ರಿಪ್ಪನ್ ಪೇಟೆ ತಾಲ್ಲೂಕಿನ ಕೆರೆಹಳ್ಳಿ ಪ್ರದೇಶದಲ್ಲಿ ಒಂಟಿ ಕಾಡಾನೆಯೊಂದು ದಾಳಿ ನಡೆಸಿಹಾನಿ ಉಂಟುಮಾಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಡಾನೆ ಬಾಳೆ ತೋಟ ಹಾಗೂ ಭತ್ತದ ಗದ್ದೆಗಳನ್ನು ನಾಶಮಾಡಿರುವ ಹಿನ್ನೆಲೆಯಲ್ಲಿ, ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ ಪಾಟೀಲ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಒಂಟಿ ಕಾಡಾನೆಯು ಶಿಕಾರಿಪುರದ ಆರು ಆನೆಗಳ ಗುಂಪಿನಿಂದ ಬೇರ್ಪಟ್ಟಿದೆ ಎಂದು ಮಾಹಿತಿ ನೀಡಿದರು. ಈ ಆನೆಯನ್ನು ನಿನ್ನೆ ರಾತ್ರಿ ಒಂಬತ್ತನೇ ಮೈಲಿಕಲ್ಲು ಬಳಿ ಓಡಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ, ಆನೆಯು ಈ ಭಾಗವಾದ ಆಲುವಳ್ಳಿಗೆ ಬಂದ ನಂತರ ಕೆರೆಹಳ್ಳಿಗೆ ಪ್ರವೇಶಿಸಿ ಬಾಳೆಗಿಡಗಳು ಮತ್ತು ಗದ್ದೆಗಳನ್ನು ನಾಶಪಡಿಸಿದೆ. ನಂತರ ತಮ್ಮಡಿಕೊಪ್ಪ ಮಾರ್ಗವಾಗಿ ಮಳವಳ್ಳಿ ಗ್ರಾಮದ ಕಡೆಗೆ ತೆರಳಿದೆ. ಗ್ರಾಮಸ್ಥರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ ಅರಣ್ಯಾಧಿಕಾರಿಗಳು, ಇಂದು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಓಡಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಹಿಂಭಾಗದ ಕೆಳಗಿನ ಕೆರೆಹಳ್ಳಿಯ ಟೀಕಪ್ಪ ಗೌಡರ ತೋಟಕ್ಕೆ ನುಗ್ಗಿದ ಕಾಡಾನೆಯು ಬಾಳೆಗಿಡಗಳನ್ನು ಮುರಿದು ಸಂಪೂರ್ಣ ಹಾನಿ ಮಾಡಿದೆ. ಇದರ ಜೊತೆಗೆ ಅಕ್ಕಪಕ್ಕದ ಭತ್ತದ ಗದ್ದೆಗಳೂ ಗಂಭೀರವಾಗಿ ನಾಶವಾಗಿವೆ. ಭಾನುವಾರ ರಾತ್ರಿ ಕೆರೆಹಳ್ಳಿಯ ನಾಗರದೇವರ ಗುಡಿ ಹತ್ತಿರ ಲದ್ದಿ ಹಾಕಿದ್ದ ಆನೆಯು ತೋಟದ ಪ್ರದೇಶಕ್ಕೆ ಪ್ರವೇಶಿಸಿ ಈ ಹಾನಿಯನ್ನು ಮಾಡಿದೆ. ಟೀಕಪ್ಪ ಗೌಡರ ತೋಟಕ್ಕೆ ಹಾನಿ ಮಾಡಿದ ನಂತರ, ಅದು ಸಿದ್ದಪ್ಪನ ಗುಡಿ ಮಾರ್ಗವಾಗಿ ದೂನ ಗ್ರಾಮಕ್ಕೆ ಸಾಗಿದೆ. ಅಲ್ಲಿಂದ ಶಿವಾಜಿರಾಯರ ತೋಟವನ್ನು ಸಹ ತುಳಿದು ಹಾಳು ಮಾಡಿ, ಅಂತಿಮವಾಗಿ ಬೈರಾಪುರ ಪ್ಲಾಂಟೇಶನ್ ಕಡೆಗೆ ಸಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Ripponpet Wild Elephant Crop Damage

