ಊರ ಮಂದಿ ಎದುರೇ ವಿಷ ಕುಡಿದ ಮಹಿಳೆ! ರಕ್ಷಿಸುವುದು ಬಿಟ್ಟು ಕುಡಿ..ಕುಡಿ ಎಂದನಾ ಪತಿ!? ಏನಿದು ಭದ್ರಾವತಿ ವೈರಲ್ ವಿಡಿಯೋ?

Malenadu Today

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS

ಆಸ್ತಿಗಾಗಿ ಹೊಡೆದಾಟ, ಬೇಲಿ ಬದುಗಾಗಿ ಹೊಡೆದಾಟ ಇವೆಲ್ಲಾ ಮಲೆನಾಡಲ್ಲಿ ತೀರಾ ಸಾಮಾನ್ಯ. ಮಳೆಗಾಲ ಆರಂಭವಾದ ಹೊತ್ತಲ್ಲಿ, ಬೇಲಿ ಕಟ್ಟುವ ಸಮಯದಲ್ಲಿ,, ಅಡಿಕೆ ಕೊಯ್ಲು ನಡೆಯುವಾಗ, ಅಣ್ತಮ್ಮಂದಿರು, ಅಪ್ಪಮಕ್ಕಳು, ದಾಯಾದಿಗಳು, ಅಷ್ಟೆ ಏಕೆ ಅಕ್ಕಪಕ್ಕದವರು, ಸಂಬಂಧಿಕರು ಹೊಡೆದಾಡಿಕೊಳ್ಳುವ  ಬಗ್ಗೆ ರಾಶಿಗಟ್ಟಲೇ ಎಫ್​ಐಆರ್​ಗಳು ದಾಖಲಾಗುತ್ತದೆ. ಆದರೆ ಭದ್ರಾವತಿಯಲ್ಲೊಂದು ಇದೇ ರೀತಿಯ ಪ್ರಕರಣ ತೀರಾ ವಿಪರೀತ ಎನ್ನುವಷ್ಟರ ಮಟ್ಟಕ್ಕೆ ಹೋಗಿದೆ. ಅಲ್ಲದೆ ಘಟನೆಯ ದೃಶ್ಯ ನೋಡಿದವರು, ತೀರಾ ಹೀಗೆಲ್ಲಾ ಮಾಡುತ್ತಾರಾ? ಎಂದು ಆಶ್ಚರ್ಯ ಪಡ್ತಿದ್ದಾರೆ. 

ಟಿವಿಗಳಲ್ಲಿ ಬರುವ ಕಾರ್ಯಕ್ರಮಗಳು ಮೊದಲೇ ಸ್ಕ್ರಿಪ್ಟಡ್ ಆಗಿರುವಂತೆ ಇಲ್ಲೊಂದು ಘಟನೆ ನಡೆದಿದ್ದು, ಅದರ ದೃಶ್ಯಗಳು ಹೊರಗಡೆ ಹರಿದಾಡುತ್ತಿದೆ. ಭದ್ರಾವತಿಯ ನಾಗತಿಬೆಳಗಲಿನ ವಿಡಿಯೋ ಇದಾಗಿದೆ.  ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ವಿಷ ಕುಡಿಯುವ ದೃಶ್ಯ ಸೆರೆಯಾಗಿದೆ. ವಿಷ ಕುಡಿಯುತ್ತೇನೆ ಎಂದು ಔಷದಿ ಬಾಟಲಿ ಹಿಡಿದು ಬರುವ ಮಹಿಳೆಗೆ ಆಕೆಯ ಗಂಡನೇ ವಿಷ ಕುಡಿ ಕುಡಿ ಎನ್ನುತ್ತಾನೆ. ಮಗನೇದುರೇ ಆಕೆ ವಿಷ ಕುಡಿಯುತ್ತಾಳೆ. ನೀರು ನೀರು ಎಂದಾಗ, ಇರು ತಾಳು ಇರು ತಾಳು ಎಂದು ಗಂಡ ಹೇಳುತ್ತಾನೆ. ಮಗ ತಪ್ಪಿಸಬೇಡ..ತಪ್ಪಿಸಬೇಡ ಎಂದು ಹೇಳ್ತಿಯಲ್ಲ,  ಅವಳು ಸಾಯಿಲಿ ಅಂತಿಯೇನು ಎಂದು ಕೇಳುತ್ತಾನೆ. 

ಅಯ್ಯೋ ದೇವರೇ ಏನಿದೆಲ್ಲಾ ಎಂದು ನೋಡಿದರೆ, ಎಲ್ಲವೂ ಆಸ್ತಿಗಾಗಿ, ಫಲಬಿಟ್ಟ ಅಡಿಕೆಗಾಗಿ ಎಂಬುದು ಗೊತ್ತಾಗಿದೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಎಫ್ಐಆರ್​ನ ಪ್ರಕಾರ, ಇದೊಂದು ಜಮೀನಿನ ವಿಚಾರವಾಗಿ ನಡೆದ ಕೌಟುಂಬಿಕ ಕಲಹ ಎಂದು ತಿಳಿದುಬಂದಿದೆ. 

ತನ್ನ ಪಾಲಿನ ಜಮೀನಿನಲ್ಲಿ  ದೂರುದಾರ ಚಂದ್ರಮ್ಮ ಅಡಿಕೆ ಕೊಯ್ಲು ಮಾಡಲು ಬಂದ ವೇಳೆ ಗಿರೀಶ್ ಪಾಟೀಲ್​ ಎಂಬವರು ಮತ್ತು ಅವರ ಕುಟುಂಬ ವ್ಯಾಜ್ಯ ತೆಗೆದಿದೆ. ಈ ವೇಳೆ ಗಿರೀಶ್​ರ ಪತ್ನಿ ಮಧುಮಾಲಾ ವಿಷ ಕುಡಿದಿದ್ದಾಳೆ. ಸುಮಾರು ಹತ್ತಿಪ್ಪತ್ತು ಮಂದಿ ಎದುರೇ ಆಕೆ ವಿಷ ಕುಡಿದರು ಆಕೆಯನ್ನು ರಕ್ಷಿಸಲು ಯಾರು ತೆರಳಲಿಲ್ಲ. ಮೊದಲಾಗಿ ಪತಿಯೇ ಕುಡಿ ಕುಡಿ ವಿಷ ಕುಡಿ ಎನ್ನುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ದೂರುದಾರರು ಸ್ತಳಕ್ಕೆ ಖಾಸಗಿ ಕ್ಯಾಮೆರಾಮೆನ್​ಗಳನ್ನು ಕರೆದೊಯ್ದಿದ್ದರು. ಇಡೀ ಪ್ರಕರಣವನ್ನು ಛಾಯಾಗ್ರಾಹಕ ಚಿತ್ರೀಕರಿಸಿದ್ದು, ಅವರ ಮೇಲೆಯು ಹಲ್ಲೆಯಾಗಿದೆ. ಈ ಸಂಬಂಧ ಕಳೆದ ಏಳರಂದು ಚಂದ್ರಮ್ಮ  ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ. ಇದೆಲ್ಲದರ ನಡುವೆ ಆಸ್ತಿ ವಿಚಾರದಲ್ಲಿ ಮಹಿಳೆಯೊಬ್ಬಳು ವಿಷ ಕುಡಿಯುತ್ತಿದ್ದರೂ ಸಹ ಆಕೆಯನ್ನು ರಕ್ಷಣೆ ಮಾಡದೇ, ವಿಷ ಕುಡಿ ಕುಡಿ ಎಂದು ಪ್ರೇರಪಿಸ್ತಿರುವ ದೃಶ್ಯ ಹೊರಬಿದ್ದಿದ್ದು, ಆಶ್ಚರ್ಯ ಮೂಡಿಸುತ್ತಿದೆ. 

ಈ ಮಧ್ಯೆ ಪತ್ನಿಗೆ ವಿಷ ಕುಡಿಯುವಂತೆ ಮಾಡಿ ಏನು ಸಾಧನೆ ಮಾಡಲು ಹೊರಟಿದ್ದರು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಸದ್ಯ ವಿಷ ಕುಡಿದ ಮಹಿಳೆಯು ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯಿದೆ. ಇಡೀ ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯ ಸ್ಟೇಟ್ಮೆಂಟ್​ ಪಡೆಯಲು ಭದ್ರಾವತಿ ಗ್ರಾಮಾಂತರ ಪೊಲೀಸರು ತೆರಳಿದ್ದಾರೆ.

ಇನ್ನೊಂದೆಡೆ ಚಂದ್ರಮ್ಮ ನೀಡಿದ ದೂರಿನನ್ವಯ  ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಇಡೀ ವಿಚಾರವನ್ನು ಗಂಬೀರವಾಗಿ ಪರಿಗಣಿಸಿದ್ದಾರೆ. ಸಿವಿಲ್ ವಿಚಾರದಲ್ಲಿ ಆಸ್ತಿ ವಿಚಾರ ಬಗೆಹರಿಸಿಕೊಳ್ಳಬೇಕಾದ ಸಂದರ್ಭದ ಹೊರತಾಗಿ, ಪತ್ನಿಗೆ ವಿಷ ಕುಡಿಯುವಂತೆ ಪ್ರೇರಪಿಸಿದ ಹಾಗೂ ಛಾಯಗ್ರಾಹಕರ ಹಲ್ಲೆ ಮಾಡಿದ ಘಟನೆ ಸಂಬಂಧ : IPC 1860 (U/s-447,341,504,109,323,506,34) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.  

 


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Share This Article