ಶಿವಮೊಗ್ಗ-ಯಶವಂತಪುರ ಟ್ರೈನ್ನಲ್ಲಿ ಅನ್ನಪೂರ್ಣ ಸಾವಿನ ಸಂಬಂಧ ತನಿಖೆಗೆ ವಿಶೇಷ ತಂಡ!
Special team to probe Annapurna's death on Shivamogga-Yeshwantpur train
Shivamogga Feb 21, 2024 ಶಿವಮೊಗ್ಗ- ಯಶವಂತಪುರ ರೈಲಿನ ಮಹಿಳಾ ಮೀಸಲು ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಸಾವಿನ ಪ್ರಕರಣ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪವಾಗಿದೆ. ಈ ಬಗ್ಗೆ ಮಲೆನಾಡು ಟುಡೆ ನಿರಂತರವಾಗಿ ವರದಿ ಮಾಡಿಕೊಂಡು ಬಂದಿತ್ತು.
ಸದ್ಯ ಪ್ರಕರಣದ ಸಂಬಂಧ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಭಾರತಿ ಶೆಟ್ಟಿ ಸರ್ಕಾರನ್ನು ತರಾಟೆಗೆ ತೆಗೆದುಕೊಂಡರು. ಮಹಿಳೆಯ ಮೃತದೇಹ ತುಮಕೂರು ಸಮೀಪ ಪತ್ತೆ ಆಗಿದೆ. ಚಿನ್ನಾಭರಣ ದೋಚಿ, ಮಹಿಳೆಯ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದು ಹಲವು ದಿನಗಳಾದರೂ ಈ ಬಗ್ಗೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಗೃಹಸಚಿವ ಡಾ|ಜಿ.ಪರಮೇಶ್ವರ್, ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಜತೆಗೆ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ಸಂಬಂಧ ತನಿಖೆ ಕೂಡ ಆರಂಭವಾಗಿದೆ ಎಂದರು. ಈಗಾಗಲೇ ಎಸ್.ಎಫ್.ಎಲ್ ವರದಿಗೆ ಕಳುಹಿಸಲಾಗಿದೆ. ತನಿಖಾ ವರದಿ ಬಂದ ಮೇಲೆ ತಿಳಿಸುವುದಾಗಿ ಹೇಳಿದರು.
ಸರ್ಕಾರದ ಉತ್ತರಕ್ಕೆ ತೃಪ್ತರಾಗದ ಭಾರತಿ ಶೆಟ್ಟಿ ಈಗಾಗಲೇ ಈ ಪ್ರಕರಣ ನಡೆದು 22 ದಿನಗಳಾಗಿವೆ. ಇನ್ನೂ ಎಷ್ಟು ದಿನ ಬೇಕು. ಈ ಸರ್ಕಾರ ಪ್ರಕರಣದ ಎಬಿಸಿಡಿ ಕೂಡ ಗೊತ್ತಿಲ್ಲ ಎಂದರೆ ಹೇಗೆ ಎಂದು ವಾಗ್ದಾಳಿ ನಡೆಸಿದರು. ಹತ್ಯೆಯ ತನಿಖೆ ನಡೆಸಲು ಸಮಯಬೇಕಲ್ಲವೇ. ತನಿಖಾ ವರದಿ ಬಾರದೆ ಆ ಬಗ್ಗೆ ಏನೂ ಹೇಳಲಾಗದು ಎಂದು ಪರಮೇಶ್ವರ್ ಸಮಜಾಯಿಷಿ ನೀಡಿದರು.