SHIVAMOGGA | Jan 21, 2024 | ಶಿವಮೊಗ್ಗದಿಂದ ಕಳಸಕ್ಕೆ ಹೋಗುತ್ತಿದ್ದ ಗ್ಯಾಸ್ ಲಾರಿಯೊಂದು ಪಲ್ಟಿಯಾದ ಘಟನೆ ಬಗ್ಗೆ ನಿನ್ನೆ ಶನಿವಾರ ವರದಿಯಾಗಿದೆ. ಘಟನೆಯಲ್ಲಿ ಲಾರಿಯಲ್ಲಿದ್ದ ಸಿಲಿಂಡರ್ಗಳೆಲ್ಲಾ ರಸ್ತೆಯಲ್ಲಿ ಉರುಳಿಬಿದ್ದಿದ್ದವು. ಇನ್ನೂ ತಕ್ಷಣವೇ ಸಿಲಿಂಡರ್ಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.
ಚಿಕ್ಕಮಗಳೂರು ಕಳಸದಲ್ಲಿ ಘಟನೆ
ಶಿವಮೊಗ್ಗದಿಂದ ಕಳಸಕ್ಕೆ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಲಾರಿ ಹೋಗುತ್ತಿತ್ತು. ಕಳಸ ಬಾಳೆಹೊನ್ನೂರು ಮಾರ್ಗದಲ್ಲಿ ಯಡ್ರುಗೋಡು ಸಮೀಪ ಲಾರಿ ಎದುರು ಜಾನುವಾರು ಅಡ್ಡ ಬಂದಿದೆ. ಅದನ್ನ ತಪ್ಪಿಸುವ ಸಂದರ್ಭದಲ್ಲಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಮೇನ್ ರೋಡ್ನಲ್ಲಿ ಲಾರಿ ಒಂದು ಕಡೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟಕ್ಕೆ ಚಾಲಕನಿಗೂ ಸಹ ಹೆಚ್ಚು ಪೆಟ್ಟಾಗಿಲ್ಲ. ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪರಿಹಾರ ಮೊತ್ತ ಪಾವತಿಸುವಂತೆ ಇನ್ಶೂರೆನ್ಸ್ ಕಂಪೆನಿಗೆ ಆದೇಶ
ಜಿಲ್ಲೆಯ ಭದ್ರಾವತಿ ತಾಲೂಕಿನ ಅಪೂರ್ವಾ ಎಂಬುವವರು ಭದ್ರಾವತಿಯ ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ಕೆನರಾ ಎಚ್.ಎಸ್.ಬಿ.ಸಿ.-ಓ.ಬಿ.ಸಿ. ಲೈಫ್ ಇನ್ಶೂರೆನ್ಸ್ ಕಂ. ಹುಬ್ಬಳ್ಳಿ, ಕೆನರಾ ಎಚ್.ಎಸ್.ಬಿ.ಸಿ.-ಓ.ಬಿ.ಸಿ. ಲೈಫ್ ಇನ್ಶೂರೆನ್ಸ್ ಕಂ. ಗೋರ್ಗಾಂ, ಹರಿಯಾಣ ಮತ್ತು ಕೆನರಾ ಎಚ್.ಎಸ್.ಬಿ.ಸಿ.-ಓ.ಬಿ.ಸಿ. ನ್ಯೂಡೆಲ್ಲಿ ಎಂಬ ನಾಲ್ಕು ಜನರ ವಿರುದ್ದ ಸೇವಾನ್ಯೂನ್ಯತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಜಿ.ಪಿ.ಎ.ಹೋಲ್ಡರ್ ಮೂಲಕ ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರರಿಗೆ ವಿಮಾ ಮೊತ್ತ ನೀಡುವಂತೆ ಆಯೋಗದ ಪೀಠ ಆದೇಶಿಸಿದೆ.
ಅರ್ಜಿದಾರರು ಬಿ.ಇ. ವಿದ್ಯಾರ್ಥಿನಿ ಆಗಿದ್ದು, ಕೆನರಾ ಎಚ್.ಎಸ್.ಬಿ.ಸಿ.-ಓ.ಬಿ.ಸಿ. ಲೈಫ್ ಇನ್ಶೂರೆನ್ಸ್ ಕಂ.ಇವರಿಂದ ಶೈಕ್ಷಣಿಕ ಸಾಲವನ್ನು ಪಡೆದಿದ್ದು, ಸಾಲದ ಭದ್ರತೆಗಾಗಿ ಪಾಲಿಸಿ ಪಡೆದಿರುತ್ತಾರೆ. 5 ವರ್ಷಗಳ ನಂತರ ಪಾಲಿಸಿ ಮೊತ್ತವನ್ನು ಸೌಲಭ್ಯದೊಂದಿಗೆ ಹಿಂತಿರುಗಿಸುವಂತೆ ಕೇಳಿದಾಗ ವಿಮಾ ಪಾಲಿಸಿಯು ಲ್ಯಾಪ್ಸ್ ಕಂಡಿಶನ್ನಲ್ಲಿ ಇದೆ ಎಂದು ತಿಳಿಸಿ, ಸಲ್ಲಬೇಕಾದ ವಿಮಾ ಸೌಲಭ್ಯವನ್ನು ಒದಗಿಸಲು ನಿರಾಕರಿಸುತ್ತಾರೆ.
ಗ್ರಾಹಕರ ಆಯೋಗವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಫಿರ್ಯಾದಿದಾರರು ಹಾಜರುಪಡಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಎದುರುದಾರ ವಿಮಾಕಂಪೆನಿ ನಿರಾಕರಣೆಯು ಸೇವಾನ್ಯೂನ್ಯತೆಯಿಂದ ಕೂಡಿರುತ್ತದೆ ಎಂದು ತೀರ್ಮಾನಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸುತ್ತದೆ.
ವಿಮಾ ಕಂಪೆನಿಯು ಈ ಆದೇಶವಾದ 45 ದಿನಗಳೊಳಗಾಗಿ ಅರ್ಜಿದಾರರು ಪಾಲಿಸಿಯ ಪ್ರಿಮಿಯಮ್ಗೋಸ್ಕರ ಪಾವತಿಸಿದ ರೂ. 1,04,906/- ಗಳನ್ನು ಪಾಲಿಸಿಯ ಪ್ರಯೋಜನಗಳೊಂದಿಗೆ ವಾರ್ಷಿಕ ಶೇ.10 ಬಡ್ಡಿ ಸಮೇತ ಪಾವತಿಸತಕ್ಕದ್ದು ಮತ್ತು ರೂ.25,000 ಗಳನ್ನು ಮಾನಸಿಕ ಹಾನಿಗೆ ಪರಿಹಾರವಾಗಿ, ರೂ.5,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟೆ, ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ದಿ: 11-01-2024 ರಂದು ಆದೇಶಿಸಿರುತ್ತದೆ ಎಂದು ವಾರ್ತಾ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ
