shivamogga Mar 17, 2024 ನಾಳೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪನವರ ಬಂಡಾಯದ ಹಿನ್ನೆಲೆಯಲ್ಲಿ ನಾಳೆಯೊಳಗೆ ಬಂಡಾಯ ಶಮನ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
ಇವತ್ತು ಬೆಳಗ್ಗೆಯಿಂದಲೂ ಈಶ್ವರಪ್ಪನವರ ನಿವಾಸಕ್ಕೆ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ಭೇಟಿ ನೀಡುತ್ತಿದ್ದಾರೆ. ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು ಇವತ್ತು ಬೆಳಗ್ಗೆ ಈಶ್ವರಪ್ಪನವರ ನಿವಾಸಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ. ಅದರ ಬೆನ್ನಲ್ಲೆ ಕೆಎಸ್ ಈಶ್ವರಪ್ಪನವರು ಯಾರೇ ಹೇಳಿದರೂ ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದಿದ್ದಾರೆ.
ಇನ್ನೊಂದೆಡೆ ಸುದ್ದಿಗೋಷ್ಟಿ ನಡೆಸಿದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು ನಾಳಿನ ಸಮಾವೇಶದ ವೇದಿಕೆಯಲ್ಲಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ,ಕೆಎಸ್ ಈಶ್ವರಪ್ಪ ,ಆರಗ ಜ್ಞಾನೇಂದ್ರ ವೇದಿಕೆ ಮೇಲೆ ಇರುತ್ತಾರೆ ಎಂದಿದ್ದಾರೆ. ಈ ಸಂಬಂಧ ಇವತ್ತು ಬೆಳಗ್ಗೆ ಈಶ್ವರಪ್ಪ ನವರನ್ನ ಕರೆದು ಬಂದಿದ್ದೇವೆ. ಕೆಎಸ್ ಈಶ್ವರಪ್ಪ ನವರು ಸಹ ಕಾರ್ಯಕ್ರಮಕ್ಕೆ ಭಾಗವಹಿಸುತ್ತಾರೆ ಎಂದಿದ್ದಾರೆ. ಅಲ್ಲದೆ ಈಶ್ವರಪ್ಪನವರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದಿದ್ದಾರೆ.
ಇದರ ಬೆನ್ನಲ್ಲೆ ಕೆಎಸ್ ಈಶ್ವರಪ್ಪನವರ ನಿವಾಸಕ್ಕೆ ಬಿಜೆಪಿಯ ಕೇಂದ್ರ ನಾಯಕ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ (Radha Mohandas Agarwal) ಹಾಗೂ ಅವರ ತಂಡ ಭೇಟಿಕೊಟ್ಟಿದೆ. ಮತ್ತು ಈಶ್ವರಪ್ಪನವರ ಜೊತೆಗೆ ಮಾತುಕತೆ ನಡೆಸುತ್ತಿದೆ. ಈಶ್ವರಪ್ಪನವರು ಬಂಡಾಯ ಸಾರುವುದಕ್ಕೂ ಮೊದಲು ರಾಧಾ ಮೋಹನ್ ದಾಸ್ ಅಗರ್ ವಾಲ್ರವರು ತಮಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ತಿಳಿಸಿದ್ದಾರೆ. ಆದರೆ ನಾನು ಹೋಗುವುದಿಲ್ಲ ಯಾರನ್ನೂ ಭೇಟಿಯಾಗುವುದಿಲ್ಲ ಎಂದಿದ್ದರು.
ಇದೀಗ ಅವರೇ ಈಶ್ವರಪ್ಪನವರ ನಿವಾಸಕ್ಕೆ ಆಗಮಿಸಿದ್ದಾರೆ. ಕೇಂದ್ರದ ನಾಯಕರಾಗಿರುವ ರಾಧಾ ಮೋಹನ್ ದಾಸ್ ಅಗರ್ವಾಲ್ ರವರು ಕೇಂದ್ರದ ನಾಯಕರ ತೀರ್ಮಾನಗಳನ್ನು ಈಶ್ವರಪ್ಪನವರಿಗೆ ತಿಳಿಸುವ ಸಾಧ್ಯತೆ ಇದ್ದು, ಅವರ ಮನವೊಲಿಕೆಗೆ ಮುಂದಾಗಿದ್ದಾರೆ. ಇವರ ಜೊತೆ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್.ಹಾಗೂ ಎಂಎಲ್ ಸಿ ಡಿಎಸ್ ಅರುಣ್ ಮತ್ತು ಇತರರು ಭೇಟಿಕೊಟ್ಟಿದ್ದಾರೆ.
ಶಿವಮೊಗ್ಗ ನಗರದ ಗುಂಡಪ್ಪ ಶೆಡ್ನಲ್ಲಿರುವ ಕೆಎಸ್ ಈಶ್ವರಪ್ಪನವರ ನಿವಾಸಕ್ಕೆ ಭೇಟಿಕೊಟ್ಟಿರುವ ನಾಯಕರು ಅವರ ಜೊತೆಗೆ ಮಾತುಕತೆ ನಡೆಸ್ತಿದ್ದಾರೆ. ಮಾತುಕತೆಯ ಫಲಶೃತಿ ಇನ್ನಷ್ಟೆ ಗೊತ್ತಾಗಬೇಕಿದೆ. ಆದರೆ ಇದರ ನಡುವೆ ರಾಧಾ ಮೋಹನ್ ದಾಸ್ ಅಗರವಾಲ್ ಸಭೆ ನಡುವೆಯೇ ಕೆಎಸ್ ಈಶ್ವರಪ್ಪನವರು ಈಗ ಬರುತ್ತೇನೆ ಎಂದು ಮನೆಯಿಂದ ಹೊರಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.