SHIVAMOGGA | MALENADUTODAY NEWS | ಮಲೆನಾಡು ಟುಡೆ Dec 24, 2024
ಶಿವಮೊಗ್ಗ ಪೊಲೀಸರು ಕಷ್ಟಕ್ಕೆ ಆಗುತ್ತಾರೆ ಎನ್ನುವ ಮಾತು ಸುಳ್ಳಲ್ಲ ಎಂಬುದು ಈಗಾಗಲೇ ಹಲವು ಸಲ ಸಾಬೀತಾಗಿದೆ. ಇದಕ್ಕೆ ಇನ್ನೊಂದು ಸಾಕ್ಷಿ ಸಿಕ್ಕಿದೆ. ಘಟನೆಯೊಂದರಲ್ಲಿ ಕಾಡಿನ ನಡುವೆ ರೋಡಿನಲ್ಲಿ ಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಖದ್ದು ಪ್ರಥಮ ಚಿಕಿತ್ಸೆ ನೀಡಿ, ತಮ್ಮದೇ ವಾಹನದಲ್ಲಿ ಅವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಇಬ್ಬರು ಪೊಲೀಸ್ ಸಿಬ್ಬಂದಿಯ ಬಗ್ಗೆ ಇದೀಗ ಶಿವಮೊಗ್ಗದ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ರಿಪ್ಪನ್ಪೇಟೆಯ ಗವಟೂರು ಬಳಿ ನಡೆದ ಘಟನೆಯಿದು. ಇಲ್ಲಿನ ಚಿಕ್ಕಜೇನಿ ನಿವಾಸಿ ಬಾಸ್ಕರ್ ಆಚಾರಿ ಎಂಬವರು ರಿಪ್ಪನ್ಪೇಟೆಯಿಂದ ತಮ್ಮ ಊರಿಗೆ ಹೋಗುತ್ತಿದ್ದರು.
ಈ ವೇಳೆ ಅವರಿಗೆ ಯಾರಾದರೂ ಗುದ್ದಿದರೋ ಅಥವಾ ಕಾಡು ಪ್ರಾಣಿ ಅಡ್ಡಬಂತೋ ಅಥವಾ ಇನ್ನೇನಾದರೂ ಆಯಿತೋ ಗೊತ್ತಿಲ್ಲ. ಕಾಡಿನ ನಿರ್ಜನ ಪ್ರದೇಶದ ರಸ್ತೆಯಲ್ಲಿ ಅವರು ಬೈಕ್ನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಬಿದ್ದ ಹೊಡೆತಕ್ಕೆ ಅವರಿಗೆ ಮಾತು ಸಹ ಆಡಲು ಆಗುತ್ತಿರಲಿಲ್ಲ. ಸುಮಾರು ಹೊತ್ತು ಅವರು ಅಸಹಾಯಕರಾಗಿ ರಕ್ತದ ಮಡುವಲ್ಲಿದ್ದರು.
ಇನ್ನೂ ಅದೇ ಮಾರ್ಗವಾಗಿ ಹೈವೆ ಪೆಟ್ರೋಲ್ ವೆಹಿಕಲ್ನಲ್ಲಿ ಎಎಸ್ಐ ಗಣಪತಿ ರಾವ್ ಹಾಗೂ ಡ್ರೈವರ್ ಜಗದೀಶ್ ಬರುತ್ತಿದ್ದರು. ದಾರಿಯಲ್ಲಿ ಏನೋ ಆಗಿದೆ ಎನ್ನುವ ಲಕ್ಷಣ ಕಂಡಿದ್ದರಿಂದ ತಕ್ಷಣ ಗಾಡಿ ನಿಲ್ಲಿಸಿ ನೋಡಿದ್ದಾರೆ. ಈ ವೇಳೆ ಬಾಸ್ಕರ್ರವರು ಕಂಡಿದ್ದಾರೆ. ತಕ್ಷಣವೇ ವೆಹಿಕಲ್ನಲ್ಲಿದ್ದ ಫಸ್ಟ್ ಏಡ್ ಕಿಟ್ ಬಳಸಿ ಆತನಿಗೆ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ.
ಈ ವೇಳೆ ಅದೇ ದಾರಿಯಲ್ಲಿ ಬಂದ ಕೆಲವು ಬೈಕ್ ಸವಾರರು ಸಹ ನಿಂತು ಪೊಲೀಸರಿಗೆ ಸಹಾಯ ಮಾಡಿದ್ದಾರೆ. ಎಲ್ಲರೂ ಸೇರಿಕೊಂಡು ಬಾಸ್ಕರ್ರನ್ನ ಎತ್ತಿಕೊಂಡು ಪೊಲೀಸ್ ಹೈವೆ ಪೆಟ್ರೋಲ್ ವೆಹಿಕಲ್ನಲ್ಲಿ ಮಲಗಿಸಿದ್ದಾರೆ. ಅಲ್ಲಿಂದ ಸೀದಾ ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕರೆದೊಯ್ದ ಪೊಲೀಸ್ ಸಿಬ್ಬಂದಿ ಅಲ್ಲಿನ ವೈದ್ಯರ ಬಳಿ ಮಾತನಾಡಿ ತುರ್ತು ಚಿಕಿತ್ಸೆ ಒದಗಿಸಿದ್ದಾರೆ.
ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅವರನ್ನ ರವಾನೆ ಮಾಡಲು ನೆರೆವಾಗಿದ್ದಾರೆ. ಸದ್ಯ ಬಾಸ್ಕರ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಡಿದ ಸಹಾಯ ಈಗೆಲ್ಲಾ ಜನರಿಗೆ ಗೊತ್ತಾಗಬೇಕಾದರೆ ಅದರ ವಿಡಿಯೋ ಇರಬೇಕು. ಇಲ್ಲು ಸಹ ಸ್ಥಳೀಯರೊಬ್ಬರು ಪೊಲೀಸರ ನೆರವಿನ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾಕ್ಕೆ ಹಾಕಿ, ನಮ್ ಶಿವಮೊಗ್ಗ ಪೊಲೀಸರ ಬಗ್ಗೆ ಹಾಡಿ ಹೊಗಳಿದ್ದಾರೆ. ವಿಡಿಯೋ ನೋಡಿದ ಜನರು ಪೊಲೀಸರ ಕೆಲಸ ಜೀವ ಉಳಿಸುವ ಕೆಲಸ ಎನ್ನುತ್ತಿದ್ದಾರೆ.
SUMMARY | Police help man who fell off bike on highway
KEY WORDS |Police help man who fell off bike on highway