Pahalgam Terrorist Attack | ಕಾಶ್ಮೀರದಲ್ಲಿ ಭಯೋದ್ಪಾದರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ರವರ ಪಾರ್ಥಿವ ಶರೀರ ಇಂದು ಬೆಳಿಗ್ಗೆ ಮೆರವಣಿಗೆ ಮೂಲಕ ಅವರ ನಿವಾಸಕ್ಕೆ ಆಗಮಿಸಿತು. ಇದೀಗ ಅಲ್ಲಿ ಮೃತರ ಅಂತಿಮ ವಿಧಿವಿಧಾನಗಳ ಪ್ರಕ್ರಿಯೆ ನಡೆದು, ಅವರ ಅಂತಿಮಯಾತ್ರೆ ಹೊರಟಿದೆ.
ಮೆರವಣಿಗೆಯು ಐಬಿ ಸರ್ಕಲ್ ಮೂಲಕ, ಕುವೆಂಪು ರಸ್ತೆಗೆ ಬಂದು, ಜೈಲ್ ಸರ್ಕಲ್ನಲ್ಲಿ ತಿರುವುಪಡೆದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಾದು, ಸೀನಪ್ಪ ಶೆಟ್ಟಿ ಸರ್ಕಲ್ಗೆ ಬರಲಿದೆ. ಅಲ್ಲಿಂದ ಅಮೀರ್ ಅಹಮದ್ ಸರ್ಕಲ್ ಮೂಲಕ ಬಿಹೆಚ್ ರೋಡ್ನಲ್ಲಿ ಸಾಗಿ, ರೋಟರಿ ಚಿತಾಗಾರವನ್ನು ತಲುಪಲಿದೆ. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು, ಭಾರತ್ ಮಾತಾ ಕೀ ಜೈ, ಮಂಜುನಾಥ್ ಅಮರ್ ರಹೆ ಘೋಷಣೆಗಳು ಮೊಳಗಿದವು.
ಇದಕ್ಕೂ ಮೊದಲು ನೇತಾಜಿ ಸರ್ಕಲ್ ಸಮೀಪದಲ್ಲಿರುವ ವಿಜಯನಗರದ ಮಂಜುನಾಥ್ ರಾವ್ರವ ಮನೆಯಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಮಧು ಬಂಗಾರಪ್ಪ , ಸಂಸದ ಬಿವೈ ರಾಘವೇಂದ್ರ, ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಶಾಸಕ ಎಸ್ಎನ್ ಚನ್ನಬಸಪ್ಪ, ಡಾ.ಧನಂಜಯ್ ಸರ್ಜಿಯವರನ್ನು ಒಳಗೊಂಡು ಪಕ್ಷಾತೀತವಾಗಿ ಹಲವು ಮುಖಂಡರು ಅಂತಿಮ ದರ್ಶನ ಪಡೆದರು.

ಇಲ್ಲಿ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತು. ನಂತರ ಕುಟುಂಬಸ್ಥರು ಬಾಕ್ಸ್ನಿಂದ ಮೃತದೇಹವನ್ನು ಮನೆಯೊಳಗೆ ಕೊಂಡೊಯ್ದರು.

Pahalgam Terrorist Attack : ಉಗ್ರರನ್ನು ನೇಣು ಹಾಕಿ ಅಣಕು ಪ್ರದರ್ಶನ
ಇನ್ನೊಂದೆಡೆ ಮಂಜುನಾಥ್ರವರ ಪಾರ್ಥಿವ ಶರೀರವನ್ನು ನೋಡಲು ಸಾವಿರಾರು ಜನರು ಮನೆಯ ಮುಂಬಾಗದಲ್ಲಿ ಜಮಾಯಿಸಿದರು. ಇತ್ತ ನಗರದಲ್ಲಿ ಉಗ್ರರ ಕೃತ್ಯ ಖಂಡಿಸಿ ಜೆಸಿಬಿಯ ಕೊಕ್ಕೆಯಲ್ಲಿ ಉಗ್ರರನ್ನು ನೇಣು ಹಾಕಿದ ರೀತಿಯಲ್ಲಿ ಅಣಕು ಪ್ರದರ್ಶನ ನಡೆಸಲಾಗಿದೆ.

