Shivamogga Rains ಶಿವಮೊಗ್ಗದಲ್ಲಿ ಮಳೆಯ ಅಬ್ಬರ: ಹಾನಿ, ಸಂಚಾರಕ್ಕೆ ಅಡಚಣೆ; ಆಗುಂಬೆ ಮಾರ್ಗದಲ್ಲಿ ವಾಹನ ಸವಾರರಿಗೆ ಪರದಾಟ
Shivamogga Rains news/ ಶಿವಮೊಗ್ಗ ಜಿಲ್ಲೆಯಲ್ಲಿ, ವಿಶೇಷವಾಗಿ ಪಶ್ಚಿಮ ಘಟ್ಟದ ತಾಲೂಕುಗಳಾದ ಹೊಸನಗರ ಮತ್ತು ತೀರ್ಥಹಳ್ಳಿ-ಆಗುಂಬೆ ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮಳೆಯಿಂದಾಗಿ ಹಲವೆಡೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತಾದ ಸಂಕ್ಷಿಪ್ತ ವರದಿ ನಿಮ್ಮ ಮುಂದೆ
ಹೊಸನಗರದಲ್ಲಿ ಮನೆಗೆ ನುಗ್ಗಿದ ನೀರು
ಹೊಸನಗರದಲ್ಲಿ ಇವತ್ತು ಜೋರು ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇನ್ನೂ ಹೊಸನಗರದ (Hosanagara Flooding) ಸೋನಲೆ ಗ್ರಾಮದಲ್ಲಿ ಹಳ್ಳವೊಂದರ ಕೋಡಿ ಒಡೆದ ಪರಿಣಾಮ ಮಂಜಪ್ಪ ಮತ್ತು ತಿಮ್ಮಪ್ಪ ಎಂಬುವರ ಮನೆಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದೆ. ಇದರಿಂದ ಅಕ್ಕಿ, ಬೇಳೆ ಸೇರಿದಂತೆ ದಿನಸಿ ವಸ್ತುಗಳಿಗೆ ಹಾನಿಯಾಗಿದೆ.

ಹನಿಯಾ ಬಳಿ ಬಸ್ ಮೇಲೆ ವಿದ್ಯುತ್ ತಂತಿ: ಹೊಸನಗರ ತಾಲೂಕಿನ ಹನಿಯಾ ಬಳಿ, ಗಾಳಿ ಮಳೆಗೆ ವಿದ್ಯುತ್ ಕಂಬವೊಂದು ಉರುಳಿ ಬಿದ್ದು ಅದರ ತುಂಡಾದ ವಿದ್ಯುತ್ ತಂತಿ ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ ಬಸ್ ಮೇಲೆ ಬಿದ್ದಿದೆ. ವಯರ್ ವಿದ್ಯುತ್ ಪೂರೈಕೆ ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ.


ತೀರ್ಥಹಳ್ಳಿಯಲ್ಲಿ ಮರ ಬಿದ್ದು ಮನೆಗೆ ಹಾನಿ Thirthahalli Tree Fall : ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ಗ್ರಾ.ಪಂ. ವ್ಯಾಪ್ತಿಯ ಚಂಗಾರು ಗ್ರಾಮದಲ್ಲಿ ಧಾರಾಕಾರ ಮಳೆಗೆ ಬೃಹತ್ ಗಾತ್ರದ ಮರವೊಂದು ಬಾಬು ಪೂಜಾರಿ ಎಂಬುವರ ಮನೆ ಮತ್ತು ಕೊಟ್ಟಿಗೆ ಮೇಲೆ ಬಿದ್ದಿದೆ. ಇದರಿಂದ ಮನೆ ಮತ್ತು ಕೊಟ್ಟಿಗೆ ಸಂಪೂರ್ಣ ಜಖಂಗೊಂಡಿದ್ದು, 20ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್, ಬಾಬು ಪೂಜಾರಿ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಗ್ರಾ.ಪಂ. ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರದ ಭರವಸೆ ನೀಡಿದ್ದಾರೆ.

ಆಗುಂಬೆ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ Agumbe Road Block: ಆಗುಂಬೆ ಘಾಟ್ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ತೀರ್ಥಹಳ್ಳಿ-ಆಗುಂಬೆ ರಸ್ತೆಯಲ್ಲಿ ಮರ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ನಡುವೆ ವಾಹನ ಚಾಲಕರೇ ಬಿದ್ದ ಮರಗಳನ್ನು ತುಂಡರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇನ್ನಷ್ಟು ಸುದ್ದಿಗಳಿಗಾಗಿ : malendutoday.com /