SHIVAMOGGA | Jan 22, 2024 | ಶಿವಮೊಗ್ಗ ನಗರದ ಶಿವಪ್ಪನಾಯಕ ಪ್ರತಿಮೆ ಬಳಿಯಲ್ಲಿ ಸಿಹಿ ಹಂಚು ಸಂದರ್ಭದಲ್ಲಿ ಮಹಿಳೆಯೊಬ್ಬರು ಘೊಷಣೆ ಕೂಗಿದ ಕಾರಣ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೆ ಪೊಲೀಸರು ಮಹಿಳೆಯನ್ನು ಅಲ್ಲಿಂದ ಸ್ಥಳಾಂತರಿಸಿದರು.
ಶಿವಪ್ಪ ನಾಯಕ ಪ್ರತಿಮೆ
ಶಿವಮೊಗ್ಗ ನಗರದ ಶಿವಪ್ಪನಾಯಕರ ಪ್ರತಿಮೆ ಬಳಿಯಲ್ಲಿ ಸಿಹಿ ಹಂಚಲಾಗುತ್ತಿತ್ತು. ಅಯೋಧ್ಯೆಯ ಶ್ರೀರಾಮಮಂದಿರ ದಲ್ಲಿ ಶ್ರೀರಾಮಚಂದ್ರರ ಪ್ರಾಣಪ್ರತಿಷ್ಟೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿಹಿ ಹಂಚಲಾಗುತ್ತಿತ್ತು. ಈ ವೇಳೆ ಹಲವರು ಅಲ್ಲಿ ಜಮಾಯಿಸಿದ್ದರು. ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸಂಚಾರ ವ್ಯವಸ್ಥೆ ನಿರ್ವಹಿಸುತ್ತಿದ್ದರು. ಆ ಮಾರ್ಗದಲ್ಲಿ ಬರುತ್ತಿದ್ದ ವಾಹನಗಳನ್ನು ಮುಂದಕ್ಕೆ ಕಳುಹಿಸುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಮಹಿಳೆ ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡಿದ್ದಾರೆ.
ಅಷ್ಟೊತ್ತಿಗೆ ಅಲ್ಲಿದ್ದ ಶ್ರೀರಾಮಭಕ್ತರು ಜೈ ಶ್ರೀರಾಮ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ಆಗ ಮಹಿಳೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾರೆ. ಹೀಗಾಗಿ ಕೆಲಕಾಲ ಗೊಂದಲ ಉಂಟಾಯ್ತು. ಇದರ ನಡುವೆ ಸ್ಥಳದಲ್ಲಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರ ಪುತ್ರ ಕೆ.ಇ.ಕಾಂತೇಶ್ ಪೊಲೀಸರಿಗೆ ಇದೇನು ನ್ಯೂಸೆನ್ಸ್ ಕ್ರಿಯೆಟ್ ಮಾಡುತ್ತಿದ್ದೀರಾ? ಅರೆಸ್ಟ್ ಮಾಡಲು ಆಗೋದಿಲ್ವೇ ಎಂದು ಆಕ್ರೋಶ ಹೊರಹಾಕಿದ್ದರು.
ತಕ್ಷಣವೇ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಪೊಲೀಸ್ ವ್ಯಾನ್ನಲ್ಲಿ ಕೂರಿಸಲು ಮುಂದಾದರು. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಮಹಿಳಾ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಪೊಲೀಸ್ ವ್ಯಾನ್ನಲ್ಲಿ ಕೂರಿಸಿಕೊಂಡು ಮುಂದಕ್ಕೆ ಸಾಗಿದರು.
ಎಸ್ಪಿ ಮಿಥುನ್ ಕುಮಾರ್
ಇನ್ನೂ ಈ ಸಂಬಂದ ವಾಟ್ಸ್ಯಾಪ್ ಸಂದೇಶದ ಮೂಲಕ ಮಾಹಿತಿ ನೀಡಿರುವ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ರವರು ಮಹಿಳೆಯ ತಂದೆಯವರು ಈ ಸಂಬಂಧ ಹೇಳಿಕೆ ನೀಡಿದ್ದು ಮಹಿಳೆಯ ಮಾನಸಿಕ ಚಿಕಿತ್ಸೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ತತ್ಸಂಬಂಧ ದಾಖಲಾತಿಗಳನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ.
