indian railway : ಶಿವಮೊಗ್ಗ : ಭದ್ರಾವತಿಯಿಂದ ಚನ್ನಗಿರಿ ಮಾರ್ಗವಾಗಿ ಚಿಕ್ಕಜಾಜೂರಿಗೆ ಸಂಪರ್ಕ ಕಲ್ಪಿಸುವ ಹೊಸ ರೈಲು ಮಾರ್ಗದ ಅಂತಿಮ ಸಮೀಕ್ಷಾ ವರದಿ ಸಲ್ಲಿಕೆಗೆ ರೈಲ್ವೆ ಮಂಡಳಿ ಬುಧವಾರ ಒಪ್ಪಿಗೆ ನೀಡಿದೆ. ಅದಕ್ಕಾಗಿ ₹ 1.82 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಶಿವಮೊಗ್ಗ– ಭದ್ರಾವತಿ, ಚನ್ನಗಿರಿ, ಚಿಕ್ಕಜಾಜೂರು, ಚಿತ್ರದುರ್ಗ, ಬಳ್ಳಾರಿ ಗುಂತಕಲ್ ಮಾರ್ಗವಾಗಿ ಮಲೆನಾಡು, ಬಯಲು ಸೀಮೆ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ನಡುವೆ ನೇರ ಸಂಪರ್ಕವನ್ನು ಈ ರೈಲು ಮಾರ್ಗ ಬೆಸೆಯಲಿದೆ. ಭದ್ರಾವತಿ– ಚಿಕ್ಕಜಾಜೂರು ನಡುವಿನ 73 ಕಿ.ಮೀ ಅಂತರದ ಈ ಮಾರ್ಗ ಪೂರ್ಣಗೊಂಡಲ್ಲಿ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಿಂದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಕಬ್ಬಿಣದ ಅದಿರು ಪೂರೈಸಲು ನೆರವಾಗುವ ಜೊತೆಗೆ ವಿಐಎಸ್ಎಲ್ ಕಾರ್ಖಾನೆಯ ಪುನಶ್ಚೇತನಕ್ಕೂ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ. ಸಮೀಕ್ಷೆ ಕಾರ್ಯ ಮುಗಿಯುತ್ತಿದ್ದಂತೆಯೇ ರೈಲು ಮಾರ್ಗ ನಿರ್ಮಾಣಕ್ಕೆ ಹಣ ಮೀಸಲಿರಿಸಿ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.