ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯು ಡಿಸೆಂಬರ್ 17 ರಿಂದ 22 ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ.. ಸುಮಾರು 20 ರಿಂದ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಆಯೋಜಿಸಲಾಗಿರುವ ಈ ಬಾರಿಯ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

Thirthahalli Ellamavasya Jatra 2025 ಕಾರ್ಯಕ್ರಮದ ವಿವರ,
ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಇಂದು ಡಿ.17ರಂದು ಗಣಪತಿ ಪೂಜೆ ಮತ್ತು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ಸಿಕ್ಕಿದ, ಡಿ.18ರಂದು ಪುರೋತ್ಸವ ಹಾಗೂ ಡಿ.19ರಂದು ಪವಿತ್ರ ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ಪುಣ್ಯಸ್ನಾನಗಳು ನೆರವೇರಲಿವೆ. ಅಂದೇ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಉದಯ ಕುಮಾರ್ ಶೆಟ್ಟಿ ತಂಡದಿಂದ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ.
ಜಾತ್ರೆಯ ಪ್ರಮುಖ ದಿನವಾದ ಡಿ.20ರಂದು ಮನ್ಮಹಾರಥಾರೋಹಣ ನಡೆಯಲಿದ್ದು, ಸಂಜೆ ಆರ್.ಜಿ. ಫಿಟ್ನೆಸ್ ಕ್ಲಬ್ ವತಿಯಿಂದ ಆಕರ್ಷಕ ದೇಹದಾರ್ಢ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಡಿ.21ರಂದು ತುಂಗಾ ನದಿಯ ಮರಳು ಗುಡ್ಡೆಯ ಮೇಲೆ ವಾಲಿಬಾಲ್ ಪಂದ್ಯಾವಳಿ ಆಯೋಜನೆಯಾಗಿದ್ದು, ರಾತ್ರಿ ರಾಮಚಂದ್ರ ಹಡಪದ ತಂಡದಿಂದ ಸಂಗೀತ ಸಂಜೆ ಹಾಗೂ ನದಿಯಲ್ಲಿ ಅದ್ದೂರಿ ಸಿಡಿಮದ್ದು ಪ್ರದರ್ಶನದೊಂದಿಗೆ ತೆಪ್ಪೋತ್ಸವ ಜರುಗಲಿದೆ.
Thirthahalli Ellamavasya Jatra 2025 ಪ್ರಮುಖ ಆಕರ್ಷಣೆಯಾಗಿ ಪರಶುರಾಮ ಮೂರ್ತಿ
ಈ ಸಂಭ್ರಮಕ್ಕೆ ಮೆರುಗು ನೀಡಲು ತೀರ್ಥಹಳ್ಳಿಯ ಪ್ರಮುಖ ಆಕರ್ಷಣೆಯಾದ ಕಮಾನು ಸೇತುವೆಗೆ ಈಗಾಗಲೇ ನೂತನ ಬಣ್ಣ ಬಳಿಯಲಾಗುತ್ತಿದೆ. ವಿಶೇಷ ಆಕರ್ಷಣೆಯಾಗಿ ತುಂಗಾ ನದಿ ತೀರದಲ್ಲಿ ಸುಮಾರು 50 ಅಡಿ ಎತ್ತರದ ಪರಶುರಾಮನ ಬೃಹತ್ ಮೂರ್ತಿಯನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ.
ಜಾತ್ರೆಯ ಭದ್ರತೆಗಾಗಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, 250ಕ್ಕೂ ಹೆಚ್ಚು ಪೊಲೀಸರು, 50 ಹೋಂ ಗಾರ್ಡ್ಗಳು, ಕೆಎಸ್ಆರ್ಪಿ ಮತ್ತು ಡಿಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಜಾತ್ರಾ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, 24 ಗಂಟೆಯೂ ಲಭ್ಯವಿರುವ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಪಟ್ಟಣದ ಹೊರವಲಯದಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಪಟ್ಟಣದೊಳಗೆ ವಾಹನ ತರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಭಕ್ತಾದಿಗಳು ಮತ್ತು ಪ್ರವಾಸಿಗರು ಇಲಾಖೆಯೊಂದಿಗೆ ಸಹಕರಿಸಿ ಸುಸೂತ್ರವಾಗಿ ಜಾತ್ರೆ ನಡೆಯಲು ಕೈಜೋಡಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
Thirthahalli Ellamavasya Jatra 2025 Grand Celebration
