Shivamogga BJP Protest ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಎದುರು ಧರಣಿ ಕುಳಿತ ಶಾಸಕ & ಬಿಜೆಪಿ ಮುಖಂಡರು
Shivamogga news / ರಾಜೀವ್ಗಾಂಧಿ ವಸತಿ ಯೋಜನೆಯ ಮನೆ ಹಂಚಿಕೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಮುಸಲ್ಮಾನರಿಗೆ ಮಿತಿಮೀರಿದ ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಆರೋಪಿಸಿ, ಇಂದು ಬಿಜೆಪಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡುತ್ತಿದೆ ಎಂದು ಕಟು ಆರೋಪ ಮಾಡಿದರು.

ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿಯೇ ಇದೆ ಎಂದು ಟೀಕಿಸಿದ ಚನ್ನಬಸಪ್ಪ, ಬಡವರ ಪರವಾಗಿ ಇರುವ ಏಕೈಕ ಪಕ್ಷ ಬಿಜೆಪಿ ಮಾತ್ರ ಎಂದು ಪ್ರತಿಪಾದಿಸಿದರು. ವಸತಿ ಹಂಚಿಕೆಯಲ್ಲಿ ಹಣ ಪಡೆದು ಮನೆಗಳನ್ನು ನೀಡುತ್ತಿರುವುದು “ನೀಚತನ” ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Shivamogga BJP Protest
“ಸರ್ಕಾರದಲ್ಲಿ ಭ್ರಷ್ಟಾಚಾರವು ತಾಂಡವವಾಡುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ” ಎಂದು ಚನ್ನಬಸಪ್ಪ ಹೇಳಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ, ಯಾವುದೇ ಕ್ರಮ ಕೈಗೊಳ್ಳದೆ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಬಿಜೆಪಿ ಸರ್ಕಾರವಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷ್ಮೀ ಬಾಂಡ್ ಮತ್ತು ಸೈಕಲ್ ವಿತರಣಾ ಯೋಜನೆಗಳನ್ನು ಉದಾಹರಿಸಿದ ಅವರು, ಆ ಸೌಲಭ್ಯಗಳನ್ನು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ, ಎಲ್ಲಾ ಜಾತಿ, ಧರ್ಮದವರಿಗೂ ನೀಡಲಾಗಿತ್ತು ಎಂದರು. “ಬಿಜೆಪಿಯದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರವಾಗಿದ್ದು, ಅದು ಕೂಲಿ ಕಾರ್ಮಿಕರ, ರೈತರ ಹಾಗೂ ಬಡವರ ಪಕ್ಷವಾಗಿದೆ” ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಪ್ರತಿಪಾದಿಸಿದರು.
Shivamogga BJP Protest , Housing Scheme Scam , Muslim Reservation Karnataka ,Congress Corruption
ಇನ್ನಷ್ಟು ಸುದ್ದಿಗಳಿಗಾಗಿ : malendutoday.com /