ಶಿವಮೊಗ್ಗ: ನಗರದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಆವರಣದೊಳಗೆ ಗಾಂಜಾ, ಮೊಬೈಲ್ ಫೋನ್ ಮತ್ತು ಸಿಗರೇಟ್ಗಳನ್ನು ಎಸೆದಿದ್ದ ತಂಡವನ್ನು ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಶಿವಮೊಗ್ಗದ ಈ ಭಾಗಗಳಲ್ಲಿ ಫೆಬ್ರವರಿ 7 ರಂದು ಕರೆಂಟ್ ಇರಲ್ಲ
ಫೆಬ್ರವರಿ 1ರಂದು ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು, ಇದೀಗ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಿದ್ದು, ಮೊಹ್ಮದ್ ಖಲಂದರ್ @ ಕಲ್ಲು (23), ಅಬ್ದುಲ್ ಮುನಾಫ್ @ ಮುನ್ನಾ (30), ವಿಜಯ್ (19), ಪರಶುರಾಮ್ (19), ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆ ಹಿನ್ನೆಲೆ
ಫೆಬ್ರವರಿ 1ರಂದು ಬೆಳಗಿನ ಜಾವ ಸೋಗಾನೆ ಕೇಂದ್ರ ಕಾರಾಗೃಹದ ಗೋಡೆಯ ಹೊರಭಾಗದಿಂದ ಯಾರೋ ವ್ಯಕ್ತಿಗಳು ಕಪ್ಪು ಬಣ್ಣದ ಗಮ್ ಟೇಪ್ನಿಂದ ಪ್ಯಾಕ್ ಮಾಡಿದ್ದ ಗಾಂಜಾ, ಮೊಬೈಲ್, ಲೈಟರ್ ಹಾಗೂ ಸಿಗರೇಟ್ಗಳನ್ನು ಒಳಗಡೆ ಎಸೆದಿದ್ದರು. ಇದನ್ನು ಗಮನಿಸಿದ್ದ ಜೈಲಿನ ಸಿಬ್ಬಂದಿ ಕೂಡಲೇ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಕುರಿತು ಜೈಲು ಅಧೀಕ್ಷಕ ಪರಮೇಶ್ ಎಚ್.ಎ. ಅವರು ನೀಡಿದ ದೂರಿನ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದ ಇನ್ಸ್ಪೆಕ್ಟರ್ ಕೆ.ಟಿ. ಗುರುರಾಜ್ ಮತ್ತು ತಂಡ ತನಿಖೆ ನಡೆಸಿ ಫೆಬ್ರವರಿ 7ರಂದು ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಹಾಗೂ ಈ ಹಿಂದೆ ಜೈಲಿಗೆ ಎಸೆದಿದ್ದ ಮೊಬೈಲ್ ಫೋನ್, ಗಾಂಜಾ ಹಾಗೂ ಸಿಗರೇಟ್ ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ.
Shimoga Sogane Jail 4 Arrested for Ganja



