elephant in kundapura ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ರೆಡಿಯೋ ಕಾಲರ್ ಆನೆ ಇದೀಗ ಉಡುಪಿ ಜಿಲ್ಲೆ ತೆರಳಿದೆ. ಶಿವಮೊಗ್ಗ ತೀರ್ಥಹಳ್ಳಿ ಕುಂದಾಪುರ ಮಾರ್ಗದ ಬಸ್ ರೂಟ್ನಲ್ಲಿಯೇ ಕಾಡಾನೆ ನೀಟಾಗಿ ಘಾಟಿ ಇಳಿದು ಹೊಸಂಗಡಿಗೆ ತೆರಳಿದೆ. ನಿನ್ನೆ ಸಂಜೆ ಲಭ್ಯವಾದ ಮಾಹಿತಿ ಪ್ರಕಾರ, ಸದ್ಯ ಕಾಡಾನೆ ಹೊಸಂಗಡಿ ಕಾಡಿನಲ್ಲಿದೆ. ಕಾಡಾನೆ ಕಾಣಿಸಿರುವ ಹಿನ್ನೆಲೆಯಲ್ಲಿ ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಿನ್ನೆಯಿಡಿ ಆನೆ ಓಡಾಡಿದ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

elephant in kundapura
ಮಂಗಳವಾರ ಘಾಟಿ ಇಳಿದ ಕಾಡಾನೆ ಆನಂತರ ಹೊಸಂಗಡಿಯ ಕೆಲವು ಮನೆಗಳ ಬಳಿ ಕಾಣಿಸಿದೆ. ನಿನ್ನೆ ಬುಧವಾರ ಮುಂಜಾನೆ ಸಿದ್ದಾಪುರ-ಹೊಸಂಗಡಿ ಮಾರ್ಗ ಮಧ್ಯೆ ಹೆನ್ನಾಬೈಲು ಎಂಬಲ್ಲಿ ಕಾಡು ಪ್ರವೇಶ ಮಾಡಿದ ಆನೆಯ ಓಡಾಟವನ್ನು ಅದಕ್ಕೆ ಅಳವಡಿಸಿರುವ ರೆಡಿಯೋ ಕಾಲರ್ ಮೂಲಕ ತಿಳಿಯಲಾಗುತ್ತಿದೆ. ಇನ್ನೂ ಚಿಕ್ಕಮಗಳೂರಿನಿಂದ ಟಾಸ್ಕ್ಫೋರ್ಸ್ (ETF) ತಂಡ, ಅರಣ್ಯ ಇಲಾಖೆ, ಸಿದ್ದಾಪುರ ವನ್ಯಜೀವಿ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸರ ತಂಡ ಆನೆಯನ್ನು ದಟ್ಟಡವಿಗೆ ಒಡಿಸುವ ಪ್ರಯತ್ನದಲ್ಲಿದ್ದಾರೆ. ಈ ನಡುವೆ ನಿನ್ನೆ ಬುಧವಾರ ಸಂಜೆ ಹೊತ್ತಿಗೆ ಕಾಡಾನೆಯು ಸಿದ್ದಾಪುರ ಪೇಟೆಯ ಸಮೀಪ ಕಾಣಿಸಿದ್ದಾಗಿ ವರದಿಯಾಗಿದೆ ಆನಂತರ ಕಮಲಶಿಲೆ ಭಾಗದಲ್ಲಿ ಆನೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ತದನಂತರದ ವರದಿ ಲಭ್ಯವಾಗಬೇಕಿದೆ. ಒಟ್ಟಾರೆ, ಭದ್ರಾ ಅಭಯಾರಣ್ಯದಲ್ಲಿ ಬಿಟ್ಟಿದ್ದ ಈ ಆನೆ ಶಿವಮೊಗ್ಗ , ತೀರ್ಥಹಳ್ಳಿ, ಮಾಸ್ತಿಕಟ್ಟೆ, ಬಾಳೆಬರೆ , ಹೊಸಂಗಡಿ, ಸಿದ್ದಾಪುರ ಕಮಲಶಿಲೆ ಅಂತಾ ಬಸ್ ಹೋದಂತೆ ಹೋಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸುತ್ತಿದೆ. ಆದರೆ ಅಧಿಕಾರಿಗಳಿಗೆ ಆನೆಯನ್ನು ಏನು ಮಾಡಬೇಕು ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಮೂಲಗಳ ಪ್ರಕಾರ, ಮೇಲಿಂದ ರೆಡಿಯೋ ಕಾಲರ್ ಆನೆಯ ಸಂಬಂಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಸ್ಪಷ್ಟವಾಗಿಲ್ಲ ಎನ್ನುತ್ತದೆ ಅರಣ್ಯ ಇಲಾಖೆಯ ಮೂಲಗಳು. ಹಾಗಾಗಿ ಜನರನ್ನೆ ನಿಯಂತ್ರಿಸುವ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ.
