team india captain : ನೆನಪಿಡಿ…ಈ ಜಗದಲ್ಲಿ ಎಲ್ಲರೂ ಬಂದು ಹೋಗುವ ಅತಿಥಿಗಳೇ.. ಯಾರು.. ಯಾವುದು ಕೂಡ ಶಾಶ್ವತ ಅಲ್ಲ. ಎಲ್ಲರು ಅವರವರ ಸಮಯ ಬಂದಾಗ ನಿರ್ಗಮಿಸಬೇಕು.. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು.. ಇದಕ್ಕೆ ಕ್ರಿಕೆಟ್ನಲ್ಲಿ ಗವಾಸ್ಕರ್ ಹೊರತಲ್ಲ.. ಸಚಿನ್ ಹೊರತಲ್ಲ.. ದ್ರಾವಿಡ್ ಹೊರತಲ್ಲ.. ವಿರಾಟ್ ಕೊಹ್ಲಿಯೂ ಕೂಡ ಹೊರತಲ್ಲ.. ನೆನಪಿರಬೇಕು ಅಲ್ವಾ.. ಸುಮಾರು 12 ವರ್ಷಗಳ ಹಿಂದೆ 24 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ ಸಚಿನ್ ತೆಂಡುಲ್ಕರ್, ಹಾಗೆ, ಗಂಗೂಲಿ, ಕುಂಬ್ಳೆ, ದ್ರಾವಿಡ್, ವಿವಿಎಸ್, ಸೆಹ್ವಾಗ್, ಗಂಭೀರ್ ಸೇರಿದಂತೆ ಹಲವು ಕ್ರಿಕೆಟಿಗರು ಕೂಡ ಒಲ್ಲದ ಮನಸ್ಸಿನಿಂದಲೇ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದು..ಯಾಕಂದ್ರೆ ಈ ಕ್ರಿಕೆಟ್ ಆಟವೇ ಅಂತಹುದ್ದು.. ಅದೊಂದು ಥರ ಮೋಹದ ಬಲೆ. ಎಷ್ಟು ಆಡಿದ್ರು ಮತ್ತಷ್ಟು ಆಡಬೇಕು ಎಂಬ ಆಸೆ. Human wants are unlimited ಅಂತರಲ್ವ ಹಾಗೆ. ಇದು ಮನುಷ್ಯನ ಸಹಜ ಗುಣ. ಆದ್ರೆ ಬಿಸಿಸಿಐ ಬಿಡಬೇಕಲ್ವಾ… ಒಂದೇ ಒಂದು ಕಠಿಣ ಆದೇಶಕ್ಕೆ ಎಂಥಹುದ್ದೇ ಆಟಗಾರನಿರಬಹುದು.. ಅದನ್ನು ಪಾಲಿಸಲೇಬೇಕು. ಇಲ್ಲಿ ಬಿಸಿಸಿಐನ ಕೆಲವೊಂದು ನಿರ್ಧಾರಗಳು ಅಭಿಮಾನಿಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಬಹುದು.. ಆದ್ರೆ ದೂರದೃಷ್ಟಿಯ ಕ್ರೀಡಾ ಸಂಸ್ಥೆಯೊಂದು ತನ್ನ ಭವಿಷ್ಯದ ಹಿತವನ್ನು ಕಾಪಾಡಲು ಕೂಡ ಕೆಲವೊಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ಬಿಸಿಸಿಐ ಇವತ್ತು ವಿಶ್ವ ಕ್ರಿಕೆಟ್ ಜಗತ್ತನ್ನು ಆಳುತ್ತಿರುವುದು ಎಂಬುದರಲ್ಲಿ ಎರಡು ಮಾತಿಲ್ಲ. ಬಿಸಿಸಿಐನಂತೆ ಭಾರತದಲ್ಲಿ ಇತರೆ ಕ್ರೀಡಾ ಸಂಸ್ಥೆಗಳು ಕೂಡ ಇವೆ. ಆದ್ರೆ ಬಿಸಿಸಿಐನಷ್ಟು ವೃತ್ತಿಪರತೆಯನ್ನು ಯಾವುದೇ ಕ್ರೀಡಾ ಸಂಸ್ಥೆಗಳಲ್ಲಿ ಕಾಣಲು ಸಾಧ್ಯನೇ ಇಲ್ಲ.
team india captain : ಟೀಂ ಇಂಡಿಯಾದ ಉತ್ತರಾಧಿಕಾರಿ ಯಾರು
ಇದೀಗ ಪ್ರಶ್ನೆ ಮುಂದಿರುವುದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಜಾಗವನ್ನು ತುಂಬುವುದು ಯಾರು ಅನ್ನೋದು..? ಇದೇ ರೀತಿಯ ಪ್ರಶ್ನೆ ದಶಕಗಳ ಹಿಂದೆ ಕೂಡ ಕಾಡುತ್ತಿತ್ತು. ನಾಯಕ ಗಂಗೂಲಿ ಉತ್ತರಾಧಿಕಾರಿ ಯಾರು..? ದಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್, ವಿವಿಎಸ್ ಜಾಗವನ್ನು ಯಾರು ತುಂಬುತ್ತಾರೆ..? ಅನಿಲ್ ಕುಂಬ್ಳೆ ಸ್ಥಾನಕ್ಕೆ ಯಾರು ಬರುತ್ತಾರೆ..? ಅಷ್ಟೇ ಯಾಕೆ ಸಚಿನ್ ವಿದಾಯ ಹೇಳಿದ್ರೆ ಭಾರತೀಯ ಕ್ರಿಕೆಟ್ ಮುಗಿದೇ ಹೋಯ್ತು ಅಂತ ಅಂದುಕೊಂಡವರಿದ್ದರು. ಆದ್ರೆ ಏನಾಯ್ತು..? ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ನಲ್ಲಿ ಇನ್ನಷ್ಟು ಬಲಿಷ್ಠ ತಂಡವಾಗಿ ಹೊರಹೊಮ್ಮಿತ್ತು. ಗಂಗೂಲಿಯಂತಹ ಆಕ್ರಮಣಕಾರಿ ನಾಯಕ, ಧೋನಿಯಂತಹ ಕೂಲ್ ಕ್ಯಾಪ್ಟನ್ ಇನ್ನೊಬ್ಬರಿಲ್ಲ ಎಂದು ಹೇಳಲಾಗುತ್ತಿತ್ತು. ಆದ್ರೆ ವಿರಾಟ್ ಕೊಹ್ಲಿ, ರೋಹಿತ್ ಟೀಮ್ ಇಂಡಿಯಾವನ್ನು ವಿಶ್ವ ಕ್ರಿಕೆಟ್ನಲ್ಲಿ ಅದ್ಭುತ ತಂಡವಾಗಿ ಹೊರಹೊಮ್ಮಿಸಿದ್ರು. ವಿರಾಟ್ ಕೊಹ್ಲಿಯಂತೂ ನಾಯಕನಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಯಾರು ಮಾಡಿರದಂತಹ ಸಾಧನೆಯನ್ನು ಮಾಡಿದ್ರು. ರೋಹಿತ್ ಶರ್ಮಾ ಕೂಡ ನಾಯಕನಾಗಿ ತಾನೇನು ಕಮ್ಮಿ ಇಲ್ಲ ಎಂಬುದನ್ನು ಸೈಲೆಂಟ್ ಆಗಿ ಪ್ರೂವ್ ಮಾಡಿದ್ರು.
ಇದೀಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇವರ ಜಾಗವನ್ನು ಯಾರು ಭರ್ತಿ ಮಾಡ್ತಾರೆ ಅನ್ನೋದು ಮತ್ತೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಯಾಕಂದ್ರೆ ಒಂದು ದಶಕದ ಹಿಂದಿನ ಯಂಗ್ ಇಂಡಿಯಗೂ ಈಗಿನ ಯಂಗ್ ಇಂಡಿಯಗೂ ಟೆಸ್ಟ್ ಕ್ರಿಕೆಟ್ ನ ಅನುಭವದಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಮುಖ್ಯವಾಗಿ ಸ್ಥಿರ ಪ್ರದರ್ಶನದ ಕೊರತೆ ಇದೆ. ಒಂದಂತೂ ನಿಜ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾನಷ್ಟು ಅದ್ಭುತವಾದ ಸಾಧನೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ.. ಆದ್ರೆ ಅವರಿಬ್ಬರ ಸ್ಥಾನವನ್ನು ತುಂಬುವಂತಹ ಯುವ ಆಟಗಾರರು ಭಾರತದಲ್ಲಿ ಇದ್ದಾರೆ ಇದರಲ್ಲಿ ಎರಡು ಮಾತಿಲ್ಲ. ಆದ್ರೆ ಹಳೆಯ ಆಟಗಾರರನ್ನು ಬಿಟ್ಟು ಸದ್ಯಕ್ಕೆ ಕೊಹ್ಲಿ, ರೋಹಿತ್ನಂತೆ ಸುದೀರ್ಘವಾಗಿ ದಶಕಗಳ ಕಾಲ ಆಡೋದು ಕೂಡ ಅನುಮಾನ ಅನ್ಸುತ್ತೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ದ್ರಾವಿಡ್, ವಿವಿಎಸ್, ಸಚಿನ್, ಗಂಗೂಲಿ, ಕೊಹ್ಲಿ, ಪೂಜಾರ, ರಹಾನೆಯಂತೆ ತಾಳ್ಮೆ, ಏಕಾಗ್ರತೆ ಹಾಗೂ ಕೌಶಲ್ಯದಿಂದ ಆಡುವಂತಹ ಆಟಗಾರರು ಸದ್ಯಕ್ಕೆ ಕಾಣ್ತ ಇಲ್ಲ. ಒಂದೋ ಸೋಲು… ಇಲ್ಲ ಅಂದ್ರೆ ಗೆಲುವು ಅಷ್ಟೇ.. ಟೆಸ್ಟ್ ಕ್ರಿಕೆಟ್ನಲ್ಲಿ ಬೌಲರ್ಗಳ ತಾಳ್ಮೆಯನ್ನು ಪರೀಕ್ಷೆ ಮಾಡುವಂತಹ ಬ್ಯಾಟರ್ಗಳು ಕಾಣ್ತಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ. ಆದ್ರೆ ಮನಬಂದಂತೆ ದಂಡಿಸುವ ಯುವ ದಾಂಡಿಗರು ಇದ್ದಾರೆ.
team india captain : ಹಾಗಂತ ಇದು ಯುವ ಆಟಗಾರರ ತಪ್ಪು ಅಂತ ಹೇಳೋಕೆ ಆಗಲ್ಲ. ಐಪಿಎಲ್ ಅನ್ನೋ ಫಾಸ್ಟ್ ಫುಡ್ನಂತಿರುವ ಚುಟುಕು ಕ್ರಿಕೆಟ್ ಯುವ ಆಟಗಾರರ ಬ್ರೈನ್ ವಾಶ್ ಮಾಡಿದೆ. ಅದು ಟಿ-20 ಆಗಿರಲಿ, ಏಕದಿನ ಕ್ರಿಕೆಟ್ ಆಗಿರಲಿ, ಟೆಸ್ಟ್ ಕ್ರಿಕೆಟ್ ಆಗಿರಲಿ.. ಪ್ರತಿ ಎಸೆತವೂ ಬೌಂಡ್ರಿ, ಸಿಕ್ಸರ್ ಗೆರೆ ದಾಟಬೇಕು ಅನ್ನೋ ಮನೋಭಾವನೆಯ ಆಟವನ್ನೇ ಕ್ರಿಕೆಟ್ ಪ್ರೇಮಿಗಳು ಕೂಡ ಇಷ್ಟ ಪಡುತ್ತಾರೆ. ಹೀಗಾಗಿ ಸಚಿನ್, ದ್ರಾವಿಡ್, ವಿವಿಎಸ್, ಗಂಗೂಲಿ, ಕೊಹ್ಲಿ ಹೊಡೆಯುವಂತಹ ಶಾಟ್ಸ್ ಗಳನ್ನು ನೋಡುವುದು ಕೂಡ ಕಷ್ಟ.. ಕಷ್ಟ.. ಏನೇ ಇದ್ರೂ ಅಡ್ಡಾ ದಿಡ್ಡಿ ಬ್ಯಾಟ್ ಬೀಸಿಕೊಂಡು ರನ್ ಗಳಿಸೋದು ಅಷ್ಟೇ ಮುಖ್ಯವಾಗಿರುತ್ತದೆ. ಸದ್ಯ ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಸ್ವಲ್ಪ ಮಟ್ಟಿಗೆ ಶುಭ್ಮನ್ ಗಿಲ್ ನಲ್ಲಿ ಟೆಸ್ಟ್ ಕ್ರಿಕೆಟ್ನ ಕೌಶಲ್ಯಗಳನ್ನು ಕಾಣಬಹುದು. ಇನ್ನುಳಿಂತೆ ಮುಂದಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಕೂಡ ಟಿ-20 ಕ್ರಿಕೆಟ್ನಂತೆ ಹೊಡಿಬಡಿ ಆಟಕ್ಕೆ ಸೀಮಿತವಾದ್ರೂ ಅಚ್ಚರಿ ಏನಿಲ್ಲ.
ಹಾಗಂತ ಇದು ಫೈನಲ್ ತೀರ್ಪು ಕೂಡ ಅಲ್ಲ. ಕಾಲಕ್ಕೆ ತಕ್ಕಂತೆ ಆಟದ ಖದರ್ ಕೂಡ ಬದಲಾಗುತ್ತದೆ. ಸುಮಾರು ಎರಡು ದಶಕಗಳ ಹಿಂದೆ ಭಾರತೀಯ ಕ್ರಿಕೆಟ್ ಹೇಗಿತ್ತು ಅಂದ್ರೆ ಎದುರಾಳಿ ಬೌಲರ್ಗಳಿಗೆ ಮರ್ಯಾದೆ ಕೊಡಬೇಕು..ತಾಳ್ಮೆಯಿಂದ ಆಡಬೇಕು.. ಕೆಟ್ಟ ಎಸೆತಗಳಿಗೆ ಬೌಂಡರಿ -ಸಿಕ್ಸರ್ ಬಾರಿಸಬೇಕು ಅನ್ನೋ ನಿಯಮದಂತೆ ಬ್ಯಾಟರ್ಗಳು ಕೂಡ ಆಡ್ತಾ ಇದ್ರು. ಆದ್ರೆ ಅದನ್ನು ಸೆಹ್ವಾಗ್ ಅನ್ನೋ ಹೊಡಿಬಡಿ ದಾಂಡಿಗ ಭಾರತದ ಟೆಸ್ಟ್ ಕ್ರಿಕೆಟ್ನ ಚಿತ್ರಣವನ್ನೇ ಬದಲಾಯಿಸಿದ್ರು. ಪ್ರತಿ ಎಸೆತದಲ್ಲೂ ರನ್ ಬರಬೇಕು ಅನ್ನೋದೇ ಅವರ ಸಿದ್ದಾಂತವಾಗಿತ್ತು.ಆದ್ರೆ ಆಗ ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ಗಳಿದ್ದರು. ಜೊತೆಗೆ ಗಂಗೂಲಿಯ ಆಕ್ರಮಣಕಾರಿ ಪ್ರವೃತ್ತಿಯ ನಾಯಕತ್ವ ತಂಡಕ್ಕೆ ಪ್ಲಸ್ ಪಾಯಿಂಟ್ ಆಯ್ತು. ನಂತರ ಧೋನಿಯ ಕೂಲ್ ಕ್ಯಾಪ್ಟನ್ಸಿ ಟೀಮ್ ಇಂಡಿಯಾದ ಯಶಸ್ಸಿಗೆ ದಾರಿ ದೀಪವಾಯ್ತು. ಬಳಿಕ ವಿರಾಟ್ ಕೊಹ್ಲಿ ಆನೆ ನಡೆದಂತೆ ದಾರಿ ಎಂಬಂತೆ ತಂಡವನ್ನು ಮುನ್ನಡೆಸಿದ್ರು. ಕೊಹ್ಲಿಯ ವಿರಾಟ ದರ್ಶನದ ನಾಯಕತ್ವ ಇಡೀ ಕ್ರಿಕೆಟ್ ಜಗತ್ತು ಟೀಮ್ ಇಂಡಿಯಾಗೆ ಜೈಕಾರ ಹಾಕುವಂತೆ ಮಾಡಿರೋದು ಈಗ ಇತಿಹಾಸ.
team india captain : ಇದೀಗ ಭವಿಷ್ಯದ ನಾಯಕ ಹಾಗೂ ಪ್ರತಿಯೊಬ್ಬ ಆಟಗಾರನಿಗೂ ಟೀಮ್ ಇಂಡಿಯಾದ ಗೌರವ, ಘನತೆಯನ್ನು ಉಳಿಸಿಕೊಳ್ಳುವಂತಹ ಜವಾಬ್ದಾರಿ ಇದೆ. ನೀವು ಎರಡು ವರ್ಷ ಆಡ್ತಿರೋ, ಐದು ವರ್ಷ ಆಡ್ತಿರೋ, ಅಥವಾ ಹತ್ತು ವರ್ಷ ಆಡ್ತಿರೋ ಗೊತ್ತಿಲ್ಲ.. ಭಾರತೀಯ ಕ್ರಿಕೆಟ್ನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಯುವ ಆಟಗಾರರ ಮೇಲಿದೆ. ಒಂದಂತೂ ಸತ್ಯ.. ರನ್ ಮೆಷಿನ್ ಸುನೀಲ್ ಗಾವಸ್ಕರ್.. ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್.. ದಿ ಗ್ರೇಟ್ ವಾಲ್ ದ್ರಾವಿಡ್.. ಚೇಸಿಂಗ್ ಗಾಡ್ ವಿರಾಟ್ ಕೊಹ್ಲಿಯ ಹಾಗೆ ಮುಂದಿನ ಟೀಮ್ ಇಂಡಿಯಾದ ಮುಂದಿನ ಸಾಮ್ರಾಟ ಯಾರು ಅನ್ನೋ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಸಿಗುತ್ತಿಲ್ಲ. ಮುಂದೆ ನೋಡೋಣ..!
ಸನತ್ ರೈ.
ಹಿರಿಯ ಪತ್ರಕರ್ತರು