Feb 11, 2024 | ಶಿವಮೊಗ್ಗ -ಯಶವಂತಪುರ ಟ್ರೈನ್ನಲ್ಲಿ ಪ್ರಯಾಣಿಸ್ತಿದ್ದ ಶಿವಮೊಗ್ಗ ಮೂಲದ ಅರಣ್ಯ ಇಲಾಖೆ ಉದ್ಯೋಗಿ ಮಹಿಳೆ ಸಾವಿನ ಪ್ರಕರಣದಲ್ಲಿ ಇದುವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಅಮಾನುಷವಾಗಿ ಕೊಲೆಯಾಗಿರುವ ಮಹಿಳೆಯ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಗಳು ಹೆಚ್ಚುತ್ತಿವೆ. ಈ ಸಂಬಂಧ ಜಸ್ಟೀಸ್ ಫಾರ್ ಅನ್ನಪೂರ್ಣ ಅಭಿಯಾನವೂ ಆರಂಭವಾಗಿದೆ.
ಇದರ ನಡುವೆ ಮಲೆನಾಡು ಟುಡೆ ಅನ್ನಪೂರ್ಣರವರ ಸಾವಿನ ಘಟನೆ ಸಂಬಂಧ ನಿರಂತರ ವರದಿ ಪ್ರಸಾರ ಮಾಡಿದೆ. ಇದೀಗ ಶಿವಮೊಗ್ಗದ ಅನ್ನಪೂರ್ಣ ಅವರಿಗೆ ಶನಿವಾರ ವಿವಿಧ ಮಹಿಳಾ ಸಂಘಟನೆಗಳ ಸಮಾನ ಮನಸ್ಕರ ವೇದಿಕೆ ವತಿಯಿಂದ ರೈಲ್ವೆ ನಿಲ್ದಾಣ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದೆ. ಅಲ್ಲದೆ ರೈಲ್ವೆ ಇಲಾಖೆಯ ಪೊಲೀಸ್ ಅಧಿಕಾರಿಗಳಿಗೆ ಪ್ರಕರಣದ ತನಿಖೆಯ ಸಂಬಂಧ ಮನವಿ ಸಲ್ಲಿಸಿ ಒತ್ತಡ ಸಹ ಹೇರಲಾಯ್ತು..
ಅನ್ನಪೂರ್ಣರವರ ಸಾವಿನ ವಿಚಾರವಾಗಿ ವಿಶೇಷ ತನಿಖಾದಳ ರಚನೆಯಾಗಬೇಕು. ಆ ಮೂಲಕ ಅಪರಾಧಿಗಳನ್ನ ಹಿಡಿದು ಅವರಿಗೆ ಸೂಕ್ತ ಶಿಕ್ಷೆಯಾಗಬೇಕು ಅಲ್ಲದೆ ಅನ್ನಪೂರ್ಣರವರ ಕುಟುಂಬಸ್ಥರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ ಮಹಿಳಾ ಸಂಘಟನೆಗಳ ಸದಸ್ಯರು, ಮಹಿಳೆಯರ ರೈಲು ಪ್ರಯಾಣ ಸಂಬಂಧ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದ್ರು.
ಹೆಣ್ಣು ಮಕ್ಕಳು ಪ್ರಯಾಣ ಮಾಡುವಾಗ ಅತ್ಯಂತ ಜಾಗೃತಿವಹಿಸಬೇಕು ಎಂದು ಇದೇ ವೇಳೆ ಮಹಿಳೆಯರಲ್ಲಿ ಜಾಗೃತಿ ಸಹ ಮೂಡಿಸಲಾಯ್ತು. ಇನ್ನೂ ಇದೇ ವೇಳೆ ಮಾತನಾಡಿದ ರೈಲ್ವೆ ಅಧಿಕಾರಿ ಪ್ರಕಾಶ್ ಮಹಿಳೆಯರು ರೈಲ್ವೆಯಲ್ಲಿ ಪ್ರಯಣಿಸುವಾಗ ಎಚ್ಚರದಿಂದ ಇರಬೇಕು. ಒಡವೆಗಳ ಪ್ರದರ್ಶನ ಬೇಡ, ಅಪರಿಚಿತರ ಸ್ನೇಹ ಬೇಡ, ನಿದ್ರೆ ಹೋಗಬೇಡಿ, ಚಲಿಸುವ ರೈಲನ್ನು ಹತ್ತಬೇಡಿ, ಮಧ್ಯ ಮಧ್ಯ ಇಳಿಯಬೇಡಿ, ಕಳ್ಳರ ಬಗ್ಗೆ ಎಚ್ಚರದಿಂದ ಇರಿ ಎಂದು ಸಲಹೆ ನೀಡಿದ್ರು.
