ಶಾಲೆಗಳಲ್ಲಿ ಮಕ್ಕಳ ಸಂತೆ! ವ್ಯಾಪಾರ ಎಷ್ಟು ಚೆಂದ ಇತ್ತು ಅಂತೀರಾ ! ಇಲ್ಲಿದೆ ಫೋಟೋ ವರದಿ ಓದಿ

Shivamogga | Feb 3, 2024 | ಕಲಿಕೆಯ ಜೊತೆಗೆ ಕೌಶಲ್ಯವನ್ನು ಹೇಳಿಕೊಟ್ಟರೆ ಮಕ್ಕಳ ತಿಳುವಳಿಕೆಯ ಮಟ್ಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಅದರಲ್ಲಿಯು ಈಗಿನ ಕಾಲದ ಮಕ್ಕಳು ನೋಡಿ ಕಲಿತುಕೊಳ್ಳುವುದರಲ್ಲಿಯೇ ವಿಶೇಷತೆಯನ್ನು ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸೊರಬದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಕ್ಕಳ ವ್ಯಾಪಾರದ ಕೌಶಲ್ಯ ಅಲ್ಲಿ ನೆರದವರನ್ನು ಬೆರಗುಗೊಳಿಸಿತ್ತು. 

ಮಕ್ಕಳಲ್ಲಿ ವ್ಯವಹಾರ ಕೌಶಲ್ಯವನ್ನು ವೃದ್ಧಿಸುವುದರ ಜೊತೆಗೆ ಗಣಿತದ ಮೂಲ ಕಲ್ಪನೆಗಳನ್ನು ಮೂಡಿಸುವ ಉದ್ದೇಶದಿಂದ ಸೊರಬ ತಾಲೂಕಿನ ಗೆಂಡ್ಲ‌ ಗ್ರಾಮದ ಸ.ಕಿ.ಪ್ರಾ ಶಾಲೆಯ ಆವರಣದಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.

makkala sante, ಮಕ್ಕಳ ಸಂತೆ

ಸಂತೆಯಲ್ಲಿ ಮಕ್ಕಳು ತಾವು ಮನೆಯಲ್ಲಿ ಬೆಳೆದು ತಂದಿದ್ದ ತಾಜಾ ತರಕಾರಿಗಳನ್ನು ಅತ್ಯಂತ ಉತ್ಸಾಹದಿಂದ ಮಾರಾಟ ಮಾಡುವಲ್ಲಿ ನಿರತರಾಗಿದ್ದು ಕಂಡು ಬಂದಿತು. ಪೋಷಕರು, ಸಾರ್ವಜನಿಕರು ಮಕ್ಕಳ ಸಂತೆಗೆ ಆಗಮಿಸಿ ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಹುರಿದುಂಬಿಸಿದರು.

ತರಕಾರಿ, ಸೊಪ್ಪು, ಹಣ್ಣುಗಳು, ದಿನಸಿ ವಸ್ತು, ಸ್ವಚ್ಛ ಹಾಗೂ ಪರಿಶುದ್ಧ ತಿಂಡಿ-ತಿನಿಸುಗಳು  ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ತಂದು ಅವುಗಳ ಪ್ರಚಾರ ಮಾಡುತ್ತಾ ಬಿರುಸಿನ ವ್ಯಾಪಾರದ ಅನುಭವ ಪಡೆದರು.

ವಿದ್ಯಾರ್ಥಿಗಳು ಸಂತೆ ಮೇಳದಲ್ಲಿ ವಿಶೇಷವಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಟ್ಟಿರುವುದು ಗಮನಾರ್ಹವಾಗಿತ್ತು. ಇದನ್ನು ಗಮನಿಸಿದ ಪೋಷಕರು, ಗ್ರಾಮಸ್ಥರು, ಸಂತೆ ಮೇಳದಲ್ಲಿ ಖರೀದಿಗೆ ಬಂದ ಸಾರ್ವಜನಿಕರು ಮಕ್ಕಳ ಉತ್ತಮ ಬೆಳವಣಿಗೆ ನೋಡಿ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೆ ಅನೇಕ ಪೋಷಕರು ಈ ಚಟುವಟಿಕೆಗೆ ಪೂರಕವಾಗಿ ಸಹಕರಿಸಿದ್ದು ಕಂಡುಬoದಿತು.

ಈ ವೇಳೆ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಜಿ.ಯಶೋಧ, ಮುಖ್ಯೋಪಾಧ್ಯಯ ಸಿದ್ದಪ್ಪ, ಶಿಕ್ಷಕ ಬಸವರಾಜಪ್ಪ   ಅರಣ್ಯ ಇಲಾಖೆ ನಿವೃತ್ತ ಅರಣ್ಯ ರಕ್ಷಕ ರಾಮಪ್ಪ ಜಡ್ಡಳ್ಳಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜಪ್ಪ, ಗ್ತಾಮಸ್ಥರಾದ ವಿರೇಶ್, ವೀರಭದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.

makkala sante, ಮಕ್ಕಳ ಸಂತೆ

ಇನ್ನೊಂದೆಡೆ  ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆ ಕುಪ್ಪಗಡ್ಡೆ  ಯಲ್ಲಿ ಮಕ್ಕಳ ಸಂತೆ ಗಣಿತ ಮೇಳ ಏರ್ಪಡಿಸಲಾಗಿತ್ತು, ಈ ಸಂತೆ ಮೇಳದಲ್ಲಿ ವಿದ್ಯಾರ್ಥಿಗಳು ಹಣ್ಣು, ತರಕಾರಿ, ಹೂವು, ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಿ ತಮ್ಮ ವ್ಯಾಪಾರ ಕೌಶಲ್ಯ ಪ್ರದರ್ಶಿಸಿ ಸಡಗರಪಟ್ಟರು.

makkala sante, ಮಕ್ಕಳ ಸಂತೆ

ಶುಕ್ರವಾರ ನಡೆದ ಮಕ್ಕಳ  ಸಂತೆಯಲ್ಲಿ ಸಿ ಆರ್ ಪಿ ಮಧು ಕೆ ಎಂ ಅವರು ಮಕ್ಕಳಿಂದ ಸ್ವತಃ ತರಕಾರಿ ಖರೀದಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಪ್ರಜ್ಞೆ ಬೆಳೆಸಲು ಹಾಗೂ ಗಣಿತ ಜ್ಞಾನ ಹೆಚ್ಚಿಸಲು ಇಲಾಖೆಯಿಂದ ಪಠ್ಯೇತರ ಚಟುವಟಿಕೆಯಾಗಿ ಶಾಲೆಗಳಲ್ಲಿ ಮಕ್ಕಳ ಸಂತೆ ಏರ್ಪಡಿಸಲಾಗುತ್ತದೆ, ಮಕ್ಕಳು ಇಂತಹ ಚಟುವಟಿಕೆಗಳ ಮೂಲಕ ಪರಸ್ಪರ ಬೆರೆಯುವ, ಸಂಭ್ರಮಿಸುವ ಜೊತೆಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದರು.

makkala sante, ಮಕ್ಕಳ ಸಂತೆ

ಶಾಲಾ ಮುಖ್ಯೋಪಧ್ಯಾಯಿನಿ ಜ್ಯೋತಿ ಬಿ ಎಲ್ ಮಾತನಾಡಿ ಶೈಕ್ಷಣಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆ  ಗಣಿತ ಮೇಳಗಳು ಉತ್ತಮ ವೇದಿಕೆಯಾಗಿದೆ ವಿದ್ಯಾರ್ಥಿಗಳಿಗೆ ಓದು ಮುಖ್ಯ, ಗುರಿ ಇಟ್ಟುಕೊಂಡು ಚೆನ್ನಾಗಿ ಓದಿ ತಮ್ಮಗುರಿ ಸಾಧಿಸಲು ಗಮನ ನೀಡಬೇಕು, ಶಿಕ್ಷಕರು, ಪೋಷಕರು ನೀಡುವ ಮಾರ್ಗದರ್ಶನ ಅನುಸರಿಸಿ ಆದರ್ಶ ಗುಣ ರೂಢಿಸಿಕೊಳ್ಳಬೇಕು ಎಂದು ಹೇಳಿದರು.


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು