biodegradable pouch : ನಂದಿನಿ ಹಾಲು ಇನ್ನು ಪರಿಸರ ಸ್ನೇಹಿ, ಬಯೋಡಿಗ್ರೇಡಬಲ್ ಕವರ್ಗಳಲ್ಲಿ ಹಾಲಿನ ವಿತರಣೆಗೆ ಬಮೂಲ್ ಚಾಲನೆ
ಬೆಂಗಳೂರು: ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಬೆಂಗಳೂರು ಹಾಲು ಒಕ್ಕೂಟ (ಬಮೂಲ್), ವಿಶ್ವ ಪರಿಸರ ದಿನದಂದು ಪರಿಸರ ಸ್ನೇಹಿ ಪ್ಯಾಕೇಜಿಂಗ್ಗೆ ಚಾಲನೆ ನೀಡಿದೆ. ಇನ್ನು ಮುಂದೆ ನಂದಿನಿ ಹಾಲನ್ನು ಪರಿಸರಕ್ಕೆ ಹಾನಿಕಾರಕವಾದ ಪಾಲಿಥಿನ್ ಕವರ್ಗಳ ಬದಲಿಗೆ, ಸಂಪೂರ್ಣವಾಗಿ ಜೈವಿಕವಾಗಿ ವಿಘಟನೆಗೊಳ್ಳುವ (ಬಯೋಡಿಗ್ರೇಡಬಲ್) ಕವರ್ಗಳಲ್ಲಿ ಗ್ರಾಹಕರಿಗೆ ವಿತರಿಸಲಿದೆ. ದೇಶದಲ್ಲೇ ಇದೊಂದು ಪ್ರಥಮ ಪ್ರಯತ್ನವಾಗಿದ್ದು, ಕನಕಪುರ ಮೆಗಾಡೇರಿಯಿಂದ ಈ ವಿನೂತನ ಯೋಜನೆಗೆ ಚಾಲನೆ ದೊರೆತಿದೆ.
biodegradable pouch ಪ್ರಸ್ತುತ, ಹಾಲಿನ ಪ್ಯಾಕೇಜಿಂಗ್ಗೆ ಬಳಸಲಾಗುತ್ತಿದ್ದ ಪಾಲಿಥಿನ್ ಕವರ್ಗಳು ಪ್ಲಾಸ್ಟಿಕ್ ನಿಷೇಧದಿಂದ ವಿನಾಯ್ತಿ ಪಡೆದಿದ್ದರೂ, ಅವುಗಳಿಂದ ಪರಿಸರಕ್ಕೆ ಹೆಚ್ಚಿನ ತ್ಯಾಜ್ಯಗಳು ಸೇರುತ್ತಿದೆ. ಇದರಿಂದಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಬಮೂಲ್ ಈ ಪರಿಸರ ಸ್ನೇಹಿ ಮಾರ್ಗವನ್ನು ಆಯ್ದುಕೊಂಡಿದೆ. ಕನಕಪುರದ ಶಿವನಹಳ್ಳಿ ಬಳಿ ಇರುವ ಮೆಗಾಡೇರಿ ಪ್ಲಾಂಟ್ನಲ್ಲಿ ಹೊಸದಾಗಿ ಸಿದ್ಧಪಡಿಸಲಾದ ಡಿ-ಕಂಪೋಸಬಲ್ ಕವರ್ಗಳನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಈಗಾಗಲೇ ಸುಮಾರು 2 ಲಕ್ಷ ಬಯೋಡಿಗ್ರೇಡಬಲ್ ಕವರ್ಗಳಲ್ಲಿ ಹಾಲು ಪ್ಯಾಕ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟದ ವ್ಯಾಪ್ತಿಯ ಎಲ್ಲಾ ಹಾಲನ್ನು ಇದೇ ಪರಿಸರ ಸ್ನೇಹಿ ಕವರ್ಗಳಲ್ಲಿ ಪ್ಯಾಕ್ ಮಾಡುವ ಗುರಿಯನ್ನು ಬಮೂಲ್ ಹೊಂದಿದೆ.

ಬೆಂಗಳೂರು ಮಹಾನಗರದ ಅರ್ಧಭಾಗದಲ್ಲಿ ಪ್ರತಿದಿನ ಸುಮಾರು 14 ಲಕ್ಷ ಲೀಟರ್ ಹಾಲು ಮತ್ತು ಮೊಸರನ್ನು ಮಾರಾಟ ಮಾಡುವ ಬಮೂಲ್, ಪ್ರತಿದಿನ 20 ರಿಂದ 25 ಲಕ್ಷ ಹಾಲಿನ ಕವರ್ಗಳನ್ನು ಬಳಸುತ್ತದೆ. ಈ ಎಲ್ಲಾ ಕವರ್ಗಳು ದೊಡ್ಡ ಪ್ರಮಾಣದ ತ್ಯಾಜ್ಯವಾಗಿ ಬದಲಾಗುತ್ತಿದ್ದು, ಹೊಸ ಜೈವಿಕ ವಿಘಟನೆಗೊಳ್ಳುವ ಕವರ್ಗಳ ಬಳಕೆಯಿಂದ ಮಹಾನಗರದ ಕಸದ ಸಮಸ್ಯೆಗೆ ಗಣನೀಯ ಪರಿಹಾರ ದೊರೆಯಲಿದೆ.

ಪ್ರಸ್ತುತ ಬಳಸುತ್ತಿರುವ ಹಾಲಿನ ಕವರ್ಗಳು ಪರಿಸರದಲ್ಲಿ ಕರಗಲು ಕನಿಷ್ಠ 500 ವರ್ಷ ಬೇಕಾಗುವ ಕಡೆ, ಹೊಸ ಬಯೋಡಿಗ್ರೇಡಬಲ್ ಪ್ಲಾಸ್ಟಿಕ್ ಕವರ್ಗಳು ಕೇವಲ 6 ತಿಂಗಳಲ್ಲಿ ವಿಘಟನೆಗೊಳ್ಳುತ್ತವೆ. ವಿದೇಶಿ ತಂತ್ರಜ್ಞಾನವನ್ನು ಬಳಸಿ ಜೋಳದಿಂದ ತಯಾರಿಸಲಾಗುವ ಈ ಪರಿಸರ ಸ್ನೇಹಿ ಕವರ್ಗಳು, ಪ್ರಸ್ತುತ ಇರುವ ಕವರ್ಗಳಿಗಿಂತ ಸ್ವಲ್ಪ ಹೆಚ್ಚು ಬೆಲೆ ಬಾಳುತ್ತವೆ.
biodegradable pouch ಈ ಕುರಿತು ಮಾಜಿ ಸಂಸದ ಹಾಗೂ ಬಮೂಲ್ ನಿರ್ದೇಶಕ ಡಿ.ಕೆ.ಸುರೇಶ್ ಅವರು ಮಾತನಾಡಿ, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಜೈವಿಕವಾಗಿ ವಿಘಟನೀಯ ಕವರ್ನಲ್ಲಿ ಹಾಲು ಪ್ಯಾಕಿಂಗ್ ಮಾಡುವ ಕಾರ್ಯಕ್ಕೆ ಬಮೂಲ್ ಚಾಲನೆ ನೀಡಿರುವುದು ಒಂದು ವಿನೂತನ ಹೆಜ್ಜೆ ಎಂದು ತಿಳಿಸಿದ್ದಾರೆ. ಜೂನ್ 5ರಂದು ಕನಕಪುರ ಮೆಗಾಡೇರಿಯಲ್ಲಿ ಡಿ.ಕೆ.ಸುರೇಶ್ ಅವರು ಈ ಪರಿಸರ ಸ್ನೇಹಿ ಕವರ್ಗಳ ಉತ್ಪಾದನೆಯನ್ನು ಪರಿಶೀಲಿಸಿದರು.