SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 30, 2024
ಶಿವಮೊಗ್ಗ| ಅಧಿಕೃತವಾಗಿ ಅಲೆಮಾರಿ ಪಟ್ಟಿಯಲ್ಲಿರುವ ಕೊರಚ ಕೊರಮ ಸಮುದಾಯವನ್ನು ಹೊರಗಿಡುವಂತೆ ವಿಧಾನ ಪರಿಷತ್ ಸದಸ್ಯ ಛಲವಾಧಿ ನಾರಾಯಣ ಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶಿವಮೊಗ್ಗದ ಜಿಲ್ಲಾ ಕೊರಚ ಮಹಾ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಶಿವಮೊಗ್ಗ ಜಿಲ್ಲಾ ಕೊರಚ ಸಂಘದ ರಾಜ್ಯಾಧ್ಯಕ್ಷ ಆದರ್ಶ್ ಎಲ್ಲಪ್ಪ ಮಾತನಾಡಿ ಕಳೆದ ಡಿ. 18ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ 49 ಸಮುದಾಯಗಳ ಸಂಘಟನೆಗಳ ಹೆಸರಿನಲ್ಲಿ ಸುವರ್ಣಸೌಧದ ಹೊರಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿದ ಕೆಲವು ಪುಡಿ ನಾಯಕರು ಅಲೆಮಾರಿ ಸಮುದಾಯಗಳಲ್ಲಿ ಒಡಕು ತರುವಂತಹ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು. ಅಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಛಲವಾದಿ ನಾರಾಯಣಸ್ವಾಮಿ ಅವರು ಅಲೆಮಾರಿ ಸಮುದಾಯಗಳ ಕುರಿತು ಇದುವರೆಗೂ ಎಲ್ಲೂ ಧ್ವನಿ ಎತ್ತಿರಲಿಲ್ಲ ಆದರೆ ಅಂದು ಅಧಿಕೃತವಾಗಿ ಅಲೆಮಾರಿ ಪಟ್ಟಿಯಲ್ಲಿರುವ ಕೊರಚ- ಕೊರಮ ಸಮುದಾಯವನ್ನು ಹೊರಗಿಡುವ ಹೇಳಿಕೆ ನೀಡಿದ್ದಾರೆ. ಅವರು ಆ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಪರಿಶಿಷ್ಟ ಜಾತಿಯ 51 ಜಾತಿಗಳನ್ನು ಒಳಗೊಂಡಂತೆ ಅಲೆಮಾರಿ ನಿಗಮ ಸ್ಥಾಪನೆ ಮಾಡಿರುವುದು ಬಿಜೆಪಿ ಸರ್ಕಾರ. ಅಲೆಮಾರಿಗಳು ಅಮಾಯಕರು, ಅವಿದ್ಯಾವಂತರು ಎಂದು ತಿಳಿದು ಸಣ್ಣ ಸಣ್ಣ ಸೂಕ್ಷ್ಮ ಸಮುದಾಯಗಳನ್ನು ಎತ್ತಿಕಟ್ಟಿ ಜಗಳ ತಂದಿಡುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಲೆಮಾರಿಗಳ ಪ್ರತ್ಯೇಕ ಪಟ್ಟಿ ಮಾಡಿ ಅಲೆಮಾರಿಗಳನ್ನು ಗುರುತಿಸಿದ ಕಾರಣ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಪ್ರೋತ್ಸಾಹಿಸಿದಂತಾಗಿದೆ. ಹಾಗೂ ವಸತಿ ಕಲ್ಪಿಸಿಕೊಳ್ಳಲು ಅನುಕೂಲವಾಗಿದೆ. ಆದರೆ, ಕೆಲ ಸಮುದಾಯಗಳ ಸ್ವಾರ್ಥ ಪುಡಿ ನಾಯಕರು ಇಲ್ಲ ಸಲ್ಲದ ವಿಚಾರಗಳನ್ನು ಅಲೆಮಾರಿಗಳಿಗೆ ತುಂಬಿ ಕೊರಚ-ಕೊರಮರು ಬಲಾಢ್ಯರು. ಸಣ್ಣ ಸಣ್ಣ ಸಮುದಾಯಗಳ ಅನುದಾನ, ಮೀಸಲಾತಿ ಕಬಳಿಸುತ್ತಿದ್ದಾರೆ ಎಂದು ಹೇಳುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೆ ಚಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಖಂಡನೀಯ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
SUMMARY | The District Koracha Mahasangha of Shivamogga staged a protest in front of the Deputy Commissioner’s office against the statement of MLC Chalavadi Narayana Swamy.
KEYWORDS | Koracha Mahasangha, Chalavadi Narayana Swamy,protest, Shivamogga,