀಂ ಮತ್ತೊಂದೆಡೆ ಕಾಡಾ ಕಾರ್ತಿ ಮತ್ತು ಮಾರ್ಕೇಟ್ ಲೋಕಿ ಟಿಂ ಎದುರಾಳಿಗಳ ಬೇಟೆಗೆ ಹೊಂಚು ಹಾಕುತ್ತಿದೆ. ಕಾಡಾ ಕಾರ್ತಿ ಅಂಡ್ ಟೀಂ ನಲ್ಲಿ ಟಾರ್ಗೇಟ್ ಅಂಬು ಪ್ರವೀಣ್, ರಮೇಶ್ ಇದ್ದಾರೆ. ಅತ್ತ ಲೋಕಿ ಶಿವು ಪರಸ್ಪರ ಟಾರ್ಗೆಟ್ನಲ್ಲಿದ್ದರೇ, ಇತ್ತ ಕಾರ್ತಿ ಮತ್ತವನ ಆಪೋಸಿಟ್ ಟೀಂ ನಡುವೆ ಅಂಡರ್ ವರ್ಲ್ಡ್ ಅಪ್ರೋಚ್ ನಡೆಯುತ್ತಿದೆ.
ಇದರ ನಡುವೆ ಇನ್ನೊಂದೆಡೆ ರೌಡಿ ಶ್ಯಾಡೋ ಮತ್ತು ಕಡ್ಡಿ ಮಧು ನಡುವಿನ ಹಳೆ ವೈಷಮ್ಯ ಮತ್ತೆ ಸದ್ದು ಮಾಡಿದೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಕಡ್ಡಿ ಮಧು ವಿರುದ್ಧ ಆತನ ಮನೆ ಸಮೀಪ ಮಚ್ಚು ಲಾಂಗ್ ಝಳಪಸಿತ್ತು ಶ್ಯಾಡೋ ಟೀಂ. ಇವರನ್ನ ಹುಡುಕುತ್ತಿರುವ ಪೊಲೀಸರಿಗೆ ಆರೋಪಿ ಗ್ಯಾಂಗ್ ಊರೂರು ಅಲೆಸುತ್ತಿದೆ. ಎಲೆಕ್ಷನ್ ಡ್ಯೂಟಿ ನಡುವೆ ಪೊಲೀಸರಿಗೆ ಇವರ ಬೆನ್ನತ್ತುವುದು ಕಷ್ಟವಾಗುತ್ತಿದೆ.
ಶಿವಮೊಗ್ಗ ಕಣೋ ಇದು
ಹೆಬ್ಬೆಟ್ಟು ಮಂಜ ಮತ್ತು ನವುಲೆ ಆನಂದ, ಕಾರ್ತಿ ಮತ್ತು ರಮೇಶ್ ಗ್ಯಾಂಗ್, ಲೋಕಿ ಮತ್ತು ಕರಾಬ್ ಟೀಂ, ಕಡ್ಡಿ ಹಾಗೂ ಶ್ಯಾಡೋ ನಡುವಿನ ವೈಯಕ್ತಿಕ ದ್ವೇಷಗಳು ಹೇಗೂ ಸಹ ರಿಯಾಲಿಟಿಗೆ ಇಳಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಶಿವಮೊಗ್ಗದಲ್ಲಿ ಹೆಸರು ಮಾಡಬೇಕು, ಮಾಫಿಯಾದ ಕಂಟ್ರೋಲ್ ತೆಗೆದುಕೊಳ್ಳಬೇಕು ಎನ್ನುವ ಪಾತಕ ಲೋಕದ ಬ್ಯಾಟ್ಸ್ಮನ್ಗಳು ಅದಕ್ಕಾಗಿ ಸ್ಕೆಚ್ ರೂಪಿಸುತ್ತಲೇ ಇರುತ್ತಾರೆ. ಅದನ್ನ ಪೊಲೀಸರು ತಡೆಯುತ್ತಲೇ ಇರಬೇಕಾಗುತ್ತದೆ. ಆದರೆ ಎಲೆಕ್ಷನ್ ಮ್ಯಾಚ್ ನಡುವೆ ಪ್ಯಾರಲಲ್ ಆಗಿ ರೌಡಿಸಂನ ಅಂದರ್ ಬಾಹರ್ ನಡೆಯುತ್ತಿರೋದು ಇಲಾಖೆಗೆ ಮೇನ್ ತಲೆನೋವು..
ಮತ್ತೊಂದೆಡೆ ಮುಸ್ಲಿಂ ಪಾತಕ ಲೋಕದಲ್ಲಿ ಕೂಡ ದ್ವೇಷ ಪ್ರತಿಕಾರಕ್ಕಾಗಿ ರಕ್ತ ಹರಿಸಲು ತೆರೆಮರೆಯಲ್ಲಿ ಪ್ಲಾನ್ ಗಳು ನಡೆಯುತ್ತಿದೆ. ಇವರನ್ನ ಓಸಿ ಮಾಫಿಯಾ ಕೈಹಿಡಿದು ಮುನ್ನೆಡೆಸುತ್ತಿದೆ. ಅದಕ್ಕೆ ತಕ್ಕ ಸಾಕ್ಷ್ಯಗಳು ಪೊಲೀಸ್ ಇಲಾಖೆಯಲ್ಲಿದೆ. ಒಟ್ಟಾರೆ. ಶಿವಮೊಗ್ಗ ತಣ್ಣಗಿಲ್ಲ. ಈ ನಿಟ್ಟಿನಲ್ಲಿ ಌಂಟಿ ರೌಡಿ ಸ್ಕ್ವಾಡ್ ಮತ್ತಷ್ಟು ಆಕ್ಟಿವ್ ಆಗಬೇಕಿದೆ.