sakrebailu elephant : ಮಲೆನಾಡಿನ ಯಾವುದೇ ಮೂಲೆಯಲ್ಲಿ ಕಾಡಾನೆಗಳು ಕಂಡು ಬಂದರೆ ಅವುಗಳನ್ನು ಹಿಮ್ಮೆಟ್ಟಿಸಲು ಇಲ್ಲವೇ ಸೆರೆಹಿಡಿಯಲು ಸಕ್ರೆಬೈಲು ಕುಮ್ಕಿ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅದೇ ರೀತಿ ವೀನಿಂಗ್ಗೂ ಕೂಡ ಇಲ್ಲಿನ ಸಾಕಾನೆಗಳು ಸಹಕಾರಿಯಾಗಿದೆ. ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿನ ಫುಣಸೋಲಿ ಆನೆ ಬಿಡಾರದಲ್ಲಿನ ಗೌರಿ ಆನೆಯ ವೀನಿಂಗ್ಗೆ ( ತಾಯಿ ಆನೆಯಿಂದ ಮರಿ ಆನೆ ಬೇರ್ಪಡಿಸುವ ಪ್ರಕ್ರಿಯೆ) ಸಕ್ರೆಬೈಲಿನಿಂದ ಎರಡು ಗಂಡಾನೆಗಳನ್ನು ಕಳುಹಿಸುವಂತೆ ಫುಣಸೋಲಿ ವಲಯ ಅರಣ್ಯಾಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಅದರಂತೆ ಸಕ್ರೆಬೈಲು ಆನೆ ಬಿಡಾರದಿಂದ ದಾಂಡೆಲಿ ಫಣಸೋಲಿ ಆನೆ ಬಿಡಾರಕ್ಕೆ ಎರಡು ಗಂಡಾನೆಗಳನ್ನು ಕಳುಹಿಸಲಾಗಿತ್ತು. 16 ವರ್ಷ ವಯಸ್ಸಿನ ಕೃಷ್ಣ ಮತ್ತು 15 ವರ್ಷದ ಅಭಿಮನ್ಯು ಫುಣಸೋಲಿ ಆನೆ ಬಿಡಾರಕ್ಕೆ ಕಳುಹಿಸಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಗಾಜನೂರು ವಲಯ ಅರಣ್ಯಾಧಿಕಾರಿಗಳು ನಿಬಂಧನೆಗಳನ್ನು ವಿಧಿಸಿಯೇ ಆನೆಗಳನ್ನು ಕಳುಹಿಸಿದ್ದರು.
sakrebailu elephant : ನಿಬಂಧನೆಯಲ್ಲಿ ಏನಿದೆ
1.ಆನೆಗಳನ್ನು ಸಕ್ರೆಬೈಲು ಬಿಡಾರದಿಂದ ಪಡೆದುಕೊಂಡ ನಂತರ ಪುನಃ ಅವುಗಳನ್ನು ಹಿಂದಿರುಗಿಸುವವರೆಗಿನ ಅವಧಿಯಲ್ಲಿ ಆನೆಗಳ ಜೀವ, ಆರೋಗ್ಯದ ಬಗ್ಗೆ ಹಾಗು ಯಾವುದೇ ಸಾರ್ವಜನಿಕ ಹಾನಿಯಾಗದಂತೆ ನೋಡಿಕೊಳ್ಳುವ ಜವಬ್ದಾರಿ ಫುಣಸೋಲಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿಯ ಜವಬ್ದಾರಿಯಾಗಿರುತ್ತದೆ.
2.ಸದರಿ ಆನೆಗಳನ್ನು ಕಾರ್ಯಾಚರಣೆ ಮುಗಿದ ಕೂಡಲೇ ಸುರಕ್ಷಿತವಾಗಿ ಇಲಾಖೆಯ ಆನೆಗಳನ್ನು ಬಿಡಾರಕ್ಕೆ ಹಿಂದಿರುಗಿಸುವುದು
3.ವನ್ಯಜೀವಿ ಕಾಯ್ದೆ 1972 ರ ನಿಯಮಗಳನ್ನು ಫುಣಸೋಲಿ ವನ್ಯಜೀವಿ ಅರಣ್ಯಾಧಿಕಾರಿ ಪಾಲಿಸುವುದು. 05-05-2-25 ರಂದು ಗಾಜನೂರು ಅರಣ್ಯಾಧಿಕಾರಿ ಬರೆದ ಪತ್ರದಲ್ಲಿ ಈ ನಿಬಂಧನೆಗಳನ್ನು ಹಾಕಲಾಗಿತ್ತು. ಕೃಷ್ಣ ಮತ್ತು ಅಭಿಮನ್ಯು ಆನೆಗಳು ಹೋದ ದಿನವೇ ಗೌರಿಯ ಆನೆಯ ವೀನಿಂಗ್ ಆಗಿದೆ. ವೀನಿಂಗ್ ಮುಗಿದ ತಕ್ಷಣ ಎರಡು ಗಂಡಾನೆಗಳನ್ನು ಸಕ್ರೈಬೈಲು ಬಿಡಾರಕ್ಕೆ ತರಬೇಕಿತ್ತು. ಆದರೆ ಹತ್ತು ದಿನ ಕಳೆದರೂ, ಆನೆಗಳು ಸಕ್ರೆಬೈಲಿನತ್ತ ಮುಖ ಮಾಡಲಿಲ್ಲ.
sakrebailu elephant : ನಿಬಂಧನೆ ಉಲ್ಲಂಘಿಸಿದ ಉಪ ನಿರ್ದೇಶಕರು
ವೀನಿಂಗ್ ಕಾರ್ಯಾಚರಣೆ ಮುಗಿದ ನಂತರ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ರವರು ,ಕೃಷ್ಣ ಮತ್ತು ಅಭಿಮನ್ಯು ಆನೆಗಳನ್ನು ಫಣಸೋಲಿ ಆನೆ ಬಿಡಾರದಲ್ಲಿಯೇ ಉಳಿಸಿಕೊಳ್ಳಲು ಉದ್ದೇಶಿಸಿದರು.ಉದ್ದೇಶವೇನೋ ಒಳ್ಳೆಯದೇ ಇದೆ. ಆನೆ ಬೇಕಾದಲ್ಲಿ ಸರ್ಕಾರ ಮಟ್ಟದಲ್ಲಿ ಆಗಬೇಕಿದ್ದ ಪ್ರಕ್ರಿಯೆಗಳು ನಿಯಮಬದ್ಧವಾಗಿರಬೇಕು ಅಷ್ಟೆ. ಆದರೆ ಇಲ್ಲಿ ಸರ್ಕಾರದ ಯಾವುದೇ ಕಾನೂನುಗಳನ್ನು ಅವರು ಪಾಲಿಸಲಿಲ್ಲ.
ಖಾಯಂ ಮಾವುತರು ವಾಪಸ್..ಹೊಸ ಮಾವುತರ ನೇಮಕ
ಸಕ್ರೆಬೈಲಿನಿಂದ ದಾಂಡೇಲಿಗೆ ಹೋಗಿದ್ದ ಕೃಷ್ಣ ಆನೆಯ ಮಾವುತ ಸಿದ್ದಿಕ್ ಪಾಷಾ ಮತ್ತು ಅಭಿಮನ್ಯು ಆನೆಯ ಮಾವುತ ಮಂಜುನಾಥ್ ಎಂಬುವರನ್ನು ಹಿಂದೆ ಮುಂದೆ ನೋಡದೆ ದಾಂಡೆಲಿಯಿಂದ ವಾಪಸ್ಸು ಕಳುಹಿಸಲಾಗಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕರ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಒಂದೇ ಆನೆಯ ಮೇಲೆ ಕೆಲಸ ಮಾಡಿದ ಮಾವುತರನ್ನು ಹೀಗೆ ಏಕಾಏಕಿ ವಾಪಸ್ಸು ಕಳುಹಿಸಿದ್ರೆ,,ಹೇಗೆ? ಹತ್ತು ಹಲವು ವರ್ಷಗಳಿಂದ ಒಂದೇ ಆನೆಯ ಮೇಲೆ ಕೆಲಸ ಮಾಡಿದ ಮಾವುತರಿಗೆ ಆ ಕ್ಷಣಕ್ಕೆ ಕಣ್ಣೀರನ್ನು ಹಾಕಿದ್ದಾರೆ. ಅವರು ಬಿಟ್ಟು ಬಂದಿದ್ದು, ದನ ಹಸುಗಳನ್ನಲ್ಲ. ಷೆಡ್ಯುಲ್ ಒನ್ ಎನಿಮಲ್ ಆನೆಯನ್ನು. ಹೊಸ ಮಾವುತರು ಕೃಷ್ಣ ಮತ್ತು ಅಭಿಮನ್ಯು ಆನೆ ತಕ್ಷಣಕ್ಕೆ ನೋಡಿಕೊಳ್ಳಲು ಸಾಧ್ಯವೇ
ಇಷ್ಟಕ್ಕೂ ಆನೆಗಳನ್ನು ಉಳಿಸಿಕೊಳ್ಳಬೇಕಾದರೆ,ಕಾಳಿ ಹುಲಿ ಸಂಪಕ್ಷಿತ ಪ್ರದೇಶದ ಉಪ ನಿರ್ದೇಶಕರು, ವೈಲ್ಡ್ ಲೈಫ್ ಪಿಸಿಸಿಎಫ್ ಹಿರಿಯ ಅಧಿಕಾರಿಗೆ ಪತ್ರ ಬರೆದು ಅನುಮತಿ ಕೋರಬೇಕಿತ್ತು. ಕೋರಿದ್ದರೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕರು ಹೊರಡಿಸಿರುವ ಅಧಿಕೃತ ಜ್ಞಾಪನಾ ಪತ್ರದಲ್ಲಿ ಅದು ಉಲ್ಲೇಖದಲ್ಲಿ ನಮೂದಾಗಬೇಕಿತ್ತು.
ಇಲಾಖೆಯಲ್ಲಿ ಖಾಯಂ ಆದ ಮಾವುತರನ್ನು ವಾಪಸ್ಸು ಕಳುಹಿಸಿ ಅವರ ಆನೆಗಳ ಪಾಲನೆಗೆ ಮೊಹಮ್ಮದ್ ಇಬ್ರಾಹಿಂ ಅನ್ನೋ ಮಾವುತನನ್ನ ನೇಮಕ ಮಾಡಿದ್ದು ಸರಿಯೇ? ಇಲ್ಲಿ ಸಂಪೂರ್ಣವಾಗಿ ಕಾನೂನು ಉಲ್ಲಂಘನೆಯಾಗಿರುವುದು ಕಂಡು ಬರುತ್ತದೆ. ಪುಣಸೋಲಿ ಆನೆ ಬಿಡಾರಕ್ಕೆ ಆನೆ ಬೇಕೆಂದಾದಲ್ಲಿ ಉಪ ನಿರ್ದೇಶಕರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರಬರೆಯಬೇಕಿತ್ತು.. ಇಲಾಖೆಯ ನಿಯಮ ಗಾಳಿಗೆ ತೂರಿ ಕಾರ್ಯಾಚರಣೆ ಮುಗಿದ ತಕ್ಷಣ ವಾಪಸ್ಸು ಕಳುಹಿಸಬೇಕಿದ್ದ ಆನೆಗಳನ್ನು ಹತ್ತು ದಿನಕ್ಕೂ ಹೆಚ್ಚು ಕಾಲ ಉಳಿಸಿಕೊಂಡಿದ್ದು ತಪ್ಪಲ್ಲವೇ..ಖಾಯಂ ಮಾವುತರನ್ನು ವಾಪಸ್ಸು ಕಳುಹಿಸಿ, ಹೊಸ ಮಾವುತರನ್ನು ನೇಮಿಸಿಕೊಂದ್ದು ಸರಿಯಾದ ಕ್ರಮವೇ.ಸರ್ಕಾರಿ ನೌಕರರಿಗೆ ಎಸ್.ಆರ್ ಇರುವಂತೆ, ಆನೆಗಳಿಗೂ ಎಸ್ಆರ್ ಇರುತ್ತದೆ. ಮಾವುತ ಕಸ್ಟಡಿಯಲ್ಲಿರುವ ಆನೆಗಳನ್ನು ಅವರು ಬಿಟ್ಟು ಬರುವ ಹಾಗೆ ಇಲ್ಲ. ಇಲ್ಲಿ ಒತ್ತಾಯ ಪೂರ್ವಕವಾಗಿ ಮಾವುತರನ್ನ ವಾಪಸ್ಸು ಕಳುಹಿಸಲಾಗಿದೆ.
ಪ್ರಾಣಿಪ್ರಿಯರ ಅಸಮಧಾನ,,ಬಿಡಾರಕ್ಕೆ ವಾಪಸ್ಸಾದ ಆನೆಗಳು
ಕೃಷ್ಣ ಮತ್ತು ದನಂಜಯ ಆನೆ ಮಾವುತರು ವಾಪಸ್ಸಾದ ನಂತರ ಮಾವುತರ ವಲಯದಲ್ಲಿ ಅಸಮಧಾನದ ಬಗ್ಗೆ ಕಟ್ಟೆ ಒಡೆದಿದೆ. ಈ ವಿಚಾರಗಳು ವನ್ಯಜೀವಿ ಪ್ರಿಯರನ್ನು ಕೆರಳಿಸಿದೆ. ಆನೆ ಬೇಕಾದಲ್ಲಿ ಸರ್ಕಾರದ ಮಟ್ಟದಲ್ಲಿ ನಿಯಮಾನುಸಾರ ಪಡೆದುಕೊಳ್ಳಬೇಕು. ಅದನ್ನು ಬಿಟ್ಟು ಮಾವುತರನ್ನು ವಾಪಸ್ಸು ಕಳುಹಿಸಿ ಆನೆಗಳನ್ನು ಹದಿನೈದು ದಿನ ಅಕ್ರಮ ಬಂಧನದಲ್ಲಿಟ್ಟಿದ್ದು ಸರಿಯಾದ ಕ್ರಮವಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ. ಎಚ್ಚೆತ್ತುಕೊಂಡ ಇಲಾಖೆಯ ಹಿರಿಯ ಅಧಿಕಾರಿಗಳು ದಾಂಡೆಲಿಯಿಂದ ಕೃಷ್ಣ ಮತ್ತು ಅಭಿಮನ್ಯು ಆನೆಯನ್ನು ಇಂದು ವಾಪಸ್ಸು ಕಳುಹಿಸಿದ್ದಾರೆ.
sakrebailu elephant : ಆಂದ್ರಕ್ಕೆ ಹೊರಡಲು ಸಜ್ಜಾದ ಕೃಷ್ಣ ಮತ್ತು ಅಭಿಮನ್ಯು
ವಿಪರ್ಯಾಸ ಎಂದರೇ ಇದೆ. ಕೃಷ್ಣ ಮತ್ತು ಅಭಿಮನ್ಯು ದಾಂಡೇಲಿಯಿಂದ ಹೇಗೂ ಸಕ್ರೆಬೈಲು ಆನೆ ಬಿಡಾರ ಸೇರಿದವು ಎಂದು ನಿಟ್ಟುಸಿರು ಬಿಟ್ಟ ಮಾವುತರಿಗೆ ಮತ್ತೆ ನಿರಾಸೆ ಕಾದಿದೆ. ಆಂದ್ರ ಪ್ರದೇಶಕ್ಕೆ ರಾಜ್ಯದಿಂದ ಐದು ಆನೆಗಳನ್ನು ನೀಡಲಾಗುತ್ತಿದ್ದು, ಸಕ್ರೆಬೈಲಿನಿಂದ ಕೃಷ್ಣ ಮತ್ತು ಅಭಿಮನ್ಯು ಹೊರಡಲು ಸಜ್ಜಾಗಿದೆ.ಮೇ 21 ರಂದು ವಿಧಾನಸೌಧದ ಮುಂಭಾಗದಲ್ಲಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದೆ. ಕೃಷ್ಣ ಮತ್ತು ಅಭಿಮನ್ಯು ಸಕ್ರೆಬೈಲಿನಲ್ಲಿಯೇ ಹುಟ್ಟಿ, ಇಲ್ಲಿನ ಮಾವುತ ಕಾವಾಡಿಗಳ ಪ್ರೀತಿ ಆರೈಕೆಯಲ್ಲಿಯೇ ಬೆಳೆದಿವೆ. ಈಗ ಮತ್ತೆ ತವರು ತೊರೆಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಮಾವುತರಲ್ಲಿ ದುಃಖ ಮಡುಗಟ್ಟಿದೆ.