SHIVAMOGGA | Jan 11, 2024 | ಶಿವಮೊಗ್ಗ ಜಿಲ್ಲೆ ಭದ್ರಾವತಿ ಯಲ್ಲಿ ಶಾಸಕರ ವಿರುದ್ಧ ಶಿವಮೊಗ್ಗದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಪ್ರತಿಭಟನೆ ನಡೆಸಿದೆ.
ಭದ್ರಾವತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಓ.ಸಿ., ಇಸ್ಪೀಟ್ ಮತ್ತು ಗಾಂಜಾ ಪ್ರಕರಣಗಳಿಗೆ ಕಡಿವಾಣ ಹಾಕು ವಂತೆ ಆಗ್ರಹಿಸಿ ಶಿವಮೊಗ್ಗ ಎಸ್ಪಿ ಕಚೇರಿ ಎದುರು ನಿನ್ನೆ ಪ್ರತಿಭಟನೆ ನಡೆಯಿತು. ಭದ್ರಾವತಿ ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿಗೌಡ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ. ಈ ವೇಳೆ ಭದ್ರಾವತಿ ತಾಲೂಕಿನಾದ್ಯಂತ ಓ.ಸಿ., ಇಸ್ಪೀಟ್ ಜೂಜುಗಳು, ಗಾಂಜಾ ಸೇವನೆಯಂಥ ಪ್ರಕರಣಗಳು ಹೆಚ್ಚುತ್ತಿವೆ. ಹಲವು ಬಾರಿ ಪೊಲೀಸ್ ಠಾಣೆಗಳಿಗೆ ದೂರು ಸಹ ನೀಡಲಾಗಿದೆ. ಅಧಿಕಾರಿಗಳ ಗಮನಕ್ಕೂ ತರಲಾಗಿದೆಯಾದರೂ ಈ ಸಂಬಂಧ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಲಾಗಿದೆ.
ಭದ್ರಾವತಿ ಶಾಸಕರ ಮಕ್ಕಳೇ ಅಕ್ರಮಕೂಟ ಕಟ್ಟಿಕೊಂಡು ರಾಜಕೀಯ ಲಾಭವನ್ನು ಬಳಸಿಕೊಂಡು ಅಧಿಕಾರಿಗಳಿಗೆ ಹಣದ ಆಮಿಷ ತೋರಿಸಿ. ಭದ್ರಾವತಿಯ ಜನರನ್ನು ದುಶ್ಚಟ ಗಳದಾಸರನ್ನಾಗಿ ಮಾಡುತ್ತಿದ್ದಾರೆ ಎಂದು ಎಸ್ಪಿಯವರಿಗೆ ಪ್ರತಿಭಟನಾಕಾರರು ದೂರಿದರು
ಇಸ್ಪೀಟ್ ದಂಧೆಯಂತೂ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನ ಪ್ರಶ್ನೆ ಮಾಡಿದವರ ವಿರುದ್ಧವೇ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಜಾತಿ ನಿಂಧನೆ ಕೇಸು ಹಾಕಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ತಮ್ಮ ಅಕ್ರಮ ದಂಧೆಗೆ ವಿರುದ್ಧವಾಗಿರುವ ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಬೆದರಿಕೆ ಹಾಕಲಾಗುತ್ತಿದೆ. ಅಲ್ಲದೆ ಆಡಳಿತ ಪಕ್ಷದವರು ಕೇಸು ಹಾಕಿಸಿಕೊಂಡರೇ ಒತ್ತಡ ಹೇರಿ ಕೇಸನ್ನು ತೆಗೆಸುತ್ತಾರೆ ಎಂದು ಎಸ್ಪಿ ಮಿಥುನ್ ಕುಮಾರ್ ರವರ ಬಳಿಯಲ್ಲಿ ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಕೆ.ಬಿ.ಪ್ರಸನ್ನಕುಮಾರ್, ದೀಪಕ್ ಸಿಂಗ್. ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ದಲಿತ ಮುಖಂಡ ಸುರೇಶ್ ಸೇರಿದಂತೆ ಪಕ್ಷಾತೀತವಾಗಿ ಭದ್ರಾವತಿಯ ಪ್ರಮುಖರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.