K.S. Eshwarappa : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ಸಿಎಂ ಸ್ಥಾನ ಭದ್ರವಾಗಿರಬೇಕೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ವಿಷಯಕ್ಕೆ ಬರಬೇಡಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಸರ್ಕಾರವನ್ನು ನಿರ್ನಾಮ ಮಾಡಲೆಂದೇ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರು RSS ವಿರುದ್ಧ ಪತ್ರ ಬರೆದಿದ್ದಾರೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, RSS ನೂರನೇ ವರ್ಷ ಆಚರಣೆ ಮಾಡುತ್ತಿದೆ. ದೇಶ ವಿದೇಶಗಳಲ್ಲಿ ಅದರ ಪ್ರಾಮಾಣಿಕತೆ, ಹಿಂದುತ್ವ ಮತ್ತು ರಾಷ್ಟ್ರಭಕ್ತಿಯ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ, ಇದನ್ನು ಸಹಿಸದ ಕೆಲವು ಪುಡಿ ರಾಜಕಾರಣಿಗಳು ಪ್ರಿಯಾಂಕ್ ಖರ್ಗೆ ಬಿ.ಕೆ. ಹರಿಪ್ರಸಾದ್ ಅಂಥವರು ಹುಚ್ಚುಚ್ಚು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಮತ್ತು ಹರಿಪ್ರಸಾದ್ ಅವರಿಗೆ RSS ನ ಸಮಾಜಮುಖಿ ಕಾರ್ಯದ ಬಗ್ಗೆ ಕಲ್ಪನೆ ಇಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ತೃಪ್ತಿಪಡಿಸಲು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಸರ್ಕಾರಿ ಜಾಗ ಇರಲಿ, ಖಾಸಗಿ ಜಾಗ ಇರಲಿ, RSS ಗೆ ಬೈಠಕ್ ಮಾಡಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಸರ್ಕಾರ ರಾಜ್ಯದಲ್ಲಿ ನಿರ್ನಾಮ ಆಗುತ್ತದೆ. ಸಿದ್ಧರಾಮಯ್ಯರವರೇ, ನಿಮ್ಮ ಸರ್ಕಾರವನ್ನು ನಿರ್ನಾಮ ಮಾಡಲೆಂದೇ ಖರ್ಗೆ ಪುತ್ರ ಈ ರೀತಿಯ ಪತ್ರವನ್ನು ಬರೆದಿದ್ದಾರೆ. ನಿಮ್ಮ ಸರ್ಕಾರ ಪತನವಾದರೆ ಅದಕ್ಕೆ ಪ್ರಿಯಾಂಕ್ ಖರ್ಗೆ ಕಾರಣವಾಗುತ್ತಾರೆ,” ಎಂದು ಅವರು ಆಪಾದಿಸಿದರು.
K.S. Eshwarappa ಪ್ರಿಯಾಂಕ್ ಖರ್ಗೆ ಪತ್ರ ಹರಿದು ಬಿಸಾಡಬೇಕಿತ್ತು
ಪ್ರಪಂಚದಲ್ಲಿ ಅತಿ ದೊಡ್ಡ ಸಂಘಟನೆಯ ಮೊದಲನೇ ಸ್ಥಾನದಲ್ಲಿ RSS ಇದೆ. ಅದರ ಸಮಾಜ ಸೇವೆಯನ್ನು ಗುರುತಿಸಿ ಎಲ್ಲ ರಾಷ್ಟ್ರಗಳು ಉತ್ತಮ ಭಾವನೆಯನ್ನು ಇಟ್ಟುಕೊಂಡಿವೆ. ಪ್ರಿಯಾಂಕ್ ಖರ್ಗೆ ಪತ್ರ ಕೊಟ್ಟಾಗ ಮುಖ್ಯಮಂತ್ರಿಗಳು ಆ ಪತ್ರವನ್ನು ಹರಿದು ಬಿಸಾಡಬೇಕಿತ್ತು. ಅದನ್ನು ಬಿಟ್ಟು ಸೂಕ್ತ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದಾರೆ,” ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಲಯವೇ RSS ಯಾವುದೇ ಕೋಮು ಸಂಘಟನೆ ಅಲ್ಲ ಎಂದು ಹೇಳಿದೆ. ಸಮಾಜದ ದಿನನಿತ್ಯದ ನಡವಳಿಕೆಗಳು ಹಿಂದುತ್ವ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ಅಂಶಗಳನ್ನಿಟ್ಟುಕೊಂಡು RSS ಕಾರ್ಯ ನಿರ್ವಹಿಸುತ್ತಿದೆ. ಇಂತಹ ಸಂಘಟನೆಗಳ ಬಗ್ಗೆ ಮಾತನಾಡಲು ಇವರೆಲ್ಲ ಯಾರು ಎಂದು ಪ್ರಶ್ನಿಸಿದರು. ನಾಗಾಲ್ಯಾಂಡ್ ಮತ್ತು ಮಿಜೋರಾಂನಲ್ಲಿ ಮತಾಂತರ ತಡೆದು RSS ಹಿಂದುತ್ವವನ್ನು ಜಾಗೃತಿ ಮಾಡಿದೆ. ದೇಶಕ್ಕೆ ಇಬ್ಬರು ಪ್ರಧಾನ ಮಂತ್ರಿಗಳನ್ನು ನೀಡಿದೆ. ಅತಿ ಉನ್ನತ ಸ್ಥಾನದಲ್ಲಿ ಇರುವವರು RSS ನಿಂದ ಬಂದವರು. RSS ನಿಂದ ಪ್ರೇರಿತವಾಗಿ 56 ಸಂಘಟನೆಗಳು ಹುಟ್ಟಿಕೊಂಡಿವೆ. ಅವೆಲ್ಲ ಸಂಘಟನೆಗಳಿಂದ ಇಂದು ದೇಶ ಶುದ್ಧೀಕರಣ ಆಗುತ್ತಿದೆ ಎಂದರು.
SDPI ಸೇರಿದಂತೆ ದೇಶದ್ರೋಹಿ ಸಂಘಟನೆಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಎಷ್ಟೇ ದೇಶದ್ರೋಹಿ ಚಟುವಟಿಕೆ ಮಾಡಿದರೂ ಅವರು ‘ನಮ್ಮ ಬೀಗರು’ ಎಂಬ ಭಾವನೆ ಕಾಂಗ್ರೆಸ್ಗಿದೆ. ಈ ವಿಚಾರದಲ್ಲಿ ಸಿಎಂ ಎಚ್ಚರಿಕೆಯಿಂದ ಇರಬೇಕು. RSS ವಿಚಾರಕ್ಕೆ ಬರದಿದ್ದರೆ ನಿಮ್ಮ ಸ್ಥಾನ ಗಟ್ಟಿಯಾಗಿ ಇರಲಿದೆ. ಅಧಿಕಾರ ಯಾವತ್ತೂ ಶಾಶ್ವತವಲ್ಲ ಎಂದರು.
K.S. Eshwarappa ಉಪ ಮುಖ್ಯಮಂತ್ರಿ ಭಾಷೆಗೆ ಗೌರವ ಇರಲಿ
ಇದೇ ವೇಳೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಬ್ಬ ಶಾಸಕರಿಗೆ “ಏ ಕರಿ ಟೋಪಿ ಮನುಷ್ಯ ಈ ಕಡೆ ಬಾ” ಎಂದು ಹೇಳಿರುವುದನ್ನು ಉಲ್ಲೇಖಿಸಿ ಉಲ್ಲೇಖಿಸಿದ ಅವರು. ಅವರ ಹಿಂದಿನ ಭಾಷೆ ಹೇಗಿತ್ತೋ ಈಗಲೂ ಅದೇ ಭಾಷೆಯನ್ನು ಬಳಸುತ್ತಾರೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಒಂದು ಗೌರವ ಇರಬೇಕು ಎಂದು ಈಶ್ವರಪ್ಪ ಹೇಳಿದರು.
K.S. Eshwarappa ಸಚಿವ ಸಂಪುಟ ಬದಲಾವಣೆ ಗೊಂದಲ
ನವೆಂಬರ್ ಕ್ರಾಂತಿ ಕುರಿತು ಮಾತನಾಡಿದ ಈಶ್ವರಪ್ಪ, “ನವೆಂಬರ್ ಕ್ರಾಂತಿ ಅಂದರೆ ಏನೂ ಆಗಲ್ಲ” ಎಂಬ ಮಾತನ್ನು ಮುಖ್ಯಮಂತ್ರಿಗಳು ಹೇಳಿದ್ದಾರೆ. ಸಿದ್ದರಾಮಯ್ಯನವರು ಸಚಿವ ಸಂಪುಟ ಬದಲಾವಣೆ ಆಗುತ್ತೆ ಎನ್ನುತ್ತಾರೆ. ಆದರೆ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ಬದಲಾವಣೆ ಆಗಲ್ಲ ಎನ್ನುತ್ತಾರೆ. ಇದರಿಂದ ಸರ್ಕಾರದಲ್ಲಿನ ಗೊಂದಲ ಬಹಿರಂಗವಾಗಿದೆ ಎಂದು ಈಶ್ವರಪ್ಪ ಟೀಕಿಸಿದರು.
