SHIVAMOGGA NEWS / Malenadu today/ Nov 30, 2023 | MALENADU TODAY | MALNAD NEWS
HOSANAGARA| ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ಪೇಟೆ ಸಮೀಪದ ರೈತರೊಬ್ಬರು ತಮ್ಮದೇ ವಿಶೇಷತೆಯೊಂದಿಗೆ ಸುದ್ದಿಯಾಗಿದೆ. ಸದ್ಯ ಅವರ ತೋಟ, ದಾರಿಹೋಕರನ್ನ ವಿಶಿಷ್ಟವಾಗಿ ಸೆಳೆಯುತ್ತಿದೆ.
ಬೆದರು ಬೊಂಬೆ ಬದಲು ತಾರೆಯರ ಗೊಂಬೆ
ಹಸನಾಗಿ ಬೆಳೆದ ತೋಟಕ್ಕೆ ಕಣ್ಣು ಜಾಸ್ತಿ.. ಅಂತಹ ಕಣ್ದೃಷ್ಟಿ ತಾಕದಿರಲಿ ಅಂತಾ ರೈತರು ದೃಷ್ಟಿ ಗೊಂಬೆಯನ್ನೋ? ಬೆದರು ಬೊಂಬೆಯನ್ನೋ ಹಾಕುತ್ತಾರೆ. ತೋಟಕ್ಕೆ ಸಿಗಂದೂರು ಚೌಡೇಶ್ವರಿ ದೇವಿಯ ರಕ್ಷಣೆ ಇದೆ ಎಂದು ಕೆಲವರು ಬರೆಸುತ್ತಾರೆ!. ಯಾವುದೋ ರೂಪದಲ್ಲಿ ಒಂದು ಶಕ್ತಿ ತಮ್ಮ ತೋಟವನ್ನು ಕಾಯಲಿ ಎಂಬುದು ಅನ್ನದಾತರ ಉದ್ದೇಶವಾಗಿರುತ್ತದೆ.
ಈ ತೋಟಕ್ಕಿದೆ ಚೆಲುವೆಯರ ಕಾವಲು
ಹೌದು, ರಿಪ್ಪನ್ ಪೇಟೆ ಸಮೀಪದ ಮಳವಳ್ಳಿ ರೈತರೊಬ್ಬರ ಈ ತೋಟಕ್ಕಿದೆ ಚೆಲುವೆಯರ ಕಾವಲು. ಅಚ್ಚರಿ ಏನಿಲ್ಲ ಇದರಲ್ಲಿ ಮಳವಳ್ಳಿ ಗ್ರಾಮದ ರೈತ ರಂಗಸ್ವಾಮಿ ಇಂತಹದ್ದೊಂದು ಪ್ರಯೋಗ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.
ಫೋಟೋ ನೋಡಿ ಸಾರ್
ಇವರ ತೋಟ ದಾರಿ ಪಕ್ಕದಲ್ಲಿಯೇ ಇದೆ. ದಾರಿಯಲ್ಲಿ ಹೋಗುವವರು ಇತ್ತ ನೋಡಿದರೆ, ಜೊತೆಯಲ್ಲಿ ಬರುತ್ತಿರುತ್ತವರಿಗೆ ಫೋಟೋ ನೋಡಿ ಸಾರ್ ಎಂದು ಹೇಳಲೇ ಬೇಕು. ಯಾಕೆಂದರೆ ರಂಗಸ್ವಾಮಿಯವರು ತಾರೆಯರ ಫೋಟೋಗಳನ್ನ ಬಾಳೆಹಣ್ಣು ತೋಟಕ್ಕೆ ಕಾವಲಾಗಿ ಹಾಕಿದ್ದಾರೆ.
ಬಾಳೆ ತೋಟ, ದೃಷ್ಟಿ ತಾಗದ ನೋಟ
ರೈತ ರಂಗಸ್ವಾಮಿ ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಬೆಳೆಯು ಉತ್ತಮವಾಗಿದ್ದು, ಬಾಳೆ ತೋಟಕ್ಕೆ ದೃಷ್ಟಿ ಆಗಬಾರದೆಂದು ನಟಿಯರ ಫೋಟೋ ಹಾಕಿದ್ದಾರೆ.ತೋಟದ ಸುತ್ತಲೂ ರಸ್ತೆ ಬದಿಯಲ್ಲಿ ಜನರಿಗೆ ಕಾಣುವಂತೆ ನಟಿಯರ ಫೋಟೋಗಳನ್ನು ರಂಗಸ್ವಾಮಿ ಹಾಕಿದ್ದಾರೆ.
READ :ದಾವಣಗೆರೆ ಜಿಲ್ಲೆ ನ್ಯಾಮತಿ ನಿವಾಸಿಗೆ 20 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್! ಕಾರಣ ಇಲ್ಲಿದೆ
ಏನ್ ಚೆನ್ನಾಗಿ ಬಂದಿದೆ ತೋಟ…ಮಾರಾಯ, ಅಂತಾ ಕಣ್ಣು ಹಾಕುವ ಮಂದಿ ಈಗೀಗ ತೋಟದ ಬದಲು ತಮ್ಮ ದೃಷ್ಟಿಯನ್ನು ನಟಿಮಣಿಯ ಫೋಟೋದ ಮೇಲೆ ಹಾಕುತ್ತಿದ್ದಾರಂತೆ. ಹಾಗಾಗಿ ಬಾಳೆಗೆ ದೃಷ್ಟಿ ತಾಗುವ ಸಾಧ್ಯತೆ ಕಡಿಮೆಯಾಗಿದೆ ಎನ್ನುತ್ತಾರೆ.
ತೋಟಕ್ಕೆ ತಾರೆಯರ ಫೋಟೋ ಕಾವಲು ಹಾಕಿದ್ದರ ಹಿಂದೆ ದೃಷ್ಟಿ ದೋಷದ ಪರಿಹಾರದ ಉದ್ದೇಶವಿದೆ ಎನ್ನುವ ತೋಟದ ಮಾಲೀಕರು ಅಪಾರ್ಥ ತಿಳಿದುಕೊಳ್ಳಬೇಡಿ ಎಂದು ಸಹ ನೆನಪಿಸುತ್ತಾರೆ.
