Minister Eshwar Khandre ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ದಸರಾದದಲ್ಲಿ ಭಾಗವಹಿಸಿದ್ದ ಸಕ್ರೆಬೈಲ್ನ ಆನೆಬಿಡಾರದ ಬಾಲಣ್ಣ, ಸಾಗರ್ ಸೇರಿದಂತೆ ಮೂರು ಆನೆಗಳು ಅನಾರೋಗ್ಯದಿಂದ ಬಳಲುತ್ತಿವೆ. ಈ ಬಗ್ಗೆ ಮಲೆನಾಡು ಟುಡೆ ಪತ್ರಿಕೆಯು ಆನೆ ಕಾರ್ಯಾಚರಣೆಯಲ್ಲಿ ಮಂಚೂಣಿಯಲ್ಲಿದ್ದ ಬಾಲಣ್ಣ ,ದಸರಾ ಅಂಬಾರಿ ಹೊತ್ತ ಸಾಗರ್, ಸೆರೆಯಾದ ಅಡ್ಕಬಡ್ಕ, ಹಾಗೂ ವಿಕ್ರಾಂತ್ ಅನಾರೋಗ್ಯದಿಂದ ಬಳಲುತ್ತಿರುವುದೇಕೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಎಕ್ಸ್ಕ್ಲ್ಯೂಸಿವ್ ಸುದ್ದಿಯನ್ನು ಪ್ರಕಟಿಸಿತ್ತು. ನಮ್ಮ ತಂಡದ ಜೆಪಿ ಈ ವಿಚಾರವಾಗಿ ಸಕ್ರೆಬೈಲ್ ಬಿಡಾರದ ಈ ಆನೆಗಳ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ವಿಶೇಷವಾದ ಮಾಹಿತಿಗಳನ್ನು ಪಡೆದುಕೊಂಡು ವಿಸ್ತೃತ ವರದಿ ಮಾಡಿದ್ದರು. ಈ ವರದಿಯ ಬೆನ್ನಲ್ಲೆ , ಬಿಡಾರದ ಆನೆಗಳ ಅನಾರೋಗ್ಯದ ಬಗ್ಗೆ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಪ್ರಕರಣದ ಕುರಿತಾಗಿ ತನಿಖೆ ಕೈಗೊಂಡು ಆಗಿರುವ ವೈಫಲ್ಯದ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಪ್ರಕಟಣೆಯೊಂದನ್ನ ಹೊರಿಡಿಸಿದ್ದಾರೆ.
Minister Eshwar Khandre ಅರಣ್ಯ ಸಚಿವರ ಪ್ರಕಟಣೆ
ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಪತ್ರ ಬರೆದು ಈ ವಿಷಯವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿದ್ದ 35 ವರ್ಷದ ಬಾಲಣ್ಣ ಆನೆಗೆ ಐ.ವಿ. (IV) ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಆದ ನಿರ್ಲಕ್ಷ್ಯದಿಂದ ಸೋಂಕು ತಗುಲಿ ನರಳುತ್ತಿದೆ. ಇದರ ಜೊತೆಗೆ ಶಿಬಿರದಲ್ಲಿರುವ ಸಾಗರ್ ಸೇರಿದಂತೆ ಒಟ್ಟು 4 ಆನೆಗಳು ಗಾಯದಿಂದ ಬಳಲುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು.
Minister Eshwar Khandre ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿ ಇರಬೇಕು. ಸದ್ಯ ಪಶುವೈದ್ಯರ ಕೊರತೆಯಿರುವ ಬಗ್ಗೆ ವರದಿಯಾಗಿದ್ದು, ಕೂಡಲೇ ಗುತ್ತಿಗೆ ಆಧಾರದ ಮೇಲೆ ಅಥವಾ ನಿಯೋಜನೆಯ ಮೂಲಕ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು.
ಬಾಲಣ್ಣ ಆನೆಗೆ ಚುಚ್ಚುಮದ್ದು ನೀಡುವಾಗ ವೈದ್ಯಾಧಿಕಾರಿ, ಇಲಾಖಾ ಅಧಿಕಾರಿ ಅಥವಾ ಸಿಬ್ಬಂದಿಯ ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ, ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸಿನೊಂದಿಗೆ ಒಂದು ವಾರದೊಳಗೆ ಸಮಗ್ರ ವರದಿಯನ್ನು ಕಡ್ಡಾಯವಾಗಿ ಸಚಿವ ಕಚೇರಿಗೆ ಸಲ್ಲಿಸುವಂತೆ ಖಂಡ್ರೆ ಸೂಚಿಸಿದ್ದಾರೆ.


