mla araga jnanendra : ಆರ್ಸಿಬಿ ವಿಜಯೋತ್ಸವದಲ್ಲಿ ನಿನ್ನೆ 11 ಜನ ಅಮಾಯಕರು ಮೃತಪಟ್ಟಿದ್ದು, ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಿಸಿದೆ. ಆದರೆ ಸರ್ಕಾರ ಜನರ ಸಾವನ್ನು ಹಣದ ಮೂಲಕ ಅಳೆಯಬಾರದು ಎಂದು ಮಾಜಿ ಗೃಹಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದವರ ಆತ್ಮಕ್ಕೆ ಶ್ರದ್ದಾಂಜಲಿ ಸಲ್ಲಿಸುತ್ತೇನೆ. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೊಡುವುದಾಗಿ ರಾಜ್ಯ ಸರ್ಕಾರ ಘೊಷಿಸಿದೆ. ಆದರೆ ಸರ್ಕಾರ ಜನರ ಸಾವನ್ನು ಹಣದಿಂದ ಅಳೆಯಬಾರದು. ಈ ಕುರಿತು ಸಿ ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯದ ಜನರ ಬಳಿ ಕ್ಷಮೇ ಕೇಳಬೇಕು. ರಾಜ್ಯದಲ್ಲಿ ಅಸಮರ್ಪಕ ಮಾರ್ಗದರ್ಶನದ ಆಡಳಿತ ಇದ್ದರೇ ಏನೇನು ಅನಾಹುತಗಳು ಆಗುತ್ತದೆ ಎನ್ನುವುದಕ್ಕೆ ನಿನ್ನೆಯೇ ಘಟನೆ ಉದಾಹರಣೆಯಾಗಿದೆ. ನಿನ್ನೆ ವೇದಿಕೆಯಲ್ಲಿ ಆಟಗಾರರಿಗೆ ಸನ್ಮಾನ ಮಾಡಿದರೋ ಅವಮಾನ ಮಾಡಿದರೂ ಎಂಬುದು ಗೊತ್ತಾಗಲಿಲ್ಲ. ವೇದಿಕೆಯಲ್ಲಿ ಮಂತ್ರಿಗಳ ಮಕ್ಕಳು ಮೊಮ್ಮಕ್ಕಳೆಲ್ಲಾ ಬಂದು ಆಟಗಾರರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದರು. ವೇದಿಕೆ ತುಂಬಾ ನೂರಾರು ಜನ ಇದ್ದರು. ಒಟ್ಟಾರೆಯಾಗಿ ದೇಶದಲ್ಲಿ ರಾಜ್ಯದ ಮಾನ ಹರಾಜು ಹಾಕಿದ್ದಾರೆ ಎಂದರು.

mla araga jnanendra : ಘಟನೆಗೆ ಭದ್ರತಾ ವೈಫಲ್ಯವೇ ಕಾರಣ
ರಾಜ್ಯ ಸರ್ಕಾರದ ಭದ್ರತಾ ವೈಪಲ್ಯದಿಂದಾಗಿ ಈ ಧಾರುಣ ಘಟನೆ ಸಂಭವಿಸಿದೆ. ಮೊನ್ನೆ ಆರ್ಸಿಬಿ ಕಪ್ ಗೆದ್ದಾಗಲೇ ಜನರು ಉನ್ಮಾದದ ಸ್ಥಿತಿಗೆ ಬಂದಿದ್ದರು, ಆಗ ಸಿಎಂ,ಗೃಹ ಸಚಿವ ಹಾಗೂ ಡಿಸಿಎಂ ಪೊಲೀಸ್ ಅಧಿಕಾರಿಗಳನ್ನ ಕೂರಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಿತ್ತು. ಆದರೆ ಅವರು ಆ ರೀತಿ ಮಾಡಲಿಲ್ಲ.ಅವರ ನಿರ್ಲಕ್ಷ್ಯದಿಂಗಾಗಿ ಈ ಸಾವುಗಳು ಸಂಭವಿಸಿದ್ದು, ಈಗ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಇದು ಸರಿಯಲ್ಲ ಎಂದು ಕಿಡಿಕಾರಿದರು.

ಪುನೀತ್ ರಾಜ್ಕುಮಾರ್ ಮೃತರಾದಾಗಿದ್ದ ಸಂದರ್ಭದಲ್ಲಿ ನಾನೂ ಗೃಹ ಸಚಿವನಾಗಿದ್ದೆ. ವಿಷಯ ತಿಳಿಯುತ್ತಿದ್ದಂತೆ ಸಾಗರದಿಂದ ಬೆಂಗಳೂರಿಗೆ ತಕ್ಷಣ ತೆರಳಿದೆ. ಕೇವಲ 2 ಗಂಟೆಯಲ್ಲಿ ಜನರನ್ನು ನಿಯಂತ್ರಿಸಲು ಬಂದೋಬಸ್ತ್ ವ್ಯವಸ್ತೆಯನ್ನು ಮಾಡಿದ್ದೆ. ಅಂದು ಅಲ್ಲಿ 20 ಲಕ್ಷ ಜನ ಸೇರಿದ್ದರು. ಆದರೆ ಇಂದು ಸಹ ಅದೇ ಪೊಲೀಸ್ ಅಧಿಕಾರಿಗಳು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಏಕೆ 2 ಲಕ್ಷ ಜನರನ್ನು ನಿರ್ವಹಿಸಲು ಆಗಲಿಲ್ಲ ಎಂದು ಪ್ರಶ್ನಿಸಿದ ಅವರು ಸರ್ಕಾರದ ಭದ್ರತಾ ವೈಪಲ್ಯವೇ ಕಾರಣವೆಂಬುದಕ್ಕೆ ಇದೊಂದು ನಿದರ್ಶನವಾಗಿದೆ ಎಂದರು.
mla araga jnanendra : ಜನರು ಐಪಿಎಲ್ ಆಟವನ್ನು ಏಕೆ ಇಷ್ಟು ಭಾವನಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ. ಅದು ಹಣಕ್ಕಾಗಿ ನಡೆಯುವ ಆಟ. ನೀವು ಆಟಗಾರರನ್ನು ಬೆಂಬಲಿಸುವ ರೀತಿಯಲ್ಲಿ ದೇಶದ ಸೈನಿಕರಿಗೆ ಬೆಂಬಲ ನೀಡಿದ್ದರೆ ಸೈನಿಕರಿಗೆ ಮತ್ತಷ್ಟು ಸ್ಪೂರ್ತಿ ಸಿಗುತ್ತಿತ್ತು ಎಂದರು.
ಈ ವಿಚಾರದ ಬಗ್ಗೆ ರಾಜ್ಯದ ಗೃಹ ಸಚಿವರು ಒಂದೇ ಒಂದು ಮಾತನಾಡಿಲ್ಲ, ಕಾಂಗ್ರೆಸ್ ನಾಯಕರು ಜನರ ಭಾವನೆಯನ್ನ ರಾಜಕೀಯವಾಗಿ ಬಳಸಿಕೊಳ್ಳುವ ತಂತ್ರ ಮಾಡಿದ್ದು ಗೃಹ ಸಚಿವ ಪರಮೇಶ್ವರ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
